ಆಟಿ ಅಂದರೇ ಪರಿಸರ….! ; ತುಳುನಾಡಿನ ವಿಶೇಷ ಆಚರಣೆ

July 24, 2025
6:39 AM
ಆಟಿ ಅಂದರೆ ಪ್ರಕೃತಿಯ ಒಳತಿರುಳು. ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಪ್ರಕೃತಿಯ ಪರಿಣಾಮಗಳನ್ನು ಕೂಡಾ ಗ್ರಹಿಸಿಕೊಳ್ಳಲು ಈ ತಿಂಗಳ ಸಕಾಲ. ವರುಷವಿಡೀ ಕಷ್ಟ ಪಟ್ಟ ಕೃಷಿಕನ ಶ್ರಮವೂ ಉಳಿವು ಅಳಿವು ಈ ತಿಂಗಳಿನ ಮಳೆಯ ಮೇಲೆ ಅವಲಂಬಿತವಾಗಿದೆ.

ತುಳು ನಾಡಿನ ಬಹುತೇಕ ಆಚರಣೆಗಳು ಪ್ರಕೃತಿ, ಪರಿಸರಕ್ಕೆ ಹೊಂದಿಕೊಂಡಿರುವ ಆಚರಣೆಗಳು. ಅಂತಹದೊಂದು ಆಚರಣೆಯಲ್ಲಿ ಆಟಿ ತಿಂಗಳು ಕೂಡಾ ಒಂದು. ಈ ಒಂದು ತಿಂಗಳು ಪ್ರಕೃತಿಗೆ ಪೂರಕವಾದ ಆಚರಣೆಗಳು, ಆಹಾರಗಳು, ಪದ್ಧತಿಗಳು, ಸಂಪ್ರದಾಯಗಳು ಇರುತ್ತವೆ. ಇಂದು ಆಟಿಯಲ್ಲಿ ಬರುವ ಅಮವಾಸ್ಯೆ. ಅದು ಕೂಡಾ ವಿಶೇಷವೇ ಆಗಿದೆ.

ಸಾಮಾನ್ಯವಾಗಿ ನಾವು , ದಕ್ಷಿಣ ಕನ್ನಡದವರು ಹಬ್ಬಗಳನ್ನು ಆಚರಿಸುವುದು ಕಡಿಮೆ. ಚೌತಿ, ದೀಪಾವಳಿ, ಆಯುಧಪೂಜೆಗಳ ಆಚರಣೆ ಹೆಚ್ಚಿನ ಮನೆಗಳಲ್ಲಿ ಆಚರಿಸುತ್ತೇವೆ. ಉಳಿದಂತೆ ಪತ್ತನಾಜೆ, ಕೆಡ್ಡಸ, ನವರಾತ್ರಿ, ಅಷ್ಟಮಿ ಮೊದಲಾದವುಗಳು ತರವಾಡು ಮನೆಗಳಲ್ಲಿ ಮಾತ್ರ ಆಚರಿಸುವುದು ಕಂಡು ಬರುತ್ತದೆ . ನನಗೆ ಹೆಮ್ಮೆಯೆನಿಸುತ್ತದೆ. ನಮ್ಮ ಆಚರಣೆಗಳಲ್ಲಿ ಗೌಜಿ ಗದ್ಧಲಗಳಿಲ್ಲ, ತೋರಿಕೆಯ ಕ್ರಮಗಳಿಲ್ಲ. ಅರ್ಥವಿಲ್ಲದ ಆಚರಣೆಗಳಿಲ್ಲ. ನೇರಾ ನೇರಾ ಪ್ರಕೃತಿಯಲ್ಲಿ  ಮಿಳಿತವಾದುದು. ಪ್ರತಿಯೊಂದು ನಮ್ಮ ಆಚರಣೆಗಳಿಗೂ , ಪ್ರಕೃತಿಯ ಬದಲಾವಣೆಗೂ ಹತ್ತಿರದ ಸಂಬಂಧವಿದೆ. ಮಳೆ , ಬಿಸಿಲು, ಚಳಿಯ ನೇರ ಪ್ರಭಾವ ನಮ್ಮ ಆಚರಣೆಗಳಲ್ಲಿವೆ. ನಮ್ಮ ಹಿರಿಯರು ವ್ಯವಸ್ಥಿತವಾಗಿ ನಮ್ಮ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಆಯಾ ತಿಂಗಳಿಗನುಗುಣವಾಗಿ ನಮ್ಮ ಹಬ್ಬಗಳಿವೆ . ಆಹಾರ ಪದ್ಧತಿಯೂ ಹಾಗೆಯೇ. ಈಗ ಆಟಿ ತಿಂಗಳು.

