The Rural Mirror ವಾರದ ವಿಶೇಷ

ಅಡಿಕೆ ಹಿಂಗಾರ ಒಣಗುವ ರೋಗ ಗೆದ್ದ ಕೃಷಿಕನಿಗೆ ಈ ಬಾರಿ ಉತ್ತಮ ಇಳುವರಿ | ಹಿಂಗಾರ ಒಣಗುವ ರೋಗದ ನಿರ್ವಹಣೆ ಹೇಗೆ ?

Share

ಕಳೆದ ವರ್ಷ ಹಿಂಗಾರ ಒಣಗುವ ರೋಗದಿಂದ ಇಡೀ ಫಲಸು ನಷ್ಟವಾಗುವ ಸ್ಥಿತಿ ಇತ್ತು. ಕೃಷಿಕನ ಸಕಾಲಿಕ ಎಚ್ಚರಿಕೆಯಿಂದ ವಿಜ್ಞಾನಿಗಳು ತೋಟಕ್ಕೆ ಭೇಟಿ ನೀಡಿದರು. ತಕ್ಷಣವೇ ವಿಜ್ಞಾನಿಗಳ ಶಿಫಾರಸಿನಂತೆ ರೋಗ ನಿರ್ವಹಣೆ ಮಾಡಿದರು. ಈ ಬಾರಿ ಉತ್ತಮ ಫಸಲು ಕಂಡರು. ಈ ಯಶೋಗಾಥೆ ಅಡಿಕೆ ಬೆಳೆಗಾರರಿಗೆ ಮಾದರಿಯಾಗಿದೆ. ಮುಂದಿನ ತಿಂಗಳಿನಿಂದ ಈ ರೋಗ ಆರಂಭವಾಗುತ್ತದೆ. ಹೀಗಾಗಿ ಸಕಾಲಿಕ ಮುನ್ನೆಚ್ಚರಿಕೆ ಅಗತ್ಯವಾಗಿದೆ. 

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿಯ ವಿಷ್ಣು ಭಟ್‌ ಅವರ ತೋಟದಲ್ಲಿ  ಹಿಂಗಾರ ಒಣಗುವ ರೋಗ ಕಂಡುಬಂತು. ಈ ಬಗ್ಗೆ ಅನುಮಾನ ಮೂಡಿದ ತಕ್ಷಣವೇ ಅವರು ವಿಟ್ಲದ ಸಿಪಿಸಿಐಆರ್‌ ವಿಜ್ಞಾನಿಗಳನ್ನು  ಸಂಪರ್ಕಿಸಿದರು. ವಿಟ್ಲದಿಂದ ವಿಜ್ಞಾನಿಗಳಾದ ಡಾ.ಭವಿಶ್ ಹಾಗೂ ‌ ಡಾ.ಶಿವಾಜಿ ತುಬೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಿಂಗಾರ ಒಣಗುವ ರೋಗದ ಬಗ್ಗೆ ಮಾಹಿತಿ ನೀಡಿ ರೋಗ ನಿರ್ವಹಣೆಯ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸಲಹೆ ನೀಡಿದರು. ಅದಾಗಿ ಒಂದು ತಿಂಗಳಲ್ಲಿ  ರೋಗ ನಿಯಂತ್ರಣ ಬಂದು ಉತ್ತಮ ಫಸಲನ್ನು  ಈ ಬಾರಿ ಕಂಡರು. ಅದಕ್ಕಿಂತಲೂ ಹಿಂದೆ ಕಡಬ ಬಳಿಯ ಕೃಷಿಕರೊಬ್ಬರ ತೋಟದಲ್ಲಿ  ಹಿಂಗಾರ ಒಣಗುವ ರೋಗ ಕಂಡುಬಂದಿತ್ತು, ಆದರೆ ಆ ಕೃಷಿಕ ಸಕಾಲಿಕವಾಗಿ ಗಮನಿಸದೇ ಇಡೀ ತೋಟದ ಫಲಸು ನಷ್ಟವಾಗಿತ್ತು. ಹೀಗಾಗಿ ಅಡಿಕೆ ಬೆಳೆಗಾರರು ಮುಂದಿನ ಎರಡು ತಿಂಗಳು ನಿಗಾ ಇರಿಸಿದರೆ ಈ ರೋಗದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ವಿಜ್ಞಾನಿಗಳ ಸಲಹೆ ಹೀಗಿದೆ……

ರೋಗ ಬಾಧಿತ ಹಿಂಗಾರ

ನಿರ್ವಹಣೆ ಹೇಗೆ ?

