ಗುತ್ತಿಗಾರು: ಸುತ್ತಮುತ್ತಲೂ ಕಾಡು ಕೊಂಪೆ, ಗಾಳಿಗೆ ಹಾರಿ ಹೋಗಲು ರೆಡಿಯಾದ ಮಳೆಗೆ ಸೋರುವ ಪ್ಲಾಸ್ಟಿಕ್ ಜೋಪಡಿ. ಇದರೊಳಗೆ ಇಳಿವಯಸ್ಸಿನಲ್ಲಿ ಮೂಗ ಮಗನೊಂದಿಗೆ ದಿನ ದೂಡುತ್ತಿರುವ ವೃದ್ದೆ…!
ಈ ದೃಶ್ಯ ಕಂಡು ಬರುತ್ತಿರುವುದು ದೇವಚಳ್ಳ ಗ್ರಾಮದ ಚಳ್ಳ ಎಂಬಲ್ಲಿ. ಇಲ್ಲಿ ವೃದ್ದೆ ಸರಸ್ವತಿ ನಾಯ್ಕ್ ತಮ್ಮ ವಿಕಲಚೇತನ ಮೂಗ ಮಗ ವೆಂಕಪ್ಪನೊಂದಿಗೆ ಪ್ರತಿ ದಿನ ಕಣ್ಣೀರಲ್ಲೇ ದಿನ ದೂಡುತ್ತಿದ್ದಾರೆ.ಸರಸ್ವತಿಯವರು ಬಹಳ ಹಿಂದೆಯೇ ಪತಿಯನ್ನು ಕಳೆದುಕೊಂಡು ಇಬ್ಬರು ಗಂಡು ಮಕ್ಕಳೊಂದಿಗೆ ಜೀವಿಸುತ್ತಿದ್ದರು. ಅದರಲ್ಲಿ ಹಿರಿ ಮಗ ಜನಾರ್ದನ ಮದುವೆಯಾಗಿ ಸದ್ಯ ಬೇರೆ ಮನೆ ಮಾಡಿಕೊಂಡಿದ್ದಾರೆ. ತಾಯಿ ಜೊತೆ ಇತ್ತೀಚೆಗೆ ಸಂಪರ್ಕ ಬೆಳೆಸಿದರೂ ಆತ ದೂರದ ಸುಳ್ಯ ಸಮೀಪ ಮನೆ ಮಾಡಿಕೊಂಡಿದ್ದಾರೆ. ಸರಸ್ವತಿ ಕಿರಿಮಗ ವೆಂಕಪ್ಪನೊಂದಿಗೆ ಚಳ್ಳದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಮಗ ವೆಂಕಪ್ಪ ಹುಟ್ಟು ವಿಕಲಚೇತನನಾಗಿದ್ದು, ಕೂಲಿ ಕೆಲಸ ಮಾಡಿದರೂ ಬಂದ ಕೂಲಿಯನ್ನು ಬಳಸಿಕೊಳ್ಳಲು ತಿಳಿದಿಲ್ಲ. ಮನೆ ಖರ್ಚು ಸರಸ್ವತಿಯವರ ಕೂಲಿಯಲ್ಲೇ ಸಾಗುತ್ತಿದ್ದು, ಇತ್ತೀಚೆಗೆ ಕೆಲಸ ಮಾಡಲು ಅಶಕ್ತರಾಗಿದ್ದು, ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ.ಇದರ ಜೊತೆಗೆ ಅವರ ಮನೆ ಕೂಡಾ ಶಿಥಿಲಗೊಂಡಿದ್ದು ಸೂರು ನಿರ್ಮಿಸಲು ಅಸಮರ್ಥರಾಗಿದ್ದಾರೆ. ಹಳೆ ಮನೆ ಬಿದ್ದು ಹೋಗಿದ್ದು, ಇರುವ ಕೊಟ್ಟಿಗೆಗೆ ಪ್ಲಾಸ್ಟಿಕ್ ಟರ್ಪಾಲ್ ಹೊದೆಸಿ ಬದುಕುತ್ತಿದ್ದಾರೆ.
ಇರುಳಿಗೆ ಬೆಳಕಿಲ್ಲ: ಹಳೆ ಮನೆಗೆ ದೀನ ದಯಾಳ್ ಉಪಾಧ್ಯಾಯ ಯೋಜನೆಯಲ್ಲಿ ವಿದ್ಯುತ್ ಮಂಜೂರಾಗಿದ್ದರೂ ಅದು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಮನೆ ಮುರಿದ ಕಾರಣ ವಿದ್ಯುತ್ ಸಂಪರ್ಕವನ್ನು ಇಲಾಖೆಯವರು ತೆಗೆದು ಇರಿಸಿದ್ದು, ರಾತ್ರಿಯನ್ನು ಕತ್ತಲಲ್ಲೇ ಕಳೆಯುತ್ತಿದ್ದಾರೆ. ಬೆಳಕು ಹಚ್ಚಲು ಕ್ಯಾಂಡಲ್ ಗತಿಯಾಗಿದೆ.ಸೂರು ಯೋಜನೆಯಲ್ಲಿ ಯಾವುದೇ ಮನೆಯೂ ಸಿಕ್ಕಿಲ್ಲ. ಹೀಗಾಗಿ ಈಗ ಸಹಾಯ ಹಸ್ತ ಬೇಕಿದೆ. ವೃದ್ದೆ ಸರಸ್ವತಿಯವರು ದೈಹಿಕವಾಗಿ ಮನೆ ನಿರ್ಮಿಸಿಕೊಳ್ಳಲು ಅಸಮರ್ಥರಾಗಿದ್ದು, ಇವರಿಗೆ ಮನೆ ನಿರ್ಮಾಣ ಮಾಡಲು ಸಂಘ ಸಂಸ್ಥೆಗಳ ಸಹಾಯ ಬೇಕಿದೆ. ಈಗಾಗಲೇ ಮಳೆಗಾಲವನ್ನು ಪ್ಲಾಸ್ಟಿಕ್ ಜೋಪಡಿಯಲ್ಲೇ ಕಳೆದಿದ್ದು, ಇವರ ಕಷ್ಟಕ್ಕೆ ಯಾರೂ ಆಗಿಬರಲಿಲ್ಲ ಎಂದು ಕಣ್ಣೀರಾಗುತ್ತಾರೆ ಸರಸ್ವತಿ.
ಸರಸ್ವತಿಯವರಿಗೆ ಪಂಚಾಯತ್ ವತಿಯಂದ ಮನೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಆದರೆ ಈಗ ಪಂಚಾಯತ್ಗೆ ಹೊಸ ಮನೆಗಳು ಮಂಜೂರಾಗದೇ ಇರುವುದರಿಂದ ಮನೆ ನೀಡಲಾಗುತ್ತಿಲ್ಲ. ಸದ್ಯ ಉಳಿದುಕೊಳ್ಳಲು ಬಾಡಿಗೆ ಮನೆಯ ಚಿಂತನೆ ನಡೆಸಲಾಗಿದೆ. – ಕೃಷ್ಣಯ್ಯ ಮೂಲೆತೋಟ, ಗ್ರಾ.ಪಂ ಸದಸ್ಯ, ದೇವಚಳ್ಳ ಗ್ರಾಪಂ
Advertisement