ಅಡಿಕೆ ಹಾನಿಕಾರಕ ಏಕೆ ಅಲ್ಲ.. ? | ಅಡಿಕೆಯನ್ನು ನಿತ್ಯ ಬಳಕೆ ಮಾಡಬಹುದು ಏಕೆ? | ಅಡಿಕೆಯ ಬಣ್ಣ ಎಷ್ಟು ಪ್ರಭಾವಶಾಲಿ..? | ಅಡಿಕೆ ಹೊಸಬಳಕೆ ವಿಚಾರಗೋಷ್ಟಿಯಲ್ಲಿ ತೆರೆದುಕೊಂಡ ಸಂಗತಿಗಳು |

December 21, 2022
9:03 PM
ಅಡಿಕೆಯ ಬಗ್ಗೆ ಹಲವು ಸಂದೇಹಗಳು ನಮ್ಮ ಬೆಳೆಗಾರರಲ್ಲಿ ಇದ್ದವು. ಬರೀ ಧಾರಣೆ, ಮಾರುಕಟ್ಟೆ ಸುತ್ತಲೂ ಸುತ್ತುವುದನ್ನು ಬಿಟ್ಟು ಅಡಿಕೆಯ ಪರ್ಯಾಯ ಬಳಕೆಯ ಬಗ್ಗೆ ಯೋಚನೆ ನಡೆಸಬೇಕಿತ್ತು. ವಿದೇಶದಲ್ಲಿ ಅಡಿಕೆಯನ್ನು ವಿವಿಧ ರೀತಿಯಲ್ಲಿ  ಬಳಕೆ ಮಾಡುತ್ತಾರೆ. ಭಾರತದಲ್ಲಿ ಅಡಿಕೆ ನಿತ್ಯ ಬಳಕೆ ಆಗುತ್ತಿದ್ದರೂ ತಿಂದು ಉಗುಳುವುದು  ಎಂಬ ಭಾವನೆ ಇತ್ತು. ಆದರೆ ಅಷ್ಟೇ ಅಲ್ಲ, ಭಾರತಲ್ಲೂ ಅಡಿಕೆ ವಿವಿಧ ರೂಪದಲ್ಲಿ ಬಳಕೆಯಾಗುತ್ತಿದೆ. ಈ ಬಗ್ಗೆ ಪರಿಚಯದ ಮೊದಲ ಪ್ರಯತ್ನ ಪುತ್ತೂರಿನಲ್ಲಿ  ನಡೆಯಿತು. ಅಡಿಕೆ ಹೊಸ ಬಳಕೆಯ ವಿಚಾರಗೋಷ್ಟಿಯಲ್ಲಿ ಅಡಿಕೆಯ ಬಳಕೆಯ ಮಜಲುಗಳು ತೆರೆದುಕೊಂಡವು.
ಅಡಿಕೆಯನ್ನು ವಿವಿಧ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ತಿಂದು ಉಗುಳುವುದಕ್ಕೆ ಮಾತ್ರಾ ಅಡಿಕೆಯನ್ನು ಬಳಕೆ ಮಾಡುವುದಲ್ಲ, ಅಡಿಕೆಯನ್ನು ಔಷಧ ಸೇರಿದಂತೆ ವಿವಿಧ ರೂಪದಲ್ಲಿ ವಿದೇಶದಲ್ಲೂ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಮಾತ್ರಾ ಅಡಿಕೆ ಹಾನಿಕಾರಕ ಎಂದು ಏಕೆ ಪರಿಗಣನೆಯಾಗಬೇಕು ?. ಅಡಿಕೆಯಿಂದಲೂ ಹಲವು ಉತ್ಪನ್ನಗಳ ತಯಾರಿ ಸಾಧ್ಯವಿದೆ. ಅಡಿಕೆ ಬಣ್ಣದದ ವ್ಯಾಪಕತೆಯೂ ದೊಡ್ಡದಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.
ಅವರು ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಪತ್ರಿಕೆ ಸಹಯೋಗದಲ್ಲಿ  ಪುತ್ತೂರಿನ ಚುಂಚಶ್ರೀ ಸಭಾಭವನದಲ್ಲಿ  ನಡೆದ ಅಡಿಕೆಯ ಹೊಸಬಳಕೆ ವಿಚಾರಗೋಷ್ಟಿಯಲ್ಲಿ  ಮಾತನಾಡಿದರು. ಅಡಿಕೆಯಲ್ಲಿ ಅನೇಕ ಉತ್ತಮ ಅಂಶಗಳು ಇವೆ. ತಿಂದು ಉಗುಳುವುದು  ಮಾತ್ರಾ ಎಂಬ ಭಾವನೆ ಹಲವು ಕಡೆಗಳಲ್ಲಿ ಇದೆ. ಆದರೆ ಅಡಿಕೆಯ ಚೊಗರು, ಅಡಿಕೆಯ ಬಣ್ಣ, ಅಡಿಕೆಯ ಔಷಧಿಗಳು ಇಂದು ವ್ಯಾಪಕವಾಗಿ ಬೆಳೆಯಲು ಅವಕಾಶಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರಯತ್ನಗಳು ಸಾಗಬೇಕಿದೆ ಎಂದರು.

