ಜಲಮರುಪೂರಣದತ್ತ ಮನ ಮಾಡಿದ ನೀರಕೊರತೆ

July 12, 2019
11:30 AM

“ಬಿಸಿಯಾಗದೆ ಬೆಣ್ಣೆ ಕರಗದು” ಎಂಬುದು ನಾವೆಲ್ಲ ಸಾಕಷ್ಟು ಸಲ ಕೇಳಿದ ಗಾದೆ ಮಾತು. ಅದು ನೀರಿನ ಮಟ್ಟಿಗೆ ಅಷ್ಟು ಸರಿಯಾಗಿ ಹೊಂದಿಕೊಂಡಿದೆ. ಕಳೆದ ಬೇಸಿಗೆಯಲ್ಲಿ ಸಧ್ಯದ ವರ್ಷಗಳಲ್ಲಿ ಅನುಭವಿಸಿರದ ನೀರಿನ ತತ್ವಾರವನ್ನು ಎಲ್ಲರೂ ಕರಾವಳಿಯಲ್ಲಿ ಅನುಭವಿಸಿದ್ದಾರೆ. ಅದು ಕೃಷಿ, ಕೈಗಾರಿಗೆ ಮತ್ತು ಮನೆಯ ಉಪಯೋಗಗಳಿಗೂ ಆಗಿದೆ. ಇದುವರೆಗೆ ಬತ್ತದ ಸಾಂಪ್ರದಾಯಿಕ ನೀರಿನ ಸೆಲೆಗಳು ಬತ್ತಿಹೋಗಿದ್ದವು. ಸುರಂಗ, ಕೆರೆ ಮತ್ತು ಬಾವಿಗಳು ಬತ್ತಿ ಹೋಗಿ ಮನೆಯ ಉಪಯೋಗಕ್ಕೆ ಮೊದಲ ಸಲ ಕೊಳವೆಬಾವಿಗಳ ನೀರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಹಲವು ಕಡೆಗಳಲ್ಲಿ ಬಂದಿತ್ತು. ಭಯದ ಸಂಗತಿಯೆಂದರೆ ಕಳೆದ ಹಲವಾರು ವರ್ಷಗಳಿಂದ ಅಡಿಕೆ ತೋಟಕ್ಕೆ ನೀರುಣಿಸುತ್ತಿದ್ದ ಕೊಳವೆ ಬಾವಿಗಳು ಹಠಾತ್ ಕೈಕೊಟ್ಟು ಕೃಷಿಕರನ್ನು ಆತಂಕಕ್ಕೆ ಗುರಿಮಾಡಿದ್ದು. ಹಳ್ಳಿಗಳಲ್ಲೂ ನೀರಿನ ಕಡಿಮೆ ಉಪಯೋಗದ ಅಗತ್ಯದ ಬಗ್ಗೆ ಪ್ರಕೃತಿಯೇ ಮನವರಿಕೆ ಮಾಡಿದಂತೆ ಆಯಿತು. ನೀರಿನ ಕೊರತೆಯಿಂದ ಅನೇಕ ಅಡಿಕೆ, ತೆಂಗು, ಕೊಕ್ಕೊ ತೋಟಗಳು ಹಾನಿಗೊಳಗಾಗಿವೆ. ಹಸಿರಿದ್ದ ತೋಟಗಳಲ್ಲೂ ಫಸಲಿನ ಮೇಲೆ ದುಷ್ಪರಿಣಾಮಗಳು ಖಂಡಿತ. ಯಾಕೆಂದರೆ ಈ ಮಳೆಗಾಲದಲ್ಲಿ ಮಾರುಕಟ್ಟೆಯಿಂದ ಬೋರ್ಡೊ ಸಿಂಪಡಣೆಗಾಗಿ ಮೈಲುತುತ್ತು ಖರೀದಿಸಿ ತಂದ ಪ್ರಮಾಣ ಕಡಿಮೆಯಿದೆ. ಒಂದು ವರ್ಷ ನೀರಿನ ಕೊರತೆಯಿಂದ ಅಡಿಕೆ ಮರಗಳು ಬಸವಳಿದರೆ ಅದು ಕೆಲವು ವರ್ಷದ ಪೋಷಣೆಯಿಂದ ಚೇತರಿಸಬೇಕಷ್ಟೆ. ಒಂದೆರಡು ಹಸಿರು ಸೋಗೆಗಳನ್ನು ಹೊತ್ತು ನಿಂತ ಅಡಿಕೆ ಮರಗಳು ಅನೇಕ ಅಡಿಕೆ ತೋಟಗಳಲ್ಲಿ ಕಾಣಸಿಗುತ್ತವೆ.

ನೀರಿನ ಕೊರತೆಯ ಬಿಸಿ ಎಲ್ಲರಲ್ಲಿ ಜಲ ಸಾಕ್ಷರತೆಯ ಅಗತ್ಯವನ್ನು ಹುಟ್ಟುಹಾಕಿದೆ. ಈಗಂತು ಮಾಧ್ಯಮಗಳಲ್ಲಿ, ಸಭೆ ಸಮಾರಂಭಗಳಲ್ಲಿ ಮತ್ತು ಮನೆ ಮನಗಲಲ್ಲಿ ನೀರಿಂಗಿಸುವ ವಿಷಯದ ಬಗ್ಗೆಯೇ ಮಾತುಗಳು ಅನುರಣಿಸುತ್ತಿವೆ. ಈ ಹಿಂದೆ ಜಲಮರುಪೂರಣದ ಬಗ್ಗೆ ಸಾವಿರ ಸಾವಿರ ಸಲ ಜಲತಜ್ಞರು ಸಾರಿ ಸಾರಿ ಹೇಳಿದ್ದರೂ ಕಿವಿಗೆ ಹಾಕಿಕೊಳ್ಳದ ಜನರಿಂದು ಖುದ್ದು ಮರುಪೂರಣದ ಕೆಲಸಕ್ಕೆ ಇಳಿದಿದ್ದಾರೆ. ಅದರ ಅಗತ್ಯದ ಬಗ್ಗೆ ಇತರರಿಗೂ ಹೇಳಹೊರಟಿದ್ದಾರೆ. ಇದು ಪರಿವರ್ತನೆ. ಅವರವರ ಕಾಲಬುಡಕ್ಕೆ ನೀರು ಬಂದರೆ ಎಲ್ಲರೂ ಬದಲಾಗುತ್ತಾರೆ ಎಂಬುದು ಈ ಮನೋಭಾವಕ್ಕೆ. ಆಲಮರುಪೂರಣದಲ್ಲಿ ಅವರಷ್ಟಕ್ಕೆ ಕೆಲಸ ಮಾಡಿದ ಸಾಧಕರು ಇಂದು ಬೆಳಕಿಗೆ ಬರುತ್ತಿದ್ದಾರೆ. ಅವರ ಶ್ರಮ ಇನ್ನೂ ಹಲವರಿಗೆ ಸ್ಫೂರ್ತಿಯಾಗಿ ಅಂತರ್ಜಲಕ್ಕೆ ಹೆಚ್ಚಾಗಲು ಕಾರಣವಾಗುತ್ತಿವೆ.

ಮಹಡಿಯ, ಮಾಡಿನ ನೀರನ್ನು ಮನೆಯಂಗಳದ ಬಾವಿಗೆ, ಕೊಳವೆ ಬಾವಿಗಳಿಗೆ ಹಾಯಿಸುವ ಮನೋಭಾವಕ್ಕೆ ಹೆಚ್ಚಿನ ಕಡೆಗಳಲ್ಲಿ ಒತ್ತು ಸಿಗುತ್ತಿದೆ. ಗುರುವಾಯನೆಕೆರೆಯಲ್ಲಿ “ ನಮ್ಮ ಮನೆ” ಸಭಾಭವನಕ್ಕೆ ಸನಿಹವಿರುವ ರಾಜಗೋಪಾಲ ಭಟ್ಟರ ಮನೆ ಮಹಡಿಯ ನೀರನ್ನು ಬಾವಿಗೆ ಸುಲಭ ಫಿಲ್ಟರ್ ಮೂಲಕ ಹಾಯಿಸುವ ಕ್ರಮ ಎಲ್ಲರೂ ಅಳವಡಿಸುವಂತಿದೆ. ಇನ್ನೂರು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ಡ್ರಂ. ಅದಕ್ಕೊಂದು ಎರಡಿಂಚಿನ ಪೈಪನ್ನು ಕೆಲಬಾಗದಲ್ಲಿ ಜೋಡಿಸುವುದು. ಡ್ರಮ್ಮಿನ ತಳಭಾಗದಲ್ಲಿ ಸ್ವಲ್ಪ ದೊಡ್ಡ ಕಲ್ಲುಗಳ ಒಂದು ಅಂತರ ಅದರ ಮೇಲೆ ಒಂದು ಬಲೆ. ಬಲೆಯ ಮೇಲೆ ಚರಳು ಕಲ್ಲುಗಳು. ಚರಳು ಕಲ್ಲಿನ ಮೇಲೆ ಇನ್ನೊಂದು ಬಲೆ. ಬಲೆಯ ಮೇಲೆ ಇದ್ದಿಲಿನ ಒಂದು ಅಂತರ. ಅದರ ಮೇಲೆ ಬಟ್ಟೆಯ ಅರಿವೆ. ಇದಕ್ಕೆ ಮಾಡಿನ ನೀರು ಬಂದು ಬೀಳುತ್ತದೆ. ಬಿದ್ದ ನೀರು ಶುದ್ಧವಾಗಿ ಬಾವಿ ಸೇರುತ್ತದೆ. ಬೇಸಿಗೆಯಲ್ಲಿಯೂ ನೀರು ಆರದೆ ಬಾವಿ ಮನೆಯವರಿಗೆ ನೀರುಣಿಸುತ್ತಿದೆ.

ಇದು ಕೇವಲ ಒಂದು ಉದಾಹರಣೆ. ಇನ್ನಷ್ಟು ಸರಳ ವಿಧಾನಗಳಿಂದ ಭೂಮಿಯಡಿಗೆ ನೀರುಣಿಸುವ ವಿಧಾನಗಳಿರಬಹುದು. ಅದನ್ನೆಲ್ಲ ತಿಳಿದುಕೊಳ್ಳುವ ಮನಸ್ಸು ಪ್ರತಿಯೊಬ್ಬನಿಗೂ ಬೇಕು. ಕೊಳವೆ ಬಾವಿಗಳಿಗೆ ನೀರುಣಿಸುವ ಅನೇಕ ಮಂದಿಯಿದ್ದಾರೆ. ಇಲ್ಲಿ ಅವೈಜ್ಞಾನಿಕ ವಿಧಾನಗಳೂ ಇಲ್ಲವೆಂದಲ್ಲ. ಅದನ್ನು ಮೆಲ್ಲಗೆ ಮೆತ್ತಗೆ ತಿಳಿಯ ಹೇಳುವ ನಡೆ ತಿಳಿದವರದಾಗಬೇಕು. ಕೊಳವೆ ಬಾವಿಗೆ ನೀರುಣಿಸುವುದು ಅದೊಂದು ಭ್ರಾಂತಿ ಎಂದು ಹೇಳುವವರೂ ನಮ್ಮ ನಡುವೆ ಇದ್ದಾರೆ. ಅದರಿಂದ ಇದ್ದ ನೀರು ಕೂಡ ಹೋದೀತು ಎಂದು ಭೀತಿಗೆ ದೂಡುವವರು ನಮ್ಮ ನಡುವೆಯೇ ಇದ್ದಾರೆ.

ಕೊಳವೆ ಬಾವಿಯ ಸುತ್ತ ಹೊಂಡ ತೆಗೆದು ಜಲ್ಲಿ ಕಲ್ಲುಗಳ ಅಂತರ ಕೊಟ್ಟು ಕ್ರಮಪ್ರಕಾರ ನೀರಿಂಗಿಸುವ ವ್ಯವಸ್ಥೆ ಮಾಡಿಕೊಡುವ ವ್ಯಕ್ತಿಗಳು ಈಗ ಮುಂದೆ ಬರುತ್ತಿದ್ದಾರೆ. ನಮ್ಮ ಆಂದಾಜಿನಲ್ಲಿ ಹೇಗೆ ಹೇಗೆಯೋ ನೀರುಣಿಸುವುದರ ಬದಲು ಇವರ ಸಹಕಾರ ಪಡೆದರೆ ಒಂದಷ್ಟು ಒಳ್ಳೆಯದಾಗ ಬಹುದೇನೊ ಗೊತ್ತಿಲ್ಲ.
ಯಾವುದಿದ್ದರೂ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯಗಳು ಎಲ್ಲ ಕಡೆ ಸಮರೋಪಾದಿಯಲ್ಲಿ ನಡೆಯಬೇಕು. ಈ ಬಗ್ಗೆ ಇರುವ ಅನುಭವಗಳನ್ನು ಪಡೆದುಕೊಂಡು ಮುಂದುವರಿದರೆ ಅನುಕೂಲ ಹೆಚ್ಚು. ಇನ್ನೂ ಹಲವರಿಗೆ ನೀರಕೊರತೆಯ ಬಿಸಿ ತಟ್ಟಿದಂತಿಲ್ಲ. ಕಳೆದ ಬೇಸಿಗೆಯಲ್ಲಿ ಅನುಭವಿಸಿದವರೂ ಇನ್ನೂ ಈ ನಿಟ್ಟಿನಲ್ಲಿ ಯಾವುದೇ ಕೆಲಸಕ್ಕೆ ಇಳಿದಿಲ್ಲ. ಇಂತಹ ಮಂದಿಯನ್ನು ಏನೂ ಮಾಡುವ ಹಾಗಿಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror