ಸುಜ್ಞಾನದ ಬೆಳಕು ಹರಿಯಲು ವಿಜ್ಞಾನದ ಆಲಯ…! : ಆಧ್ಯಾತ್ಮಿಕ ಸ್ಪರ್ಶ ನೀಡುವ ಶಿಕ್ಷಣವಿಲ್ಲಿ…..

July 16, 2019
8:00 AM

ಸೂರ್ಯ ಎನ್ನುವುದು ಸತ್ಯ. ಸೂರ್ಯ ದೇವರು ಎಂದು ನಂಬುವವರೂ ನಾವು. ಅದರ ಜೊತೆಗೆ ಸೂರ್ಯ ವಿಜ್ಞಾನ ಎನ್ನುವುದೂ ಸತ್ಯ. ಸೂರ್ಯನೇ ಈ ಜಗತ್ತಿಗೆ ಎಲ್ಲವೂ  ಎನ್ನುವುದು ನಿತ್ಯ ಸತ್ಯ. ಹೀಗಾಗಿ ಸೂರ್ಯ ವಿಜ್ಞಾನವೂ ಹೌದು, ಸತ್ಯವೂ ಹೌದು, ಆಧ್ಯಾತ್ಮವೂ ಹೌದು. ಏನೇ ಆದರೂ ಸೂರ್ಯನ ಮೂಲಕ ಒಳ್ಳೆಯ ಬೆಳಕು ನಮ್ಮೊಳಗೆ ಹರಿಯಬೇಕು, ಅದು ಸುಜ್ಞಾನದ ಬೆಳಕಾಗಬೇಕು. ಈ ಬೆಳಕು ಹರಿಯಲು ಒಂದು ಆಲಯವನ್ನು ನಿರ್ಮಾಣ ಮಾಡಿದ್ದಾರೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ. ಈ ಕಾರಣದಿಂದ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಎನ್ನಬಹುದು, ವಿಜ್ಞಾನ ಎನ್ನಬಹುದು ಇದೆರಡೂ ಮಿಳಿತವಾದ ಶಿಕ್ಷಣ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತಿದೆ. ಶಿಕ್ಷಣಕ್ಕೆ, ಏಕಾಗ್ರತೆಗೆ ಧ್ಯಾನ, ವ್ಯಾಯಾಮ ಹಾಗೂ ಮಾನಸಿಕ ದೃಢತೆ, ಆರೋಗ್ಯ, ಪಾಸಿಟಿವ್ ಯೋಚನೆ, ಪಾಸಿಟಿವ್ ವಾತಾವರಣ  ಮುಖ್ಯ ಎನ್ನುವುದೂ ಸತ್ಯ.  ಈ ಪಾಸಿಟಿವ್ ಸಂಗತಿಯ ಬಗ್ಗೆ ಈ ದಿನದ ಫೋಕಸ್…

Advertisement
Advertisement

 

ಸುಳ್ಯ: ಶಾಲೆಯ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ  ಸ್ಪರ್ಶವನ್ನು ನೀಡಬೇಕೆಂಬ ಉದ್ದೇಶದಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಬಯಲು ಸೂರ್ಯಾಲಯವನ್ನು ಸ್ಥಾಪಿಸಲಾಗಿದೆ. ಎಲ್ಲಾ ಜೀವ ಜಾಲಗಳಿಗೂ, ಪ್ರಕೃತಿಗೂ ಸೂರ್ಯನೇ ಜೀವಾಳ. ಜ್ಞಾನ ಚಕ್ಷುವಾದ ಸೂರ್ಯದೇವನನ್ನು ಆರಾಧಿಸುವ ಮೂಲಕ ಆಧ್ಯಾತ್ಮಿಕತೆಯ ಧನ್ಯತೆ ಮತ್ತು ಶಿಕ್ಷಣದ ಉನ್ನತೀಕರಣಕ್ಕೆ ಪ್ರೇರಣೆ ಪಡೆಯಲು ಸಮೃದ್ಧ ಪ್ರಕೃತಿಯ ಮಧ್ಯೆ ಇರುವ ಸ್ನೇಹ ಶಾಲೆಯ ಆವರಣದಲ್ಲಿ ಬಯಲು ಸೂರ್ಯಾಲಯವನ್ನು ಮೂರು ವರ್ಷದ ಸ್ಥಾಪನೆ ಮಾಡಲಾಗಿದೆ. ಇದೀಗ ಈ ಸೂರ್ಯಾಲಯವು ಶಾಲೆಗೆ ಮುಕುಟ ಮಣಿಯಂತಿದ್ದು ಶಾಲೆಗೆ ಆಗಮಿಸುವವರನ್ನು ಆಕರ್ಷಿಸುತ್ತಿದೆ. ಹಲವೆಡೆ ದೇವಾಲಯಗಳನ್ನು ನಿರ್ಮಿಸಿ ಸೂರ್ಯ ದೇವನನ್ನು ಆರಾಧಿಸಲಾಗುತ್ತಿದ್ದರೂ ಜ್ಞಾನ ದೇಗುಲದ ಎದುರಿನಲ್ಲಿ ಬಯಲು ಸೂರ್ಯಾಲಯವನ್ನು ಸ್ಥಾಪಿಸಿರುವುದು ವಿನೂತನ ಕಲ್ಪನೆ. ಜ್ಞಾನ ಕಲಶ ಕಾರ್ಯಕ್ರಮದ ಪ್ರಕಾರ ಬಯಲು ಸೂರ್ಯ ಆಲಯವನ್ನು ಸ್ಥಾಪಿಸಲಾಗಿದೆ. ಜೊತೆಗೆ ಯೋಗ ಕೇಂದ್ರವನ್ನೂ ತೆರೆಯಲಾಗಿದೆ. ಸ್ನೇಹ ಶಾಲೆಗೆ ಆಗಮಿಸುವವರನ್ನು ಪ್ರಕೃತಿಯ ಮಧ್ಯೆ ಕಂಗೊಳಿಸುವ ಸೂರ್ಯ ಆಲಯ ಸೂಜಿಗಲ್ಲಿನಂತೆ ಸೆಳೆಯುತಿದೆ.

 

ಸ್ನೇಹ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಯೋಗ ತರಗತಿಗಳು ನಡೆಯುತ್ತಿದೆ. ಸೂರ್ಯಾಲಯದಲ್ಲಿ ಮಕ್ಕಳಿಗೆ ಪ್ರದಕ್ಷಿಣೆ, ಯೋಗ, ಧ್ಯಾನ, ಸೂರ್ಯ ನಮಸ್ಕಾರ ಮಾಡಿಸಲಾಗುತ್ತದೆ. ಸೂರ್ಯಾಲಯದಲ್ಲಿ ಏಕ ಕಾಲದಲ್ಲಿ 60 ಕ್ಕೂ ಹೆಚ್ಚು ಮಂದಿಗೆ ಸೂರ್ಯ ನಮಸ್ಕಾರ ಮತ್ತು ನೂರ ಐವತ್ತಕ್ಕೂ ಹೆಚ್ಚು ಮಂದಿಗೆ ಧ್ಯಾನ ಮಾಡಬಹುದಾಗಿದೆ.

ಸೂರ್ಯಗೋಲ, ಗ್ರಹಗಳ ಮೂರ್ತಿ:
ಖಗೋಳ ಶಾಸ್ತ್ರದ ಪ್ರಕಾರ ಸೂರ್ಯಾಲಯ ರೂಪುಗೊಂಡಿದೆ. ಐದು ಅಡಿ ಎತ್ತರದ ಜ್ಞಾನ ಸ್ತಂಭದ ಮೇಲೆ ಸೂರ್ಯನ ಪ್ರತೀಕವಾಗಿ ಶಿಲಾ ಗೋಲವನ್ನು ಸ್ಥಾಪಿಸಲಾಗಿದೆ. ಅದರ ಸುತ್ತಲೂ ಶನಿ, ಗುರು, ಮಂಗಳ, ಭೂಮಿ, ಶುಕ್ರ, ಬುಧ, ಸೂರ್ಯ ಹೀಗೆ ಗ್ರಹಗಳ ಪ್ರತೀಕವಾಗಿ ಎಳು ಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಕಟ್ಟೆಯಿಂದ ಜ್ಞಾನ ಸ್ತಂಭದ ಸುತ್ತ ಪ್ರದಕ್ಷಿಣೆ ನಡೆಸಲಾಗುತ್ತದೆ. ಇದರ ಎರಡೂ ಬದಿಯಲ್ಲಿ ನಾಲ್ಕರಂತೆ ಅಷ್ಟ ಗ್ರಹಗಳ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಇದರ ಸುತ್ತಲೂ ಯೋಗ ಮತ್ತು ಸೂರ್ಯ ನಮಸ್ಕಾರ ಮಾಡಲು ಶಿಲೆಯ ಚಪ್ಪಡಿಗಳನ್ನು ಹಾಸಲಾಗಿದೆ. ಕಾರ್ಕಳದಿಂದ ತಂದ ಶಿಲೆಯಿಂದ ಸುಂದರ ಸೂರ್ಯಾಲಯ ನಿರ್ಮಿಸಲಾಗಿದೆ.

 

 

ವೈವಿಧ್ಯತೆಗೆ ಮತ್ತೊಂದು ಸೇರ್ಪಡೆ:
ಔಷಧ ಸಸ್ಯವನ, ಬರಹದ ಮನೆ, ಕಲಾಶಾಲೆ, ಬಯಲು ರಂಗಮಂದಿರ, ಗೋಡೆ ಚಿತ್ರ ಹೀಗೆ ಪ್ರಕೃತಿಯ ಮಡಿಲಲ್ಲಿರುವ ಸ್ನೇಹ ಕನ್ನಡ ಮಾಧ್ಯಮ ಶಾಲೆಯು ಒಂದು ವೈವಿಧ್ಯತೆಯ ತೊಟ್ಟಿಲು. ಇದಕ್ಕೆ ಮುಕುಟ ಮಣಿಯಂತೆ ಬಯಲು ಸೂರ್ಯಾಲಯ ಕಂಗೊಳಿಸುತಿದೆ. ಸೂರ್ಯಾಲಯ ಸ್ಥಾಪನೆಯಾದ ಮೇಲೆ ಇಲ್ಲಿಯ ವೈವಿಧ್ಯತೆ ಮತ್ತು ಆಕರ್ಷಣೆ ಇನ್ನಷ್ಟು ಹೆಚ್ಚಿದೆ.
ಸೂರ್ಯಾಲಯ ಸ್ಥಾಪನೆಯಾದ ಬಳಿಕ ಶಾಲೆಯಲ್ಲಿ ಯೋಗ, ಧ್ಯಾನ ಶಿಬಿರಗಳು ನಿರಂತರ ನಡಸಲಾಗುತ್ತದೆ. ಜೂನ್ 21ರ ವಿಶ್ವ ಯೋಗ ದಿನಾಚರಣೆಯನ್ನು ನಡೆಸಲಾಗುತ್ತದೆ. ಪ್ರತಿ ದಿನ ಬಯಲು ಸೂರ್ಯಾಲಯದಲ್ಲಿ ಧ್ಯಾನ, ಯೋಗ ನಡೆಯುತ್ತದೆ.

 

ಮಕ್ಕಳ ಮನಸ್ಸು ಆಧ್ಯಾತ್ಮಕ ಸೆಲೆಯನ್ನು ಹೊಂದಿದೆ. ಅದನ್ನು ಬರಿದಾಗಿಸದೆ ಪೋಷಣೆ ಮಾಡಿ ಮಕ್ಕಳ ಮನಸ್ಸಿಗೆ ಆಧ್ಯಾತ್ಮದ ಸ್ಪರ್ಶವನ್ನು ನೀಡಲು ಜ್ಞಾನ ಕಲಶದ ಪರಿಕಲ್ಪನೆಯ ಪ್ರಕಾರ ಬಯಲು ಸೂರ್ಯಾಲಯವನ್ನು ಸ್ಥಾಪಿಸಲಾಗಿದೆ. ಮಕ್ಕಳ ಅಭಿವೃದ್ಧಿಯ ಜೊತೆಗೆ ಶಿಕ್ಷಣ ಗುಣಮಟ್ಟದ ಉನ್ನತೀಕರಣಕ್ಕೆ ಇದೊಂದು ಸಾಧ್ಯತೆ ಎಂಬ ಹಿನ್ನಲೆಯಲ್ಲಿ ಯೋಜನೆ ಅನುಷ್ಠಾನ ಮಾಡಲಾಗಿದೆ. ಇದು ಈಗ ಶಾಲೆಯ ಆಕರ್ಷಣೆಯ ಕೇಂದ್ರವೂ ಆಗಿ ಕಂಗೊಳಿಸುತ್ತಿದೆ- ಡಾ.ಚಂದ್ರಶೇಖರ ದಾಮ್ಲೆ,  ಅಧ್ಯಕ್ಷ,  ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ 

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror