Advertisement
MIRROR FOCUS

ಸೌಜನ್ಯಗಳು ಸಂಭ್ರಮಿಸಬೇಡವೇ?

Share

“ಮೋದಿ ವಿಜಯದ ಖುಷಿ : ಕಟ್ಟಿಂಗ್, ಶೇವಿಂಗ್ ಫ್ರೀ” ಈ ಶೀರ್ಷಿಕೆಯ ವರದಿ ಗಮನ ಸೆಳೆಯಿತು. ಪುತ್ತೂರು ಸನಿಹದ ಸೆಂಟ್ಯಾರಿನ ‘ಸುಮುಖ್ ಹೇರ್ ಡ್ರೆಸರ್ಸ್’ನಲ್ಲಿ ಮೋದೀಜಿ ಗೆಲುವಿನ ಸಂಭ್ರಮಾಚರಣೆ. ಉಚಿತವಾಗಿ ಶೇವಿಂಗ್, ಕಟ್ಟಿಂಗ್! ಹದಿನೈದು ವರುಷದಿಂದ ಬಾಲಸುಂದರ್ ಸೆಲೂನ್ ನಡೆಸುತ್ತಿದ್ದಾರೆ.
ಎರಡು ವರುಷದ ಹಿಂದೆ ಹೃದಯದ ಸಮಸ್ಯೆ ಬಂದಾಗ ಅವರ ನೆರವಿಗೆ ಬಂದುದು ಕೇಂದ್ರ ಸರಕಾರದ ವಾಜಪೇಯಿ ಆರೋಗ್ಯ ಶ್ರೀಕಾರ್ಡ್. ಮಂಗಳೂರಿನಲ್ಲಿ ಉಚಿತ ಹೃದಯ ಚಿಕಿತ್ಸೆ. ಈ ವ್ಯವಸ್ಥೆಯ ಕೃತಜ್ಞತಾ ಸೂಚಕವಾಗಿ ತಮ್ಮ ಸೆಲೂನಿನಲ್ಲಿ ಮೇ 23 ರಂದು ಮೋದೀಜಿ ಗೆಲುವಿನ ಸಂಭ್ರಮ.

ಇದು ಸಣ್ಣ ವರದಿ. ಆದರೆ ಅದು ಸಾರುವ ಸಂದೇಶ ದೊಡ್ಡದು!  ಬಾಲಸುಂದರ್  ‘ಕೃತಜ್ಞತಾ ಸೂಚಕ’ವಾಗಿ, ‘ಒಂದು ದಿವಸದ ಗಳಿಕೆ ಮತ್ತು ಸಮಯ’ವನ್ನು ಸಂಭ್ರಮಾಚರಣೆಗೆ ವಿನಿಯೋಗ ಮಾಡಿದ್ದರು. ಈ ಸಂಭ್ರಮದ ಹಿಂದೆ ಸ್ಪಷ್ಟವಾದ ಸಂಕಲ್ಪವಿದೆ. ಮರಳಿ ಬದುಕು ನೀಡಿದ ಒಂದು ವ್ಯವಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸುವ ಸೌಜನ್ಯವಿದೆ.

ಬಹುಶಃ ವೈಯಕ್ತಿಕ ಯಾ ರಾಜಕೀಯ ಬದುಕಿನಲ್ಲಿ ಇಂತಹ ಸೌಜನ್ಯಗಳು ಸಂಭ್ರಮಿಸಬೇಕು. ಪ್ರಾಮಾಣಿಕತೆಯಿಂದ ಸಮಯ ಕೊಡುವ ಮನಸ್ಸುಗಳು ರೂಪುಗೊಳ್ಳಬೇಕು. ಬಾಲಸುಂದರ್ ಅವರಿಗೆ ಸೆಲೂನು ವೃತ್ತಿಯಿಂದ ಹೊಟ್ಟೆ ತಂಪಾಗಬೇಕು. ಆದರೂ ಒಂದು ದಿವಸದ ತಮ್ಮ ಸಮಯ ಮತ್ತು ವೃತ್ತಿಯ ಗಳಿಕೆಯನ್ನು ಪರೋಕ್ಷವಾಗಿ ಸರಕಾರದ ಒಂದು ವ್ಯವಸ್ಥೆಗೆ ‘ಸಂಭ್ರಮಾಚರಣೆ’ ಎನ್ನುವ ಉಪಾಧಿಯಲ್ಲಿ ಸಮರ್ಪಿಸಿದ್ದಾರೆ.

 

 

ಈಗೆಲ್ಲವೂ ಕಾಂಚಾಣದ ಸದ್ದಿನ ದಿನಮಾನಗಳು. ಅವು ‘ಸಂಭಾವನೆ, ವೇತನ, ಸಂಬಳ, ದಕ್ಷಿಣೆ..’ ಮೊದಲಾದ ಹೆಸರಿನಿಂದ ಮಿರುಗುತ್ತಿರುತ್ತವೆ! ಕೊಡುವ ಸಮಯಕ್ಕೂ ಸಂಭಾವನೆ ನಿಗದಿಯಾಗುತ್ತವೆ. ತಪ್ಪಲ್ಲ ಬಿಡಿ. ‘ಸೌಜನ್ಯ’ವು ಎಂದೂ ವ್ಯವಹಾರವಾಗುವುದಿಲ್ಲ. ಅದು ವ್ಯವಹಾರ ಆಗುತ್ತದೆ ಎಂದಾದರೆ ಅದು ಸೌಜನ್ಯವಲ್ಲ. ಸೌಜನ್ಯಕ್ಕೆ ‘ಸೋಗು’ ಸ್ಪರ್ಶವಾದರೆ ವರ್ತನೆಗಳು ಗೆಜಲುತ್ತವೆ! ವಿಕಾರ ಮನಸ್ಥಿತಿ ರೂಪುಗೊಳ್ಳುತ್ತವೆ. ಆ ವಿಕಾರಕ್ಕೆ ಆಕಾರ ಕೊಡಲು ಹೋಗಿ ನಗೆಪಾಟಲಾಗುತ್ತದೆ.

ಸಮಾಜದಲ್ಲಿ ಇಂದು ಆಗುತ್ತಿರುವ ಆಕಾರ ವಿಕಾರಗಳು ಸೋಗಿನ ಮೇಲ್ಮೆಯಲ್ಲಿ ರಿಂಗಣಿಸುತ್ತವೆ. ಆಗ ಬಾಲಸುಂದರ್ ಅವರ ಸಂಭ್ರಮದ ಮನಸ್ಥಿತಿಯು ಇಂತಹವರಿಗೆ ಢಾಳಾಗಿ ಕಾಣುತ್ತದೆ. ಬದುಕಿನಲ್ಲಿ ಸೌಜನ್ಯಕ್ಕೆ ಅಹಂ ಸೇರಿದರಂತೂ ಮುಗಿಯಿತು! ಪ್ರತಿಷ್ಠಿತ ವ್ಯಕ್ತಿಯ ಪ್ರತಿಷ್ಠೆಯ ಕಿರಣಗಳು ಬಹುತೇಕ ಇಂತಹ ಅಹಮಿಕೆಗೆ ರಕ್ಷೆಯಾಗುತ್ತವೆ. ಹೀಗೆ ರಕ್ಷೆ ಪಡೆದ ಅಹಮಿಕೆಯೊಳಗೆ ಸೌಜನ್ಯ, ಪ್ರಾಮಾಣಿಕಗಳು ಅರ್ಥ ಕಳೆದುಕೊಂಡು ನಿರ್ಜೀವ ಸ್ಥಿತಿಯನ್ನು ತಾಳುತ್ತವೆ.
ಈ ಅವಸ್ಥೆ ಇದೆಯಲ್ಲಾ – ನಮ್ಮ ನಡುವಿನ ರಾಜಕೀಯ, ಸಮಾಜಿಕ, ಸಾಂಸ್ಕೃತಿಕ ಲೋಕಗಳಲ್ಲಿ ಎದ್ದು ಕಾಣುತ್ತದೆ. ಹಾಗಾಗಿ ‘ಸಮಯ ಕೊಡುವ’ ಮನಸ್ಸುಗಳಿಲ್ಲ. ವೃತ್ತಿ ಗಳಿಕೆಯಲ್ಲಿ ಅಲ್ಪವನ್ನಾದರೂ ನೀಡುವ ಮನಸ್ಥಿತಿಯಿಲ್ಲ. ಕೃತಜ್ಞತೆಯ ಸೊಲ್ಲಿಲ್ಲ. ಇವೆಲ್ಲಾ ಬದುಕಿನಲ್ಲಿ ಮಿಳಿತಗೊಂಡಾಗ ಮಾತ್ರ ಬದುಕಿನ ಸುಭಗತೆ.

ದೇಶಾದ್ಯಂತ ಮೋದೀಜಿ ಮೋಡಿ ಮಾಡಿಬಿಟ್ಟರು. ಬಿಜಿಪಿ ಎನ್ನುವ ಹೆಗ್ಗಡಲಲ್ಲಿ ಮೋದಿ ಹೆದ್ದೆರೆ ಎದ್ದಿದೆ. ಈ ಖುಷಿಯ ಕ್ಷಣವನ್ನು ಭಾರತ ಅನುಭವಿಸುತ್ತಿದೆ. ಪಟಾಕಿ, ಸಿಹಿ ವಿತರಣೆ, ಮೆರವಣಿಗೆ, ಘೋಷಣೆ, ಮೋಜಿಗಷ್ಟೇ ಸಂಭ್ರಮ ಸೀಮಿತ ಆಗಿದೆ ಅಲ್ವಾ. ಬಾಲಸುಂದರ್ ಅವರಂತೆ ತಮ್ಮ ವೃತ್ತಿ ಕ್ಷೇತ್ರದಲ್ಲಿ ಕನಿಷ್ಠ ಒಂದು ದಿನವಾದರೂ ನಿಜಾರ್ಥದ ಸಂಭ್ರಮವನ್ನು ಆಚರಿಸಿದ್ದು ಇದೆಯಾ? ಇದ್ದರೆ ಶರಣು.

ಮೋದೀಜಿ ಗೆಲುವಿಗಾಗಿ ತಂತಮ್ಮ ವೃತ್ತಿ ಕ್ಷೇತ್ರದಲ್ಲಿ ಒಂದಿವಸ ಒಂದು ಗಂಟೆ ಹೆಚ್ಚು ದುಡಿಯಬೇಕೆಂದು ಕಂಡಿದೆಯಾ? ಆಶಕ್ತರಿಗೆ ಒಮ್ಮೆ ಸಹಾಯ ಮಾಡಬೇಕೆಂದು ತೋಚಿದೆಯಾ? ಒಂದು ಹೊತ್ತಿನ ಊಟವನ್ನು ಅಶಕ್ತರಿಗೆ ನೀಡುವ ಮನಸ್ಸು ರೂಪುಗೊಂಡಿದೆಯಾ? ಹೋಟೇಲಿನಲ್ಲಿ ಒಂದು ದಿವಸ ಚಹಕ್ಕೆ ಒಂದು ರೂಪಾಯಿ ಕಡಿಮೆ ಮಾಡಿದ ಉದಾಹರಣೆ ಇದೆಯಾ? ರಿಕ್ಷಾ ಬಾಡಿಗೆಯಲ್ಲಿ ಎರಡು ರೂಪಾಯಿ ಕಡಿಮೆ ಮಾಡಿದ್ದಂತೂ ನನಗೆ ಅನುಭವಕ್ಕೆ ಬರಲಿಲ್ಲ.
ಸರಕಾರದ ಅನ್ಯಾನ್ಯ ಸವಲತ್ತುಗಳನ್ನು ‘ಹಕ್ಕಿನಿಂದ’ ಪಡೆಯುತ್ತೇವೆ. ಅದಕ್ಕೆ ನಾವೆಂದಾದರೂ ಸಂಭ್ರಮಿಸಿದ್ದೇವೆಯೇ? ಕೃತಜ್ಞತೆ ಸಲ್ಲಿಸಿದ್ದೇವೆಯೇ? ಅಂತರಂಗದೊಂದಿಗೆ ಅನುಸಂಧಾನ ಮಾಡಿದರೆ ‘ಇಲ್ಲ’ ಎನ್ನುವ ಉತ್ತರವನ್ನು ಪಿಸುಮಾತು ಹೇಳುತ್ತದೆ. ದೇಶವಾಸಿಗಳಿಂದ ‘ಸಮಯ ಕೊಡುವ’ ಸೌಜನ್ಯದ ಮನಸ್ಸುಗಳು ರೂಪುಗೊಳ್ಳುವುದನ್ನು ಭವ್ಯ ಭಾರತವು ಅಪೇಕ್ಷಿಸುತ್ತದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್‌ 14 ಅಥವಾ 15ರಿಂದ ಹಲವೆಡೆ…

8 hours ago

ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ

ದೇಶದ ಹಲವು ನಗರಗಳಲ್ಲಿ ವಾಣಿಜ್ಯ LPG ಕೊರತೆಯಿಂದ ಹೋಟೆಲ್‌ ಮತ್ತು ಆಹಾರ ವಿತರಣೆ…

8 hours ago

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

13 hours ago

ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ

Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…

13 hours ago

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…

13 hours ago

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ

ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…

13 hours ago