ವಿಷು ಹಬ್ಬದ ಶುಭಾಶಯಗಳು | ರೈತಾಪಿ ಜನರಿಗೆ ಸಂಕಲ್ಪ…..ಸಮೃದ್ಧಿಯ ದಿನ….. ಐಶ್ವರ್ಯ ದ ದಿನ 

April 14, 2020
8:00 AM
ವಿಷು ಹಬ್ಬದ ಶುಭಾಶಯ… 
ಪಕ್ಕದ ತೋಟದ ಮನೆಯ ಶಾರದಕ್ಕ ಬೆಳಿಗ್ಗೆಯೇ  ಫೋನ್ ಮಾಡಿದ್ದರು. ನನಗೆ  ತುಂಬಾ ಅಚ್ಚರಿಯಾಯ್ತು. ಅದೂ ಕೂಡ ಈ ಹಲಸಿನ ಕಾಲದಲ್ಲಿ, ಹಪ್ಪಳ, ಸಂಡಿಗೆ ಉಪ್ಪಿನಕಾಯಿ ಅಂತ   ಎಲ್ಲಾ ಕೆಲಸಗಳನ್ನು ಮೈಮೇಲೆ ಎಳೆದು‌ ಹಾಕಿಕೊಂಡು ಮಾಡುವ ಶಾರದಕ್ಕೆ ಬೆಳಗ್ಗಿನ ಹೊತ್ತು ತುಂಬಾ ಬ್ಯುಸಿಯಾಗಿರುತ್ತಾರೆ. ನಾವೇ ಫೋನ್ ಮಾಡಿದರೂ ಆಮೇಲೆ ಮಾಡುತ್ತೇನೆ ಎನ್ನುವವರು  ಇಂದೇನು  ಅವರೇ ಮಾತಾಡುತ್ತಿದ್ದಾರಲ್ಲ!  ಇರಲಿ ಅವರೇ ಹೇಳಲಿ ಎಂದು ನಾನು ಮಾತಿಗೆ ಕಿವಿಯಾದೆ.
ಬಹಳ ಬೇಜಾರಿನಲ್ಲಿ ಮಾತನಾಡುತ್ತಿದ್ದರು.  ಮಾತಿನ ನಡುವೆ  ಈ ಬಾರಿ ‘ಬಿಸು ‘ ಚಪ್ಪೆ ಮಾರಾಯ್ತಿ ಎನ್ನ ಬೇಕೆ? ಏನಕ್ಕಾ ಬಾಳೆಗೊನೆ ಹಣ್ಣಾಗಲಿಲ್ಲವಾ. ಇಲ್ಲಿ ಎರಡುಮೂರು‌ ಗೊನೆ ಹಣ್ಣಾಗಿದೆ  ತಂದು ಕೊಡಲಾ  ಎಂಬ ನನ್ನ ಮಾತಿಗೆ ಬೇಸರದಿಂದಲೇ ಅದಲ್ಲ ವಿಷಯ ಮಾರಾಯ್ತಿ. ಎಂತ ಹಬ್ಬವಾ ಏನೋ  ಮಗ ಮುಂಬಯಿ ಯಲ್ಲಿ, ಮಗಳು ಬೆಂಗಳೂರಿನಲ್ಲಿ. ಒಟ್ಟಾರೆ ತಲೆಬಿಸಿ ಮಾರಾಯ್ತಿ. ಅಲ್ಲಿ ಮನೆಯಿಂದಲೇ ಕೆಲಸ ಮಾಡಬೇಕಂತೆ. ಈ ಬಾರಿ ಮೊಮ್ಮಗಳ ಕಿವಿ ಚುಚ್ಚ ಬೇಕೆಂದು ಹೊಸ ಟಿಕ್ಕಿ ತಂದಿಟ್ಟಾಗಿತ್ತು. ಸೊಸೆಗೆ ಊರಲ್ಲೇ ಹಬ್ಬದ ದಿನ ಮಗಳ ಕಿವಿಗೆ ಟಿಕ್ಕಿ ಹಾಕಬೇಕೆಂದು ಬಾರಿ ಆಸೆ ಇತ್ತು. ಏನು ಮಾಡುವುದು ಆ ಕೊರೊನಾ ಬಂದು ಎಲ್ಲಾ ಹಾಳು ಮಾಡಿತು. ಅಲ್ಲಿ ತುಂಬಾ ಕಷ್ಟ ಆಗುತ್ತಿದೆ ಎಂದು ಮಕ್ಕಳದ್ದು ದಿನಾ ಗೋಳು.
ಹಣ್ಣು ತರಕಾರಿ ಎಲ್ಲ ಸಿಕ್ಕಿದರೆ ಸಿಕ್ಕಿತು ಇಲ್ಲವಾದರೆ ಇಲ್ಲ. ಇಲ್ಲಿ ಬಾಳೆಹಣ್ಣು, ಪೇರಳೆ, ಪಪ್ಪಾಯಿ, ನಕ್ಷತ್ರ ಹಣ್ಣುಗಳು ಎಲ್ಲವೂ ಮರತುಂಬಾ ಇವೆ.  ಕೈ ತೋಟ ತುಂಬಾ ತೊಂಡೆ, ಬೆಂಡೆ, ಸೌತೆ , ಬಸಳೆ, ಬದನೆ ಆಗುತ್ತಿವೆ,  ತಿನ್ನುವವರೇ ಇಲ್ಲ. ಮಕ್ಕಳು ಮೂರು‌ಹೊತ್ತು ಕೆಲಸದಲ್ಲೇ ಮುಳುಗಿದರೆ ಮೊಮ್ಮಕ್ಕಳ ಗತಿಯೇನು? ಅವರಲ್ಲಿ ಕಷ್ಟ ಪಡುತ್ತಿರ ಬೇಕಾದರೆ ನಮಗಿಲ್ಲಿ ಬಿಸು ಆಚರಣೆಗೆ ಮನಸೇ  ಬರುತ್ತಿಲ್ಲ ಎಂದ ಶಾರದಕ್ಕನ ಮಾತಿಗೆ ಏನನ್ನಬೇಕು ಎಂದು ತಿಳಿಯಲಿಲ್ಲ. ಪೇಟೆಯತ್ತ ತೆರಳುವ ಮಕ್ಕಳು    ಹೆತ್ತವರ   ಮನಸು  ಅರಿಯದೇ ತಪ್ಪು‌ ಮಾಡಿದರೆ? ಅವರವರ ಅನಿವಾರ್ಯತೆ ಎಂದು ನನ್ನ ನಾನು ಸಮಾಧಾನ  ‌ಮಾಡಿಕೊಂಡೆ.  ಬಿಸುವಿಗೂ ಕೊರೊನಾ ವೈರಸ್ ಗೂ  ಹೀಗೊಂದು ನಂಟಾಯಿತಲ್ಲಾ  ಎಂದು ಅಚ್ಚರಿ ಗೊಂಡೆ.
ನಮ್ಮ ಕರಾವಳಿ ಕೃಷಿ ಪ್ರಧಾನ ಪ್ರದೇಶ. ಹಾಗಾಗಿ ನಮ್ಮ ಇಲ್ಲಿನ ಆಚರಣೆಗಳು ಪರಿಸರಕ್ಕೆ ಹತ್ತಿರವಾದುದು. ನಮ್ಮ ಆರಾಧನೆಯು ಪ್ರಕೃತಿ ‌ ಕೇಂದ್ರೀಕೃತವಾದುದು. ಬಳಸುವ ವಸ್ತುಗಳೂ ಅಷ್ಟೇ ನಮ್ಮ ಆಚರಣೆಗಳು ಮಳೆ  , ಗಾಳಿ , ಬಿಸಿಲು , ಚಳಿಗೆ  ಸಂಬಂಧ ಪಟ್ಟವುಗಳು. ಆಯಾ ಕಾಲಕ್ಕೆ ಬದಲಾಗುವ ವಾತಾವರಣ, ಕೃಷಿ ಸಂಬಂದಿ ಚಟುವಟಿಕೆಗಳಿಗೂ  ನಮ್ಮ ತುಳು ನಾಡಿನ ಆಚರಣೆಗಳಿಗೂ ಹತ್ತಿರದ  ನಂಟು. ಅದರಲ್ಲೂ ಬಿಸುವೆಂದರೆ ನಮಗೆ ಹೊಸವರ್ಷದ ಸಂಭ್ರಮ.  ಸೂರ್ಯನ ಚಲನೆಯನ್ನು ಆಧರಿಸಿ ಆಚರಿಸುವ ಹಬ್ಬವೇ ಸೌರಮಾನ ಯುಗಾದಿ, ತುಳುವರ ಬಿಸು ಪರ್ಬ, ಕೇರಳದ ವಿಷು, ತಮಿಳುನಾಡಿನ ಪುತ್ತಾಂಡ್, ಅಸ್ಸಾಂ ನ ಬಿಶು, ಪಂಜಾಬ್‌ ನ ಬೈಸಾಕಿ . ಹೀಗೆ  ದೇಶದ  ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ.  ಯುಗಾದಿ ಕಳೆದು ವಿಷು ಬರುತ್ತದೆ. ಈ ಹಬ್ಬ ರೈತಾಪಿ ಜನರಿಗೆ ಸಂಕಲ್ಪ ಸಮೃದ್ಧಿಯ ದಿನ. ಐಶ್ವರ್ಯ ದ ದಿನ.    ಯಾವುದೇ ಕಾರ್ಯ ಆರಂಭಕ್ಕೆ ಈ ದಿನವನ್ನು ಶುಭ ದಿನವೆಂದೇ ಪರಿಗಣಿಸಲಾಗುತ್ತದೆ.  ಹೆಣ್ಣು ಮಕ್ಕಳಿಗೆ ಕಿವಿ, ಮೂಗು ಚುಚ್ಚಲು ಹಿರಿಯರು ಬಿಸುವಿನ ದಿನವನ್ನೇ ಆಯ್ಕೆ ಮಾಡುತ್ತಾರೆ.  ಕೃಷಿ ಕೈಂಕರ್ಯಗಳ ಆರಂಭಕ್ಕೂ ಈ ದಿನವೇ  ಸೂಕ್ತ ವೆನ್ನುವುದು ಹಿರಿಯರ ಬಲವಾದ ನಂಬಿಕೆ.  ಬಿತ್ತನೆ ಆರಂಭಕ್ಕೂ ಇದೇ ದಿನವನ್ನು ಆಯ್ಕೆ ಮಾಡಲಾಗುತ್ತದೆ.
ಈ ಪಗ್ಗು ತಿಂಗಳಲ್ಲಿ ಫಲಾಫಲಗಳು ಯಥೇಚ್ಛವಾಗಿರುತ್ತವೆ.  ಈ ಹಣ್ಣು, ತರಕಾರಿಗಳನ್ನು  ಬಿಸುಕಣಿಗೆ  ಇಡಲಾಗುತ್ತದೆ. ಮನೆಯಲ್ಲೇ ಬೆಳೆಯುವಂತಹ ಬಾಳೆ ,ಗೇರು, ಸೌತೆ ತೊಂಡೆ, ಬದನೆ ಮೊದಲಾದ ತರಕಾರಿಗಳು, ತೆಂಗಿ ನಕಾಯಿ, ಅಡಿಕೆ ,ಮಾವು ಹಲಸು ವೀಳ್ಯದೆಲೆ, ಚಿನ್ನ, ಬೆಳ್ಳಿ, ನಾಣ್ಯ, ಅಕ್ಕಿ ಹೂವು, ಕನ್ನಡಿ ಮೊಲಾದವುಗಳನ್ನು ವಿಶುಕಣಿಗೆ ಇಡಲಾಗುತ್ತದೆ.  ವಿಶುಕಣಿಯನ್ನು ದೇವರ ಕೋಣೆಯಲ್ಲಿ ಅಥವಾ ಚಾವಡಿಯಲ್ಲಿ ರಾತ್ರೆಯೇ ಸಿದ್ಧಪಡಿಸಲಾಗುತ್ತದೆ. ಮರುದಿನ ಬೆಳಗ್ಗೆ ಎದ್ದು ಮೊದಲಿಗೆ ಬಿಸುಕಣಿಯನ್ನು ಕಣ್ತುಂಬ ನೋಡಿ ಎಲ್ಲವೂ ಸಮೃದ್ಧವಾಗುವಂತೆ ದೇವರ ಆಶೀರ್ವಾದವನ್ನು ಮನೆಯ ಹಿರಿಯರ ಆಶೀರ್ವಾದ ಪಡೆಯುವುದು  ನಡೆದುಕೊಂಡು ಬಂದ ವಾಡಿಕೆ. ಮನೆಯಲ್ಲಾದ ಹೊಸ ತರಕಾರಿ , ಹಣ್ಣುಗಳನ್ನು ವಿಶುಕಣಿಗೆ    ಸಮರ್ಪಿಸದೆ ಉಪಯೋಗಿಸುವ ಕ್ರಮವಿಲ್ಲ.  ಗೇರುಬೀಜದ ಪಾಯಸ, ಹಾಗೂ ವಿವಿಧ ತರಕಾರಿ ಮಿಶ್ರಣಗಳ  ಪದಾರ್ಥ ವಿಶೇಷ.  ಪಂಚಾಂಗಶ್ರವಣ,   ತರವಾಡು ಮನೆಗಳಲ್ಲಿ,  ದೇವಾಲಯಗಳಲ್ಲಿ ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ.  ಬಿಸು ಪ್ರಯುಕ್ತ ವಿವಿಧ ಆಟ, ವಿನೋದಾವಳಿಗಳು ಪ್ರತಿವರ್ಷ ನಡೆಯುತ್ತವೆ. ಆದರೆ ಈ ಬಾರಿ ಎಲ್ಲಕ್ಕೂ‌ ವಿರಾಮ. ಅವರವರ ಮನೆಯಲ್ಲಿ  ಚೆನ್ನಮಣೆಯೋ, ಕೇರಮ್, ಚೆಸ್, ಹಾವು ಏಣಿ  ಆಡಿದರಾಯಿತು. ನಮ್ಮ ಲ್ಲಿ ಏನಿದೆಯೂ ಅದರಲ್ಲೇ  ಎಲ್ಲದ್ದೇವೆಯೋ ಅಲ್ಲಿಯೇ ಬಿಸು ಹಬ್ಬವನ್ನು  ಆಚರಿಸೋಣ.   ಹೊಸವರ್ಷದ ಶುಭಾಶಯಗಳು.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ
ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ
July 14, 2026
6:41 AM
by: ದ ರೂರಲ್ ಮಿರರ್.ಕಾಂ
ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?
July 13, 2026
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror