ಸುದ್ದಿಗಳು

ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಗತಿ | ಪುತ್ತೂರಿನಲ್ಲಿ ಅಂಬಿಕಾ ಸಂಸ್ಥೆಯಿಂದ ಆರಂಭವಾಗುತ್ತಿದೆ ಹೊಸ ಹೆಜ್ಜೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್‍ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿದೆ. ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ. ಹಾಗಾಗಿ ಇಲ್ಲಿ ಪ್ರಿ-ಕೆ.ಜಿ, ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ ಮಾಡಿಕೊಳ್ಳುತ್ತಾನೆ ಎಂಬುದು ವಿಶೇಷ.
ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟ್ರಭಕ್ತಿಯನ್ನೊಳಗೊಂಡ ಸಮಗ್ರ ಶಿಕ್ಷಣವನ್ನು ದಶಕದ ಹಿಂದಿನಿಂದಲೇ ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಈಗಾಗಲೇ ಧರ್ಮ ಜಾಗೃತಿ ಹಾಗೂ ರಾಷ್ಟ್ರಭಕ್ತಿಯ ಉದ್ದೀಪನಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ದಕ್ಷಿಣ ಭಾರತದ ಮೊತ್ತಮೊದಲ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಮಾರಕವನ್ನು ಪುತ್ತೂರಿನಲ್ಲಿ ನಿರ್ಮಿಸಿ ದಿನಪೂರ್ತಿ ಜ್ಯೋತಿ ಉರಿಯುವಂತಹ ವ್ಯವಸ್ಥೆ ಕಲ್ಪಿಸಿದ ಹೆಮ್ಮೆ ಅಂಬಿಕಾ ವಿದ್ಯಾಸಂಸ್ಥೆಗಳದ್ದು. ಭಗವದ್ಗೀತಾ ಫಠಣ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಠಣ, ಭಜನೆ, ಪಾರಾಯಣವೇ ಮೊದಲಾದ ಅಪ್ಪಟ ಹಿಂದೂ ಧಾರ್ಮಿಕ ಜೀವಭಾವವನ್ನು ಮಕ್ಕಳಲ್ಲಿ ತುಂಬಿ ಭಾರತೀಯತೆಯ ದಿಗ್ದರ್ಶನದ ಕಾಯಕವನ್ನು ನಿತ್ಯನಿರಂತರವಾಗಿ ಒಡಮೂಡಿಸಿಕೊಂಡು ಬಂದ ಅಪೂರ್ವ ಸಂಸ್ಥೆಯಾಗಿ ಅಂಬಿಕಾ ಹೆಸರು ಮಾಡಿದೆ. ಹಾಗಾಗಿಯೇ ‘ಅಂಬಿಕಾಕ್ಕೆ ಸೇರಿಸಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ’ ಎಂಬ ಮಾತು ಸಮಾಜದೆಲ್ಲೆಡೆ ಜನಜನಿತವಾಗಿದೆ.
ಈ ಮಧ್ಯೆ ಶೈಕ್ಷಣಿಕ ಸಾಧನೆಯಲ್ಲೂ ಅಂಬಿಕಾ ಮುಂದಿರುವುದು ‘ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ’ ಎಂಬ ಮಾತಿಗೆ ಅನ್ವರ್ಥವಾಗಿ ರೂಪುಗೊಂಡಿದೆ.  ಜತೆಗೆ ಆಧುನಿಕ ಕಾಲಘಟ್ಟಕ್ಕನುಗುಣವಾಗಿ ಅಂಬಿಕಾ ವಿದ್ಯಾಲಯವೂ ಕಾಲಕಾಲಕ್ಕೆ ಅಪ್‍ಡೇಟ್ ಆಗುತ್ತಿರುವುದು ವಿದ್ಯಾರ್ಥಿಗಳ ಹೆತ್ತವರಿಗೆ ಹೆಮ್ಮೆ ಹಾಗೂ ಸೋಜಿಗವೆನಿಸುತ್ತಿದೆ. ಇದೀಗ ಅಂತಹದೇ ಮತ್ತೊಂದು ಉಪಕ್ರಮಕ್ಕೆ ಅಂಬಿಕಾ ಅಡಿಯಿಟ್ಟಿದೆ.
ಸಂಸ್ಥೆಯ ದಶಮಾನೋತ್ಸವ: ಅಂಬಿಕಾ ವಿದ್ಯಾಲಯ ಇದೀಗ ಸಾರ್ಥಕ ಹತ್ತನೆಯ ವರ್ಷಕ್ಕೆ ಅಡಿಯಿಟ್ಟಿದ್ದು ಪ್ರಸ್ತುತ ವರ್ಷ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ವರ್ಷಪೂರ್ತಿ ನಡೆಯಲಿದೆ. ದಶಮಾನೋತ್ಸವದ ಅಂಗವಾಗಿ ಅನೇಕ ವಿನೂತನ ಯೋಜನೆ – ಯೋಚನೆಗಳನ್ನು ಸಂಸ್ಥೆ ಜಾರಿಗೊಳಿಸಲು ಸನ್ನದ್ಧವಾಗಿದೆ. ಶೈಕ್ಷಣಿಕ ಕಾರ್ಯಕ್ರಮಗಳು ಮಾತ್ರವಲ್ಲದೆ ಸಮಾಜದ ನಾನಾ ಸ್ತರಗಳನ್ನು ತಲಪುವಂತಹ ಸಮಾಜಮುಖಿ ಕಾರ್ಯಕ್ರಮಗಳು, ಸೇವಾ ಕಾರ್ಯಕ್ರಮಗಳು, ಸಾಂಸ್ಕøತಿಕ ವೈಭವಗಳೇ ಮೊದಲಾದ ಹತ್ತು ಹಲವು ಕಾರ್ಯಚಟುವಟಿಕೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆಯೋಜನೆಗೊಳ್ಳಲಿವೆ. ದಶಮಾನೋತ್ಸವದ ಅಂಗವಾಗಿ ಪುತ್ತೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಗತಿಗಳನ್ನು ಸಂಸ್ಥೆಯಲ್ಲಿ ನಡೆಸುವ ಸಿದ್ಧತೆಗಳು ನಡೆದಿವೆ.
ರೋಬೋಟಿಕ್ಸ್ & ಎಐ ತರಬೇತಿ : ಮುಂದಿನ ದಿನಗಳಲ್ಲಿ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ, ತನ್ಮೂಲಕ ವೈಜ್ಞಾನಿಕ ರಂಗದಲ್ಲಿ ತನ್ನ ಛಾಪನ್ನೊತ್ತುವ ನೆಲೆಯಲ್ಲಿ ನೂತನ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಆ ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಮೊತ್ತಮೊದಲ ಬಾರಿಗೆ ವಿದ್ಯಾಲಯವೊಂದರಲ್ಲಿ ಇಂತಹದ್ದೊಂದು ಕಲಿಕೆ ಆರಂಭಗೊಳ್ಳುತ್ತಿದೆ.
ವಿದ್ಯಾರ್ಥಿಗಳಿಗೆ ಏನು ಲಾಭ? : ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಸಾಕಷ್ಟು ಪ್ರವರ್ಧಮಾನಕ್ಕೆ ಬರುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಈ ಎರಡು ಸಂಗತಿಗಳ ನೆಲೆಯಲ್ಲಿಯೇ ಬೆಳೆದುಬರಲಿದೆ. ಈಗಾಗಲೇ ಇಂಜಿನಿಯರಿಂಗ್‍ನಂತಹ ಕಾಲೇಜುಗಳಲ್ಲಿ ಈ ವಿಷಯದಲ್ಲೇ ಪದವಿ ಶಿಕ್ಷಣ ಕೈಗೆತ್ತಿಕೊಳ್ಳಲಾಗಿದ್ದು ಅನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅಪಾರ ಬೇಡಿಕೆ ಈ ಕ್ಷೇತ್ರಕ್ಕಿದೆ.
ಜತೆಗೆ, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಕಂಪ್ಯೂಟರ್ ಚಿಪ್ಸ್ ತಯಾರಿ, ರೋಬೋಟ್ ನಿರ್ಮಾಣದಂತಹ ಕಾರ್ಯಗಳನ್ನು ಈವರೆಗೆ ಇಂಜಿನಿಯರಿಂಗ್ ಓದುತ್ತಿರುವ ಅಥವ ಓದಿದ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಸಂದರ್ಭವಿದ್ದರೆ ಇನ್ನು ಮುಂದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಹ ಮಾರ್ಗದರ್ಶನ, ಪ್ರೇರಣೆ ದೊರಕಲಿದೆ. ಮನೆಯಲ್ಲಿಯೇ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕಲೆ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ. ಇದರಿಂದಾಗಿ ವಿಜ್ಞಾನ ಕ್ಷೇತ್ರಕ್ಕೆ ಅಂಬಿಕಾ ವಿದ್ಯಾಲಯ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯ ಈ ತರಬೇತಿಯಿಂದ ನಡೆಯಲಿದೆ.
ಇದಲ್ಲದೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ  ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಷಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ಸುಲಭ ಸಾಧ್ಯವಾಗಲಿದೆ. ಅಂಬಿಕಾ ವಿದ್ಯಾಲಯದಲ್ಲಿ ಈ ತರಬೇತಿಯನ್ನು ಪಡೆದಿರುವುದು ಅವರ ಭವಿಷ್ಯಕ್ಕೆ ಬಹುದೊಡ್ಡ ಪ್ರಯೋಜನವನ್ನೊದಗಿಸಲಿದೆ.
ದೇಶಕ್ಕೂ ಇದೆ ಪ್ರಯೋಜನ: ಇಂದು ನ್ಯಾನೋ ತಂತ್ರಜ್ಞಾನದಲ್ಲಿ ಚೀನಾ ಇಡಿಯ ಪ್ರಪಂಚದಲ್ಲೇ ಪ್ರಭುತ್ವವನ್ನು ಸಾಧಿಸಲು ಹೊರಟಿದೆ. ಯಾವುದೇ ವಸ್ತುಗಳ ತಯಾರಿಕೆ, ಅದರ ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಎನಿಸುತ್ತಿದೆ. ಈ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಚೀನಾದ ತಾಂತ್ರಿಕ ದಾಸ್ಯಕ್ಕೆ ಪ್ರಪಂಚವೇ ಒಳಗಾಗಬೇಕಾದ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಸಡ್ಡು ಹೊಡೆಯುವ ಬುದ್ಧಿಮತ್ತೆ ಮತ್ತು ಸಾಧ್ಯತೆ ಭಾರತಕ್ಕಷ್ಟೇ ಇದೆ ಎಂಬುದು ಜಗತ್ತಿಗೇ ತಿಳಿದಿದೆ ಹಾಗೂ ಭಾರತದಿಂದ ನಿರೀಕ್ಷೆ ಸಾಕಷ್ಟಿದೆ. ಹಾಗಾಗಿ ನಮ್ಮ ಮಕ್ಕಳನ್ನು ಎಳವೆಯಿಂದಲೇ ರೂಪಿಸಲು ಅಂಬಿಕಾ ವಿದ್ಯಾಲಯ ಸಜ್ಜಾಗಿದೆ. ದೇಶ ಮೊದಲು ಎಂಬ ಕಲ್ಪನೆಯಡಿ ಶಿಕ್ಷಣದ ಪ್ರಸರಣದಲ್ಲಿ ತೊಡಗಿರುವ ಅಂಬಿಕಾ ವಿದ್ಯಾಲಯ ಇದೀಗ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದೊಂದಿಗೆ ಅದಕ್ಕೆ ಪೂರಕವಾದ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ.
ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್: ವಿದ್ಯಾರ್ಥಿಗಳ ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂಟರ್ಯಾಕ್ಟಿವ್ ಸ್ಮಾರ್ಟ್ ಬೋರ್ಡ್‍ಗಳನ್ನು ಅಳವಡಿಸಲಾಗಿದೆ. ಇಂತಹ ಒಂದು ಸ್ಮಾಟ್ ಬೋರ್ಡ್‍ಗೆ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 3 ಡಿ ತಂತ್ರಜ್ಞಾನ, 4 ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರ್ಯಾಕ್ಟಿವ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮಥ್ರ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸುತ್ತಿದೆ.
ಉದ್ಘಾಟನಾ ಸಮಾರಂಭ : ದಶಮಾನೋತ್ಸವ ಮತ್ತು ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿ ತರಗತಿಗಳು ಬಪ್ಪಳಿಗೆ ಕ್ಯಾಂಪಸ್‍ನಲ್ಲಿನ ಅಂಬಿಕಾ ವಿದ್ಯಾಲಯದಲ್ಲಿ ಜುಲೈ 21ರಂದು ಉದ್ಘಾಟನೆಗೊಳ್ಳಲಿವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಂತ್ರಾಂಶ ತಜ್ಞ, ಕಂಪ್ಯೂಟರ್‍ನಲ್ಲಿ ಕನ್ನಡ ಕೀಪ್ಯಾಡ್ ಅನ್ನು ಆವಿಷ್ಕರಿಸಿದ ಪ್ರೊ.ಕೆ.ಪಿ.ರಾವ್, ಪುತ್ತೂರಿನ ಹಿರಿಯ ನ್ಯಾಯವಾದಿ ಮಹೇಶ್ ಕಜೆ ಭಾಗವಹಿಸಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ರಕ್ಷಕ ಶಿಕ್ಷಕ ಸಂಖದ ಅಧ್ಯಕ್ಷೆ ಸೀಮಾ ನಾಗರಾಜ್ ಹಾಗೂ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿರುವರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

15 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

16 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

16 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

24 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

1 day ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

1 day ago