ಪುತ್ತೂರು: ನಮ್ಮ ಜೀವನದಲ್ಲಿ ಭಾಷೆಯ ಸ್ಥಾನ ಮಹತ್ವವಾದುದು. ನಮ್ಮ ಅಗತ್ಯಗಳನ್ನು ಇತರರಿಗೆ ತಿಳಿಸುವುದಲ್ಲಿ ಸಂವಹನ ಎಷ್ಟು ಪ್ರಾಶಸ್ತ್ಯವನ್ನು ಪಡೆಯುತ್ತದೆಯೋ ಅದರಂತೆ ಒಂದು ಭಾಷೆಯ ಅಗತ್ಯವು ನಮಗಿದೆ. ನಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೂ ಒಂದು ಮಾಧ್ಯಮವಾಗಿ ಇದು ಕಾರ್ಯ ನಿರ್ವಹಿಸುತ್ತದೆ ಎಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ಕಾಲೇಜಿನ ಸಂಸ್ಕೃತ ಸಂಘ ವಿಕಾಸಂ ಹಾಗೂ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ‘ಪ್ರತಿಭೋತಃ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಸಾಧನೆಯ ಹಾದಿಯಲ್ಲಿ ಸಾಗುವಾಗ ಅನೇಕ ಕಷ್ಟಗಳು ಎದುರಾಗುತ್ತದೆ. ಈ ಸಂದರ್ಭದಲ್ಲಿ ಯಾರು ಆ ಕಷ್ಟಗಳನ್ನು ಎದುರಿಸಿ ಮುನ್ನಡೆಯುತ್ತಾನೋ ಅವನೇ ನಿಜವಾದ ಸಾಧಕ. ಈ ಸಮಯದಲ್ಲಿ ನಿರೀಕ್ಷೆ ಮತ್ತು ವಾಂಛೆ ಎಷ್ಟು ನಮ್ಮಲ್ಲಿ ಹೆಚ್ಚಾಗಿರುತ್ತದೆಯೋ ಅಷ್ಟು ನಮಗೆ ಒಳ್ಳೆಯದು. ಇದರಿಂದ ಸಾಧನೆಯ ಹಾದಿಯು ಸುಲಭವಾಗಿರುತ್ತದೆ. ಯಾವುದೇ ಚಿಕ್ಕ ವಿಷಯವಾದರೂ ಅಥವಾ ಸಾಧನೆಯೇ ಚಿಕ್ಕದಾಗಿದ್ದರೂ ಕೂಡ ಅದನ್ನು ದೊಡ್ಡ ಸಾಧನೆಯೆಂದು ತಿಳಿಯಬೇಕು, ಇದರಿಂದ ನಮ್ಮ ಆತ್ಮ ವಿಶ್ವಾಸವು ಹೆಚ್ಚಾಗಿ ಇನ್ನೂ ಸಾಧನೆಯಲ್ಲಿ ತೊಡಗಿಸುವಂತೆ ಪ್ರೇರೇಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್ ಮಾತನಾಡಿ, ಪ್ರಾಚೀನ ಭಾಷೆಯಾದ ಸಂಸ್ಕೃತವು ದೇವ ಭಾಷೆ ಎಂದೇ ಪ್ರಸಿದ್ಧವಾಗಿದೆ. ಇಂದಿಗೂ ಆ ಭಾಷೆಯನ್ನು ಗೌರವಿಸುವವರು ಹಾಗೂ ಸಂವಹನ ಮಾಧ್ಯಮವಾಗಿ ಬಳಸುವುದರ ಮೂಲಕ ಒಂದು ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳು ಈ ಭಾಷೆಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಆರಿಸಿಕೊಂಡು ಉತ್ತಮ ಜೀವನವನ್ನು ರೂಪಿಸಬಹುದು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ. ಎಚ್. ಜಿ. ಶ್ರೀಧರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಕೃತ ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಎಂ. ಕೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಕೃತ ಸಂಘದ ಅಧ್ಯಕ್ಷೆ ಸ್ನೇಹಗೌರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಜಯಶ್ರೀ ಎಂ. ಹಾಗೂ ಆಶಾಲಕ್ಷ್ಮೀ ಪ್ರಾರ್ಥಿಸಿದರು. ಸ್ವಾತಿ ಬಿ. ಸ್ವಾಗತಿಸಿದರು. ಧನ್ಯಶ್ರೀ ಸಿ.ಕೆ. ವಂದಿಸಿ, ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…