ಸುಬ್ರಹ್ಮಣ್ಯ: ಸಮಾಜ ಅನ್ನುವುದು ಅತ್ಯಂತ ಪವಿತ್ರವಾದುದು. ವ್ಯಕ್ತಿಗಿಂತ ಮೇಲ್ಪಟ್ಟ ವ್ಯವಸ್ಥೆಯಾದ ಸಮಾಜವು ಅತ್ಯಂತ ಪವಿತ್ರ ಹಾಗೂ ಮಹತ್ವವಾದುದು. ಸರ್ವರೂ ಸಮಾಜವನ್ನು ನೆನಪಿಸುವ ಕಾರ್ಯವನ್ನು ಮಾಡಿ ಸಮಾಜಕ್ಕಾಗಿ ದುಡಿಯುವ ಅರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜದಿಂದ ನಾವು ಸಾಕಷ್ಟನ್ನು ಪಡೆದುಕೊಳ್ಳುತ್ತೇವೆ. ಅಂತಹ ಸಮಾಜಕ್ಕೆ ನಾವೂ ಕೂಡಾ ನೆರವು ನೀಡುವುದು ಬದುಕಿನ ಶ್ರೇಷ್ಠ ಕೈಕಂರ್ಯವಾಗಬೇಕು. ಇದರಿಂದ ಸರ್ವರಿಗೂ ಒಳಿತಾಗುತ್ತದೆ. ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವಾಗ ಸಮಾಜವನ್ನು ನೆನಪಿಸಿಕೊಳ್ಳುವುದು ಅತ್ಯವಶ್ಯಕ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ಕುಕ್ಕೆಶ್ರೀ ಆಟೋ ಚಾಲಕ ಮಾಲೀಕ ಸಂಘ ಸುಬ್ರಹ್ಮಣ್ಯ ಇದರ 9ನೇ ವರ್ಷದ ವಾರ್ಷಿಕೋತ್ಸವವನ್ನು ಗುರುವಾರ ಉದ್ಘಾಟಿಸಿ ಶಾಸಕರು ಮಾತನಾಡಿದರು. ಬದುಕಿಗೆ ವೃತ್ತಿ ಮುಖ್ಯ. ಜೀವನದಲ್ಲಿ ನೆಮ್ಮದಿ ಪಡೆಯಲು ವೃತ್ತಿ ನಿಷ್ಠತೆ, ವೃತ್ತಿಯ ಮೇಲೆ ನಂಬಿಕೆ, ಕಾರ್ಯತತ್ಪರತೆ ಮತ್ತು ವಿಶ್ವಾಸ ಅತೀ ಮುಖ್ಯ. ಇದರಿಂದ ಜೀವನದ ನಿರ್ವಹಣೆ ಸಾಧ್ಯ. ಮಾನವೀಯ ದೃಷ್ಠಿಕೋನ, ಪರೋಪಕಾರದ ಗುಣ ಮತ್ತು ಶ್ರಮ ಯುವಕರಲ್ಲಿ ಸಮ್ಮಿಲಿತವಾಗಬೇಕು. ಹಾಗಾದಾಗ ಜೀವನದಲ್ಲಿ ನೆಮ್ಮದಿ ಮತ್ತು ಅಭಿವೃದ್ದಿ ಸಾಧ್ಯ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಸಮಾಜದ ಒಳಿತು ಸಾಧ್ಯ ಎಂದರು.
ಅನಿವಾರ್ಯ ಮತ್ತು ಮಹತ್ತರ ಸೇವೆ: ಎಂ.ವೆಂಕಪ್ಪ ಗೌಡ
ವೃತ್ತಿ ಧರ್ಮ, ಪ್ರಾಮಾಣಿಕತೆ, ಸಹಕಾರ, ಮಾನವೀಯತೆ ಕರ್ತವ್ಯದಲ್ಲಿ ಪ್ರಗತಿ ಸಾಧಿಸಲು ಅತ್ಯಗತ್ಯ. ಸ್ವಾರ್ಥ ರಹಿತವಾದ ಸ್ವಾವಲಂಬಿ ಜೀವನದೊಂದಿಗೆ ಪರೋಪಕಾರ ಮಾಡುವುದು ತ್ರಿಚಕ್ರ ಸಾರಥಿಗಳ ಧ್ಯೇಯವಾಗಲಿ. ಸಂಘಟನಾ ಶಕ್ತಿಯು ಶ್ರೇಷ್ಠವಾದುದು. ವ್ಯಕ್ತಿತ್ವವನ್ನು ಬೆಳೆಸಲು ಸಂಘಟನೆಗಳು ಆಧಾರ ಮತ್ತು ಶಕ್ತಿಯಾಗಿದೆ. ಜನರ ಮನೋಭಾವನೆಗಳು ಬದಲಾವಣೆಯಾಗಿದೆ ಆದುದರಿಂದ ಇದೀಗ ಜನ ಸಂಚಾರಕ್ಕೆ ವಾಹನಗಳನ್ನು ಆಶಿಸುತ್ತಾರೆ. ಅಂತಹವರ ಸೇವೆಗೆ ಅಟೋ ಚಾಲಕರು ಸದಾಸಿದ್ದವಾಗಿರುತ್ತಾರೆ. ಆದುದರಿಂದ ಈ ಕಾರ್ಯ ಮಹತ್ತರವಾದ ಹಾಗೂ ಅನಿವಾರ್ಯವಾದ ಸೇವೆಯಾಗಿದೆ ಎಂದು ಬಹುಮಾನ ವಿತರಿಸಿದ ಸಂಘದ ಕಾನೂನು ಸಲಹೆಗಾರ ಎಂ.ವೆಂಕಪ್ಪ ಗೌಡ ಹೇಳಿದರು.
ಕುಕ್ಕೆಶ್ರೀ ಅಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಅಧ್ಯಕ್ಷ ಪುಟ್ಟಣ್ಣ ಕೆ.ಜಿ, ಕಾರ್ಯದರ್ಶಿ ಶೇಷಕುಮಾರ ಶೆಟ್ಟಿ, ಕೋಶಾಧಿಕಾರಿ ವಿಶ್ವನಾಥ ಮದ್ಕೂರು, ಸಂಘದ ಹಿರಿಯ ಸದಸ್ಯ ಚೆನ್ನಕೇಶವ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಹಿರಿಯ ಗುಡಿಕೈಗಾರಿಕಾ ನಿಪುಣ ಕುಂಡ ಪರ್ವತಮುಖಿ, ನಿವೃತ್ತ ಕೆ.ಎಸ್.ಆರ್.ಟಿ.ಚಾಲಕ ಕಾರ್ಯಪ್ಪ ಗೌಡ, ನಿವೃತ್ತ ಅಂಗನವಾಡಿ ಶಿಕ್ಷಕಿ ಎಂ.ಎಸ್.ಜಯಂತಿ, ನಿವೃತ್ತ ಭಾರತೀಯ ಯೋಧ ಮನೋಹರ.ವಿ. ಗೆಜ್ಜೆ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಅಭಿಜಿತ್.ಎಸ್.ಕೆ, ರಾಜ್ಯ ಮಟ್ಟದ ಕ್ರೀಡಾಳು ಗೌತಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಕ್ಷರ ನಿಧಿ ಅರ್ಪಣೆ: ಸಂಘದ ಸದಸ್ಯರು ಸಮಾಜಮುಖಿ ಸೇವೆಗಾಗಿ ಆರಂಭಿಸಲ್ಪಟ್ಟ ಅಕ್ಷರಾ ನಿಧಿ ಯೋಜನೆಯಲ್ಲಿ ಚಂದ್ರಶೇಖರ ನೂಚಿಲ ಮತ್ತು ಜೀವಿತಾ ದೇವರಗದ್ದೆ ಅವರಿಗೆ ಧನ ಸಹಾಯವನ್ನು ಶಾಸಕ ಎಸ್.ಅಂಗಾರ ಹಸ್ತಾಂತರಿಸಿದರು.
ಪೂರ್ವಕಾರ್ಯದರ್ಶಿ ಪ್ರಶಾಂತ್ ಮೂಜೂರು ಸ್ವಾಗತಿಸಿದರು.ಸಂಘದ ಸದಸ್ಯ ಹಿಮಕರ ಪ್ರಸ್ತಾಪಿಸಿದರು. ಸಂಘದ ಸದಸ್ಯರಾದ ತೇಜಕುಮಾರ್ ಅಗರಿಕಜೆ, ಸತೀಶ್ ಕುಲ್ಕುಂದ, ವಿಜ್ಞೇಶ್ ದೇವರಗದ್ದೆ, ವಿಶ್ವನಾಥ ಮದ್ಕೂರು, ಶೇಷಕುಮಾರ ಶೆಟ್ಟಿ, ಬಾಲಕೃಷ್ಣ.ಜೆ ಸನ್ಮಾನ ಪತ್ರ ವಾಚಿಸಿದರು. ಸ್ಥಾಪಕ ಜತೆ ಕಾರ್ಯದರ್ಶಿ ಉಮೇಶ್.ಜೆ ಬಹುಮಾನಿತರ ಪಟ್ಟಿ ವಾಚಿಸಿದರು. ಸ್ಥಾಪಕ ಕಾರ್ಯದರ್ಶಿ ನವೀನ್ ಶೆಟ್ಟಿ ವಂದಿಸಿದರು. ರತ್ನಾಕರ.ಎಸ್ ಮತ್ತು ಹರೀಶ್ ಅಗರಿಕಜೆ ಕಾರ್ಯಕ್ರಮ ನಿರೂಪಿಸಿದರು. ಆದರ್ಶ ಕೆ.ಆರ್, ಸುಮಿತ್, ನರೇಂದ್ರ ಸಹಕರಿಸಿದರು. ಸಮಾರಂಭದ ಬಳಿಕ ನವೀನ್ಚಂದ್ರ ಕೊಪ್ಪ, ಯಶವಂತ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತೆ ಬಾಲ ಗಾಯಕಿ ಶಿವಾನಿ ನವೀನ್ ಅವರ ಶಿವಾನಿ ಮ್ಯೂಸಿಕಲ್ಸ್ ತಂಡದಿಂದ ಸಂಗೀತ ರಸಮಂಜರಿ ಮತ್ತು ನೃತ್ಯ ವೈಭವ ನಡೆಯಿತು.