ಆದರ್ಶ ನಾಯಕ : ಲಾಲ್ ಬಹಾದ್ದೂರ್ ಶಾಸ್ತ್ರಿ….

October 2, 2019
9:53 AM
ಇಂದು ಮಹಾತ್ಮ ಗಾಂಧೀಜಿ ಅವರ ಜನ್ಮದಿನ. ಗಾಂಧಿ ಜಯಂತಿ , ಅದರ ಜೊತೆಗೆ  ಜೈ ಜವಾನ್…. ಜೈ ಕಿಸಾನ್ ಮೂಲಕ ಗಮನ ಸೆಳೆದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಗಾಂಧಿ ಜಯಂತಿ ಶುಭಾಶಯ ಜೊತೆಗೆ ಲಾಲ್ ಬಹದ್ದೂರು ಶಾಸ್ತ್ರೀಜಿ ಬಗ್ಗೆ ಅಶ್ವಿನಿಮೂರ್ತಿ ಬರೆದಿದ್ದಾರೆ…. ಇಂದಿನ ಫೋಕಸ್ ಗಾಗಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥರಾದವರು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ, ಆದರೆ ತನ್ನ ಧೈರ್ಯ, ಸಾಹಸಗಳಿಂದ ಸಾಮ್ರಾಜ್ಯ ವನ್ನು ಕಟ್ಟಿ ಜನರ ಮನಸಿನಾಳದಲ್ಲಿ ನೆಲೆಯಾದವನು. ನೆಪೋಲಿಯನ್ ಕುಳ್ಳ, ಜಗತ್ತನ್ನೇ ನಡುಗಿಸಿದವನು. ಲಾಲ್‌ ಬಹದ್ದೂರ್ ರವರು  ಇವರೆಲ್ಲರಿಗಿಂತ ಎತ್ತರದವರೂ ಅಲ್ಲ, ಆದರೆ ಸಾಹಸ ,ಸಹನೆ, ಚಾತುರ್ಯ, ಬುದ್ಧಿವಂತಿಕೆ ಕೌಶಲ್ಯಗಳಿಗೆ ಯಾರಿಗೂ ಕಮ್ಮಿಯಿಲ್ಲ. ಈ ಎಲ್ಲಾ ಗುಣಗಳುಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ. ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ  ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳು.
2 ಅಕ್ಟೋಬರ್1904 ರಲ್ಲಿ ಕಾಶಿಯ ಬಳಿಯಿರುವ ಮೊಘಲ್ ಸರಾಯ್ ಎಂಬ ಊರಿನಲ್ಲಿ  ಜನಿಸಿದರು. ತಂದೆ ಶಾರದಾ ಪ್ರಸಾದ್, ತಾಯಿ ರಾಂ ದುಲಾರಿ.. ಆರಂಭದಲ್ಲಿ   ತಂದೆ ಬಡ ಅಧ್ಯಾಪಕ. ಆಮೇಲೆ ಗುಮಾಸ್ತರಾಗಿ  ಕೆಲಸ ಮಾಡಲಾರಂಭಿಸಿದರು.  ಲಾಲ್ ಬಹಾದ್ದೂರ್ ರಿಗಿನ್ನೂ ಒಂದು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಇವರ ಅಜ್ಜ ಜವಾಬ್ದಾರಿ ತೆಗೆದುಕೊಂಡರು. ಅಜ್ಜ ಇವರನ್ನು ೬ ನೇ ತರಗತಿಯವರೆಗೆ  ಅವರ ಊರಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಆಮೇಲೆ ಕಾಶಿಯಲ್ಲಿ ಓದಲು ವ್ಯವಸ್ಥೆ ಮಾಡಿದರು‌‌. ಅವರಲ್ಲಿದ್ದ ಧೈರ್ಯ ಆತ್ಮಾಭಿಮಾನ ಬಾಲ್ಯದಿಂದಲೇ ಬಂದ ಗುಣಗಳು.
ಬಾಲ್ಯದ ಘಟನೆಗಳು ಮಕ್ಕಳ  ಮನಸ್ಸಿನ ಮೇಲೆ ಯಾವಾಗಲೂ ಅಳಿಸಲಾಗದ ಪರಿಣಾಮವನ್ನುಂಟು ಮಾಡುತ್ತದೆ. ಲಾಲ್ ಬಹಾದ್ದೂರ್ ದ ಜೀವನದ ಮೇಲೆ ಪ್ರಭಾವ ಬೀರಿದ ಒಂದು ಘಟನೆ ಹೀಗಿದೆ ನೋಡಿ. :
ಒಂದಷ್ಟು ಹುಡುಗರು ಹಣ್ಣಿನ ತೋಟಕ್ಕೆ ನುಗ್ಗಿದರು. ಅವರಲ್ಲಿ ಸಣ್ಣ ಹುಡುಗ ಲಾಲ್ ಬಹಾದ್ದೂರ್. ಉಳಿದವರೆಲ್ಲಾ ಮರ ಹತ್ತಿ ಹಣ್ಣುಗಳನ್ನು ಕೊಯ್ದು  ಗಲಾಟೆ ಮಾಡುತ್ತಿದ್ದರೆ ಈ ಪುಟ್ಟ ಬಾಲಕ ಪಕ್ಕದಲ್ಲಿದ್ದ ಹೂವು ವನ್ನು ಕೊಯ್ದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಿದ್ದ.  ಅದೇ ಹೊತ್ತಿಗೆ ತೋಟದ ಮಾಲಿ‌ ಕೋಲು ಹಿಡಿದು ಕೊಂಡು ಬಂದ. ಅವನನ್ನು ನೋಡಿ ದೊಡ್ಡ ಮಕ್ಕಳು ಓಡಿ ಹೋಗಿ‌ ಪೆಟ್ಟಿನಿಂದ ತಪ್ಪಿಸಿಕೊಂಡರು.‌ ಕೈಗೆ ಸಿಕ್ಕ ಹುಡುಗನಿಗೆ ಚೆನ್ನಾಗಿ ಬಾರಿಸಿದನು ಮಾಲಿ. ಹುಡುಗ ಅಳುತ್ತಾ ನಾನು ತಂದೆ ಇಲ್ಲದ ಹುಡುಗ ಹೊಡೆಯ‌ಬೇಡಿ ಎಂದು ಅಳಲಾಂಭಿಸಿದ. ಕರುಣೆಯಿಂದ ನೋಡುತ್ತಾ ಮಾಲಿ  ‘ “ತಂದೆಯಿಲ್ಲದ ಹುಡುಗನಾದ್ದರಿಂದ ಒಳ್ಳೆಯ ಗುಣನಡತೆ ಕಲಿಯಬೇಕಪ್ಪಾ ” ಎಂದ ಮಾಲಿಯ ಮಾತು ಗಾಢವಾದ ಪರಿಣಾಮವನ್ನು ಬೀರಿತು. ಇನ್ನೂ ಮುಂದೆ ಯಾವತ್ತೂ ಕೆಟ್ಟ ಕೆಲಸ ಮಾಡಲಾರೆ , ತಪ್ಪು ಹೆಜ್ಜೆ ಯನ್ನು ಇಡಲಾರೆ ಎಂಬ ಧೃಡ ನಿರ್ಧಾರವನ್ನು  ಆ ಸಂದರ್ಭದಲ್ಲಿಯೇ ತೆಗೆದುಕೊಂಡರು.
‘ಲಾಲ್ ಬಹಾದ್ದೂರ್ ಶ್ರೀ ವಾಸ್ತವ್ ‘ ಎಂಬುದು ಅವರ ಪೂರ್ಣ ಹೆಸರು. ದೊಡ್ಡವರಾದ  ಮೇಲೆ ತಮ್ಮ ಹೆಸರಿನಿಂದ  ಶ್ರೀ ವಾಸ್ತವ ಎಂಬುದನ್ನು ತೆಗೆದುಹಾಕಿದರು.
‘ಶ್ರೀವಾಸ್ತವ ‘ ಎಂಬುದು ಅವರ ಜಾತಿಯನ್ನು ಸೂಚಿಸುತ್ತಿತ್ತು. ಜಾತಿಯ ಹೆಸರಿನಿಂದ ಗುರುತಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಆಮೇಲೆ ಅವರ ಹೆಸರಿನೊಂದಿಗೆ  ಸೇರಿದ ‘ಶಾಸ್ತ್ರಿ’ ಎಂಬುದು ಕಾಶಿ ವಿದ್ಯಾಪೀಠ ಕೊಟ್ಟ ಬಿರುದು.
ದೇಶದ ಏಳಿಗೆಗಾಗಿ ಒಬ್ಬ ವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು.  1921 ರಲ್ಲಿ ಲಾಲಲಜಪತರಾಯರು ಸ್ಥಾಪಿಸಿದ ‘ಜನಸೇವಕ ಸಂಘ’ ದ ಅಜೀವ ಸದಸ್ಯರಾಗಿ  ಸೇರಿದರು. ದೇಶದ ಉನ್ನತಿಗಾಗಿ ದುಡಿಯ ಬಲ್ಲ ಸ್ವಯಂ ಸೇವಕ ರನ್ನು ತಯಾರು ಮಾಡುವುದು ಇದರ ಉದ್ದೇಶ. ಕನಿಷ್ಠ 20 ವರ್ಷ‌ಗಳ ಕಾಲ ಸಂಸ್ಥೆ ಯಲ್ಲಿ ದುಡಿಯುವ ಹಾಗೂ ಅಜೀವ ಪರ್ಯಂತ ಸರಳ ,ನೇರ, ಬದುಕು ನಡೆಸುವ ಪ್ರತಿಜ್ಞೆ ಯನ್ನು ಪ್ತತಿಯೊಬ್ಬ ಸದಸ್ಯ ನೂ ಮಾಡ ಬೇಕಿತ್ತು.  ತೆಗೆದುಕೊಂಡ ಪ್ರತಿಜ್ಞೆಯನ್ನು ಶಿರಸಾವಹಿಸಿ ಪಾಲಿಸಿದವರು  ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು. ಸ್ವಂತ ಕ್ಕಾಗಿ ಮನೆಯನ್ನೂ ಬಯಸದ ವ್ಯಕ್ತಿ. ‘ಗೃಹವಿಲ್ಲದ ಗೃಹಮಂತ್ರಿ ‘ಎಂದೇ ಖ್ಯಾತ ರಾದವರು.
1930 ರಲ್ಲಿ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರ ವಾಗಿತ್ತು. ಬ್ರಿಟಿಷರ ವಿರುದ್ಧ ಉಪ್ಪಿನ ಸತ್ಯಾಗ್ರಹ ವನ್ನು ಗಾಂಧೀಜಿ ಯವರು ಆರಂಭಿಸಿದರು. ಇದರಲ್ಲಿ ಲಾಲ್ ಬಹಾದ್ದೂರ್ ರವರು ಪ್ರಮುಖ ಪಾತ್ರವಹಿಸಿದರು. ಮೊದಲ ಬಾರಿಗೆ ಬ್ರಿಟಿಷ್ ಸರ್ಕಾರ ದ ವಿರುದ್ಧ ಹೋರಾಟ ಮಾಡಿದಾಗ 17 ರ ಹರೆಯದಲ್ಲಿದ್ದ ಲಾಲ್ ಬಹಾದ್ದೂರ್ ರನ್ನು ಬಂಧಿಸಿ ಬಿಟ್ಟಿದ್ದರು. ಆದರೆ ಸರಕಾರಕ್ಕೆ ಕಂದಾಯ ಕಟ್ಟ ಬೇಡಿ ಎಂಬ ಉಪದೇಶ‌ ಮಾಡುತ್ತಿದ್ದ ಲಾಲ್ ಬಹಾದ್ದೂರ್ ರವರನ್ನು ಸರಕಾರ ಬಂಧಿಸಿ  ಜೈಲಿಗಟ್ಟಿತು. ತೀವ್ರ ಸ್ವರೂಪದ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಬಹದ್ದೂರ್ ವರು ಒಟ್ಟುಏಳು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಮಗಳ ಅಸೌಖ್ಯ ಮಗನ ಕಾಯಿಲೆ ಯಾವುದಕ್ಕೂ ಜೈಲು ಶಿಕ್ಷೆ ಯಲ್ಲಿ ರಿಯಾಯಿತಿ ಇರಲಿಲ್ಲ. ಮಗಳಿಗೆ ಹುಷಾರಿಲ್ಲವೆಂದು ರಜೆ ಕೇಳಿ , ಅದು ಸಿಕ್ಕಿ ಮನೆಗೆ ಬಂದಾಗ ಮಗಳು ಇಹ ಲೋಕ ತ್ಯಜಿಸಿ ಯಾಗಿತ್ತು. ಇನ್ನು ಮಗನ ಆರೋಗ್ಯ ಸುಧಾರಣೆ ಯಾಗುವುದರೊಳಗೆ ಜೈಲಿಗೆ ಮತ್ತೆ ಹೋಗಬೇಕಾಯಿತು.  ವೈಯಕ್ತಿಕ ವಿಷಯಗಳನ್ನೆಲ್ಲಾ ಬದಿಗಿಟ್ಟು ದೇಶವೇ ಮುಖ್ಯವಾಗಿತ್ತು ಲಾಲ್ ಬಹಾದ್ದೂರವರಿಗೆ.
ದೇಶದ ನಾಯಕನಿಗೆ ಇರಲೇ ಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟು ಕೊಡದ ನಿಶ್ಚಲತೆ ಲಾಲ್ ಬಹಾದ್ದೂರ್ ರವರದು. ಮಗಳ ಸಾವು, ಮಗನ ಅನಾರೋಗ್ಯ, ಬಡತನ ಯಾವುದೂ ಅವರನ್ನು ಅಡ್ಡ‌ ಹಾದಿ ಹಿಡಿಯುವಂತೆ ಮಾಡಲಿಲ್ಲ.  ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿ ಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿ ಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೆ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದ‌ಜನತೆ ಸ್ಪಂದಿಸಿದರು‌. ಪ್ರತಿ ಸೋಮವಾರದಂದು ಉಪವಾಸ‌ ಮಾಡಲು ಇಡೀ ದೇಶವೇ ಕೈ ಜೋಡಿಸಿತು.
ಭಾರತ – ಪಾಕ್, ಭಾರತ – ಚೈನಾ ಯುದ್ಧ ಗಳ ನಿರ್ಣಾಯಕ    ಸಂಧರ್ಭದಲ್ಲಿ ಯಾವುದೇ  ಅಂಜಿಕೆ ಅಳುಕಿಲ್ಲದೆ ಧೃಡ ನಿರ್ಧಾರ ತೆಗೆದುಕೊಂಡು ಸಫಲನಾದ ನಾಯಕ.
ಯುದ್ಧ ದ ಸಂಧರ್ಭದಲ್ಲಿ ವಿಶ್ವ ಸಂಸ್ಥೆಯ ಕದತಟ್ಟದೆ , ಅಂತರಾಷ್ಟ್ರೀಯ ಬೆದರಿಕೆಗಳಿಗೆ ಬಗ್ಗದೆ ತಕ್ಷಣ ಸೈನ್ಯ ಗಳಿಗೆ ಮಾರ್ಗ ದರ್ಶನ ಮಾಡಿದವರು.  ಜೈ ಜವಾನ್ ಜೈ… ಕಿಸಾನ್ ಎಂಬ ಧ್ಯೇಯ ವಾಕ್ಯ ದಂತೆ ನಡೆದವರು.
ಮಾತು, ಮನಸ್ಸು ಕೆಲಸ ಮೂರನ್ನು ಶುದ್ಧ ವಾಗಿಟ್ಟುಕೊಂಡ ನಾಯಕನ ಅಂತ್ಯ ಸಂಶಯಾಸ್ಪದ ರೀತಿಯಲ್ಲಿ ಆದದ್ದು ಭಾತತೀಯರ ದುರಂತ. ಕೇವಲ‌ 17 ತಿಂಗಳ ಪ್ರದಾನ ಮಂತ್ರಿ ಪಟ್ಟದಲ್ಲಿದ್ದರು ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ”ಲಾಲ್ ಬಹದ್ದೂರ್ ಶಾಸ್ತ್ರಿ ”  ಹೆಮ್ಮೆಯಿಂದ ಅವರ ಹುಟ್ಟುಹಬ್ಬವನ್ನು ಇಂದು ಅಕ್ಟೋಬರ್ 2 ರಂದು ಆಚರಿಸೋಣ.
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror