ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಿಸುತ್ತಿದ್ದ ಲಾರಿಗಳನ್ನು ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಅಧಿಕಾರಿಗಳು ತಡೆದು ವಶಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ, ಸಿರ್ಸಿ ಹಾಗೂ ಸಿದ್ದಾಪುರ ಭಾಗದ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಡಲು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ವ್ಯಾಪಾರಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದು ಜಿಲ್ಲೆಯ ಸಂಸದರೂ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಡಿಕೆ ವ್ಯಾಪಾರಿ ಪ್ರತಿನಿಧಿಗಳು ತಿಳಿಸಿದಂತೆ, ಶಿವಮೊಗ್ಗ, ಶಿರಸಿ ಮತ್ತು ಸಿದ್ದಾಪುರ ಪ್ರದೇಶಗಳಿಂದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ನವದೆಹಲಿಯ ಮಾರುಕಟ್ಟೆಗಳಿಗೆ ಸಾಗಿಸಲಾಗುತ್ತಿದ್ದ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಬೀಡ್, ನಾಂದೇಡ್, ಔರಂಗಾಬಾದ್, ನಾಗ್ಪುರ, ಧುಳೆ ಹಾಗೂ ಹಿಂಗೋಲಿ ಜಿಲ್ಲೆಗಳಲ್ಲಿ ತಡೆಹಿಡಿಯಲಾಗಿದೆ. ಸುಮಾರು 50ಕ್ಕೂ ಹೆಚ್ಚು ಲಾರಿಗಳು ವಿವಿಧ ಕಡೆಗಳಲ್ಲಿ ಸಿಲುಕಿಕೊಂಡಿವೆ ಎಂದು ತಿಳಿಸಲಾಗಿದೆ.
ಅಡಿಕೆ ವ್ಯಾಪಾರಿಗಳ ಮಾಹಿತಿ ಪ್ರಕಾರ, ಈ ಅಡಿಕೆ ಮಹಾರಾಷ್ಟ್ರದಲ್ಲಿ ಮಾರಾಟ ಅಥವಾ ವಿತರಣೆಗಾಗಿ ಅಲ್ಲ. ಕೇವಲ ಇತರೆ ರಾಜ್ಯಗಳಿಗೆ ಸಾಗಾಟದಲ್ಲಿತ್ತು. ಅಡಿಕೆ ಮಹಾರಾಷ್ಟ್ರದಲ್ಲಿ ನಿಷೇಧಿತ ವಸ್ತುವಲ್ಲ ಮತ್ತು ಗುಟ್ಕಾ, ಪಾನ್ ಮಸಾಲಾ ಅಥವಾ ತಂಬಾಕು ಉತ್ಪನ್ನಗಳ ವರ್ಗಕ್ಕೂ ಸೇರುವುದಿಲ್ಲ. ಆದ್ದರಿಂದ ಲಾರಿಗಳ ವಶಪಡಿಸಿಕೊಳ್ಳುವಿಕೆಗೆ ಕಾನೂನು ಆಧಾರವಿಲ್ಲ ಎಂದು ಹೇಳಿದ್ದಾರೆ.
ಈ ವಿಷಯದ ಗಂಭೀರತೆಯನ್ನು ಮನಗಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕರೆ ಮಾಡಿ ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಸಂಸದ ರಾಘವೇಂದ್ರ ಅವರು ಕೂಡ ಅಡಿಕೆ ಬೆಳೆಗಾರರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿರುವ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಿ ಲಾರಿಗಳ ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ಅವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡಿಕೆ ಸಾಗಾಟಕ್ಕೆ ಅಡ್ಡಿಪಡಿಸಬಾರದು ಎಂದು ಸೂಚನೆ ನೀಡಿದ್ದರೂ, ವಶಪಡಿಸಿಕೊಳ್ಳುವಿಕೆ ಮುಂದುವರಿದಿರುವುದಾಗಿ ಅಡಿಕೆ ವ್ಯಾಪಾರಿಗಳು ದೂರಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿನಿಧಿಗಳು ತಿಳಿಸಿದ್ದಾರೆ.
ಅಡಿಕೆ ವ್ಯಾಪಾರ ಮತ್ತು ರೈತರ ಬದುಕಿಗೆ ನೇರ ಪರಿಣಾಮ ಬೀರುವ ಈ ಬೆಳವಣಿಗೆ ರಾಜ್ಯದ ಅಡಿಕೆ ವಲಯದಲ್ಲಿ ಇದೀಗ ಈ ಸಂಗತಿಯು ತೀವ್ರ ಚರ್ಚೆಗೆ ಕಾರಣವಾಗಿದೆ. ಅಡಿಕೆ ಸಾಗಾಟಕ್ಕೆ ಸಂಬಂಧಿಸಿದ ಈ ಬೆಳವಣಿಗೆ ರಾಜ್ಯದ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಆತಂಕ ಹೆಚ್ಚಿಸಿದೆ.
Arecanut growers and traders from Karnataka have sought the intervention of former Chief Minister B.S. Yediyurappa and Shivamogga MP B.Y. Raghavendra after several arecanut-laden trucks were reportedly stopped by Maharashtra FDA authorities. Traders claim that over 50 trucks carrying arecanut to northern Indian markets have been detained, affecting trade and farmer interests.
ಮಹಾರಾಷ್ಟ್ರದಲ್ಲಿ50 ಕ್ಕೂ ಹೆಚ್ಚು ಅಡಿಕೆ ಲಾರಿಗಳಿಗೆ ತಡೆ – ವ್ಯಾಪಾರಿಗಳಿಗೆ ಸಂಕಷ್ಟ- ಶಿವಮೊಗ್ಗ ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ https://t.co/OgLvq3RVIs #Karnataka #Agriculture #Farmers #Arecanut #BreakingNews #TheRuralMirror pic.twitter.com/U8cxn17mup
— theruralmirror (@ruralmirror) June 19, 2026

