Advertisement
MIRROR FOCUS

ತುಳುನಾಡಿನಲ್ಲಿ ಕೆಡ್ಡಸ : ಭೂದೇವಿಯ ಆರಾಧನೆ ಇದು….!

Share

ತುಳುನಾಡಿನಲ್ಲೀಗ ಕೆಡ್ಡಸ. ಭೂದೇವಿ ಋತುಮತಿಯಾಗಿರುವ ಕಾಲ ಇದು. ಋತುಮತಿಯಾಗುವುದು ಎಂದರೆ ಸೃಷ್ಟಿಗೆ ಸಿದ್ಧವಾಗುವ ಕಾಲ. ಸೃಷ್ಟಿ ಎಂದರೆ ಭೂಮಿಯಲ್ಲೂ ಬದಲಾವಣೆಯ ಕಾಲ ಎಂದರ್ಥ.

“ಕೆಡ್ಡಸ”ವನ್ನು ಗ್ರಾಮೀಣರು ಸಂಕ್ಷಿಪ್ತವಾಗಿ ವಿವರಿಸುವುದು ಹೀಗೆ,” ಆ 3 ದಿನಗಳ ಕಾಲ ಭೂದೇವಿಯು ಋತುಮತಿಯಾಗಿರುತ್ತಾಳೆ.ಅಷ್ಟು ದಿನಗಳ ಕಾಲ ಭೂಮಿಯಲ್ಲಿರುವ ನಾವು ಸದ್ದಿಲ್ಲದೆ ಕುಳಿತುಕೊಳ್ಳಬೇಕು, ಭೂಮಿ ತಾಯಿಗೆ ಅರಶಿನ, ಎಣ್ಣೆ ಹಾಕಬೇಕು ಎನ್ನುತ್ತಾರೆ.

ಗಡಿಬಿಡಿಯಲ್ಲಿ ಕೆಲಸ ಮಾಡುತ್ತಾ ಬೇಗ ಬೇಗ ಹೊರಟ  ಚೆನ್ನಿಯನ್ನು  ಮನೆಯ ಹೊಸ ಸೊಸೆ ಅಂಜು ಕುತೂಹಲದಿಂದ  ಕೇಳಿದಳು, ಏನು ಬಾರಿ ಅರ್ಜೆಂಟ್ ಲ್ಲಿ ಹೊರಟಿದ್ದಿ? ಎತ್ಲಾಗಿ  ಹೋಗಲಿಕ್ಕಿದೆ?  ಅದೂ  ನಾಳೆ ‘ಕೆಡ್ಡಸ ‘ಅಲ್ಲವಾ ಹಾಗಾಗಿ ನನ್ಯರಿಗೆ ಸಿದ್ಧತೆ  ಮಾಡಿಕೊಳ್ಳಬೇಕಿತ್ತು. ಹಾ  ಕೆಡ್ಡಸಾ ಅದೆಂತು,  ನಾನು ಕೇಳೆ ಇಲ್ವಲ್ಲಾ  ಏನದು ? ಎಂಬ ಆಕೆಯ‌  ಕುತೂಹಲದ   ಪ್ರಶ್ನೆ ಎದುರಾಗುತ್ತಿದ್ದಂತೆ ಚೆನ್ನಿ ಅಂಗಳದ ತುದಿ ತಲುಪಿಯಾಗಿತ್ತು. ಮನೆಯತ್ತ ಓಡುತ್ತಿದ್ದ ಆಕೆಗೆ ಕೇಳಲೇ ಇಲ್ಲ.