ರೋಗ ಬಾಧಿತ ಹಿಂಗಾರವನ್ನ ತೆಗೆದು ಹಾಕುವುದು. ದೊಡ್ಡ ಮರಗಳಲ್ಲಿ ಸಾಧ್ಯ ಆಗದಿದ್ದರೂ ಮಧ್ಯಮ ಎತ್ತರದ ಮರಗಳಲ್ಲಿ ಮೂರನೇ ಕೊಯ್ಲಿನ ಸಮಯದಲ್ಲಿ ಸಾಧ್ಯವಾದಷ್ಟು ಒಣಗಿದ ಹಿಂಗಾರ ತೆಗೆಯುವುದು ಹಾಗೂ ಸಣ್ಣ ಪ್ರಾಯದ ಮರಗಳಲ್ಲಿ 2-3 ಸಲ ಒಣಗಿದ ಹಿಂಗಾರವನ್ನು ತೆಗೆಯುವುದು ಸೋಂಕು ಕಡಿಮೆ ಮಾಡಲು ಬಹಳ ಮುಖ್ಯ. ಏಕೆಂದರೆ, ಒಣಗಿದ ಹಿಂಗಾರವನ್ನು ಆಗಾಗ್ಗೆ ತೆಗೆದು ನಾಶ ಮಾಡುವುದು ಕೊಳೆರೋಗ ಮತ್ತು ಹಿಂಗಾರ ಒಣಗುವ ರೋಗದ ನಿರ್ವಹಣೆಗೆ ಬಹಳ ಒಳ್ಳೆಯದು. ಸಾಮಾನ್ಯವಾಗಿ, ಒಣಗುವ ಹಿಂಗಾರ ರೋಗದಿಂದ ಬಾಧಿತವಾದ ಹಿಂಗಾರದಲ್ಲಿ ಶಿಲೀಂಧ್ರವು 8 ತಿಂಗಳ ಕಾಲ ಮತ್ತು ಕೊಳೆರೋಗವನ್ನು ಉಂಟು ಮಾಡುವ ಫೈಟೋಪ್ತೊರ ಶಿಲೀಂಧ್ರವು ಬಾಧಿತ ಗೊನೆಯಲ್ಲಿ ಕೆಲವು ವರ್ಷಗಳ ಕಾಲ ಸ್ಥುಪ್ತಾವಸ್ಥೆಯಲ್ಲಿದ್ದು, ಪೂರಕ ವಾತಾವರಣ ಲಭ್ಯವಾದಾಗ ಅವು ಸಕ್ರೀಯವಾಗುತ್ತವೆ. ಹಾಗಾಗಿ, ಒಣಗಿದ ಹಿಂಗಾರ/ಗೊನೆಯನ್ನು ಕಿತ್ತು ನಾಶಪಡಿಸಬೇಕು.

