ಪುತ್ತೂರು: ಆಯುರ್ವೇದ ಪದ್ಧತಿಯು ಭಾರತವು ವಿಶ್ವಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಹಿಂದಿನ ಗ್ರಾಮೀಣ ಜೀವನಕ್ರಮದಲ್ಲಿ ಕೂಡು ಕುಟುಂಬವೆಂಬ ಪದ್ದತಿಯಿತ್ತು ಇದರಿಂದ ಮನೆಯಲ್ಲಿದ್ದ ಹಿರಿಯರು ಮನೆಮದ್ದು ಹಾಗೂ ಗಿಡಮೂಲಿಕೆಗಳನ್ನು ಬಳಸಿ ರೋಗವೇ ಬಾರದಂತೆ ತಡೆಯುತ್ತಿದ್ದರು. ಆದರೆ ಇಂದು ಜನರಲ್ಲಿ ಆಯುರ್ವೇದದ ಕುರಿತ ಒಲವು ಕಡಿಮೆಯಾಗಿ, ಆಧುನಿಕ ವೈದ್ಯ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ರೋಗ ಬಂದಮೇಲೆ ಮದ್ದು ಮಾಡುವಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತಕಾರ್ಯವಾಹ ಡಾ.ಜಯಪ್ರಕಾಶ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ಗ್ರಾಮ ವಿಕಾಸ ಸಮಿತಿ ಬನ್ನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪ್ರವರ್ತಿತ ವಿವೇಕಾನಂದ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಬನ್ನೂರಿನ ಗ್ರಾಮ ಪಂಚಾಯತ್ನಲ್ಲಿ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಇಂದಿನ ಜೀವನಕ್ರಮ ಹಾಗೂ ಆಹಾರ ಪದ್ದತಿಯ ಬದಲಾವಣೆಯಿಂದ ಆರೋಗ್ಯ ಹದಗೆಟ್ಟಿದೆ. ಇದಕ್ಕೆ ಪೂರಕವೆಂಬಂತೆ ಪರಿಸರ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿದೆ. ಆದ್ದರಿಂದ ನಮ್ಮ ಜೀವನಕ್ರಮವನ್ನು ಬದಲಾಯಿಸಿ ಸಾಂಪ್ರದಾಯಿಕ ಆಹಾರ ಪದ್ದತಿಯನ್ನೇ ಅಳವಡಿಸಿಕೊಳ್ಳಬೇಕು ಎಂದರು. ಭಾರತವು ಗ್ರಾಮಗಳಿಂದ ಕೂಡಿದ ದೇಶವಾಗಿದ್ದು ಗ್ರಾಮವಾಸಿಗಳ ಸಮೃದ್ಧ ಬದುಕಿನಿಂದಾಗಿ ದೇಶವು ಸುಭದ್ರವಾಗಿತ್ತು. ಆದರೆ ಇಂದು ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ವಿಕಾಸದ ಪರಿಕಲ್ಪನೆಯ ಯೋಜನೆಗಳು ಜಾರಿಯಾದಾಗ ಗ್ರಾಮಗಳ ಅಭಿವೃದ್ಧಿಯು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಬಗೆಗೆ ಒಲವು ಮೂಡಿಸಲು ಗ್ರಾಮವಿಕಾಸದ ಕಾರ್ಯಗಳು ಪೂರಕ ಎಂದರು.
ಮುಖ್ಯ ಅತಿಥಿಯಾಗಿದ್ದ ನಂತೂರು ಭಾರತೀ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ಎ. ಮಾತನಾಡಿ, ಕುಟುಂಬ ಪದ್ಧತಿಯಿಂದ ಮಾತ್ರ ಗ್ರಾಮಗಳು ಬೆಳೆಯಲು ಸಾಧ್ಯ. ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಸಂಸ್ಕಾರ ಲಭಿಸಿದರೆ ಗ್ರಾಮಗಳ ಕಲ್ಯಾಣವಾಗುತ್ತದೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಸ್ವಚ್ಛ ಮನಸ್ಸುಗಳಿಂದ ಸ್ವಚ್ಛ ಗ್ರಾಮಗಳ ನಿರ್ಮಾಣ ಸಾಧ್ಯ ಎಂದರು.
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಣಿ ಡಿ. ಗಾಣಿಗ ಮಾತನಾಡಿ, ಕಳೆದ ಎರಡು ವರ್ಷಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮವಿಕಾಸ ಯೋಜನೆಯು ಗ್ರಾಮದ ಅಭ್ಯುದಯಕ್ಕೆ ಸಹಕಾರಿಯಾಗಿದೆ. ಈ ಮೂಲಕ ಇಂತಹ ಹಲವು ಯೋಜನೆಗಳನ್ನು ಸುಲಲಿತವಾಗಿ ಅನುಷ್ಠಾನಗೊಳಿಸಲು ಸಹಾಯಕವಾಗಿದೆ.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಆಯುರ್ವೇದ, ಯೋಗ ಜನರ ಜೀವನಕ್ಕೆ ಪೂರಕವಾಗಿದೆ. ಆಧುನಿಕ ವೈದ್ಯ ಪದ್ಧತಿಯಿಂದ ಜನರು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಇದನ್ನರಿತ ಹಲವು ದೇಶಗಳು ಆಯುರ್ವೇದ ಪದ್ದತಿಯ ಮೊರೆ ಹೋಗುತ್ತಿದೆ. ಆದರೆ ನಮ್ಮ ದೇಶದ ಆಯುರ್ವೇದ ಪದ್ದತಿಯಿಂದ ನಾವೇ ವಿಮುಖರಾಗುತ್ತಿರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್, ವಿವೇಕಾನಂದ ಆಯುರ್ವೇದ ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷ ನನ್ಯಅಚ್ಚ್ಯುತ ಮೂಡೆತ್ತಾಯ, ಬನ್ನೂರಿನ ಗ್ರಾಮವಿಕಾಸ ಸಮಿತಿಯ ಅಧ್ಯಕ್ಷ ಸೇಡಿಯಾಪು ಜನಾರ್ಧನ ಭಟ್, ಬನ್ನೂರು ಪಂಚಾಯತ್ನ ಉಪಾಧ್ಯಕ್ಷ ಚಿನ್ನಪ್ಪಗೌಡ ಕೊಲ್ಯ, ವಿವೇಕಾನಂದ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ.ರೂಪಶ್ರೀ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಸಂಚಾಲಕ ಸಂತೋಷ್ ಬಿ. ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮೇಘ ಮತ್ತು ನಯನ ಪ್ರಾರ್ಥಿಸಿದರು. ಗ್ರಾಮ ವಿಕಾಸ ಸಮಿತಿಯ ಸಂಚಾಲಕ ರತ್ನಾಕರ ಪ್ರಭು ಕುಂಜೂರು ಸ್ವಾಗತಿಸಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ. ಮಂಜುನಾಥ್ ವಂದಿಸಿದರು. ಉಪನ್ಯಾಸಕಿ ಯಶವಂತಿ ಕಾರ್ಯಕ್ರಮ ನಿರೂಪಿಸಿದರು.