ಬೆಳ್ಳಾರೆ: ಸೋಮವಾರ ರಾತ್ರಿ ಅಕ್ಷರಷ ಭಕ್ತಿಯ ಶಕ್ತಿ ಭಜನಾ ತಂಡವೊಂದರಿಂದ ಸಾಬೀತುಗೊಂಡಿದೆ. ಲಕ್ಷ್ಮೀ ಪೂಜೆ ಹಾಗು ಅಂಗಡಿ ಪೂಜೆ ಪ್ರಯುಕ್ತ ಸ್ಥಳೀಯ ತಂಡವೊಂದರಿಂದ ನೃತ್ಯ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಜನೆ ನಡೆಯುತ್ತಿದ್ದ ಸಂದರ್ಭ ಗುಡುಗು ಮಿಂಚಿನೊಂದಿಗೆ ವರುಣನ ಅರ್ಭಟ ಜೋರಾಗಿ ಪ್ರಾರಂಭವಾದಾಗ ಎದೆಗುಂದದೆ ಈ ಭಜನಾ ತಂಡ ಭರ್ಜರಿ ಮಳೆಯ ನಡುವೆ ತಮ್ಮ ಅಚಲ ಭಕ್ತಿಯ ಶಕ್ತಿಯೇನೆಂಬುದನ್ನು ತೋರಿಸಿಕೊಟ್ಟರು.
ಕಳಂಜ ಗ್ರಾಮದ ಕೋಟೆಮುಂಡುಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೊಸೈಟಿಯಲ್ಲಿ ಅಂಗಡಿಪೂಜೆ ನಡೆಯುತ್ತಿದ್ದ ಸಂದರ್ಭ ಇದೇ ಊರಿನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯಿಂದ ಸೊಸೈಟಿಯ ಹೊರಾವರಣದಲ್ಲಿ ನೃತ್ಯ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವೈದ್ಯ ಹಾಗು ಹವ್ಯಾಸಿ ಬರಹಗಾರ ಡಾ| ಶ್ರೀಕೃಷ್ಣ ಚೊಕ್ಕಾಡಿ ಭಜನಾ ಸರಣಿಯನ್ನು ಉದ್ಘಾಟಿಸಿ ಬಳಿಕ ನೃತ್ಯ ಭಜನೆಯನ್ನು ಪ್ರಾರಂಭಿಸಲಾಯಿತು. ಭಜನೆ ನಡೆಯುತ್ತಿದ್ದಂತೆ ಮಧ್ಯೆ ಗುಡುಗು ಸಿಡಿಲಿನೊಂದಿಗೆ ಹಠಾತ್ತನೆ ಮಳೆ ಪ್ರಾರಂಭವಾದರೂ ಚಂಚಲಗೊಳ್ಳದೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿಯ ಸದಸ್ಯರು ವರುಣನಿಗೆ ಸವಾಲೆಸೆಯುವಂತೆ ನೃತ್ಯ ಭಜನೆಯನ್ನು ಮುಂದುವರಿಸಿದ್ದು, ನೆರೆದಿದ್ದವರಲ್ಲಿಯೂ ಪುಳಕಿತ ಉಂಟಾಗುವಂತೆ ಮಾಡಿದೆ. ಇದಕ್ಕೆ ಇನ್ನಷ್ಟು ಉತ್ತೇಜಿಸಿದ ಸಂಘದ ನಿರ್ದೇಶಕರು, ಊರವರು ತಾವು ದನಿಯಾಗಿ ಭಜನಾ ತಂಡಕ್ಕೆ ಇನ್ನಷ್ಟು ಹುರಿದುಂಬಿಸಿದರು.
ನೃತ್ಯ ಭಜನೆಗಾಗಿ ರೂಪುಗೊಂಡ ವಿಶೇಷ ತಂಡ: ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ತಂಡವು ನೃತ್ಯ ಭಜನೆಗೆಂದೇ ರೂಪುಗೊಂಡಿದೆ. ಊರು ಹಾಗು ಪರವೂರು ಸೇರಿದಂತೆ ಸ್ಥಳೀಯ ಗ್ರಾಮಗಳಲ್ಲಿ ವಿಶೇಷ ಉತ್ಸವಗಳಾದಾಗ, ನವರಾತ್ರಿ ಹಾಗು ಜಾತ್ರೆಗಳ ಸಂದರ್ಭ ಈ ತಂಡವು ಅಲ್ಲಿ ನೃತ್ಯ ಭಜನೆ ಸೇವೆಯನ್ನು ಸಲ್ಲಿಸುತ್ತಿರುತ್ತದೆ. ವಿಶೇಷವಾಗಿ ಗಣೇಶೋತ್ಸವ ಸಂದರ್ಭ ಈ ಭಜನಾ ತಂಡದಿಂದ ನಡೆಯುವ ಬೀದಿ ನೃತ್ಯ ಭಜನೆ ಸೇವೆ ಹೆಸರುವಾಸಿಯಾಗಿದೆ.
ಶ್ರೀ ಮಂಜುನಾಥೇಸ್ವರ ಭಜನಾ ಮಂಡಳಿ 2016ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ವರ್ಷ ಅತೀ ಹೆಚ್ಚು ಸಕ್ರೀಯವಾದ ಭಜನಾ ತಂಡವೆಂದು ಖ್ಯಾತಿ ಪಡೆದಿದೆ. ತಂಡದಲ್ಲಿ ಮಹಿಳೆಯರು, ಪುಟ್ಟ ಮಕ್ಕಳು, ಕಳಂಜ ಯುವಕ ಮಂಡಲದ ಸದಸ್ಯರು ಸೇರಿ ಒಟ್ಟು 30ಕ್ಕೂ ಅಧಿಕ ಸದಸ್ಯರು ಇದ್ದಾರೆ. ಪ್ರತೀ ವರ್ಷವೂ ವಿಶೇಷ ಉತ್ಸವ, ಕಾರ್ಯಕ್ರಮಗಳ ಸಂದರ್ಭ ತಂಡದ ಸದಸ್ಯರಿಗೆ ನೃತ್ಯ ಭಜನೆಗಾಗಿ ತರಬೇತಿಯನ್ನೂ ನೀಡಲಾಗುತ್ತಿದ್ದು, 15 ದಿನಗಳ ಮೊದಲೇ ತರಬೇತಿಯನ್ನು ಆರಂಭಿಸಲಾಗುತ್ತಿದೆ.
ತಂಡದಲ್ಲಿ ಹವ್ಯಾಸಿ ಹಾಡುಗಾರರು, ಕೃಷಿಕರು ಸೇರಿದಂತೆ ವಿವಿಧ ರಂಗದ ಉದ್ಯೋಗಿಗಳಿದ್ದಾರೆ. ಇತ್ತೀಚೆಗೆ ಬಾಳಿಲ ಗಣೇಶೋತ್ಸವ ಹಾಗು ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನವರಾತ್ರಿ ಉತ್ಸವ ಸಂದರ್ಭ ತಮ್ಮ ಪ್ರತಿಭೆಯಿಂದ ಸಾರ್ವಜನಿಕರ ಶ್ಲಾಘನೆಗೂ ಪಾತ್ರರಾಗಿದ್ದಾರೆ.
” ಭಜನೆ ಗ್ರಾಮೀಣ ಜನತೆಯ ಏಕಾಗ್ರತೆಗೆ ಹಿಡಿದ ಕೈಗನ್ನಡಿ. ಮಳೆಯ ಮಧ್ಯೆಯೂ ತಮ್ಮ ಭಕ್ತಿಯಲ್ಲಿ ಚಂಚಲತೆಯನ್ನು ಹತ್ತಿರಕ್ಕೂ ಸುಳಿಯದಂತೆ ತಮ್ಮ ಭಕ್ತಿಯಲ್ಲಿ ಭಜನಾ ತಂಡವೂ ತಲ್ಲೀನರಾಗಿದ್ದನ್ನು ಕಂಡು ಖುಷಿಯಾಯಿತು. ಭಜನೆಯಲ್ಲಿ ಗ್ರಾಮೀಣತೆಯ ಆಧಾರವಾದ ಜಾನಪದ ಶೈಲಿಯನ್ನು ಅಳವಡಿಸಲು ಪ್ರಯತ್ನಿಸಿದರೆ ಇನ್ನಷ್ಟು ಅಂದಗಾಣಬಹುದು.”
– ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷ- ದೆಹಲಿ ಕರ್ನಾಟಕ ಸಂಘ
” ಭಕ್ತಿಯಿಂದ ಮಾಡಿದ ಸೇವೆಗೆ ಭಗವಂತನು ಸುಪ್ರೀತನಾಗುವನೆಂಬ ನಂಬಿಕೆ ನಮ್ಮ ಭಜನಾ ತಂಡದ್ದಾಗಿದೆ. ಭಗವಂತನ ಆರಾಧನೆಗೆ ಭಜನೆಯೂ ಒಂದು ವಿಧಾನವಾಗಿದ್ದು, ಭಕ್ತಿಯ ಭಜನೆಯಲ್ಲಿ ನಾವೆಲ್ಲ ಸಂತೋಷ ನೆಮ್ಮದಿ ಕಾಣುತ್ತೇವೆ”
– ದಿನೇಶ ಪಾಂಡಿಪಾಲು, ಕಾರ್ಯದರ್ಶಿ ಶ್ರೀಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…
ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…