Advertisement
MIRROR FOCUS

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಅಡಿಕೆ ಮೇಲೆ ಸದ್ಯ ಪರಿಣಾಮ ಬೀರದು……. ಆದರೆ….?

Share

ಕಳೆದೊಂದು ವಾರದಿಂದ R C E P  ( Regional Comprehensive Economic Partnership ) ಅಂದರೆ ಪ್ರಾದೇಶಿಕ ಸಮಗ್ರ ಆರ್ಥಿಕ  ಪಾಲುದಾರಿಕೆ ಅಥವಾ ಮುಕ್ತ ವ್ಯಾಪಾರ ಒಪ್ಪಂದ (Free Trade Agreement) ದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕೃಷಿ ವಲಯದಲ್ಲಂತೂ ಭಾರೀ ಸಂಚಲನ ಮೂಡಿಸಿದೆ. ಮೊದಲೇ ವಿವಿಧ ಸಂಕಷ್ಟದಲ್ಲಿದ್ದ ಕೃಷಿಕರು ಈ ಸುದ್ದಿಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಆದರೆ ದಕ್ಷಿಣ ಕನ್ನಡದ , ಅದರಲ್ಲೂ ಅಡಿಕೆ ಬೆಳೆಗಾರರಿಗೆ ಸದ್ಯದ ಪರಿಸ್ಥಿತಿಯಲ್ಲಿ  ಅಷ್ಟೊಂದು ಸಮಸ್ಯೆ ಇಲ್ಲ. ಈಗ ಇದೇ ಕಾರಣ ಮುಂದಿಟ್ಟು ಲಾಭ ಪಡೆಯುವ ಮಂದಿ ಮಾತ್ರಾ ಬೇರೆ..!. ಹೀಗಾಗಿ ಈ ಒಪ್ಪಂದದ ಬಗ್ಗೆ ಸಮಗ್ರ ಅರಿವು ಮೂಡಬೇಕಿದೆ.

Advertisement
Advertisement

 

ಈ ಒಪ್ಪಂದದ ಪ್ರಕಾರ, ಮುಕ್ತವಾದ ವ್ಯಾಪಾರ ವ್ಯವಹಾರ ನಡೆಯುತ್ತದೆ. ಅದರಲ್ಲೂ ಪ್ರತೀ ದೇಶಕ್ಕೆ ಆಮದು ಮೇಲೆ ನಿಯಂತ್ರಣ ಹೇರುವ ಅವಕಾಶವೂ ಇರುತ್ತದೆ. ಹೀಗಾಗಿ ಯಾವ ಉತ್ಪನ್ನಗಳ ನಮಗೆ ಬೇಡ ಎನ್ನುವುದನ್ನು  ಉಲ್ಲೇಖಿಸಬಹುದಾಗಿದೆ. ಹಾಗೆ ನೋಡಿದರೆ ಭಾರತದಂತಹ ದೇಶದಲ್ಲಿ  ಕೃಷಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ. 2020 ರ ವೇಳೆ ಆದಾಯ ದ್ವಿಗುಣ ಎನ್ನುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದು ಇಂದಿಗೂ ಸಾಧ್ಯವಾಗಲಿಲ್ಲ, ಬದಲಾಗಿ ಕೃಷಿ ಕ್ಷೇತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೃಷಿ ಜಿಡಿಪಿಯ ಲೆಕ್ಕಾಚಾರದಲ್ಲೂ ಏರಿಳಿತ ಕಂಡಿದೆ. ಇಂತಹ ಸಂದರ್ಭದಲ್ಲಿ ಒಪ್ಪಂದದ ಮೂಲಕ ಭಾರತದೊಳಕ್ಕೆ ಬರಬಹುದಾದ ಕೃಷಿ ವಸ್ತುಗಳು ಯಾವುದು  ಎಂಬುದೇ ಪ್ರಶ್ನೆ.  ಹೀಗಾಗಿ ಭಾರತವು ಈ ಆರ್ ಸಿ ಇ ಪಿ ಒಪ್ಪಂದಕ್ಕೆ ಸೇರುವುದು ಅಷ್ಟೊಂದು ಸುಲಭ ಈಗ ಅಲ್ಲ. ಸುಮಾರು 10 ವರ್ಷಗಳ ಹಿಂದೆಯೇ ಇಂತಹ ಹಲವಾರು ಒಪ್ಪಂದಗಳು ನಡೆದಿದೆ. ಪ್ರತೀ ಭಾರಿಯೂ ಭಾರತದ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.  ಈಗಲೂ ಇದೇ ಆತಂಕ ಇದೆ. ದೇಶದ ಕೃಷಿಕರು ಹಾಗೂ ಸಣ್ಣ ಕೈಗಾರಿಕೆಗಳು ಆತಂಕ ಹೊಂದಿವೆ. ಭಾರತದಲ್ಲಿ  ದೊಡ್ಡ ಮಾರುಕಟ್ಟೆ ಚೈನಾದಂತಹ ದೇಶಗಳಿಗೆ ದೊರೆಯುತ್ತವೆ. ಭಾರತದ ಸಣ್ಣ ಕೈಗಾರಿಕೆಗಳೂ ಅದೇ ವೇಗದಲ್ಲಿ ಸಾಯುತ್ತವೆ. ಕೃಷಿ ಕ್ಷೇತ್ರದಲ್ಲಿ ಕಾಳುಮೆಣಸು, ಹಾಲು ಸೇರಿದಂತೆ ರಬ್ಬರ್ ಇತ್ಯಾದಿಗಳು ಯಥೇಚ್ಛ ಉತ್ಪಾದಿಸುವ ದೇಶಗಳು ಸಾಕಷ್ಟು ಇವೆ. ಇದೆಲ್ಲಾ ಭಾರತದೊಳಗೆ ಮುಕ್ತವಾಗಿ ಬಂದು ಬಿಟ್ಟರೆ ಇಲ್ಲಿನ ಮಾರುಕಟ್ಟೆ ಕುಸಿತವಾಗುವುದು ಸಾಮಾನ್ಯ. ಹೀಗಾದರೆ ಕೃಷಿ ಆದಾಯ ದ್ವಿಗುಣ ಹೇಗೆ ಎಂಬುದು  ಪ್ರಶ್ನೆಯಾದರೆ. ಭಾರತದಲ್ಲಿ ರಫ್ತು ಮಾಡಬಹುದಾದಷ್ಟು ಯಥೇಚ್ಛವಾಗಿ ಬೆಳೆಯುವ ಕೃಷಿ ಉತ್ಪನ್ನಗಳು ಯಾವುವು ಎಂಬುದು  ಪ್ರಶ್ನೆ. ಭಾರತಕ್ಕೆ ಲಾಭವಾಗುವುದು  ಸಾಫ್ಟ್ ವೇರ್ ಸೇರಿದಂತೆ ಇತರ ಕೆಲವು ಸಂಗತಿಗಳು ಮಾತ್ರಾ. ಆದರೆ ಅಡಿಕೆಯ ಕತೆ ಬೇರೆಯೇ ಇದೆ. 

ಅಡಿಕೆಯ ಕಡೆಗೆ ಬಂದಾಗ, ಸದ್ಯದ ಪರಿಸ್ಥಿತಿಯಲ್ಲಿ ಆರ್ ಸಿ ಇ ಪಿ ಅಡಿಕೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಅದಕ್ಕೂ ಕಾರಣ ಇದೆ. ಈ ಒಪ್ಪಂದಕ್ಕೆ ಒಳಪಡುವ ದೇಶಗಳಲ್ಲಿ  ಅಡಿಕೆ ಗುಣಮಟ್ಟದಿಂದ ಕೂಡಿಲ್ಲ. ಈಗಾಗಲೇ ಭಾರತ ಎಷ್ಟೇ ಪ್ರಯತ್ನ ಮಾಡಿದರೂ ಕಳ್ಳ ದಾರಿ ಮೂಲಕ ಬರ್ಮಾ, ಇಂಡೋನೇಶ್ಯಾ ಮೊದಲಾದ ದೇಶಗಳಿಂದ  ಅಡಿಕೆ ಬರುತ್ತಿದೆ. ಅದನ್ನು ದಕ್ಷಿಣ ಕನ್ನಡ ಹಾಗೂ ಕಾಸರಗೋಡು, ಶಿರಸಿ, ಉತ್ತರಕನ್ನಡ ಭಾಗದ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ. ಎಷ್ಟೇ ಪ್ರಮಾಣದಲ್ಲಿ ವಿದೇಶದ ಅಡಿಕೆ ಬಂದರೂ ಗುಣಮಟ್ಟದ ಕಾರಣದಿಂದ ಇಲ್ಲಿನ ಅಡಿಕೆಯೇ ಮೇಲುಗೈ ಸಾಧಿಸುತ್ತದೆ. ಆದರೆ ಈಗಿನಂತೆ 350 ರೂಪಾಯಿ ಧಾರಣೆ ನಿರೀಕ್ಷೆ ಕಷ್ಟವಾದೀತು.

