Advertisement
MIRROR FOCUS

ಕನ್ನಡ ಮಣ್ಣಿನ ಮಾರಿ ಕಳೆಯಲು ಈಗ ಬರುತ್ತಿದ್ದಾನೆ ಕೇರಳದ `ಕಳೆಂಜ’

Share

ನಮ್ಮ ನಾಡಿನ ಸಂಸ್ಕೃತಿ-ಸಂಪ್ರದಾಯ, ಆಚಾರ-ಆಚರಣೆ, ನಂಬಿಕೆ-ಶ್ರದ್ಧೆ ಎಲ್ಲವೂ ನಮ್ಮ ಮನಸ್ಸನ್ನು ಗಟ್ಟಿ ಮಾಡುವ ಹಾಗು ಭರವಸೆಯ ಕಡೆಗೆ ನೋಟ ಹರಿಸುವ ಸದುದ್ದೇಶ ಕಾಣುತ್ತದೆ. ಹೇಗೇ ನೋಡಿ ಒಂದು ಆಚರಣೆ , ನಂಬಿಕೆ, ಸಂಪ್ರದಾಯದ ಹಿಂದೆ ಒಂದು ಸಂದೇಶ ಇರುತ್ತದೆ. ಆಧುನಿಕ ಯುಗದಲ್ಲೂ ಅದು ವಿಶೇಷ , ಸಿಲ್ಲಿ ವಿಷಯ ಅಂತ ಅನಿಸಿದರೂ ಆಳಕ್ಕೆ ಇಳಿದಾಗ ಸಮಸ್ತ ಸಮಾಜಕ್ಕೆ, ಸಮುದಾಯಕ್ಕೆ ಭರವಸೆ ನೀಡುತ್ತದೆ. ಇದೇ ಅಲ್ಲವೇ ಆಗಬೇಕಾದ್ದು ? ಇಂತಹ ಭರವಸೆ ನೀಡುವ ಆಚರಣೆಯ ಕಡೆಗೆ ಫೋಕಸ್..

 


 

ಸುಳ್ಯ: ಕರ್ನಾಟಕದ ಮಣ್ಣಿನ ಮಾರಿಯನ್ನು ಕಳೆಯಲು ನೆರೆಯ ಕೇರಳದ ಭೂತ…!

ಆಟಿ ತಿಂಗಳಲ್ಲಿ ಜನರ ಜೀವನದಲ್ಲಿ ಉಂಟಾಗುವ ರೋಗ-ರುಜಿನ, ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ `ಆಡಿ ವೇಡನ್’ (ಕಳೆಂಜ) ಎಂಬ ಕೇರಳ ನಾಡಿನ ಭೂತ ಕನ್ನಡ ನಾಡಿನ ಮಣ್ಣನ್ನು ಪಾವನಗೊಳಿಸುತಿದೆ. ನಾಡಿನೆಲ್ಲೆಡೆ ತುಳುನಾಡಿನ ಆಟಿಕಳೆಂಜ ಆಟಿ ತಿಂಗಳ ಮಾರಿ ಕಳೆಯಲು ಮನೆ ಮನೆ ಬರುವುದು ವಾಡಿಕೆ. ಜೊತೆಗೆ ನೆರೆಯ ಕೇರಳದ ಕಳೆಂಜನೂ ಸುಳ್ಯ ತಾಲೂಕಿನ ಗಡಿ ಗ್ರಾಮಗಳ ಮನೆ ಮನೆ ತಿರುಗಾಟ ಮಾಡುತ್ತಿದೆ.

ಗಡಿ ಪ್ರದೇಶವಾದ ಕೋಲ್ಚಾರಿನ ಕುಂಞಕಣ್ಣನ್ ಮತ್ತು ಅಡೂರಿನ ಸುಧಾಕರನ್ ನೇತೃತ್ವದಲ್ಲಿ ಪ್ರತಿ ವರ್ಷವೂ ಆಡಿ ವೇಡನ್ ಭೂತವನ್ನು ಕಟ್ಟಿ ಕರ್ನಾಟಕಕ್ಕೆ ಬರುತ್ತಾರೆ. ಆಟಿ ತಿಂಗಳ 15 ರವರೆಗೆ ಇವರು ಕರ್ನಾಟಕದ ಮಣ್ಣಿನಲ್ಲಿ ಮನೆ ಮನೆ ತಿರುಗಾಟ ಮಾಡಿ 15 ರ ಬಳಿಕ ಕೇರಳದ ಮನೆ ಮನೆ ಭೇಟಿಗೆ ಹೋಗುತ್ತಾರೆ. ಕುಂಞಕಣ್ಣನ್, ಸುಧಾಕರ ಮತ್ತು ಪೊಯಿನಾಚ್ಚಿಯ ಮುರಳಿ ನೇತೃತ್ವದಲ್ಲಿ ಆಟಿ ತಿಂಗಳ ಒಂದರಂದು ಇಲ್ಲಿನ ಮನೆಗಳಲ್ಲಿ ತಿರುಗಾಟ ಆರಂಭಿಸಿದ್ದಾರೆ. ಕುಂಞಕಣ್ಣನ್ ಮತ್ತು ಸುಧಾಕರನ್ ನೇತೃತ್ವದಲ್ಲಿ ಕಳೆದ 40 ವರ್ಷಗಳಿಂದಲೂ ಹೆಚ್ಚು ಕಾಲದಿಂದ ಸಂಪ್ರದಾಯದಂತೆ `ಆಡಿ ವೇಡನ್’ ಕೇರಳ ಮತ್ತು ಕರ್ನಾಟಕದ ಗ್ರಾಮಗಳ ಮನೆ ಮನೆಗಳಿಗೆ ಬರುತ್ತಾರೆ.

ಜನರು ಭಕ್ತಿ ಭಾವದಿಂದ ಈ ಕಳೆಂಜನನ್ನು ಸ್ವಾಗತಿಸುತ್ತಾರೆ. ಮನೆಯ ಮುಂದೆ ಉರಿಸಿಟ್ಟ ದೀಪದ ಮುಂದೆ ಚೆಂಡೆಯ ಮತ್ತು ಪಾಡ್ದನದ ತಾಳಕ್ಕೆ ಆಡಿವೇಡನ್ ಕುಣಿದು ಮನೆಯ ಮಾರಿಯನ್ನು ಕಳೆಯುತ್ತಾರೆ. ಇವರಿಗೆ ಹಣ, ಅಕ್ಕಿ, ತೆಂಗಿನ ಕಾಯಿ ಮತ್ತಿತರ ಫಲ ವಸ್ತುಗಳನ್ನು ನೀಡಿ ಕಳಿಸಲಾಗುತ್ತಿದೆ. ಶಿವನ ಮತ್ತು ಪಾರ್ವತಿಯ ಪ್ರತಿರೂಪಗಳಾದ ಆಡಿವೇಡನ್ ಆಟಿ ತಿಂಗಳಲ್ಲಿ ಬಂದು ಮನುಷ್ಯನಿಗೆ ಮತ್ತು ಪ್ರಕೃತಿಗೆ ಬಾದಿಸಿದ ಕಷ್ಟ ಕಾರ್ಪಣ್ಯವನ್ನು ದೂರ ಮಾಡುತ್ತಾರೆ ಎಂಬುದು ನಂಬಿಕೆ. ಪಾಶುಪತಾಸ್ತ್ರಕ್ಕಾಗಿ ತಪಸ್ಸು ಮಾಡಿದ್ದ ಅರ್ಜುನನ್ನು ಶಿವ ಮತ್ತು ಪಾರ್ವತಿ ಬೇಟೆಗಾರರ ವೇಷ ಧರಿಸಿ ಬಂದು ಪರೀಕ್ಷಿಸಿದ್ದರು. ಇದರ ಪ್ರತಿರೂಪವಾಗಿ ಆಟಿ ತಿಂಗಳಲ್ಲಿ `ಆಡಿ ವೇಡನ್’ ಮನೆ ಮನೆ ಭೇಟಿ ನೀಡಿ ಮಾರಿ ಕಳೆಯುತ್ತಾರೆ, ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಜೀವನದಲ್ಲಿ ಸಂತೋಷವನ್ನೂ, ಐಶ್ವರ್ಯವನ್ನೂ ಕೊಡ ಮಾಡುತ್ತಾನೆ ಎಂಬುದು ಜನರ ನಂಬಿಕೆ. ಕೆಲವು ಕಡೆಗಳಲ್ಲಿ ಶಿವ ಮತ್ತು ಪಾರ್ವತಿ ಎಂದು ಎರಡು ಕಳೆಂಜನನ್ನು ಕಟ್ಟಲಾಗುತ್ತದೆ. ಕೆಲವೆಡೆ ಒಂದು ಮಾತ್ರ ಇರುತ್ತದೆ.

ಆಧುನಿಕ ಜೀವನದ ಭರಾಟೆಯಲ್ಲೂ ಹಳೆಯ ಕಾಲದ ಸಂಪ್ರದಾಯ, ವಾಡಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿದ್ದು ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಶ್ರದ್ಧೆ, ಭಕ್ತಿ, ಭಾವದೊಂದಿಗೆ ಜನತೆ ಅದನ್ನು ಪರಿಪಾಲಿಸುತ್ತಾ ಬರುತ್ತಾರೆ. ಕಳೆಂಜನಂತಹ ಸಂಪ್ರದಾಯಗಳು ಸಂಸ್ಕೃತಿ, ಸಂಪ್ರದಾಯಗಳ ಮಹತ್ವವನ್ನು ನೆನಪಿಸುತ್ತಿದೆ. ಕಳೆಂಜ ಆಟಿ ತಿಂಗಳಲ್ಲಿನ ಮಾರಿಯನ್ನು ಕಳೆಯಲು ಬರುವ ಶಿವದೂತರು ಎಂಬುದು ಜನಪದರ ನಂಬಿಕೆ. ಮನೆಗಳಿಗೆ ತಲಾಂತರಗಳಿಂದ ತಪ್ಪದೇ ಬರುವ ಇವರನ್ನು ಗೌರವಾಧರಗಳನ್ನು ನೀಡಿ ಸ್ವಾಗತಿಸಿ ಆದರಿಸುತ್ತೇವೆ. ಸುಳ್ಯವು ಹಲವಾರು ಸಂಸ್ಕೃತಿಗಳ ನೆಲೆವೀಡಾದ ಕಾರಣ ಇಲ್ಲಿ ಕನ್ನಡ ಮತ್ತು ಮಲಯಾಳೀ ಸಂಸ್ಕೃತಿಗಳು ಸಮನಾಗಿ ಮೇಳೈಸಿದೆ. ಆಡಿವೇಡನ್, ಆಟಿಕಳೆಂಜದಂತಹ ಆಚರಣೆಗಳು ಅದಕ್ಕೆ ಉದಾಹರಣೆಯಾಗಿವೆ ಎನ್ನುತ್ತಾರೆ ಗ್ರಾಮೀಣ ಜನರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

9 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

9 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

9 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

9 hours ago

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

1 day ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago