ಮತ್ತೆ ಮತ್ತೆ ಅಡಿಕೆ ತೋಟ ವಿಸ್ತರಣೆ

May 23, 2019
9:00 AM

ಈ ಬೇಸಿಗೆಯಂತು ಅಡಿಕೆ ಕೃಷಿಕರ ಭವಿಷ್ಯವನ್ನು ಮುರುಟಿಸಿ ಆಯಿತು. ತೋಟಕ್ಕೆ ನೀರಿಲ್ಲದೆ ಅನೇಕ ತೋಟಗಳಲ್ಲಿ ಅಡಿಕೆ ಮರದ ತುದಿ ಒಣಗಿ ಕೆಳಗೆ ಬೀಳುವ ಹಂತದಲ್ಲಿದೆ. ಒಣಗಿ ಸಾಯದ ತೋಟಗಳಲ್ಲಿ ಎರಡು ಮೂರು ಸೋಗೆ ಬಣ್ಣ ಬದಲಿಸಿದ್ದು ಇನ್ನು ಒಂದು ವಾರ ಮಳೆ ಕಣ್ಣಾಮುಚ್ಚಾಲೆಯಾಡಿದರೆ ಅಂತಹ ತೋಟಗಳದ್ದು ಕೂಡ ಅದೇ ಪರಿಸ್ಥಿತಿ. ಇದಲ್ಲದೆ ದೊಡ್ದ ಪ್ರಮಾಣದಲ್ಲಿ ತೋಟಗಳು ಒಂದಷ್ಟು ಬಾಡಿಕೊಂಡಿದ್ದು ಈ ತೋಟಗಳಿಗೆ ಕೃಷಿಕರು ಯಥಾನುಶಕ್ತಿ ನೀರುಣಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಬೆಳಿಗ್ಗೆ ನೀರು ಬಿಟ್ಟರೆ ಸಂಜೆಯ ವೇಳೆಗೆ ಯಾವ ತಟ್ಟಿಗೆ ನೀರಾವರಿ ಆಯಿತು ಎಂದು ತಿಳಿಯಲಾರದಂತೆ ಅವರ ನೀರಿನ ಶಕ್ತಿ ಇರುತ್ತದಷ್ಟೆ. ಇಂತಹ ತೋಟಗಳ ಮರಗಳು ಉಳಿದು ಬಿಟ್ಟಾವು ಹೊರತು ಫಸಲು ಬಹುತೇಕ ಮಳೆ ಸುರಿದ ನಂತರ ನೆಲ ಸೇರಬಹುದು.
ಇನ್ನು ನಮಗೆಲ್ಲ ಕಾಣುವಾಗ ಭಾರೀ ನೀರಿನ ಅನುಕೂಲ ಇರುವಂತೆ ತೋರುವ ಕೃಷಿಕರು ದೊಡ್ಡ ಸಂಖ್ಯೆಯಲ್ಲಿ ಏನೂ ಇಲ್ಲ. ಅವರ ತೋಟಕ್ಕೆ ಯಥೇಚ್ಛ ನೀರಾವರಿ ಒದಗಬಹುದು. ರಾತ್ರೆ ಹಗಲು ನೀರು ಧಾರಾಳ ಹಾಕುವುದರಿಂದ ತೋಟದ ಅಡಿಕೆ ಮರಗಳು ಬಾಡುವ ಪ್ರಮೇಯ ಇಲ್ಲ. ಆದರೆ ಫಸಲು ಖಂಡಿತವಾಗಿ ನಿರೀಕ್ಷಿತ ಮಟ್ಟದಲ್ಲಿ ಇರಲಾರದು. ಯಾಕೆಂದರೆ ಬುಡಕ್ಕೆ ಎಷ್ಟೇ ನೀರಾವರಿ ಮಾಡಿದರೂ ಹವಾಮಾನದಲ್ಲಿನ ಸುಡುಬಿಸಿಲು ಮರದ ತುದಿಯ ಫಸಲಿಗೆ ಕೇಡುಬಗೆಯದಿರದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಎಷ್ಟಿದ್ದರೂ ಈ ವರ್ಷದ ನೀರಾವರಿ ಸಮಸ್ಯೆ ಪ್ರತಿವರ್ಷ ಮುಂದುವರಿದಿದ್ದೇ ಆದರೆ ಅಡಿಕೆ ಕೃಷಿಯನ್ನು ಮುಂದುವರಿಸುವುದು ಕಷ್ಟವಾಗಬಹುದು. ಪ್ರತಿ ವರ್ಷ ಅಡಿಕೆ ಮರದ ತುದಿಯನ್ನಷ್ಟೆ ಉಳಿಸುವ ಏಕಮಾತ್ರ ಕಾರ್ಯ ಸಾಧ್ಯವಾದರೆ ಕೃಷಿಕನಿಗೆ ಆದಾಯ ಎಲ್ಲಿಂದ ಬರಬೇಕು?

Advertisement

ಇದಿಷ್ಟು ವಾಸ್ತವದ ಚಿತ್ರಣವಾದರೆ ಅದರ ಜೊತೆಗೆ ಇನ್ನೂ ಒಂದು ಸಂಗತಿ ಇದೆ. ಅದು ಹೊಸ ತೋಟ ವಿಸ್ತರಣೆಯ ಕಾರ್ಯ. ನಾನು ಮೊನ್ನೆ ಪುತ್ತೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದೆ. ಪುತ್ತೂರು ಪಾಣಾಜೆ ದಾರಿಯಲ್ಲಿ ಒಂದು ಗುಡ್ಡದಲ್ಲಿ ಬೆಳೆದಿದ್ದ ಹಸಿರನ್ನು ಪೂರ್ತಿ ಸವರಿ ಅಲ್ಲಿ ಅಡಿಕೆ ಗಿಡ ನಡಲು ಗುರುತುಹಾಕಿಯಾಗಿತ್ತು. ಏನಿದ್ದರೂ ಸರಿಸುಮಾರು ಒಂದು ಸಾವಿರ ಗಿಡ ನಿಲ್ಲಬಹುದಾದಷ್ಟು ದೊಡ್ಡ ಗುಡ್ಡ. ಮಳೆ ಬರುವುದನ್ನೇ ಕಾಯುವಂತೆ ಇತ್ತು ಅಲ್ಲಿಯ ಸ್ಥಿತಿ. ಇದು ಒಂದು ಗುಡ್ದದಲ್ಲಿ ನಡೆದ ತೋಟ ವಿಸ್ತರಣೆಯ ಸಂಗತಿ. ಇನ್ನೂ ಅನೇಕ ಕಡೆ ಇಂತಹ ದುಸ್ಸಾಹಸಕ್ಕೆ ಕೈಹಾಕಿದ ಕೃಷಿಕರು ಕಾಣಸಿಗುತ್ತಾರೆ. ತೋಟ ವಿಸ್ತಾರದ ಅಗತ್ಯದ ಬಗ್ಗೆ ಮಾತನಾಡಿದರೆ ನಾವು ಮುನ್ನೂರೊ ನಾನ್ನೂರೊ ಅಡಿಕೆ ಗಿಡ ನಟ್ಟರೆ ಅದರಲ್ಲಿ ಏನಾಗಲಿದೆ. ಸಮುದ್ರಕ್ಕೆ ಬೊಗಸೆ ನೀರು ಹಾಕಿದರೆ ಅದಕ್ಕೆ ಹೆಚ್ಚು ಅಂತ ಕಾಣುತ್ತದೆಯೇ ಎಂಬ ಮಾರುತ್ತರ ಬರುತ್ತದೆ. ಒಂದು ಕೊಳವೆಬಾವಿ ಕೊರೆದು ತೃಪ್ತಿದಾಯಕ ನೀರಿದ್ದರೆ ತೋಟ ವಿಸ್ತರಣೆಯ ಹುಚ್ಚು ಜೋರಾಗಿಯೇ ಇರುತ್ತದೆ. ಅಡಿಕೆ ಕೃಷಿ ಕಷ್ಟ ಕಷ್ಟ ಅಂತ ಬೊಬ್ಬೆ ಹೊಡೆಯುವ ಮಂದಿಯೇ  ಸದ್ದಿಲ್ಲದೆ ಸದ್ದು ಮಾಡುವ ಹಿಟಾಚಿ ತಂದು ಗುಡ್ದದಲ್ಲಿ ಹೊಂಡ ತೆಗೆಸುತ್ತಾರೆ. ಇನ್ನೇನು ಮಳೆ ಬಿದ್ದೊಡನೆ ಗಿಡ ನೆಡುವ ಕಾಯಕ. ನಂತರ ನಾನು ಅಷ್ಟು ಗಿಡ ನೆಟ್ಟುಬಿಟ್ಟೆ ಭಾವ ಅಂತ ಮೀಸೆ ಎಳೆಯುವ ಕೆಲಸ.

ಇದೆಲ್ಲ ಬೇಕ? ಇನ್ನೂ ವಿಸ್ತರಣೆ ಮಾಡುವ ಹುಚ್ಚು ಯಾಕೆ? ವಾಸ್ತವ ಸಂಗತಿಗಳ ಅರಿವಿದ್ದು ಕೂಡ ಮತ್ತೆ ಮತ್ತೆ ತೋಟ ವಿಸ್ತರಣೆ ಮಾಡಿ ಹಣ ಕೂಡಿಡುವೆ ಎಂಬ ಆಸೆ ಯಾಕೆ? ಒಂದೆಡೆ ಅಂತರ್ಜಲ ಬತ್ತಿದೆ. ಕೊಳವೆ ಬಾವಿ ಆಳಕ್ಕೆ ತೋಡಿದಷ್ಟೂ ನೀರಿಲ್ಲದ ಸಂಗತಿ. ಹತ್ತು ಹನ್ನೆರಡು ಸ್ಪ್ರಿಂಕ್ಲರ್ ಕೆಲಸ ಮಾಡುವ ಧಾರಾಳ ನೀರಿದ್ದವನಿಗೆ ಕಡಿಮೆಯಾಗುತ್ತಾ ಬಂದು ಪೂರ್ತಿ ಕೈಕೊಟ್ಟ ಅದೆಷ್ಟೊ ಪ್ರಸಂಗಗಳಿವೆ. ಇಂತಹ ಅನೇಕ ಉದಾಹರಣೆಗಳು ಇದ್ದಾಗಲೂ ತೋಟ ವಿಸ್ತರಣೆಯ ಭ್ರಮೆಯಿಂದ ನಮ್ಮ ಕೃಷಿಕರು ಹೊರಗೆ ಬರುವುದು ಯಾವಾಗ? ಇದ್ದ ತೋಟಗಳನ್ನು ನೋಡಿಕೊಳ್ಳಲು ಅವುಗಳ ಕೆಲಸಗಳನ್ನು ಗಮನಿಸಲು ಬೇಕಾದಷ್ಟು ಜನರಿಲ್ಲದೆ ಬಸವಳಿಯುತ್ತಿರುವ ಸಂದರ್ಭದಲ್ಲಿ ಮತ್ತೆ ಅಡಿಕೆ ಗಿಡಗಳಿಗಾಗಿ ಹಾತೊರೆಯುವ ಕೃಷಿಕರಿಗೆ ಏನೆನ್ನಬೇಕು?  ಹೊಸದಾಗಿ ತೋಟ ಮಾಡುವುದಕ್ಕಿಂತ ಇದ್ದ ತೋಟಗಳನ್ನು ಜೋಪಾನವಾಗಿ ನೋಡಿಕೊಳ್ಳುವುದರಲ್ಲಿ ಹೆಚ್ಚು ಲಾಭವಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಆಧುನಿಕ ಯುಗದಲ್ಲಿ ತಂತ್ರಜ್ಞ ದಲ್ಲಾಳಿಗಳು
July 30, 2025
11:21 PM
by: ಡಾ.ಚಂದ್ರಶೇಖರ ದಾಮ್ಲೆ
ಬದುಕು ಪುರಾಣ | ಯಕ್ಷಪ್ರಶ್ನೆಯೊಳಗೆ ಧರ್ಮ ಗೂಢತೆಯ ಗೊಂಚಲು
July 27, 2025
8:16 PM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಬೀಜದ ಖಾರದ ಕಡ್ಡಿ
July 26, 2025
7:27 AM
by: ದಿವ್ಯ ಮಹೇಶ್
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group