ಸುಳ್ಯ: ಮುದ್ರಣ ಮಾಧ್ಯಮಗಳೊಂದಿಗಿನ ಪ್ರೀತಿಯ ಜೊತೆಗೆ ವಿದ್ಯುನ್ಮಾನ ಮಾಧ್ಯಮವೂ ಜನ ಮಾನಸದ ಕ್ರೇಝ್. ಆಧುನಿಕ ಯುಗದಲ್ಲಿ ನವ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ತನ್ನ ವ್ಯಾಪ್ತಿ ಮತ್ತು ಪ್ರಭಾವವನ್ನು ದಿನೇ ದಿನೇ ವಿಸ್ತರಿಸಿಕೊಳ್ಳುತ್ತಲೇ ಇದೆ.
ಗ್ರಾಮೀಣ ಪ್ರದೇಶದಿಂದ ಆರಂಭಗೊಂಡು ಹೈಟೆಕ್ ಮೆಟ್ರೋ ನಗರಗಳವರೆಗೆ ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಜನರ ಜೀವನದ ಭಾಗವೇ ಆಗಿದೆ. ಸುಳ್ಯವೂ ಇದರಿಂದ ಹೊರತಾಗಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ, ಕೃಷಿ, ಶಿಕ್ಷಣ, ರಾಜಕೀಯ, ಸಾಮಾಜಿಕ ಕ್ಷೇತ್ರದ ಜೊತೆಗೆ ಮಾಧ್ಯಮ ಕ್ಷೇತ್ರಕ್ಕೂ ಸುಳ್ಯ ಬಲು ದೊಡ್ಡ ಕೊಡುಗೆ ನೀಡಿದೆ. ರಾಜ್ಯ ಮತ್ತು ರಾಷ್ಟ್ರದ ಹಲವಾರು ಮಾಧ್ಯಮಗಳ ಸುದ್ದಿಮನೆಗಳಿಗೆ ಪ್ರತಿಭಾವಂತ ಪತ್ರಕರ್ತರನ್ನು ಕೊಡ ಮಾಡಿದ ಸುಳ್ಯ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳೆರಡಕ್ಕೂ ತನ್ನನ್ನು ತೆರೆದು ಕೊಂಡಿದೆ. ಇದೀಗ ಸುಳ್ಯದ ಮಾಧ್ಯಮ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲು ‘ಫಾರ್ಚ್ಯೂನ್ ಟಿವಿ’ ಸಿದ್ಧಗೊಂಡಿದೆ.
ಯೂಟ್ಯೂಬ್ ಚಾನೆಲ್ ಆಗಿ ಮನೆ ಮಾತಾಗಿದ್ದ ಫಾರ್ಚ್ಯೂನ್ ಟಿವಿ ಈಗ ಸುಳ್ಯ ಕೇಂದ್ರವಾಗಿಸಿ ಪೂರ್ಣ ಪ್ರಮಾಣದ ನ್ಯೂಸ್ ಚಾನೆಲ್ ಆಗಿ ಹೊರಬರಲಿದೆ. ದೀಪಾವಳಿ ಹಬ್ಬದ ಸಂಭ್ರಮದ ಕೊಡುಗೆಯಾಗಿ ನವೆಂಬರ್ ಮೂರರಿಂದ ಕೇಬಲ್, ಯೂಟ್ಯೂಬ್, ಫೇಸ್ಬುಕ್ ಮೂಲಕ ‘ಫಾರ್ಚ್ಯೂನ್‘ ಸುಳ್ಯದ ಮನೆ-ಮನಗಳಿಗೆ ಹರಿದು ಬರಲಿದೆ.
ಅಭಿಲಾಷ್ ಕಂಬಳಪದವು ವ್ಯವಸ್ಥಾಪಕರಾಗಿರುವ ಚಾನೆಲನ್ನು ಸಂಪಾದಕರಾಗಿ ತನ್ನ ಶಬ್ದ ಮಾಧುರ್ಯ ಮತ್ತು ವಾಕ್ ಚಾತುರ್ಯದಿಂದ ಟಿವಿ ಆ್ಯಂಕರಿಂಗ್ ಮತ್ತು ಕಾರ್ಯಕ್ರಮ ನಿರೂಪಣೆ ಮೂಲಕ ಮನ್ನಣೆ ಗಳಿಸಿರುವ ವಿಖ್ಯಾತ್ ಬಾರ್ಪಣೆ ಮುನ್ನಡೆಸಲಿದ್ದಾರೆ. ಲೋಕೇಶ್ ಗುಡ್ಡೆಮನೆ ಮತ್ತಿತರ ಯುವ ಪತ್ರಕರ್ತರ ತಂಡ ಇವರಿಗೆ ಸಾಥ್ ನೀಡಲಿದ್ದಾರೆ.
ಮಾಧ್ಯಮ ಕ್ಷೇತ್ರದ ಗಟ್ಟಿ ನೆಲ: ನಾಲ್ಕು ದಶಕಗಳಿಂದ ಸುಳ್ಯದಲ್ಲಿ ಮುದ್ರಣ ಮಾಧ್ಯಮ ಕ್ರಿಯಾಶೀಲವಾಗಿರುವುದರ ಜೊತೆಗೆ ಕಳೆದ ಎರಡು ದಶಕಗಳಿಂದ ವಿದ್ಯುನ್ಮಾನ ಮಾಧ್ಯಮವೂ ಸಕ್ರೀಯವಾಗಿದೆ. ಆದುದರಿಂದ ಸುಳ್ಯವು ಮಾಧ್ಯಮ ಕ್ಷೇತ್ರಕ್ಕೂ ಗಟ್ಟಿ ನೆಲ. ಕೆ.ವಿ.ರಮಣ್-ಎಸ್.ವಿ.ಪ್ರಸಾದ್ ನೇತೃತ್ವದಲ್ಲಿ ಪ್ರಸಾರವಾಗುತ್ತಿದ್ದ ‘ಚೆನ್ನ ಚಾನೆಲ್’ ಸುದ್ದಿ ಮತ್ತು ವೈವಿಧ್ಯ ಕಾರ್ಯಕ್ರಮಗಳಿಂದ ಹಲವಾರು ವರ್ಷಗಳ ಕಾಲ ಸುಳ್ಯದಲ್ಲಿ ಮನೆ ಮಾತಾಗಿತ್ತು.
ಬಳಿಕ ಚಂದ್ರೇಶ್ ಗೋರಡ್ಕ ನೇತೃತ್ವದಲ್ಲಿ ‘ಶ್ರೀ ಚಾನೆಲ್’ ಸುಳ್ಯದಲ್ಲಿ ಒಂದು ಹೊಸ ‘ಹವಾ’ಸೃಷ್ಠಿಸಿತ್ತು. ಬಳಿಕ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ‘ಸುದ್ದಿ ಚಾನೆಲ್’ ಆರಂಭವಾಯಿತು. ಇದೀಗ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸುಳ್ಯದಲ್ಲಿ ಹೊಸ ‘ಟ್ರೆಂಡ್’ ಸೃಷ್ಟಿಸಲು ಫಾರ್ಚ್ಯೂನ್ ಟಿವಿ ಎಂಟ್ರಿಗೆ ಸಿದ್ಧವಾಗಿದೆ.
ನ.3 ಕ್ಕೆ ಲೋಕಾರ್ಪಣೆ: ಫಾರ್ಚುನ್ ಟಿ.ವಿ. ನ.3 ರಂದು ಸುಳ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜಯರಾಮ್ ಶೆಟ್ಟಿ ಕಂಬಳಪದವು ಉದ್ಘಾಟನೆ ನೆರವೇರಿಸುವರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಸುಳ್ಯ ಇದರ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಲಾಂಛನ ಬಿಡುಗಡೆ ಮಾಡುವರು.
ಶಾಸಕ ಎಸ್. ಅಂಗಾರ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸುಳ್ಯ ಆರಕ್ಷಕ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಅಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ವರ್ತಕ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ, ಪ್ರಗತಿಪರ ಕೃಷಿಕ ಸೀತಾರಾಮ ಕೊಲ್ಲರಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರುವುದಾಗಿ ಅಂದಾಜಿಸಲಾಗಿದ್ದು,…
ಚಾಮರಾಜನಗರ ಮತ್ತು ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ ಸುರಿದು ರೈತರು ಆತಂಕಗೊಂಡಿದ್ದಾರೆ. ಬೆಂಗಳೂರಿನ…
ದೇಶದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 520 ಗಿಗಾ ವ್ಯಾಟ್ಗಿಂತ ಹೆಚ್ಚು ಮಟ್ಟಕ್ಕೆ ಹೆಚ್ಚಿಸಲಾಗಿದೆ…
ಅಡಿಕೆಯ ಆರೋಗ್ಯ ಪರಿಣಾಮ ಹಾಗೂ ಸುರಕ್ಷತೆ ಕುರಿತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಂಯುಕ್ತ…
ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯಗಿರಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಯಿತು.…
ಯುಗಾದಿ ಹಿನ್ನೆಲೆ ಕೋಲಾರ ಜಿಲ್ಲೆಯಲ್ಲಿ ಹಾಲಿನ ದರ ಲೀಟರ್ಗೆ ₹2 ಹೆಚ್ಚಳ ಮಾಡಲಾಗಿದೆ.…