  • ಹೆಚ್ಚು ಸಮಸ್ಯೆಯಿದ್ದರೆ ಮಾತ್ರ ಶಿಲೀಂದ್ರನಾಶಕವನ್ನು ಬಳಸಬಹುದು. ಜನವರಿ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಪ್ರೋಪಿಕೊನಝೋಲ್ Propiconazole 25EC ಎನ್ನುವ ಶಿಲೀಂದ್ರನಾಶಕವನ್ನು ರೋಗದ ತೀವ್ರತೆಗೆ ಅನುಗುಣವಾಗಿ ಒಂದು ಲೀಟರ್ ನೀರಿಗೆ 2 -3 ಎಂ.ಎಲ್ ನಂತೆ ಹಿಂಗಾರಗಳಿಗೆ ಸಿಂಪರಣೆ ಮಾಡಬಹುದು. ಇದನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಪುನಃ ಸಿಂಪರಣೆ ಮಾಡಬಹುದು.
  • ಅಡಿಕೆ ಮರದ ಉತ್ತಮ ಆರೋಗ್ಯಕ್ಕೆ ಸಮತೋಲಿತ ಪೋಷಕಾಂಶ ನೀಡುವುದು ಮುಖ್ಯ. ಹುಳಿಮಣ್ಣಿಗೆ ಸೆಪ್ಟೆಂಬರ್ ತಿಂಗಳಲ್ಲಿ ಡೋಲೋಮೈಟ್ ಸುಣ್ಣವನ್ನು ಪ್ರತೀ ಮರಕ್ಕೆ 200-250 ಗ್ರಾಂನಂತೆ ಕಾಂಡದಿಂದ 3 ಅಡಿ ದೂರದವರೆಗೆ ಹರಡಬಹುದು. ಅಕ್ಟೋಬರ್ ತಿಂಗಳಲ್ಲಿ ಸಾಕಷ್ಟು ಸಾವಯವ ಗೊಬ್ಬರ, 110 ಗ್ರಾಂ ಯೂರಿಯ, 100 ಗ್ರಾಂ ರಾಕ್ ಫಾಸ್ಫೇಟ್ ಮತ್ತು 120 ಗ್ರಾಂ ಪೊಟಾಷ್ ಗೊಬ್ಬರವನ್ನು ಪ್ರತೀ ಮರಕ್ಕೆ ನೀಡಬಹುದು. ಇದನ್ನು ಫೆಬ್ರವರಿ ತಿಂಗಳಲ್ಲಿ ಪುನರಾವರ್ತನೆ ಮಾಡಬಹುದು. ಪೊಟ್ಯಾಸಿಯಂ ಪೋಷಕಾಂಶದ ಬಳಕೆ ಆಡಿಕೆಯಲ್ಲಿ ಬಹಳ ಮುಖ್ಯ. ಇದರ ಕಡಿಮೆ ಬಳಕೆ ಮತ್ತು ಸಾರಜನಕದ ಹೆಚ್ಚಿನ ಬಳಕೆಯು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಾಯಿ ಕಟ್ಟಲು ಮತ್ತು ಅದರ ಬೆಳವಣಿಗೆಗೆ ಪೊಟಾಶಿಯಂ ಬಹಳ ಮುಖ್ಯ. ಸಾವಯವ ಕೃಷಿಯಲ್ಲಿ ಬೂದಿ ಮತ್ತು ಸುಡುಮಣ್ಣನ್ನು ಬಳಸಬಹುದು. ಯೂರಿಯ ಮತ್ತು ಪೊಟಾಷ್ ಗೊಬ್ಬರಗಳನ್ನು ಹೆಚ್ಚು ಕಂತುಗಳಲ್ಲಿ ಕೊಟ್ಟರೆ ಪ್ರಯೋಜನ ಜಾಸ್ತಿ.
ವಿಜ್ಞಾನಿಗಳ ಭೇಟಿ
  • ಡಿಸೆಂಬರ್ ತಿಂಗಳಲ್ಲಿ ಜಿಂಕ್ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಬುಡಕ್ಕೆ ಹಾಕಿದರೆ ಕಾಯಿ ಕಟ್ಟುವುದಕ್ಕೆ ಒಳ್ಳೆಯದು. ಆದರೆ, ಸಾಮಾನ್ಯ ಮರಕ್ಕೆ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದಲ್ಲ.
ಕಳೆದ ವರ್ಷ ಸಿಪಿಸಿಆರ್‌ಐ ವಿಜ್ಞಾನಿಗಳಾದ ಡಾ.ಭವಿಶ್‌ ಹಾಗೂ ತಂಡ ನಮ್ಮ ತೋಟಕ್ಕೆ ಆಗಮಿಸಿ ಹಿಂಗಾರ ಒಣಗುವ ರೋಗವನ್ನು ಪತ್ತೆ ಮಾಡಿ ನಿರ್ವಹಣಾ ಕ್ರಮಗಳಿಗೆ ಕೆಲವು ಶಿಫಾರಸು ಮಾಡಿದ್ದರು. ಆ ಪ್ರಕಾರ ತಕ್ಷಣವೇ ನಿರ್ವಹಣೆ ಮಾಡಿ ರೋಗ ನಿಯಂತ್ರಣವಾಗಿತ್ತು. ಇಳುವರಿ ಉತ್ತಮವಾಗಿ ಬಂದಿತ್ತು. ಹೀಗಾಗಿ ರೈತ ಪರವಾದ ಈ ವಿಜ್ಞಾನಿಗಳಿಗೆ ಧನ್ಯವಾದಗಳು. ಇಂತಹ ರೋಗದ ಬಗ್ಗೆ ಬೆಳೆಗಾರರು ನಿಗಾ ಇರಿಸಬೇಕಾದ್ದು ಅಗತ್ಯ
– – ವಿಷ್ಣು ಭಟ್‌, ಕೃಷಿಕ , ಕೋಡಪದವು
ರೋಗ ನಿಯಂತ್ರಣವಾಗಿರುವುದು

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |

ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…

6 hours ago

ಸುನಿತಾ ವಿಲಿಯಮ್ಸ್ ಈ ಸಮಾಜಕ್ಕೆ ಸ್ಫೂರ್ತಿ ಏಕೆ…?

ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…

11 hours ago

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…

13 hours ago

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!

ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…

14 hours ago

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…

15 hours ago

ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…

15 hours ago