ಯುವಕರು ಕೃಷಿ ಭೂಮಿಯಿಂದ ದೂರವಾಗುತ್ತಿರುವುದೇಕೆ ?

June 4, 2019
12:00 PM

ಮೊನ್ನೆ ನನ್ನ ಯುವ ಮಿತ್ರರಲ್ಲಿ ಮಾತನಾಡುತ್ತಿರಬೇಕಾದರೆ , ಇಂದಿನ ದಿನಗಳಲ್ಲಿ ಯುವಕರು ಕೃಷಿಭೂಮಿ,ಕೃಷಿ ಕಾರ್ಯಗಳಿಂದ ಯಾಕೆ ದೂರವಾಗುತ್ತಿದ್ದಾರೇ ಎನ್ನುವ ವಿಚಾರ ನಮ್ಮೊಳಗೆ ಚರ್ಚೆಗೆ ಬಂತು. ಈ ಬಗ್ಗೆ ಮಾತನಾಡುತ್ತಾ ನಾವು ಹಂಚಿಕೊಂಡ ಕೆಲವೊಂದು ವಿಚಾರಗಳನ್ನು ವಿಸ್ತರಿಸಿಕೊಳ್ಳುವ ಒಂದು ಪ್ರಯತ್ನ ಈ ಬರವಣಿಗೆ ಅಷ್ಟೇ.

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಯಾವುದೇ ಸ್ವ ಉದ್ಯೋಗಗಳು,ಕಾರ್ಯಗಳು ಪರಂಪರಾಗತವಾಗಿ ಬಂದರೆ ಅದು ಸಲೀಸಾಗಿ ನಡೆದೀತು. ಯಾಕೆಂದರೆ ಸೋಲು ಗೆಲುವಿನ ನಾಡಿಗಳು,ಒಳಿತು ಕೆಡುಕುಗಳ ಒಳಹೊರಗುಗಳು ಒರೆಗೆ ಹಿಡಿದು ಸಾಬೀತಾಗಿರುತ್ತದೆ. ಬುನಾದಿ ಭದ್ರವಾಗಿರುತ್ತದೆ. ಯಾವ ರೀತಿ ಅಜ್ಜ ನಡೆಸಿದ ವ್ಯಾಪಾರ ಸಲೀಸಾಗಿ ಮೊಮ್ಮಕ್ಕಳು ನಡೆಸುತ್ತಾರೋ, ಯಾವ ರೀತಿ ವಕೀಲಜ್ಜನ ಆಫೀಸು ಮೊಮ್ಮಗ ಯಶಸ್ವಿಯಾಗಿ ನಡೆಸುತ್ತಿರುವನೋ, ಅಂತೆಯೇ ಕೃಷಿಯೂ ತಂದೆ ಮಗ ಮೊಮ್ಮಗನಾದಿಯಾಗಿ ಹರಿದು ಬಂದರೆ ಸಲೀಸಾಗದೇ. ಹೌದು, ಭಾರತ ಕೃಷಿ ಪ್ರಧಾನ ದೇಶವೆಂದು ಶಾಲಾದಿನಗಳಲ್ಲಿ ನಾವೆಲ್ಲರೂ ಓದಿ ಬಾಯಿಪಾಠ ಮಾಡಿದ ದಿನಗಳು ಇನ್ನೂ ಹಸಿರಾಗಿದೆ ಆದರೆ ನಾವೆಲ್ಲರೂ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದೇವೆ.ಯಾಕಾಗಿ….ಇದು ಇಂದಿನ ಯಕ್ಷ ಪ್ರಶ್ನೆ.

ಮೊದಲಾಗಿ ಮಕ್ಕಳನ್ನು ಬೆಳೆಸುವ ಹಂತದಲ್ಲೇ ಇಡೀ ಸಮಾಜ ಎಡವಿದೆ ನಮ್ಮ ಹಿರಿಯರು ನಡೆಸಿಕೊಂಡು ಬಂದ,ಹತ್ತಾರು,ಸಾವಿರಾರು ಜನರಿಗೆ ಉದ್ಯೋಗ ಕೊಡಬಲ್ಲ ,ಹೊಟ್ಟೆ ತುಂಬಿಸಬಲ್ಲ ಕೃಷಿ ಕ್ಷೇತ್ರವನ್ನು ನಾವು ಉದ್ಯಮದ ರೀತಿ ಪರಿಗಣಿಸಿಲ್ಲ ಮತ್ತು ಆ ಕ್ಷೇತ್ರವನ್ನು ಗೌರವಯುತವಾಗಿ ಪರಿಗಣಿಸಿಲ್ಲ. ಮಕ್ಕಳ ಎಳವೆಯ ವಿದ್ಯಾಭ್ಯಾಸದಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವ ,ಗೌರವ ಮೂಡಿಸುವ ಕೆಲಸಗಳಾಗುತ್ತಿಲ್ಲ. ಇಂದಿನ ವಿಧ್ಯಾಭ್ಯಾಸದಲ್ಲಿ ಕೃಷಿ ಪದವಿ ಸ್ನಾತಕೋತ್ತರ ಪದವಿಗಳಿವೆ. ಇವು ಆ ಪದವೀಧರರನ್ನು ಯಶಸ್ವಿ ಕೃಷಿಕನನ್ನಾಗಿಸುವಲ್ಲಿ ಸಫಲವಾಗಿಲ್ಲ. ಬದಲಾಗಿ ಆ ಪದವೀದರನೂ ಒಬ್ಬ ಕೃಷಿ ಹೆಸರಿನ ಉದ್ಯೋಗಿಯಾಗುವಂತೆ ಮಾಡುತ್ತಿದೆ ಅಷ್ಟೇ. ಕೃಷಿಯ ಬಗ್ಗೆ ವಾಸ್ತವವಾಗಿ ಆಲೋಚಿಸಿದರೆ ಕೃಷಿ ಇಲ್ಲದೆ ಯಾವ ಉದ್ಯೋಗ, ವ್ಯವಸ್ಥೆಗಳಿದ್ದರೂ ಪ್ರಯೋಜನವಿದೆಯೇ, ಹೊಟ್ಟೆ ಹಸಿವನ್ನು ಇತರ ಉದ್ಯೋಗಗಳು ತಣಿಸಬಲ್ಲವೇ….? ಹೀಗೆ ಯೋಚಿಸಿದರೆ ಕೃಷಿ ಎಲ್ಲಕ್ಕೂ ಪ್ರಥಮವಲ್ಲವೇ. ಹೊಟ್ಟೆ ತುಂಬಿದ ಮೇಲಲ್ಲವೇ ಇತರ ವಿಚಾರಗಳ ಆಲೋಚನೆ.ಆದರೂ ಕೃಷಿ ಅನಾದರಕ್ಕೊಳಪಡುತ್ತಿದೆ. ಇಂದಿನ ವಿದ್ಯಾಭ್ಯಾಸದ ಕ್ರಮ ಅಮೂಲಾಗ್ರವಾಗಿ ಬದಲಾವಣೆಯಾಗಬೇಕು. ಈ ಮೂಲಕ ನಮ್ಮ ಮನಸ್ಥಿತಿ ಬದಲಾಗಬೇಕು, ಅದಲ್ಲದೇ ನಮ್ಮ ವ್ಯವಸ್ಥೆಗಳ ಬಗ್ಗೆ ನಮಗಿರುವ ಕೀಳರಿಮೆ ತೊಲಗಬೇಕು. ಪೇಟೆ ಉದ್ಯೋಗ, ಜೀವನ ಶ್ರೇಷ್ಠ ,ಕೃಷಿ ಮತ್ತು ಕೃಷಿ ಪೂರಕ ಉದ್ಯೋಗ ಕೀಳೆಂಬ ಭಾವ ತೊಲಗಬೇಕು. ಇದು ಕೆಲವು ವರ್ಷಗಳಲ್ಲಿ ಆದ ಬದಲಾವಣೆ ಅಲ್ಲ,ಆದ್ದರಿಂದ ಈ ಮಾನಸಿಕತೆ ಬದಲಾಗಲು ಕೆಲವು ದಶಕಗಳು ಬೇಕಲ್ಲವೇ.

ಅದರೊಂದಿಗೆ ಕೃಷಿ ಕ್ಷೇತ್ರದ ಕೊರತೆಗಳ ಬಗ್ಗೆ ಮಕ್ಕಳೆದುರು ಪಟ್ಟಿಮಾಡುವುದು ಮತ್ತು ಈ ಕ್ಷೇತ್ರದಲ್ಲಿಯೂ ಬದುಕ ಕಟ್ಟಿಕೊಳ್ಳಬಹುದೆಂದು, ಆರ್ಥಿಕವಾಗಿ ದೃಢತೆ ಸಾಧಿಸಬಹುದೆಂದು ಮಕ್ಕಳಿಗೆ ತಿಳಿಹೇಳದಿರುವ, ಮಕ್ಕಳಿಗೆ ಉತ್ತೇಜನ ನೀಡದಿರುವ ಹಿರಿಯರು ಕೂಡಾ ಕೃಷಿಯ ಅವಗಣನೆಗೆ ಕಾರಣರಲ್ಲವೇ.
ಈ ಮಾನಸಿಕ ಅಸ್ಥಿರತೆ ಸಾಮಾಜಿಕ ಏರುಪೇರಿಗೆ ಕಾರಣವಾಗುತ್ತಿದೆ. ಮುಂದೊಂದು ದಿನ ಕೃಷಿ ತೀರಾ ಅವಗಣನೆಗೊಳಗಾಗಿ ದುಡಿವ ಕೈಗಳಿಲ್ಲದಾಗಿ,ಹಸಿವ ತಣಿಸುವ ದಾರಿಯಿಲ್ಲದಾಗಿ ,ಹಣವನ್ನು ತಿನ್ನಲು ಸಾಧ್ಯವಾಗದೆ ಆರ್ಥಿಕತೆ ಕುಸಿಯಬಹುದು. ಯಾವುದೇ ಉದ್ಯೋಗ, ಚಟುವಟಿಕೆಗಳು ನಿರಂತರತೆ ಇದ್ದಾಗ ಮಾತ್ರ ಸದಾ ಹಸಿರಾಗಿದ್ದೀತು.ಅದೇ ರೀತಿ ಕೃಷಿಯೂ ನಿರಂತರವಾಗಿ ಸಾಗಿದರೆ ಮಾತ್ರ ಉಳಿದೀತು.ಹಿರಿಯರು ಹೇಳುತಿದ್ದ ಮಾತು “ಕೈಯಲ್ಲಿದ್ದ ಹಕ್ಕಿಯನ್ನು ಬಿಟ್ಟು ಹಾರುತ್ತಿರುವ ಹಕ್ಕಿಯನ್ನು ಹಿಡಿಯಲು ಹೋದ ಪರಿಸ್ಥಿತಿ” ನಮ್ಮದಾಗುತ್ತಿದೆ. ಇಂದು ಮಕ್ಕಳು ಉದ್ಯೋಗಕ್ಕೆ ಹೋಗಲಿ ಆ ಮೇಲೆ ಬೇಕಾದಾಗ ಬಂದು ಕೃಷಿ ಸಾರಥ್ಯ ವಹಿಸಿಕೊಳ್ಳಬಹುದೆಂಬ ತರ್ಕ ಕಾರ್ಯಸಾಧುವಲ್ಲ. ನಿರಂತರತೆ ಇಲ್ಲದೆ ಕುಸಿದ ಕೃಷಿ ಹಾಗೂ ಕೃಷಿ ಆದಾಯ ಆಕರ್ಷಣೀಯವಾಗಿರದು.ಆದಾಯ ಇಲ್ಲದಾಗ ಮುಂದುವರಿಯಲು ಸಾಧ್ಯವಾಗದು.ಇದೊಂದು ನಿರಂತರ ಚಲನೆಯ ಚಕ್ರವಿದ್ದಂತೆ. ಸತತವಾಗಿ ನಡೆದರೆ ಮಾತ್ರ ಆಕರ್ಷಣೆ ಸಾಧ್ಯ .ಈ ಬಗ್ಗೆ ಸರಕಾರ,ಹಾಗೂ ಸಮಾಜ ಗಂಭೀರವಾಗಿ ಚಿಂತಿಸಬೇಕಾಗಿದೆ ಎನಿಸುವುದಿಲ್ಲವೇ.

“ಕಾಣದಾ ಕಡಲಿಗೇ….

ಹಂಬಲಿಸಿದೇ ಮನಾ…

ಕಾಣದಾ ಕಡಲಿಗೇ…

ಹಂಬಲಿಸಿದೇ ಮನಾ….

ಕಾಣಬಲ್ಲೆನೇ ಒಂದು ದಿನಾ…

ಕಡಲನೂ ಕೂಡಬಲ್ಲೆನೇ ಒಂದು ದಿನಾ”……

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ
September 19, 2026
12:06 PM
by: ದ ರೂರಲ್ ಮಿರರ್.ಕಾಂ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror