ಕೃಷಿ ಮಾತುಕತೆ | 27 ಡಿಗ್ರಿ ಮತ್ತು ತೇವಾಂಶ 85% ಮೇಲೆ ಇದ್ದರೆ ಕೊಳೆರೋಗಕ್ಕೆ ರಹದಾರಿ…..!

July 16, 2020
8:34 PM
ಇದು ಕೃಷಿಕರ ಮಾತುಕತೆ. ಕೃಷಿಕರ ಅನುಭವದ ಚರ್ಚೆಗಳು. ಇದು ಯುವ ಕೃಷಿಕರಿಗೆ ಮಾರ್ಗದರ್ಶನ. ವಾತಾವರಣದ ಅಧ್ಯಯನ, ಕೃಷಿ ಬೆಳವಣಿಗೆಗೆ ಇಂತಹ ಹವ್ಯಾಸಗಳು ಅಗತ್ಯವಾಗಿದೆ. ಹೀಗಾಗಿ ಕಲ್ಮಡ್ಕದ ಕೃಷಿಕ ಟಿ ಆರ್‌ ಸುರೇಶ್ಚಂದ್ರ ಅವರ ಅನುಭವದ ಬರಹ ಇಲ್ಲಿ ನೀಡಲಾಗಿದೆ…

ಆಟಿ ಸಂಕ್ರಾಂತಿ, ಮಳೆ  ನಕ್ಷತ್ರ ಪುನರ್ವಸು- ಪುಷ್ಯಗಳ ವೈಭವದ ದಿನಗಳು. ಸಾಧಾರಣ ಮಧ್ಯೆ ಮಳೆಗಾಲದ ದಿನಗಳು. ಅಡಿಕೆ ಬೆಳೆಗಾರನ ವರ್ಷಪೂರ್ತಿ ಶ್ರಮದ ನಿರ್ಣಾಯಕ ಕಾಲಘಟ್ಟ ಇದು.
ಹೌದು. ಕೆಲವೊಂದು ತೋಟಗಳಲ್ಲಿ ಕೊಳೆರೋಗ ತನ್ನ ಹಾಜರಾತಿಯನ್ನು ದಾಖಲಿಸಿದೆ. ಕೊಳೆಗೆ ಪ್ರತಿರೋಧವಾಗಿ ಸಿಂಪಡಿಸಿದ ಔಷಧ ಕಾಲ ಮೀರಿದೆ. ವಾತಾವರಣದ ಮಾಪಕದಲ್ಲಿ ತೇವಾಂಶ ಸದಾ 99 % ತೋರಿಸುತ್ತಿದೆ.
ವಿಷಯಕ್ಕೆ ಬರೋಣವಂತೆ.  ಮೊನ್ನೆ ತಾನೇ  ವಾಟ್ಸಾಪ್ ಬಳಗದ ಕೃಷಿಕ ಮಿತ್ರರು ಉಷ್ಣತೆ 27 ಡಿಗ್ರಿ ಮತ್ತು ತೇವಾಂಶ 85 % ಮೇಲೆ ಇದ್ದರೆ ಕೊಳೆರೋಗಕ್ಕೆ ಸುಲಭ ರಹದಾರಿ ಎಂದು ತಿಳಿಸಿದ್ದರು.
ನಿಟ್ಟಿನಲ್ಲಿ ಗಮನಿಸಿದಾಗ , ಬಾಳಿಲದ  ಪಿಜಿಯಸ್ ಯನ್ ಪ್ರಸಾದ್‌ ಅವರಿಂದ ಪ್ರೇರಿತನಾಗಿ ಮಳೆ ಮಾಪನದ ದಾಖಲಾತಿಗಳನ್ನು ನೋಡಿದಾಗ.ನಮ್ಮಲ್ಲಿ ಸಾಧಾರಣ  ಎಪ್ರಿಲ್ ಮಧ್ಯ  ಭಾಗದಿಂದ, ರಾತ್ರಿ ಕಾಲದಲ್ಲಿ ಉಷ್ಣತೆ 27 ಡಿಗ್ರಿ ಸುತ್ತಲೇ ದಾಖಲಾಗಿದೆ ಹಾಗೇ ತೇವಾಂಶವೂ 85% ಕ್ಕಿಂತ ಮೇಲೆಯೇ ಇತ್ತು ಹಾಗೂ ಜೂನ್ ತಿಂಗಳಾರಂಭದಿಂದ ಇಂದಿನ ತನಕವೂ ಉಷ್ಣಾಂಶ 24 – 26 ಡಿಗ್ರಿಗಳಲ್ಲೂ ,  ತೇವಾಂಶ 90-99% ದಲ್ಲೂ ಇರುವುದನ್ನು ಗಮನಿಸಬೇಕು. ಹಾಗಾದರೆ ಇನ್ನಿನ ದಿನಗಳು ಕೊಳೆರೋಗದ  ಧಾಳಿಯದ್ದಿರಬಹುದೇ ಇರಬಹುದು. ಪ್ರತ್ಯೌಷದ ಕಾಲಕಾಲಕ್ಕೆ ಸಿಂಪರಣೆ ಆಗಬೇಕು. ಮಳೆ ತೆರೆಮರೆಗೆ ಸರಿದಾಗ ಕಾರ್ಮಿಕರನ್ನು ಒಗ್ಗೂಡಿಸಿ ಸೇನಾಪತಿಯಂತೆ ಕಣಕ್ಕಿಳಿಯಬೇಕು. ನನ್ನ ಮಾತಾಮಹರ ಮಾತು ನೆನಪಿಗೆ ಬರುತ್ತದೆ. “ಕೃಷಿಕರಿಗೆ ಮಳೆಗಾಲ ಗಡಿಕಾಯುವ ಸೈನಿಕರಂತೆ ಸದಾ ಎಚ್ಚರದಲ್ಲಿರಬೇಕಾದ ಕಾಲ” ಎಂದು.
ಈ ಎಲ್ಲಾ ಎಚ್ಚರಿಕೆ,ಗಮನಿಸುವಿಕೆಗಳೊಂದಿಗೆ  ತೋಟದ ನೈರ್ಮಲ್ಯ, ಮಣ್ಣಿನ ರಸಸಾರ, ತೋಟದ ಅಂದರೆ ಮರದಲ್ಲಿರುವ ಹೀರಿಕೊಂಡ ಅತೀ ಸಾರಜನಕ, ಬಸಿಗಾಲುವೆ ಅವ್ಯವಸ್ಥೆ ಮುಂತಾದವು ಈ ಕೊಳೆರೋಗಕ್ಕೆ ಮುಕ್ತಾವಕಾಶವನ್ನು ಕಲ್ಪಿಸುತ್ತದೆ. ತೋಟದಲ್ಲಿ ಅತಿಯಾದ ಸಸ್ಯ ಸಾಂದ್ರತೆ, ಅತಿಯಾದ ಹುಲ್ಲು ಕಾಡುಗಳು, ಕೊಳೆತ ಬಾಳೆ ಸೋಗೆಗಳು, ಕೊಳೆತ ಕೊಕ್ಕೋ ಇತ್ಯಾದಿಗಳೂ ತೋಟದಲ್ಲಿ ರೊಗಕಾರಕ ಸೂಕ್ಷ್ಮಜೀವಿಗಳ ಅಭಿವೃದ್ಧಿ ಗೆ ಸಹಕಾರಿಯಾಗಬಲ್ಲದು. ಪ್ರಾಕೃತಿಕ ಏರುಪೇರುಗಳು ನಮ್ಮ ಕೈಯಲ್ಲಿಲ್ಲ. ಆದರೆ ತೋಟದ ನೈರ್ಮಾಲ್ಯ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ ಮುಂತಾದವುಗಳು ನಮ್ಮ ಕೈಯಲ್ಲೇ ನಿರ್ವಹಿಸಲು ಸಾಧ್ಯವಿರುವ ಕಾರಣ ಈ ಬಗ್ಗೆ ಮಳೆಗಾಲ ಪ್ರಾರಂಭದಲ್ಲೇ ಗಮನಹರಿಸಿದರೆ ರೋಗಕಾರಕ ಸೂಕ್ಷ್ಮಜೀವಿಗಳ ಪ್ರವೇಶಕ್ಕೆ ಒಂದಷ್ಟು ತಡೆಯೊಡ್ಡಬಹುದು ಎಂಬುದು ನನ್ನ ಅಭಿಪ್ರಾಯ.
1. ಮೇ ತಿಂಗಳ ಕೊನೆಗೆ ಸಾರಜನಕಯುಕ್ತ ಗೊಬ್ಬರ ಕೊಡಬಾರದು.
2. ತೋಟದಲ್ಲಿ ಬಸಿಗಾಲುವೆಗಳ ಸರಿಯಾದ ನಿರ್ವಹಣೆ ಮಾಡಲೇಬೇಕು.
3.ಹುಲ್ಲು ಕಾಡು ಸಸ್ಯಗಳನ್ನು ತೆಗೆದು ಚೊಕ್ಕಟ ಮಾಡಬೇಕು.
4. ಬಾಳೆ ಬಿದ್ದು ಕೊಳೆಯುತ್ತಿರುವುದನ್ನು ತೋಟದ ಬದಿಯ ತೆಂಗಿನ ಮರದ ಬುಡಕ್ಕೆ ಹಾಕಬೇಕು.
5.ಜೂನ್ ತಿಂಗಳ ಪ್ರಾರಂಭದಲ್ಲಿ ನೂರು ಗ್ರಾಮ್ ನಷ್ಟು ಪೊಟೇಷ್ ಪ್ರತೀ ಮರಕ್ಕೆ ಹಾಕಬೇಕು.
6.ಅತೀ ಮುಖ್ಯವಾಗಿ ದಿನಾ ಒಂದು ಸುತ್ತು ನಮ್ಮ ತೋಟಕ್ಕೆ ನಾವೇ ಹೋಗಿ ತೋಟದ ಆರೋಗ್ಯ, ಆಗುಹೋಗುಗಳನ್ನು ಗಮನಿಸಬೇಕು.
7.ಹಿಂದಿನ ವರ್ಷ ತುಂಬಾ ಕೊಳೆರೋಗವಿದ್ದರೆ ಯಾವುದೇ ಉದಾಸೀನ ಮಾಡದೇ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೋರ್ಡೋ ಸಿಂಪಡಿಸಲೇಬೇಕು.
8. ಚಿಪ್ಪು ಸುಣ್ಣವನ್ನೇ ಉಪಯೋಗಿಸಬೇಕು.ಸುಲಭಕ್ಕಾಗಿ ಉಪಯೋಗಿಸುವ ಹುಡಿಸುಣ್ಣದಲ್ಲಿ ಅಂಟುವ ಗುಣವಿಲ್ಲ.
# ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ.
(ಈಗಾಗಲೇ ಬಾಳಿಲದ ಪಿಜಿಯಸ್ ಯನ್ ಪ್ರಸಾದ್‌ ಅವರಿಂದ ಪ್ರೇರಿತರಾಗಿ ಅನೇಕರು ಮಳೆ ಮಾಪಕ ಅಳವಡಿಸಿದ್ದಾರೆ. ಹಲವಾರು ಕೃಷಿಕರು ಇದನ್ನು ಹವ್ಯಾಸವಾಗಿ ಹಾಗೂ ಅಧ್ಯಯನಕ್ಕಾಗಿ ಬಳಸಿಕೊಂಡಿದ್ದಾರೆ. ಪ್ರತೀ ಗ್ರಾಮದಲ್ಲಿ ಕನಿಷ್ಠ ಇಬ್ಬರು ಕೃಷಿಕರು ಮಳೆ ದಾಖಲು ಮಾಡಿದರೆ ಉತ್ತಮ ಮಾಹಿತಿ, ದಾಖಲೆಯಾಗಬಹುದು. ಇದಕ್ಕಾಗಿಯೇ ಗುಂಪುಗಳನ್ನು ರಚಿಸಲಾಗಿದೆ. )
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror