ಈಗಿನ ಪರಿಸ್ಥಿತಿಯಲ್ಲಿ ಒಂದು ಪ್ರಶ್ನೆ ಎದುರಾಗುತ್ತದೆ. ಇಂದು ಮಹಾರಾಷ್ಟ್ರ ಸರ್ಕಾರದ ಆಹಾರ ಸುರಕ್ಷತಾ ಇಲಾಖೆಯ ಮುಖ್ಯ ಅಧಿಕಾರಿ ನಾಳೆ ಮತ್ತೊಂದು ಇಲಾಖೆಗೆ ವರ್ಗಾವಣೆಯಾಗಬಹುದು. ಅದರ ನಂತರ ಎಂದಿನಂತೆ ಒಳ್ಳೆಯ ಅಡಿಕೆಯೂ, ಕಲಬೆರಕೆ ಅಡಿಕೆಯೂ ಯಾವುದೇ ಅಡೆತಡೆ ಇಲ್ಲದೆ ಉತ್ತರ ಭಾರತದ ಮಾರುಕಟ್ಟೆಗಳನ್ನು ತಲುಪಬಹುದು. ಆದರೆ ಇದು ಎಷ್ಟು ದಿನ?, ಒಂದು ದಿನ ನ್ಯಾಯಾಲಯದಲ್ಲಿ ಅಡಿಕೆ ಕುರಿತ ತೀರ್ಪು ಬರುವವರೆಗೆ ಮಾತ್ರ.ಒಮ್ಮೆ ಅಡಿಕೆಗೆ “ಕ್ಯಾನ್ಸರ್ಕಾರಕ” ಎಂಬ ಕಳಂಕ ಅಧಿಕೃತ ದಾಖಲೆಗಳಲ್ಲಿ ಗಟ್ಟಿಯಾಗಿ ನೆಲೆಗೊಂಡರೆ, ಸಾವಿರಾರು ವರ್ಷಗಳಿಂದ ಪೂಜನೀಯವಾಗಿದ್ದ, ಔಷಧೀಯ ಗುಣಗಳಿರುವ ಬೆಳೆ ಎಂಬ ಹೆಸರಿಗಿಂತ, ಕಲಬೆರಕೆ ಮಾಡಿದ ಕೆಲವರ ತಪ್ಪಿನಿಂದ ಇಡೀ ಅಡಿಕೆ ಉದ್ಯಮವೇ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಅಡಿಕೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬೆಳೆ. ಆಗಬೇಕಾಗಿರುವುದು “ಅಡಿಕೆ ಬ್ಯಾನ್” ಅಲ್ಲ… “ಕಲಬೆರಕೆ ಅಡಿಕೆ ಬ್ಯಾನ್” ಆಗಬೇಕು.
“ಮಲೆನಾಡಿಗೆ ಅಡಿಕೆಯೇ ಐಕಾನಿಕ್ ಬೆಳೆ. ಮಲೆನಾಡಿಗೆ ಅಡಿಕೆಯೇ ಭೂಷಣ. ಮಲೆನಾಡಿನಲ್ಲಿ ಆರೋಗ್ಯಕರ, ಆರೋಗ್ಯವರ್ಧಕ ಅಡಿಕೆ ತಯಾರಾಗಲಿ. ಅಡಿಕೆಗೆ ಮಾನ ಹೋಗದಿರಲಿ.”
ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಗುರುತು ಬೇಕು : ಸುಮಾರು ಮೂವತ್ತು ವರ್ಷಗಳ ಹಿಂದೆ ಗುಟ್ಕಾ ಉದ್ಯಮದ ಕಾರಣ ಅಡಿಕೆಗೆ ಭಾರೀ ಬೇಡಿಕೆ ಬಂದಾಗಲೇ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಗುರುತು ಹಾಗೂ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕಾಗಿತ್ತು. ಆದರೆ ಆಗ ಹೆಚ್ಚಿನ ಗಮನ ಬೆಲೆ ಹಾಗೂ ವ್ಯಾಪಾರದ ಮೇಲೆಯೇ ಇದ್ದ ಕಾರಣ, ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಮತ್ತು ಬೇರೆ ಪ್ರದೇಶದ ಅಡಿಕೆಗಳ ನಡುವೆ ಗುಣಮಟ್ಟದ ವ್ಯತ್ಯಾಸವನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ಇಂದು ಅದರ ದುಷ್ಪರಿಣಾಮ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಲಾದರೂ ಏನು ಮಾಡಬೇಕು? : ಈಗಲಾದರೂ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸುವ ಪ್ರಯತ್ನ ಆರಂಭವಾಗಬೇಕು. ಪ್ರತಿ ಬ್ಯಾಚ್ನ ಅಡಿಕೆಯೂ ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದ್ದು, ಯಾವುದೇ ಹಾನಿಕಾರಕ ರಾಸಾಯನಿಕ ಬಣ್ಣ ಬಳಸಿಲ್ಲ ಎಂಬುದನ್ನು ಅಧಿಕೃತವಾಗಿ ಗುಣಮಟ್ಟ ಪರೀಕ್ಷೆ ಮಾಡಿ ಪ್ರಮಾಣೀಕರಿಸಬೇಕು.ಅದನ್ನು ಖರೀದಿಸುವ ವ್ಯಾಪಾರಿಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನ ತಯಾರಕರು ತಮ್ಮ ಉತ್ಪನ್ನದ ಮೇಲೆ “ಮಲೆನಾಡಿನ ಸಾಂಪ್ರದಾಯಿಕ ಅಡಿಕೆಯಿಂದ ತಯಾರಿಸಲಾಗಿದೆ” ಅಥವಾ “ಸುರಕ್ಷಿತ ಅಡಿಕೆ ಉತ್ಪನ್ನ” ಎಂಬ ರೀತಿಯ ಗುಣಮಟ್ಟದ ಗುರುತಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಗ್ರಾಹಕರ ವಿಶ್ವಾಸವೂ ಹೆಚ್ಚಬಹುದು.
ಪ್ರತ್ಯೇಕ ಮಾರುಕಟ್ಟೆಯೇ ಭವಿಷ್ಯದ ದಾರಿ : ಮಲೆನಾಡಿನ ಒಂದು ಎಕರೆಗೆ ಸಿಗುವ ಉತ್ಪಾದನೆ ಮತ್ತು ಬಯಲುಸೀಮೆಯ ಉತ್ಪಾದನೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಸಂಪೂರ್ಣವಾಗಿ ಉತ್ಪಾದನೆಯ ಆಧಾರದಲ್ಲಿ ಸ್ಪರ್ಧಾತ್ಮಕವಾಗಿಬಿಟ್ಟರೆ, ಕಡಿಮೆ ಉತ್ಪಾದನೆಯ ಮಲೆನಾಡಿನ ರೈತರಿಗೆ ಅದೇ ದರದಲ್ಲಿ ಬದುಕು ಸಾಗಿಸುವುದು ಕಷ್ಟವಾಗಬಹುದು. ಆದ್ದರಿಂದ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆಯೇ ಭವಿಷ್ಯದ ಆಶಾಕಿರಣ.
ಗುಣಮಟ್ಟಕ್ಕೆ ಬೆಲೆ ಸಿಗಬೇಕಿತ್ತು : ಒಂದು ಕಾಲದಲ್ಲಿ ಶಿವಮೊಗ್ಗ ಹಾಗೂ ಶಿರಸಿ ಕೆಂಪಡಿಕೆಯ ಪ್ರಮುಖ ಮಾರುಕಟ್ಟೆಗಳಾಗಿದ್ದವು. ಆ ಸಮಯದಲ್ಲೇ ಮಲೆನಾಡಿನ ಅಡಿಕೆಯ ವಿಶೇಷತೆ, ಅದರ ರುಚಿ, ಸಾಂಪ್ರದಾಯಿಕ ಸಂಸ್ಕರಣೆ ಹಾಗೂ ಗುಣಮಟ್ಟವನ್ನು ದೇಶದ ಖರೀದಿದಾರರಿಗೆ ಪರಿಣಾಮಕಾರಿಯಾಗಿ ಪರಿಚಯಿಸಿದ್ದರೆ, ಇಂದಿನ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕಿಂತ ಪ್ರಮಾಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕ ಪರಿಣಾಮ ಎಲ್ಲ ಅಡಿಕೆಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ಒಂದೇ ದರದಲ್ಲಿ ಖರೀದಿಸುವ ವ್ಯವಸ್ಥೆ ಬೆಳೆದಿದೆ. ಈ ಪ್ರತ್ಯೇಕತೆ ಇಲ್ಲದಿರುವುದೇ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ದೊಡ್ಡ ಹೊಡೆತವಾಗಿದೆ. ಇಂದು ಎದುರಾಗಿರುವ ಸಮಸ್ಯೆಗೆ ಪರಿಹಾರ ಅಡಿಕೆಯನ್ನು ನಿಷೇಧಿಸುವುದಲ್ಲ. ಕಲಬೆರಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಸುರಕ್ಷಿತ ಸಂಸ್ಕರಣೆಗೆ ಉತ್ತೇಜನ, ಗುಣಮಟ್ಟದ ಪ್ರಮಾಣೀಕರಣ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣವೇ ಶಾಶ್ವತ ಪರಿಹಾರ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