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರ ಪ್ರಕಾರ ಇನ್ನೂ ಪ್ರಮುಖವಾದ ಕಾರಣ ಹೀಗಿದೆ,

ಡಾ|ವಿಘ್ನೇಶ್ವರ ಭಟ್, ವರ್ಮುಡಿ

ಆರ್ ಸಿ ಇ ಪಿ ಒಪ್ಪಂದ ಆಗಿದ್ದೇ ಆದರೆ ಅಡಿಕೆ ಬೆಳೆಗಾರರಿಗೆ ಅಷ್ಟೊಂದು ದೊಡ್ಡ ಪರಿಣಾಮ ಸದ್ಯಕ್ಕಿಲ್ಲ. ರಫ್ತು ಆಗುವ ವಸ್ತುಗಳಾದ ಕಾಳುಮೆಣಸು, ಗೇರುಬೀಜ, ರಬ್ಬರ್ ಅಂತಹ ಕೆಲವು ವಸ್ತುಗಳ ಮೇಲೆ ಕೊಂಚ ಪರಿಣಾಮ ಬೀರೀತು.  ಈಗಾಗಲೇ ಭಾರತದೊಳಕ್ಕೆ 50-60 ಸಾವಿರ ಟನ್ ಅಡಿಕೆ ಬರುತ್ತಿದೆ. ಹೀಗಾಗಿ ಒಪ್ಪಂದದ ನಂತರವೂ ಅದೇ ಪ್ರಮಾಣದಲ್ಲಿ ಬರಬಹುದು.  ಆದರೆ ಒಪ್ಪಂದದ ನಂತರ 20 ವರ್ಷದ ಅವಧಿಯಲ್ಲಿ ಕಡಿಮೆಯಾಗುತ್ತಾ ಸಾಗಬೇಕು.  ಈಗ ತೆರಿಗೆ ನೀಡಿದೇ ಭಾರತದೊಳಕ್ಕೆ ಈ ಅಡಿಕೆ ಬರುತ್ತಿದ್ದರೆ ಮುಂದೆ ಇದೇ ಮುಕ್ತ ಒಪ್ಪಂದದ ಪ್ರಕಾರ ಬರಬೇಕು ಅಷ್ಟೇ.

ಇನ್ನೂ ಪ್ರಮುಖವಾಗಿ ಚೀನಾದಲ್ಲಿ ಎಳೆ ಅಡಿಕೆ ಉಪಯೋಗಯೇ ಇದೆ. ಅದನ್ನು ಒಣಗಿಸಿ ಮಾರಾಟ ಇಲ್ಲ. ಅಲ್ಲಿ 60 ಮಿಲಿಯನ್ ಜನ ಅಡಿಕೆ ನಂಬಿ ಇದ್ದಾರೆ. ಇನ್ನು ಇಂಡೋನೇಶ್ಯಾ, ಫಿಲಿಫೈನ್ , ಥೈಲ್ಯಾಂಡ್ ಪ್ರದೇಶದಲ್ಲಿ ಸುಮಾರು 84 ಸಾವಿರ ಟನ್ ಅಡಿಕೆ ಉತ್ಪಾದನೆ ಇದೆ. ಅಲ್ಲಿ ಜನ ಅಡಿಕೆ ತಿನ್ನುತ್ತಾರೆ. ಆ ಬಳಿಕ ಉಳಿದ ಅಡಿಕೆ ಮಾರಾಟ ಮಾಡುತ್ತಾರೆ. ಮಾಯನ್ಮಾರ್ ನಲ್ಲಿ ಶೇ 62 ರಷ್ಟು ಜನ ಅಲ್ಲಿಯ ಅಡಿಕೆ ಬಳಕೆ ಮಾಡುತ್ತಾರೆ. ಹೀಗಾಗಿ ಇಂಡೋನೇಶ್ಯಾ, ಥೈಲ್ಯಾಂಡ್ ಅಡಿಕೆ ಬರಬಹುದು.  ಅದು ಈಗಲೂ ಬರುತ್ತದೆ 50-60 ಸಾವಿರ ಟನ್ ಅಡಿಕೆ ಭಾರತದೊಳಕ್ಕೆ ಬರುತ್ತಿದೆ. ಹೀಗಾಗಿ ಅದು ಮುಕ್ತ ದಾರಿ-ಕಳ್ಳ ದಾರಿಯಾಗಿ ಬಂದರೂ ಒಂದೇ, ದೊಡ್ಡ ಪರಿಣಾಮ ಆಗದು.ಆದುದರಿಂದ ಯಾವುದೇ ಭಯದ ಅಗತ್ಯವಿಲ್ಲ.

ಇಲ್ಲಿನ ಬೆಳೆಗಾರರಿಗೆ ಇನ್ನೊಂದು ಆತಂಕ ವಿದೇಶಗಳಲ್ಲೂ ಅಡಿಕೆ ಬೆಳೆ ಹೆಚ್ಚಾದೀತು ಎಂಬ ಆತಂಕ ಇದೆ, ಆದರೆ ಅದು ಏನಿದ್ದರೂ 3-5 ವರ್ಷಗಳ ಕಾಲ ಬೇಕಾಗುತ್ತದೆ. ಆ ವೇಳೆಗೆ ಆಮದು ಸುಂಕ ಹೆಚ್ಚಾಗುತ್ತಾ ಸಾಗಿದರೆ ಆ ಭಯವೂ ಕಡಿಮೆಯಾಗುತ್ತದೆ.

ಈಗ ಅದಕ್ಕಿಂತಲೂ ಮುಖ್ಯವಾಗಿ ಆಗಬೇಕಾದ್ದು ಅಡಿಕೆ ಬ್ಯಾನ್ ಬಗೆಗೆ ಇರುವ ಗೊಂದಲ ಹಾಗೂ ಭಯ ನಿವಾರಣೆ. ಈ ಬಗ್ಗೆ ಸರಕಾರದ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಬೇಕಿದೆ. ಅಡಿಕೆ ತಿನ್ನಲು ಏನು ಮಾಡಬಹುದು, ಅಡಿಕೆ ಬಳಕೆ ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕಿದೆ.  ಅಡಿಕೆ ಹಾನಿಕಾರಕ ಅಲ್ಲ ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಿದೆ. ಈ ದಿಸೆಯಲ್ಲಿ ಚರ್ಚೆಗಳು ನಡೆಯಬೇಕಿದೆ. ಆರ್ ಸಿ ಇ ಪಿಯಲ್ಲಿ ಅಡಿಕೆ ಬಂದರೂ ತಿನ್ನುವವರೇ ಇಲ್ಲದೇ ಇದ್ದರೆ ಏನು ಮಾಡುವುದು ? ಎಂಬ ಪ್ರಶ್ನೆ ಇದೆ.

2000 ನೇ ಇಸವಿಯಿಂದಲೂ ಸಾರ್ಕ್, ಸಾಫ್, ಮೊದಲಾದ ಒಪ್ಪಂದದ ಬಗ್ಗೆ ಚರ್ಚೆಯಾಗಿತ್ತು. ಏನೂ ಪರಿಣಾಮ ಆಗಿರಲಿಲ್ಲ. ಆದರೆ ಇದೇ ನೆಪದಲ್ಲಿ ಅಡಿಕೆ ಮಾರುಕಟ್ಟೆ ಇಳಿಕೆಯಾಗಿದೆ. ಕೆಲವರು ಕಡಿಮೆ ಬೆಲೆಗೆ ಅಡಿಕೆ ಖರೀದಿ ಮಾಡಿ,  ಅಡಿಕೆ ಸ್ಟಾಕ್ ಮಾಡಿದರು. ಅದರ ಲಾಭ ಪಡೆದರು ಅಷ್ಟೇ ಎಂದು ವಿಶ್ಲೇಷಣೆ ಮಾಡುತ್ತಾರೆ ಡಾ|ವಿಘ್ನೇಶ್ವರ ಭಟ್ ವರ್ಮುಡಿ.

ಕ್ಯಾಂಪ್ಕೋ ಪ್ರಯತ್ನ: ಈಗಾಗಲೇ ಆರ್ ಸಿ ಇ ಪಿ ಯಿಂದ ಕೃಷಿಕರ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಸರಕಾರದ ಗಮನಸೆಳೆಯುವ ಕೆಲಸ ಮಾಡಿದೆ. ರಾಜ್ಯ ಸರಕಾರವನ್ನೂ ಈ ಬಗ್ಗೆ ಒತ್ತಾಯ ಮಾಡಿದೆ. ಅದರ ಜೊತೆಗೆ ಒಪ್ಪಂದದ ಪ್ರಕಾರ ಕಾಳುಮೆಣಸು, ರಬ್ಬರ್ ಹಾಗೂ ಅಡಿಕೆಯನ್ನು ಆಮದು ಪಟ್ಟಿಯಿಂದ ಹೊರಗಿಡಬೇಕು ಎಂದು ಒತ್ತಾಯ ಮಾಡಿದೆ.

ಒಪ್ಪಂದದಿಂದ ದೂರ  ಉಳಿಯುವ ಸೂಚನೆ ಇದೆ :

ಭಾರತವು ಆರ್ ಸಿ ಇ ಪಿ ಯಿಮದ ದೂರ ಉಳಿದು ಪರ್ಯಾಯ ಒಪ್ಪಂದದ ಕಡೆಗೆ ಭಾರತ ಮನಸ್ಸು ಮಾಡುತ್ತಿರುವ ಸೂಚನೆ ಸಿಕ್ಕಿದೆ. ಆರ್ ಸಿ ಇ ಪಿಗೆ ವ್ಯಾಪಕ ವಿರೋಧ ಇದೆ . ಸ್ವದೇಶಿ ಜಾಗರಣ್ ಮಂಚ್ ಸೇರಿದಂತೆ ಪ್ರಮುಖ  ರಾಷ್ಟ್ರೀಯ ಸಂಘಟನೆ,  ರೈತ ಸಂಘಟನೆಗಳದ್ದೂ ವಿರೋಧ ಇದೆ. ಈ ಕಾರಣದಿಂದ ಉನ್ನತ ಮಟ್ಟದ ಸಭೆ ನಡೆದಿದೆ. ಇದರಲ್ಲೂ ಈ ಒಪ್ಪಂದದಿಂದ ದೂರ ನಿಲ್ಲುವಂತೆ ಸಲಹೆ ನೀಡಲಾಗಿದೆ. ಹೀಗಾಗಿ ಪರ್ಯಾಯ ಒಪ್ಪಂದ ನಡೆಸುವ ಬಗ್ಗೆ ಯೋಚನೆ ನಡೆಸಲಾಗಿದೆ ಎಂದು ಮೂಲಗಳು ಹೇಳುತ್ತವೆ. ಇದರ ಜೊತೆಗೆ ಆರ್ ಸಿ ಇ ಪಿಗೆ ಭಾರತವು ಹಲವು ಕಂಡೀಶನ್ ಹಾಕಿದ್ದು ಇದು ಕೂಡಾ ಒಪ್ಪಂದದಿಂದ ದೂರ ಉಳಿಯಲು ಕಾರಣವಾಗುತ್ತದೆ.

ಆರ್ ಸಿ ಇ ಪಿ ಗೆ ವಿರೋಧ ಏಕೆ ?:

ಪ್ರಮುಖವಾಗಿ

  • ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಸಂಪೂರ್ಣ ರದ್ದಾಗಲಿದೆ ಮತ್ತು ವಿದೇಶಗಳಿಂದ ಈ ಉತ್ಪನ್ನಗಳ ಆಮದು ಹರಿದು ಬರಲಿದೆ.

  • ಒಪ್ಪಂದದ ದೇಶಗಳು  ಅಲ್ಲಿ ಬೆಳೆಯುವ  ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ  ಸುರಿಯಲಿವೆ. ವಿಶೇಷವಾಗಿ ಹೈನುಗಾರಿಕೆ ಮತ್ತು ಹಾಲಿನ ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಹರಿದುಬರಲಿವೆ. ಇದರಿಂದಾಗಿ ಹೈನುಗಾರಿಕೆ ಕುಸಿಯಲಿದೆ.

  •  ಬೀಜ ತಯಾರಿಸುವ ಕಂಪನಿಗಳು ಭಾರತದ ಕೃಷಿಕರನ್ನು ಪರಾವಲಂಬಿಯಾಗಿಸಲಿದೆ.  ರೈತರು ಈ ಬೀಜಗಳನ್ನು ಬಳಸಿದಾಗ, ವಿನಿಮಯ ಮಾಡುವಂತಿಲ್ಲ.

  •  ವಿದೇಶಿ ಕಾರ್ಪೊರೇಟ್ ಗಳಿಗೆ ಸರಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೃಷಿ ಉತ್ಪನ್ನ ಮತ್ತು ಸೇವೆಗಳನ್ನು ಬೇಕಾಬಿಟ್ಟಿಯಾಗಿ ಖರೀದಿಸಲು ಅವಕಾಶವಾಗಲಿದೆ.

  •  ಬೃಹತ್ ರಿಟೇಲ್ ವ್ಯಾಪಾರಸ್ಥರ ಕೈ ಗಟ್ಟಿಯಾಗಲಿದೆ. ಇದರಿಂದಾಗಿ ನಮ್ಮ ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರಸ್ಥರು, ಬೀದಿ ಬದಿಯ ಅಂಗಡಿಗಳು ಕೈಚೆಲ್ಲಬೇಕಾಬಹುದು

  • ಸಣ್ಣ ಸಣ್ಣ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಲಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

11 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

2 days ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

2 days ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

2 days ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

2 days ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

2 days ago