ಅಭಿಯಾನ, ಆಂದೋಲನಗಳು ನಡೆಸುವವರು ಹಲವಾರು ಮಂದಿ. ಕೆಲವರು ತನಗೋಸ್ಕರ ಅಭಿಯಾನ ನಡೆಸಿದರೆ ಇನ್ನೂ ಕೆಲವರು ಸಮಾಜಕ್ಕಾಗಿ, ಪ್ರಚಾರಕ್ಕಾಗಿ. ಮತ್ತೂ ಕೆಲವರು ಇನ್ನೊಬ್ಬರ ಕಾಲೆಳೆಯಲು. ಆದರೆ ಇಲ್ಲೊಂದು ವಿನೂತನ ಅಭಿಯಾನ ನಡೆಸಲಾಗುತ್ತಿದೆ. ಇದು ಗುಬ್ಬಚ್ಚಿಗಾಗಿ , ಗುಬ್ಬಚ್ಚಿ ಮನೆಗಾಗಿ, ಹಕ್ಕಿಗಳಿಗಾಗಿ….!. ಅವುಗಳಿಗೊಂದು ಮನೆ ಮಾಡಿಕೊಡಿ ಎಂಬ ಅಭಿಯಾನ. ಈಚೆಗೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಈ ಅಭಿಯಾನ ನಡೆಯಿತು. ಅದರೊಳಗೆ ಹೋದಾಗ ಕಾಳಜಿಯ ಅರಿವಾಯಿತು.
ಸುಳ್ಯ: ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ.ಪರಿಸರದಲ್ಲಿ ಇರುವ ಎಲ್ಲವೂ ಇರಬೇಕು. ಎರೆಹುಳದಿಂದ ತೊಡಗಿ ಮರದವರೆಗೆ ಎಲ್ಲಾ ಜೀವಿಗಳೂ ಪರಿಸರದ ಅವಿಭಾಜ್ಯ ಅಂಗ. ಈಚೆಗೆ ಹಕ್ಕಿಗಳು ಅದರಲ್ಲೂ ಗುಬ್ಬಚ್ಚಿಗಳು ಮರೆಯಾಗುತ್ತಿವೆ. ಇವುಗಳು ಉಳಿಯಬೇಕು ಜೊತೆಗೆ ಇತರ ಹಕ್ಕಿಗಳೂ ಇರಬೇಕು ಎಂದು ಅಭಿಯಾನ ನಡೆಸುತ್ತಿರುವವರು ನಿತ್ಯಾನಂದ ಶೆಟ್ಟಿ ಬದ್ಯಾರು ಹಾಗೂ ರಮ್ಯ ನಿತ್ಯಾನಂದ ಶೆಟ್ಟಿ.
ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ದೇವಪ್ಪ ನಾಯ್ಕ್ ಅವರ ಮನೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ, ಪಕ್ಷಿಗಳಿಗೆ ನೀರು ಮತ್ತು ಆಹಾರ ಇಡುವ ವಿಧಾನವನ್ನು ವಿವರಿಸಿ, ನೀರು ಮತ್ತು ಆಹಾರ ಇಡಲು ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನಡೆಸಿದರು. ಇವರ ಜೊತೆಗೆ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಇದ್ದರು. ಕಳೆದ ಅನೇಕ ವರ್ಷಗಳಿಂದ ಈ ಅಭಿಯಾನ ಮಾಡುತ್ತಿರುವ ನಿತ್ಯಾನಂದ ಶೆಟ್ಟಿ ಬಂಟ್ವಾಳ ತಾಲೂಕಿನ ವಾಮನಪೊದವಿನ ಎಲಿಯಗೂಡು ಗ್ರಾಮದ ಬದ್ಯಾರಿನವರು. ತಮ್ಮ ಊರಿನಲ್ಲಿ ಅನೇಕ ವರ್ಷಗಳಿಂದ ಹಕ್ಕಿಗಳ ಗೂಡು ರಕ್ಷಣೆಗಾಗಿ ಮನೆಯಲ್ಲಿ ಕೃತಕ ಗೂಡು ಇರಿಸಿ ವಾಸಿಸಲು ಜಾಗ ಮಾಡಿದರೆ, ಬೇಸಗೆಯ ಕಾಲ ಕುಡಿಯಲು ನೀರು ಇರಿಸಿ ಹಕ್ಕಿಗಳು ಬರುವಂತೆ ಮಾಡುತ್ತವೆ. ಪಕ್ಷಿಗಳಿಗೆ ಈಗ ಕಾಡಲ್ಲೂ ಜಾಗವಿಲ್ಲ, ಊರಲ್ಲೂ ಇಲ್ಲದ ಸ್ಥಿತಿ ಇದೆ. ಹೀಗಾಗಿ ನಾಶದ ಅಂಚಿನಲ್ಲಿ ಇವೆ. ಇದಕ್ಕಾಗಿ ಕೃತಕವಾಗಿ ಗೂಡು ಇರಿಸಿ ಅವುಗಳಿಗೆ ಜಾಗ ಮಾಡಿಕೊಡುವುದು ಉದ್ದೇಶ ಎಂದು ಹೇಳುತ್ತಾರೆ ನಿತ್ಯಾನಂದ ಶೆಟ್ಟಿ.