ಏನಿದು ಕೆಡ್ಡಸ, ಎಂದು ಯೋಚನೆಗೆ ಬಿದ್ದ ಅಂಜು ಆಚೆ ಈಚೆ  ನೋಡುತ್ತಿದ್ದರೆ ಎದುರಿಗೆ ಮಾವನೇ ಬರಬೇಕೆ?  ಪೇಟೆಯಿಂದ ಬಂದ ಅಂಜುವಿಗೆ  ಊರಿನೆಲ್ಲಾ ವಿಷಯಗಳೂ ಹೊಸದೇ. ಹಾಗಾಗಿ  ‘ಕೆಡ್ಡಸ’  ಶಬ್ದ  ಕೇಳಿದೊಡನೆ  ಕಿವಿ  ನೆಟ್ಟಗಾಯಿತು.  ಇನ್ನೂ ಎದುರಿಗೆ ಎಲ್ಲಾ ವಿಷಯಗಳು ಗೊತ್ತಿರುವ ಮಾವನಿರುವಾಗ  ತಿಳಿಯಲೇನು ಅಡ್ಡಿ. ತಲೆ ಕೆದಕುತ್ತಾ ನಿಂತ ಸೊಸೆಯ  ಈ ಹೊಸ ಪರಿಯನ್ನು ಪ್ರಶ್ನಾರ್ಥವಾಗಿ ನೋಡಿದಾಗ ತನ್ನ ಹೊಸ ಸಮಸ್ಯೆ ಯ ಮೂಲವನ್ನು ಮುಂದಿಟ್ಟಳು  . ಮಾವ  ಈ  ಕೆಡ್ಡಸ ಅಂದರೇನು? ನನ್ಯರಿ  ಎಂದರೇನು? ಹೋ ನಿನಗಿದೆಲ್ಲಾ ಹೊಸದಲ್ವಾ? ಹೇಳುತ್ತೇನೆ ಇರು.
ನಮ್ಮ ಕರಾವಳಿಯಲ್ಲಿ ಹಲವು ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ  ಹೆಚ್ಚಿನವು ಕೃಷಿ ಸಂಬಂಧ ಪಟ್ಟ ಹಬ್ಬಗಳು. ಅವುಗಳಲ್ಲಿ ಮುಖ್ಯವಾದ ಹಬ್ಬಗಳಲ್ಲಿ ಒಂದು ಈ ಕೆಡ್ಡಸ. ಕೆಡ್ಡಸವನ್ನು ಭೂಮಿ ತಾಯಿಯ  ಹಬ್ಬವೆನ್ನುತ್ತಾರೆ.  ನಮಗೆ ಹಾಗೂ ಭೂಮಿ ತಾಯಿಗೆ ನೇರವಾಗಿ ಸಂಬಂಧಿಸಿದ ಹಬ್ಬ. ಇಲ್ಲಿ ಆ ಮನೆಯ ಹಿರಿಯ ಹೆಣ್ಣು ಮಗಳೇ ನಿರ್ವಹಿಸುವ ಹಬ್ಬ. ನಮ್ಮ ಕರಾವಳಿಯಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಮುಖ್ಯತೆ. ಅದರಂತೆ ಭೂಮಿಯನ್ನು ತಾಯಿ ಎಂದು ಗೌರವ ಕೊಡುವ ಮನಸು ನಮ್ಮದು.  ಹಾಗಾಗಿ ವರುಷವಿಡೀ ಉತ್ತಿ ಬಿತ್ತಿ ಅಗೆದು ಕೆಲಸ ಮಾಡಿದ ರೈತ ಹಾಗೂ  ದಣಿದ ಭೂಮಿ ಗೆ   ವರುಷದ   ನಾಲ್ಕು ದಿನಗಳ ಕಾಲ ವಿಶ್ರಾಂತಿಯ ಕಾಲ. ಇದು ಯಾವಾಗಲೂ ಬರುವುದು ತುಳು ತಿಂಗಳ ಪೊನ್ನಿ( ಪೊಯಿಂತೆಲ್) ಯ 27 ರಿಂದ ಕುಂಭ ಸಂಕ್ರಮಣ ದವರೆಗಿನ ದಿನಗಳಲ್ಲಿ.ಅಂದರೆ  ಫೆಬ್ರವರಿ ತಿಂಗಳಿನ  9 ರಿಂದ 12  ರವರೆಗೆ. ಕೆಲವರು ಇದನ್ನು 3 ದಿನಗಳ   ಆಚರಣೆ  ಹಾಗೂ ಇನ್ನೂ ಕೆಲವರು 4 ದಿಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ.  ಶ್ರಮಿಕ ವರ್ಗದ ವರೇ  ಹೆಚ್ಚಾಗಿ ಗೌಜು , ಗದ್ದಲಗಳಿಂದ ಸಂಭ್ರಮಿಸುತ್ತಾರೆ.
ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು.   ಮುಂದಿನ ಸೃಷ್ಟಿ ಗೆ ಸಿದ್ಧಳಾಗುತ್ತಾಳೆ ಎಂಬ ಸಂಕೇತ. ಕೆಡ್ಡಸ ಕಳೆದ ನಂತರ ಬೆಳೆ ಕಟಾವಿಗೆ ಸಿದ್ಧವಾಗುತ್ತದೆ. ಹಾಗಾಗಿ  ಕೃಷಿಕರ ಒಂದು ವಿಶ್ರಾಂತಿಯ ಅಗತ್ಯವನ್ನು ಈ ಹಬ್ಬ ಪೂರೈಸುತ್ತದೆ. ಈ ನಾಲ್ಕು ದಿನಗಳು ಭೂಮಿ ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತದೆ.  ಮೊದಲ ದಿನ ಮನೆಯ ಗಂಡಸರು ಕತ್ತಿ , ಹಾರೆ , ನೇಗಿಲು ಮೊದಲಾದ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತೊಳೆದು , ಪೂಜಿಸಿ ತೆಗೆದಿಡುತ್ತಾರೆ. ಇನ್ನೂ ನಾಲ್ಕು ದಿನ ಭೂಮಿ ತಾಯಿಗೆ ಗಾಯ ಮಾಡುವಂತಿಲ್ಲ. ಅಗೆಯುವುದು , ಕಡಿಯುವುದು ಎಲ್ಲಾ ಕಾರ್ಯಗಳೂ ನಿಷಿದ್ಧ.  ಮನೆಯ ಸುತ್ತಲೂ ಸ್ವಚ್ಛ ಗೊಳಿಸಿ  ನವಧಾನ್ಯಗಳನ್ನು   ಒಳಗೊಂಡಂತೆ ಪೌಷ್ಟಿಕ ಆಹಾರವನ್ನು ಸಿದ್ಧಗೊಳಿಸಲಾಗುವುದು.  ಕುಚುಲಕ್ಕಿಯನ್ನು ಉಪ್ಪು ನೀರು ಹಾಕಿ ಬಾಣಲೆಯಲ್ಲಿ ಹುರಿದು ಕುಟ್ಟಿ ಹುಡಿ ಮಾಡ ಬೇಕು. ಅದಕ್ಕೆ ಕಾಯಿ ಬೆಲ್ಲ ತುಪ್ಪ ಬಾಳೆಹಣ್ಣು ಮಿಶ್ರ ಮಾಡಿ ವಿಶೇಷ ತಿಂಡಿ ತಯಾರಿಸುವ  ಕ್ರಮವಿದೆ. ಈ ತಿಂಡಿಯೇ ನನ್ಯರಿ. ಕುಸುಲಕ್ಕಿ ಹುರಿದು ಪುಡಿಮಾಡಿ ಹಿಂದಿನ ದಿನವೇ ಇಡಲಾಗುವುದು.  ಮಾರನೇಯ ದಿನ ಅಂದರೆ ನಡು ಕೆಡ್ಡಸದ ದಿನ ಮನೆಯ ಹಿರಿಯ ಮಹಿಳೆ ಬೆಳಗ್ಗೆ   ತುಳಸಿ ಕಟ್ಟೆಯ ಪಕ್ಕ ಸಗಣಿ ಸಾರಿಸಿ ಒಂದು ಬಾಳೆ ಎಲೆಯಲ್ಲಿ ಈ ಪೌಷ್ಟಿಕಾಂಶ ಪದಾರ್ಥಗಳನ್ನು ಇಟ್ಟು ಭೂಮಿ ತಾಯಿಗೆ ಸಮರ್ಪಿಸುತ್ತಾಳೆ.  ಆಮೇಲೆ ಮನೆಯವರೆಲ್ಲರೂ ಬಾಳೆಹಣ್ಣಿನೊಂದಿಗೆ ಮಿಶ್ರಣ ಮಾಡಿ ನನ್ಯರಿಯನ್ನೇ ತಿಂಡಿಯಾಗಿ ಸೇವಿಸುತ್ತಾರೆ.   ಕೆಲವು ಮನೆಗಳ್ಲಿ ಈ ದಿನ ಮಾಂಸದೂಟ ಆಗಲೇ ಬೇಕು. ಉಳಿದವರುಬದನೆ  ನುಗ್ಗೆಯ ಪದಾರ್ಥವನ್ನು ಮಾಡಿ ಉಣಗಣುತ್ತಾರೆ. ಇನ್ನೊಂದು ವಿಷಯ ಎನಪ್ಪಾ ಅಂದರೆ  ಕೆಡ್ಡಸ ಪದದ ಅರ್ಥ ಕೇಟ ಎಂದರೆ ಬೇಟೆ. ಕೆಡ್ಡಸಕ್ಕೂ ಬೇಟೆಗೂ ಬಹಳ ಹತ್ತಿರದ ನಂಟು. ಕೃಷಿ ಕೈ ಸೇರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಬೆಳೆಗಳ ಮೇಲಾಗುತ್ತದೆ. ಕಾಡು ಹಂದಿ ಹಾಗೂ ಕಾಡು ಕೋಳಿಗಳ ಉಪದ್ರ ಹೇಳ ತೀರದು. ಅವುಗಳಿಂದ ಬೆಳೆಗಳ ರಕ್ಷಣೆ ಯೂ ಅಗತ್ಯ. ಆದುದರಿಂದ ಕೆಡ್ಡಸದ ನೆಪದಲ್ಲಿ ಕಾಡುಪ್ರಾಣಿಗಳನ್ನು ಕೊಲ್ಲುವ ಪರಿಪಾಠ ಬೆಳೆದು ಬಂದಿದೆ. ಅಲ್ಲದೆ ಬೇಟೆ   ರೈತರಿಗೊಂದು ಮನರಂಜನಾ ಕಾರ್ಯಕ್ರಮವೂ ಹೌದು.  ಸಿಕ್ಕಿದ ಬೇಟೆಯನ್ನು ಊರಿನವರೆಲ್ಲರೂ ಹಂಚಿ ತಿನ್ನುವ ಅಭ್ಯಾಸ.
ಇನ್ನೂ ಕೊನೆಯ ದಿನ ವಿಶೇಷವಾಗಿ ಗಮನ ಸೆಳೆಯುತ್ತದೆ. ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು  ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡುತ್ತಾಳೆ.  ದೀಪ ಬೆಳಗುತ್ತಾಳೆ.      ಒಂದು ಕಲಶದಲ್ಲಿ ನೀರು,ಬಾಳೆಎಲೆಯಲ್ಲಿ  ಸೀಗೆ,ಅಂಟುವಾಳಕಾಯಿ ,ಕನ್ನಡಿ, ಬಾಚಣಿಗೆ, ಬೊಟ್ಟು, ,  ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ  ಭೂಮಿಗೆ ಎಣ್ಣಿ ಬಿಟ್ಟು   ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌    ನಮಸ್ಕರಿಸುತ್ತಾಳೆ.   ಭೂಮಿ ತಾಯಿ ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ  ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು. ಕೆಡ್ಡಸ ವೆಂದರೆ ನಮಗೂ ಭೂಮಿತಾಯಿಗೂ ಇರುವ ಸಂಬಂಧ ವನ್ನು, ಆತ್ಮೀಯತೆಯನ್ನು ಗಟ್ಟಿಗೊಳಿಸುವ ಹಬ್ಬ.
ಮಾವನ ಮಾತುಗಳನ್ನು ಕೇಳಿ ಒಂದು ಹೊಸ ವಿಷಯವನ್ನು ಅರಿತ ಖುಷಿಯಲ್ಲಿ, ನಾನು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಉತ್ಸುಕಳಾಗಿದ್ದೇನೆ ಮಾವ ಎಂದು ಅತ್ತೆಯನ್ನು ಹುಡುಕುತ್ತಾ  ಅಂಜು ಒಳ ಹೋದಳು.
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಝಾರ್ಖಂಡ್‌ನ ಮಹಿಳಾ ರೈತರಿಂದ ಬೆಳೆದ ಮಾವು ಈಗ ಲಂಡನ್‌ಗೆ…! ಬ್ರಿಟನ್‌ಗೆ ಮೊದಲ ಬಾರಿಗೆ ರಫ್ತು

ಝಾರ್ಖಂಡ್‌ನ ಮಹಿಳಾ ರೈತರು ಬೆಳೆದ 1.5 ಮೆಟ್ರಿಕ್ ಟನ್ ಆಮ್ರಪಾಲಿ ಮಾವುಗಳು ಮೊದಲ…

2 hours ago

ಮುಂಗಾರು ಅಬ್ಬರ | ಕರ್ನಾಟಕ ಸೇರಿ ದೇಶದ ಹಲವೆಡೆ ಭಾರೀ ಮಳೆ – ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಕೇರಳದಲ್ಲಿ ರೆಡ್ ಅಲರ್ಟ್

ದೇಶದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ…

14 hours ago

ಕೀಟನಾಶಕವೇ ರೈತರ ಜೀವಕ್ಕೆ ಕಂಟಕ…? ರಾಜಸ್ಥಾನದಲ್ಲಿ 2 ವರ್ಷದಲ್ಲಿ 535 ರೈತರ ಸಾವು – ಬೆಚ್ಚಿಬೀಳಿಸಿದ ವರದಿ..!

ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…

1 day ago

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…

1 day ago