ಅಡಿಕೆಯ ಬಣ್ಣದ ಬಗ್ಗೆ ಮಾತನಾಡಿದ ದೇಸೀ ಸಂಸ್ಥೆಯ ರುದ್ರಪ್ಪ, ಅಡಿಕೆಯ ಚೊಗರು ಇಂದು ಬೇಡಿಕೆಯ ವಸ್ತುವಾಗಿದೆ. ಅಡಿಕೆ ಬಣ್ಣದಿಂದ ತಯಾರಿಸಿದ ಬಟ್ಟೆಗಳಲ್ಲಿ ರಾಸಾಯನಿಕ ಬಳಕೆ ಬೇಕಿಲ್ಲ. ಅನೇಕರು ಈಗ ಇಂತಹ ಬಟ್ಟೆಗಳ ಮೇಲೆ ಆಸಕ್ತರಾಗಿದ್ದಾರೆ, ದೇಶದ ಹಲವು ಕಡೆಗಳಿಗೆ ಬೇಡಿಕೆ ಇದೆ ಎಂದರು.

ಏಳು ವರ್ಷಗಳಿಂದ ಮಧುಮೇಹಕ್ಕೆ ಅಡಿಕೆಯ ಔಷಧಿ ನೀಡುತ್ತಿರುವ ವಿಟ್ಲದ ಜೆಡ್ಡು ಗಣಪತಿ ಭಟ್‌ ಮಾತನಾಡಿ, ಅಡಿಕೆಯನ್ನು ಆಯುರ್ವೇದದ ಹಲವು ಕಡೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಮಧುಮೇಹಕ್ಕೆ ಉತ್ತಮ ಹಾಗೂ ಪರಿಣಾಮಕಾರಿಯಾದ ಔಷಧಿಯಾಗಿದೆ ಎಂದರು.

ಕಳೆದ 6 ವರ್ಷಗಳಿಂದ ನೋವುಗಳಿಗೆ ಅಡಿಕೆಯಿಂದ ಔಷಧಿ ತಯಾರಿಸಿರುವ ಶಿವಮೊಗ್ಗದ ಅರುಣ್‌ ದೀಕ್ಷಿತ್‌ ಮಾತನಾಡಿ, ಬೇರೆ ಉದ್ಯೋಗದಲ್ಲಿದ್ದು ಕೃಷಿ ಸಂಬಂಧಿತ ಉದ್ಯಮ ಮಾಡುವ ವೇಳೆ ಅಡಿಕೆಯ ಉತ್ತಮ ಗುಣಗಳನ್ನು ಗಮನಿಸಿ ಔಷಧಿ ತಯಾರಿಸಿದ್ದೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.

ಉಡುಪಿಯ ಎಸ್‌ಡಿಎಂ ಆಯುರ್ವೇದ ಸಂಸ್ಥೆಯ ಡಾ.ಮುರಳೀಧರ್‌ ಬಲ್ಲಾಳ್‌ ಮಾತನಾಡಿ, ಅಡಿಕೆಯಿಂದ ತಯಾರಿಸಿರುವ ಎರಡು ಉತ್ಪನ್ನಗಳಿಂದ ಉತ್ತಮ ಫಲಿತಾಂಶ ದೊರೆತದಿದೆ. ಅಡಿಕೆಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಎಲೆ ಹಾಗೂ ಅಡಿಕೆ ಸೇವನೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದರು.

ಅಡಿಕೆ ಸಿಪ್ಪೆಯಿಂದ ಪ್ರಾಯೋಗಿಕವಾಗಿ ವೈನ್‌ ತಯಾರು ಮಾಡಿರುವ ಗಗನ ಮಾತನಾಡಿ ಅಡಿಕೆಯ ಎಲ್ಲಾ ವಸ್ತುಗಳೂ ಬಳಕೆ ಮಾಡುವಂತಹವು ಆಗಿದೆ. ಅಡಿಕೆ ಬೆಳೆಗಾರರ ಕುಟುಂಬದ ಸದಸ್ಯರಾಗಿ ವ್ಯರ್ಥವಾಗುವ ಅಡಿಕೆ ಸಿಪ್ಪೆ ಬಳಕೆ ಮಾಡಿ ಬದನಾಜೆ ಶಂಕರ ಭಟ್ ಅವರ ಮಾರ್ಗದರ್ಶನದಂತೆ ವೈನ್‌ ತಯಾರು ಮಾಡಿದ್ದೇನೆ ಇದರಲ್ಲಿ ಹೊಸ ಅವಕಾಶಗಳು ಇವೆ ಎಂದರು.

ಸಿಎಫ್‌ಟಿಆರ್‌ ನಿವೃತ್ತ ವಿಜ್ಞಾನಿ ಡಾ.ಅಪ್ಪಯ್ಯ ಮಾತನಾಡಿ ಅಡಿಕೆಯಿಂದ ವೈನ್‌ ತಯಾರು ಮಾಡಬಹುದು ಹಾಗೂ ಈ ವೈನ್‌ ಹಾಳಾಗದಂತೆ ದೀರ್ಘಕಾಲ ಉಳಿಯಬಲ್ಲುದು. ಅಡಿಕೆಯ ಟ್ಯಾನಿನ್‌ ವೈನ್‌ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದರು.

ಅಡಿಕೆಯಿಂದ ಹಲ್ಲುಜ್ಜುವ ಪುಡಿ ತಯಾರು ಮಾಡಿರುವ ವಿವೇಕ್‌ ಆಳ್ವ ಮಾತನಾಡಿ ಅಡಿಕೆಯನ್ನು ಬಳಸಿಕೊಂಡು ಹಲ್ಲಿನ ಪುಡಿ ತಯಾರು ಮಾಡಲು ಸಾಧ್ಯವಿದ್ದು, ಆರೋಗ್ಯದ ದೃಷ್ಟಿಯಿಂದ ಈ ಪುಡಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.

ಅಡಿಕೆ ಬಳಸಿ ಸೋಪು ಹಾಗೂ ಹಲ್ಲುಜ್ಜುವ ಪುಡಿ ತಯಾರು ಮಾಡಿರುವ ಬೆಳ್ತಂಗಡಿ ಗೇರುಕಟ್ಟೆಯ ರವಿರಾಜ್‌ ಮಾತನಾಡಿ ಅಡಿಕೆಯಿಂದ ಸಾಕಷ್ಟು ವಸ್ತುಗಳನ್ನು ತಯಾರು ಮಾಡಬಹುದು. ಆದರೆ ಮಾರುಕಟ್ಟೆ ನೆರವು ಹಾಗೂ ಅಡಿಕೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದರ ಕಡೆಗೂ ಅಡಿಕೆ ಬೆಳೆಗಾರರು ಗಮನಿಸಬೇಕು ಎಂದರು.

ಹಣ್ಣಡಿಕೆ ಸಿಪ್ಪೆ ಬಳಕೆ ಮಾಡಿ ಸೋಪು ತಯಾರು ಮಾಡುತ್ತಿರುವ ಮುರಳೀಧರ್‌ ಮಾತನಾಡಿ ಅಡಿಕೆಯನ್ನು ಬಳಸಿಕೊಂಡು ಅದರಿಂದ ರಸ ತೆಗೆದು ಅರ್ಕ ತಯಾರಿಸಿ ಸೋಪು ಬಳಕೆ ಮಾಡಲಾಗುತ್ತದೆ. ಉತ್ತಮ ಫಲಿತಾಂಶ, ಪ್ರತಿಕ್ರಿಯೆ ಇದೆ ಎಂದರು.
ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಬಳಿಕ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಅಡಿಕೆಯ ಉತ್ಪನ್ನಗಳ ತಯಾರಿ ಹಾಗೂ ಮಾರುಕಟ್ಟೆಯ ಅವಕಾಶಗಳ ಬಗ್ಗೆ ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್‌ ಪುಣಚ ಮಾತನಾಡಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಪಡಾರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್‌ ಪುಣಚ, ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಜನರಲ್ ಮೆನೇಜರ್ ವಸಂತ ಉಪಸ್ಥಿತರಿದ್ದರು.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಗೋಷ್ಟಿಯನ್ನು ನಿರ್ವಹಿಸಿದರು.
ಇದೇ ಸಂದರ್ಭ ಅಡಿಕೆಯ ಬಣ್ಣದಿಂದ ತಯಾರಿಸಿದ ಬಟ್ಟೆಗಳು, ಅಡಿಕೆಯಿಂದ ತಯಾರಾದ ವಿವಿಧ ಉತ್ಪನ್ನಗಳು, ಅಡಿಕೆಯಿಂದ ತಯಾರಿಸಿದ ಹೋಳಿಗೆ, ಐಸ್‌ಕ್ರೀಂ ಪ್ರದರ್ಶನ ಹಾಗೂ ಮಾರಾಟ ನಡೆದವು.

This slideshow requires JavaScript.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್
ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ
March 4, 2026
7:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror