Advertisement
ಕಲೆ-ಸಂಸ್ಕೃತಿ

ಸಂಗೀತಾಸಕ್ತರನ್ನು ಮಂತ್ರ ಮುಗ್ಧರನ್ನಾಗಿಸಿದ ಸಂಗೀತ ಕಛೇರಿ

Share

ಸುಳ್ಯ : ಪಡುವಣ ದಿಕ್ಕಿನ ಅಲೆಗಡಲಲ್ಲಿ ಸೂರ್ಯನು ಅಸ್ತಮಯವಾಗುತ್ತಿದ್ದಂತೆ ಆರಂಭಗೊಂಡ ಸಂಗೀತ ಸಾಗರದ ನಾದ ತರಂಗದ ಅಲೆಯಲ್ಲಿ ಸಂಗೀತಾಸಕ್ತರು ಅಕ್ಷರಷಃ ತೇಲಿ ಹೋದರು. ಶುದ್ಧ ಸಂಗೀತದ ರಸದೌತಣವನ್ನು ಉಣಬಡಿಸಿದ ಸಂಗೀತ ಮಾಂತ್ರಿಕ ವಿದ್ವಾನ್ ಶಂಕರನ್ ನಂಬೂದಿರಿ ಅವರ ಸಂಗೀತ ಕಛೇರಿಯು ಸಂಗೀತ ಪ್ರಿಯರನ್ನು ಮೋಡಿ ಮಾಡಿತು. ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವಾರ್ಷಿಕ ಸಂಗೀತೋತ್ಸವದ ಅಂಗವಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ಏರ್ಪಡಿಸಿದ ಸಂಗೀತೋತ್ಸವದ ಮುಖ್ಯ ಕಛೇರಿ ಸಂಗೀತ ಪ್ರಿಯರ ಮನದಾಳದಲ್ಲಿ ಬಹು ಕಾಲ ಉಳಿಯುವಂತೆ ಮನಮೋಹಕವಾಗಿ ಮೂಡಿ ಬಂತು.ಕಿವಿಯನ್ನು ಇಂಪಾಗಿಸಿದ ಸಂಗೀತ ರಸ ಸಂಜೆ ಹೃದಯ ತಾಳವನ್ನು ಅರಳಿಸಿತು.

ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ದೇವಿ ಒಲಿದ ಪ್ರಸಿದ್ಧ ಸಂಗೀತಗಾರರೂ, ಹಿನ್ನಲೆ ಗಾಯಕರೂ ಆಗಿರುವ ಶಂಕರನ್ ನಂಬೂದಿರಿ ಅವರ ಹಾಡುಗಾರಿಕೆ ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ಸುಳ್ಯದ ಸಂಗೀತಾಸಕ್ತರಿಗೆ ಹೊಸತೊಂದು ಅನುಭವವನ್ನು ಕೊಡ ಮಾಡಿತು. ಮೂರೂವರೆ ಗಂಟೆಗೂ ಹೆಚ್ಚು ಸಮಯ ತನ್ನ ಅದ್ಭುತ ಕಂಠಸಿರಿ ಮತ್ತು ಸಂಗೀತದ ಆಳ ಅನುಭವದಿಂದ ಲೀಲಾಜಾಲವಾಗಿ ಸಂಗೀತ ಸುಧೆ ಹರಿಸಿದ ಶಂಕರನ್ ನಂಬೂದಿರಿ ನೆರೆದ ಪ್ರೇಕ್ಷಕರನ್ನು ಸಂಗೀತ ಲೋಕದ ಆಳಕ್ಕೆ ಕರೆದೊಯ್ದರು. ಹಂಸಧ್ವನಿ ರಾಗದದಲ್ಲಿ ಆದಿ ತಾಳದಲ್ಲಿ ಕನಕದಾಸರು ರಚಿಸಿದ ಕೃತಿ ನಮ್ಮಮ್ಮ ಶಾರದೆ.. ಹಾಡಿನ ಮೂಲಕ ಕಛೇರಿ ಆರಂಭಿಸಿದ ಅವರು ಖಮಾಚ್ ರಾಗ ಮತ್ತು ಆದಿ ತಾಳದಲ್ಲಿ ಮೈಸೂರು ವಾಸುದೇವಾಚಾರ್ಯರ ಬ್ರೋಚೇವಾರೆ ವರುರಾ.. ಕೀರ್ತನೆ ಮೂಲಕ ಮುಂದುವರಿದು, ಆರಭಿ ರಾಗದ ಆದಿ ತಾಳದಲ್ಲಿ ತ್ಯಾಗರಾಜ ಸ್ವಾಮಿಗಳ ನಾದಸುಧಾರಸ.. ಕೀರ್ತನೆ ಮೂಲಕ ಸಂಗೀತ ರಸಧಾರೆ ಹರಿಸಿದರು. ರವಿಚಂದ್ರಿಕೆ ರಾಗ, ಆದಿ ತಾಳದಲ್ಲಿ ಚುಟುಕಾದ ಆಲಾಪನೆಯ ತ್ಯಾಗರಾಜರ ಮಾಕೇಲರಾ… ಷಣ್ಮುಖ ಪ್ರಿಯ ರಾಗದ ವದ್ದನೆವರು.. ವಿಸ್ತಾರವಾದ ಆಲಾಪನೆ, ನೆರವಲ್, ಸ್ವರ ಪ್ತಸಾರದ ತನಿ ಆವರ್ತನದಲ್ಲಿ ಕೇಳುಗರನ್ನು ಸಂತಸದಲ್ಲಿ ತೇಲಿಸಿತು. ಕಲ್ಯಾಣಿ ರಾಗದ ಮಿಶ್ರಛಾಪು ತಾಳದ ಎಲ್ಲಾ ರಸವನ್ನು ಹರಿಸಿ ಹಾಡಿದ ನಂಬಿ ಕೆಟ್ಟವರಿಲ್ಲವೋ.. ಹಾಡು ಕೇಳುಗರನ್ನು ತಲೆದೂಗುವಂತೆ ಮಾಡಿತು. `ಸೋಮಸುಂದರ ಪ್ರಿಯ ವಾಮ ಭಾಗೇಶ್ರೀ ರಾಜ ಮಾತಂಗಿ ಪಾಹಿಮಾಂ.. ಭಾಗೇಶ್ರೀ ರಾಗ, ಖಂಡ ತ್ರಿಪುಟ ತಾಳದಲ್ಲಿ ರಾಗಂ ತಾನಂ ಪಲ್ಲವಿ ಮೋಡಿ ಮಾಡಿತು. ರಾಗ ಮಾಲಿಕೆಯಲ್ಲಿ ಕಾಪಿ ಹಾಗು ದೇಶ್ ರಾಗಗಳು ಭಾವ ಪೂರ್ಣವಾಗಿ ಹೊರ ಹೊಮ್ಮಿದವು. ಬರ್ ಸೇ ಬದರಿಯಾ.. ಮೀರಾ ಭಜನ್, ಹಿಂದೋಳದಲ್ಲಿ ದಾಸ ದಾಸರ.. ಕೀರ್ತನೆ, ಬೇಹಾಗ್ ರಾಗದ ಪಾಹಿಕೃಷ್ಣ.. ಮನಮೋಹಕವಾಗಿ ಮೂಡಿ ಬಂದಿತು. ಸಿಂಧು ಭೈರವಿ ರಾಗದ ಲಾಲ್ ಗುಡಿ ಜಯರಾಮನ್ ಅವರ ತಿಲ್ಲಾನದೊಂದಿಗೆ ಕಛೇರಿಗೆ ಮಂಗಳ ಹಾಡಿದರು.

ತ್ರಿಸ್ಥಾಯಿ ಸಂಚಾರದಲ್ಲಿನ ಹಿಡಿತ ದೃಢವಾದ ಶಾರೀರದೊಂದಿಗೆ ರಾಗದ ಒಳ ಹೊರಹುಗಳು ಸ್ಪಷ್ಟವಾಗಿ ಗೋಚರಿಸಿದ ಕಛೇರಿಯು ಅದ್ಭುತ ಸಂಗೀತ ಲೋಕವನ್ನು ತೆರೆದಿಟ್ಟಿತು. ಯಾವುದೇ ಸಂಗೀತ ಕಛೇರಿ ಕೇಳುಗರ ಮನ ಗೆಲ್ಲಲು ಹಾಡುಗಾರನಂತೆ ಪಕ್ಕ ಮೇಳದವರ ಕೊಡುಗೆಯೂ ದೊಡ್ಡದಿದೆ. ತಮ್ಮ ಅದ್ಭುತ ಕಲಾ ಪಾಂಡಿತ್ಯ, ಸಂಗೀತ ಜ್ಞಾನ ಮತ್ತು ಅನನ್ಯ ಪ್ರತಿಭೆ ಮತ್ತು ಅನುಭವವನ್ನು ಧಾರೆಯೆರೆದ ಹಿಮ್ಮೇಳ ಕಲಾವಿದರು ಕಚೇರಿಯನ್ನು ಮೇರುಸ್ತರಕ್ಕೇರಿಸಿತು. ಕಲಾವಿದರನ್ನು ಅನುಸರಿಸುತ್ತಾ ಅದ್ಭುತ ಬೆರಳ್ಗಾರಿಕೆಯಿಂದ ವಯಲಿನ್ ನಲ್ಲಿ ಸಾಥ್ ನೀಡಿದ ವಿದ್ವಾನ್ ಮೈಸೂರು ಶ್ರೀಕಾಂತ್, ಪ್ರಧಾನ ಕಲಾವಿದರ ಮನೋಧರ್ಮವನ್ನು ಅರಿತು ಮೃದಂಗ ವಾದನದ ಮೂಲಕ ನಾದ ವಿಸ್ಮಯ ಸೃಷ್ಠಿಸಿದ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಉತ್ತಮ ಲಯ ವಿನ್ಯಾಸದೊಂದಿಗೆ ಘಟಂ ವಾದನದಲ್ಲಿ ನಾದಲೋಕ ಸೃಷ್ಠಿಸಿದ ವಿದ್ವಾನ್ ಉಡುಪಿ ಶ್ರೀಧರ್ ಕೈಚಳಕ ಕಚೇರಿಯ ಕಳೆ ಹೆಚ್ಚಿಸಿತು. ಮೂವರು ಕಲಾವಿದರೂ ಕಚೇರಿಯುದ್ಧಕ್ಕೂ ವಯಲಿನ್, ಮೃದಂಗ, ಘಟಂನಲ್ಲಿ ತಮ್ಮ ಪ್ರತಿಭೆ ಮತ್ತು ಕೈಚಳಕವನ್ನು ತೋರ್ಪಡಿಸಿದ್ದು ವಿಶೇಷತೆಯಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

15 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago