ಸುಳ್ಯ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯ-ಬಡ್ಡಡ್ಕ ಮಧ್ಯೆ ಆಲೆಟ್ಟಿ ಸಮೀಪ ಗುಂಡ್ಯ ಎಂಬಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಆರಂಭಗೊಂಡಿದೆ.
ಮಳೆ ಹಾನಿ ಯೋಜನೆಯಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಗುಂಡ್ಯ ತಿರುವಿನಲ್ಲಿ 300 ಮೀಟರ್ ಕಾಂಕ್ರೀಟೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಲ್ಕೂವರೆ ಮೀಟರ್ ಅಗಲದಲ್ಲಿ ರಸ್ತೆ ಕಾಂಕ್ರೀಟೀಕರಣ ನಡೆಸಲಾಗುತ್ತಿದ್ದು, ಒಂದು ಬದಿಯಲ್ಲಿ ಕಾಂಕ್ರೀಟೀಕರಣ ಪೂರ್ತಿಗೊಂಡಿದ್ದು ಮತ್ತೊಂದು ಬದಿಯಲ್ಲಿ ಲಘು ವಾಹನಗಳನ್ನು ಬಿಡಲಾಗುತ್ತದೆ. ಒಂದು ಭಾಗದ ಕಾಂಕ್ರೀಟ್ ಕ್ಯೂರಿಂಗ್ ಆದ ಕೂಡಲೇ ಮತ್ತೊಂದು ಬದಿಯಲ್ಲಿ ಕಾಂಕ್ರೀಟೀಕರಣ ನಡೆಸಲಾಗುವುದು ಎಂದು ಜಿ.ಪಂ.ಇಂಜಿನಿಯರ್ಗಳು ತಿಳಿಸಿದ್ದಾರೆ. ಇದು ಪೂರ್ತಿಯಾದರೆ ಪ್ರತಿ ಬಾರಿಯೂ ರಸ್ತೆ ಹಾಳಾಗಿ ಹೋಗಿ ಸಮಸ್ಯೆ ಸೃಷ್ಠಿಸುತ್ತಿದ್ದ ಅಗಲ ಕಿರಿದಾದ ಗುಂಡ್ಯ ತಿರುವು ಪೂರ್ತಿಯಾಗಿ ಕಾಂಕ್ರೀಟೀಕರಣಗೊಂಡಂತಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಕೊಡಗು ಸಂಪರ್ಕ ಕಲ್ಪಿಸುವ ಬಹುಮುಖ್ಯ ಸಂಪರ್ಕ ಸೇತು ಈ ಅಂತಾರಾಜ್ಯ ರಸ್ತೆ. ಆದರೆ ಅಲ್ಲಲ್ಲಿ ದುರಸ್ಥಿಯಲ್ಲಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ.
20 ಲಕ್ಷ ಅನುದಾನ: ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಭಾಗ 10 ಕಿ.ಮಿ. ಸುಳ್ಯ ಆಲೆಟ್ಟಿ ಬಡ್ಡಡ್ಕದ ಮೂಲಕ ಬಾಟೋಳಿ ಗಡಿವರೆಗೆ ಡಾಮರೀಕರಣ ಕಂಡಿದ್ದರೂ ಹೊಂಡ ಗುಂಡಿ ಬಿದ್ದು ರಸ್ತೆ ಎಕ್ಕುಟ್ಟಿ ಹೋಗಿದೆ. 2018ರ ಮಳೆಗಾಲದ ಮಹಾ ಮಳೆಗೆ ರಸ್ತೆ ಹೊಂಡ ಗುಂಡಿ ಬಿದ್ದು ಸಂಚಾರ ದುಸ್ಥರವಾಗಿತ್ತು. ಆದುದರಿಂದಲೇ ನಿರಂತರ ಒತ್ತಾಯದ ಮೇರೆಗೆ ಶಾಸಕ ಎಸ್.ಅಂಗಾರ ನಿರ್ದೇಶನದ ಮೇರೆಗೆ ಈ ರಸ್ತೆಯ ದುರಸ್ಥಿಗೆ ಮಳೆಹಾನಿ ದುರಸ್ಥಿ ಯೋಜನೆಯಡಿ 20 ಲಕ್ಷ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಕಳೆದ ಬೇಸಿಗೆಯಲ್ಲಿ ಈ ಅನುದಾನದಲ್ಲಿ ಕಾಮಗಾರಿ ನಡೆದಿರಲಿಲ್ಲ. ಇದೀಗ ಮಳೆಗಾಲ ಮುಗಿದ ಬಳಿಕ ಈ ಅನುದಾನದಲ್ಲಿ ಕಾಂಕ್ರೀಟೀಕರಣ ನಡೆಸಲಾಗುತಿದೆ. ರಸ್ತೆಯಲ್ಲಿ ಗುಂಡ್ಯದಿಂದ ಬಡ್ಡಡ್ಕವರೆಗೆ ಸಂಪೂರ್ಣ ಹಾಳಾಗಿದೆ. ಗುಂಡ್ಯ ತಿರುವು ಕಾಂಕ್ರೀಟೀಕರಣಗೊಳ್ಳುವುದರ ಜೊತೆಗೆ ಉಳಿದ ಭಾಗದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮಳೆಹಾನಿ ದುರಸ್ಥಿ ಯೋಜನೆಯಡಿಯಲ್ಲಿ ಆರು ಕೋಟಿ ಅನುದಾನ ಮಂಜೂರಾಗಿತ್ತು. ಅದರಲ್ಲಿ ಸುಳ್ಯ ತಾಲೂಕಿಗೆ 3.80 ಕೋಟಿ ಮೀಸಲಿರಿಸಿದ್ದು ಆಲೆಟ್ಟಿ ಬಡ್ಡಡ್ಕ ರಸ್ತೆ ಸೇರಿ 105 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆರು ಕೋಟಿಯಲ್ಲಿ ಉಳಿದ 2.20 ಕೋಟಿ ಕಡಬ ತಾಲೂಕಿಗೆ ಮೀಸಲಿರಿಸಲಾಗಿದೆ.
ಮಡಿಕೇರಿ ರಸ್ತೆಗೆ ಪರ್ಯಾಯ: ಸುಳ್ಯ-ಮಡಿಕೇರಿ ರಸ್ತೆಯ ಪರ್ಯಾಯ ರಸ್ತೆ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆ. 2018ರ ಮಳೆಗಾಲದಲ್ಲಿ ಭೂಕುಸಿತ, ರಸ್ತೆ ಕೊಚ್ಚಿ ಹೋಗಿ ಸಂಪಾಜೆ-ಮಡಿಕೇರಿ ಮಧ್ಯೆ ರಸ್ತೆ ಮುಚ್ಚಿದಾಗ ಪರ್ಯಾಯ ರಸ್ತೆಯಾಗಿ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು. ಕೆಲವು ತಿಂಗಳ ಕಾಲ ಈ ರಸ್ತೆಯಲ್ಲಾಗಿ ಮಡಿಕೇರಿ ಸಂಪರ್ಕ ಕಲ್ಪಿಸಲಾಗಿತ್ತು. ಸುಳ್ಯದಿಂದ ಮಡಿಕೇರಿಗೆ ದಿನಾಲು ಸಾವಿರಾರು ವಾಹನಗಳು ಓಡಾಟ ನಡೆಸಿದದವು. ಮಡಿಕೇರಿಯಿಂದ ಸುಳ್ಯಕ್ಕೆ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ಕೂಡ ನಡೆಸಿತ್ತು. ಸುಳ್ಯದಿಂದ ಕರಿಕೆ ಮೂಲಕ ಮಡಿಕೇರಿಗೆ 90 ಕಿ.ಮಿ.ದೂರವಿದೆ. ಇದರಲ್ಲಿ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸುಳ್ಯ-ಪಾಣತ್ತೂರು ರಸ್ತೆ ಎರಡೂ ರಾಜ್ಯಗಳಲ್ಲಿ ತಲಾ 10 ಕಿ.ಮಿ.ನಂತೆ 20 ಕಿ.ಮಿ.ದೂರವಿದೆ. ಅಗಲ ಕಿರಿದಾದ ತಿರುವುಗಳನ್ನೊಳಗೊಂಡ ರಸ್ತೆಯ ಪ್ರಯಾಣ ದುಸ್ತರವಾಗಿದೆ. ಕರ್ನಾಟಕದ ಭಾಗದಲ್ಲಿ 10 ಕಿ.ಮಿ.ರಸ್ತೆ ಡಾಮರೀಕರಣ ಕಂಡಿದ್ದರೂ ಹಲವು ಕಡೆ ಹೊಂಡ ಗುಂಡಿ ಬಿದ್ದು ಸಂಚಾರಕ್ಕೆ ದುಸ್ತರವಾಗಿದೆ.
ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…
ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…
ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5…
https://youtu.be/_3oJulDTrjI?si=aPComSJYcu2B1sEJ