ಆಟಿ ತಿಂಗಳು ಎಂದರೆ ಕಾರ್ಕಟಕ ಮಾಸ ಅಥವಾ ಶೂನ್ಯ ಮಾಸ. ಜುಲೈ ತಿಂಗಳಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಿಂದ ಆಟಿ ಆರಂಭವಾಗಿ ಮುಂದಿನ ಸಂಕ್ರಮಣದವರೆಗೆ ಇರುತ್ತದೆ. ತುಳು ಸಂಪ್ರದಾಯದ ನಾಲ್ಕನೇ ತಿಂಗಳೇ ಆಟಿ…… ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಗೃಹ್ರವೇಶ, ಮದುವೆ, ನಾಮಕರಣ ಮೊದಲಾದವುಗಳಿಗೆ ಈ ತಿಂಗಳಲ್ಲಿ ಆದ್ಯತೆ ಇಲ್ಲ. ಅದಕ್ಕಾಗಿ ಧಾರ್ಮಿಕರು ಈ ತಿಂಗಳನ್ನು ಬಿಟ್ಟು ಎಲ್ಲಾ ಶುಭಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅಂದರೆ ಈ ತಿಂಗಳು ಅನಿಷ್ಟ ಅಂತಲ್ಲ, ಮಳೆಯ ಜೋರಾದ ರುದ್ರನರ್ತನ, ಒಮ್ಮೊಮ್ಮೆ ಬಿಸಿಲು ಇರುವುದರಿಂದ ಆರೋಗ್ಯ, ಪರಿಸರ ಎರಡೂ ಸಂಕಷ್ಟವಾಗಿರುತ್ತದೆ. ಹೀಗಾಗಿ ಆಟಿ ಎನ್ನುವುದೇ ತುಳುನಾಡಿನಲ್ಲಿ ಬಹಳ ಅರ್ಥವತ್ತಾಗಿರುತ್ತದೆ.

ಇದು ಹಳ್ಳಿಯ ಜನಜೀವನಕ್ಕೆ ಕಷ್ಟದ ತಿಂಗಳು. ” ಆಟಿ ಎಂದರೆ ಆಪತ್ತು, ಆಷಾಡ‍ ಅಂದರೆ ಅಮವಾಸ್ಯೆ” ವರುಷವಿಡೀ ಕಷ್ಟ ಪಟ್ಟ ಕೃಷಿಕನ ಉಳಿವು ಅಳಿವು ಈ ತಿಂಗಳಿನ ಮಳೆಯ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ಈ ಗಾದೆ ಹುಟ್ಟಿ ಕೊಂಡಿರ ಬೇಕು . “ಆಟಿ ತಿಂಗಳ ಮಳೆ ಅಮೃತಕ್ಕೆ ಸಮ ” ಸಿಕ್ಕಾಪಟ್ಟೆ ಮಳೆ ಸುರಿಯುವುದರಿಂದ. ಈ ಸಮಯದಲ್ಲಿ ರೋಗ ರುಜಿನಗಳು ಹರಡುವ ಭಯ ಕಾಡುವುದರಿಂದ ನಿರೋಧ ಶಕ್ತಿ ಹೆಚ್ಚಿಸುವ ಆಹಾರ ವಸ್ತುಗಳನ್ನು ಸೇವಿಸುವುದು ಇಲ್ಲಿನ ಪದ್ಧತಿ.

ವಿಪರೀತ ಮಳೆ ಸುರಿಯುವುದರಿಂದ ಕೃಷಿ ಕಾರ್ಯಗಳು ಕುಂಟುತ್ತಾ ಸಾಗುತ್ತದೆ. ಆಟಿ ತಿಂಗಳು ಕಷ್ಟದ ತಿಂಗಳು ಆದರೂ ಮೆಚ್ಚಿನ ತಿಂಗಳು!

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ
August 11, 2026
10:31 PM
by: ದ ರೂರಲ್ ಮಿರರ್.ಕಾಂ
ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ
August 11, 2026
9:56 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?
August 11, 2026
9:12 PM
by: ಸಾಯಿಶೇಖರ್ ಕರಿಕಳ
ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror