ಗುತ್ತಿಗಾರು: ಈ ಬಾರಿಯ ಮಳೆಗಾಲವೂ ಮೊಗ್ರ ಶಾಲೆಯ ಮಕ್ಕಳಿಗೆ ಹೊಳೆ ದಾಟಲು ಅಡಿಕೆ ಮರದ ಪಾಲವೇ ಗತಿಯಾಗಿದೆ. ಅನೇಕ ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ – ಏರಣಗುಡ್ಡೆಯ ಹೊಳೆಗೆ ಬಹು ವರ್ಷಗಳ ಬೇಡಿಕೆಯಾಗಿದ್ದ ಮೊಗ್ರ ಸೇತುವೆ ರಚನೆ ಕಾಮಗಾರಿ ಮರೀಚಿಕೆಯಾಗಿಯೇ ಉಳಿದಿದೆ. ಈ ಮಳೆಗಾಲವೂ ಅಡಿಕೆ ಮರದ ಕಾಲುಸಂಕವೇ ಜನರಿಗೆ ಹೊಳೆ ದಾಟಲು ಗತಿಯಾಗಿದೆ.
ಏರಣಗುಡ್ಡೆ ಹಾಗೂ ಮೊಗ್ರಶಾಲೆ, ಅಂಗನವಾಡಿ, ಆರೋಗ್ಯ ಉಪಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಮೊಗ್ರ ಹೊಳೆ ಹರಿಯುತ್ತಿದ್ದು ಈ ಹೊಳೆಗೆ ಸೇತುವೆ ರಚನೆ ಮಾಡುವಂತೆ ಈ ಭಾಗದ ಜನ ಹಲವು ವರ್ಷಗಳಿಂದ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸ್ಥಳಕ್ಕೆ ಶಾಸಕರು, ಜನಪ್ರತಿನಿಧಿಗಳು, ಸಂಸದರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೆ ಇದುವರೆಗೆ ಈ ಹೊಳೆಗೆ ಸೇತುವೆ ರಚನೆ ಮಾತ್ರಾ ಆಗಿಲ್ಲ.
ಮಳೆಗಾಲದಲ್ಲಿ ಅಡಿಕೆ ಮರದ ಪಾಲ:
ಮಳೆಗಾಲದಲ್ಲಿ ತುಂಬಿ ಹರಿಯುವ ಮೊಗ್ರ ಹೊಳೆಯನ್ನು ದಾಟಲು ಗ್ರಾ.ಪಂ ವತಿಯಿಂದ ತಾತ್ಕಾಲಿಕ ಕಾಲು ಸಂಕ ನಿರ್ಮಿಸಲಾಗುತ್ತದೆ. ಇದೇ ಕಾಲು ಸಂಕದಲ್ಲಿ ಹೊಳೆಯಾಚೆ ಇರುವ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಹಾಗೂ ನಾಗರಿಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಸ್ವಲ್ಪ ಆಯತಪ್ಪಿದರೂ ನೀರು ಪಾಲಾಗುವ ಭೀತಿ ಇಲ್ಲಿನ ನಾಗರಿಕರದ್ದು.
ಹಲವು ಬಾರಿ ಬೇಡಿಕೆ ಸಲ್ಲಿಕೆ:
ಮೊಗ್ರದಲ್ಲಿ ಸೇತುವೆ ನಿರ್ಮಾಣ ಮಾಡಲು ಹಲವು ಬಾರಿ ವಿವಿಧ ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಜನ ಮನವಿ ಸಲ್ಲಿಸಿದ್ದರು. ಸುಳ್ಯ ಶಾಸಕರು, ಮಂಗಳೂರು ಸಂಸದರಿಗೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳು ವಿವರಿಸಿದ್ದರೂ ಇದುವರೆಗೆ ಯಾವೊಂದು ಪ್ರಯೋನಜವೂ ಆಗಿಲ್ಲ. ಇಲ್ಲಿನ ಏರಣಗುಡ್ಡೆ-ಮೊಗ್ರ ಪರಿಸರದಲ್ಲಿ ಹಲವು ಪರಿಶಿಷ್ಠ ಜಾತಿ ಕುಟುಂಬಗಳಿದ್ದು ಅವರೆಲ್ಲಾ ಈ ಹೊಳೆಯನ್ನು ದಾಟಿಯೇ ಬೇರೆ ಊರುಗಳಿಗೆ ಸಾಗಬೇಕು. ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ವೆನಿಸಿರುವ ಈ ಸೇತುವೆಯ ರಚನೆಗೆ ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದೇ ಪ್ರಶ್ನೆ ಎನ್ನುತ್ತಾರೆ ಇಲ್ಲಿನ ಜನ.
ಶಾಲೆ, ಅಂಗನವಾಡಿಗೆ ಸಂಪರ್ಕ ಕೊಂಡಿ:
ಮೊಗ್ರ ಹಿ.ಪ್ರಾ ಶಾಲೆ, ಆರೋಗ್ಯ ಉಪಕೇಂದ್ರ ಹಾಗೂ ಅಂಗನವಾಡಿಗೆ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಮೊಗ್ರ ಹೊಳೆಗೆ ಸೇತುವೆ ರಚನೆ ಮಾಡಿದರೆ ಅತ್ಯಂತ ಹತ್ತಿರದ ಸಂಪರ್ಕ ಕೊಂಡಿಯಾಗುತ್ತದೆ. ಇಲ್ಲವಾದಲ್ಲಿ ಮಕ್ಕಳು ಸುತ್ತುಬಳಸಿ ಶಾಲೆಯನ್ನು ತಲುಪಬೇಕು. ಆದ್ದರಿಂದ ಇಲ್ಲಿನ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದೆ.
1 ಕೋಟಿ ಅನುದಾನಕ್ಕೆ ಪ್ರಸ್ತಾವನೆ:
ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ ರೂಗಳ ಪ್ರಸ್ತಾವನೆಯನ್ನು ಶಾಸಕ ಎಸ್.ಅಂಗಾರರು ಕಳುಹಿಸಿದ್ದು ಅನುದಾನ ಮಂಜೂರಾಗಬೇಕಿದೆ. ನಬಾರ್ಡ್ ಮೂಲಕ ಅನುದಾನ ಮಂಜೂರಾದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿದೆ ಎಂಬ ಭರವಸೆ ಎರಡು ವರ್ಷಗಳಿಂದ ದೊರೆತಿದೆ. ಅದರ ಹೊರತು ಯಾವುದೇ ಪ್ರಯತ್ನ ಮಾಡುತ್ತಿಲ್ಲ.
ಈ ಬಗ್ಗೆ ಮಾತನಾಡುವ ಸ್ಥಳೀಯರಾದ ಬಿಟ್ಟಿ ನೆಡುನೀಲಂ, “ಮೊಗ್ರದ ಹೊಳೆಗೆ ಸೇತಉವೆ ರಚನೆ ಬಗ್ಗೆ ಕೆಲವು ವರ್ಷಗಳಿಂದ ಭರವಸೆ ಸಿಗುತ್ತಿದೆ. ಸೇತುವೆ ರಚನೆ ಕಡತಗಳು ಪಾಳು ಬಿದ್ದಿವೆ. ಹೊಳೆಯಿಂದಾಗಿ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದು ಶಾಲೆ ಮುಚ್ಚುವ ಭೀತಿಯಲ್ಲಿದೆ” ಎಂದು ಹೇಳುತ್ತಾರೆ.
ಇದೇ ಸಂದರ್ಭ ಸ್ಥಳೀಯ ಗ್ರಾಪಂ ಸದಸ್ಯ ಜಯಪ್ರಕಾಶ್ ಮೊಗ್ರ ಅವರು “ ಸೇತುವೆ ರಚನೆಗೆ ಪ್ರಸ್ತಾವನೆಯನ್ನು ಶಾಸಕರ ಮೂಲಕ ಕಳುಹಿಸಲಾಗಿದೆ. ಅನುದಾನ ಬರುವ ನಿರೀಕ್ಷೆಯಿದ್ದು ಸೇತುವೆ ರಚನೆ ಆಗಲಿದೆ” ಎಂದು ಹೇಳುತ್ತಾರೆ.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…