ಮನೆ ಪಕ್ಕದ ಸುಮಾರು 2 ಎಕ್ರೆ ಪ್ರದೇಶದಲ್ಲಿ ಮಡಕೆಯ ಗೂಡು ಇರಿಸಿದ್ದಾರೆ. ಇಂದು ಹತ್ತಾರು ಹಕ್ಕಿಗಳು ಇಲ್ಲಿ ಬಂದು ವಾಸ ಮಾಡಿ ಮೊಟ್ಟೆ ಇಟ್ಟು ಮರಿ ಮಾಡಿ ಹೋಗುತ್ತವೆ. ಯಾವುದೇ ಬಂಧ ಇಲ್ಲ ಇಲ್ಲಿನ ಹಕ್ಕಿಗಳಿಗೆ. ಬೆಟ್ಟದ, ಬಂಡೆಯ ಮೇಲೆ ರಾಡ್ ಮೂಲಕ ಮಡಕೆಯಲ್ಲಿ ನೀರು ಇರಿಸಿ ಬಿಡಲಾಗುತ್ತದೆ. ನೀರು ಕಡಿಮೆಯಾದಂತೆಯೇ ನೀರು ಎರೆಯಲಾಗುತ್ತದೆ. ಹಕ್ಕಿಗಳಿಗೆ ಬಾಯಾರಿಕೆಯಾದಾಗ ಬಂದು ನೀರು ಕುಡಿದು ಹೋಗುತ್ತವೆ.
ಎಳೆವೆಯಲ್ಲಿ ಅವರ ತಾಯಿ ಹಕ್ಕಿಗಳಿಗೆ ನೀರು ಇಡು ಎನ್ನುತ್ತಿದ್ದ ಮಾತೇ ಸ್ಫೂರ್ತಿ ನೀಡಿತು. ನಂತರ ಆಸಕ್ತಿಯಾಯಿತು. ಈಗ ಅಭಿಯಾನದ ಮಾದರಿಯಲ್ಲಿ ಶಾಲೆಗಳಲ್ಲಿ , ಗ್ರಾಮೀಣ ಭಾಗಗಳಲ್ಲಿ ಈ ಅಭಿಯಾನ ನಡೆಸುತ್ತಿದ್ದಾರೆ. ನೂರಾರು ಶಾಲೆಗಳಲ್ಲಿ ನಿತ್ಯಾನಂದ ಶೆಟ್ಟಿ ಹಾಗೂ ರಮ್ಯ ಅವರು ಮಕ್ಕಳಿಗೆ ಮಾಹಿತಿ ನಿಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ.
ಹಕ್ಕಿಗಳು ಪರಿಸರದ ಭಾಗ. ಅವುಗಳು ಸಂರಕ್ಷಣೆ ನಮ್ಮ ಹೊಣೆ ಎಂದು ಈ ಅಭಿಯಾನ ಮಾಡುತ್ತಿದ್ದೇನೆ. ಇದೊಂದು ಹವ್ಯಾಸವೂ ಹೌದು. ಎಲ್ಲೇ ಇದ್ದರೂ, ಯಾರೇ ಹೇಳಿದರೂ ನಾವು ಹೋಗಿ ಮಾಹಿತಿ ನೀಡುತ್ತೇವೆ ಎನ್ನುತ್ತಾರೆ ನಿತ್ಯಾನಂದ ಶೆಟ್ಟಿ ಬದ್ಯಾರು
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…