ಈ ಬಾರಿ ಮೇ.17 ರಿಂದ ಮಲೆನಾಡು-ಕರಾವಳಿ ಭಾಗದಲ್ಲಿ ಮಳೆ ಆರಂಭವಾಯಿತು. ವಾಯುಭಾರ ಕುಸಿತ ಹಾಗೂ ಅತಿಯಾದ ಬಿಸಿಗಾಳಿಯ ಕಾರಣದಿಂದ ಮೇ ತಿಂಗಳಲ್ಲಿ ಮಳೆ ಸುರಿಯಿತು. ಅದರ ಜೊತೆಯೇ ಈ ಬಾರಿ ಮುಂಗಾರು ಮಳೆ ಕೂಡಾ ಒಂದು ವಾರ ಬೇಗನೆ ಆರಂಭವಾಯಿತು. ಹೀಗೆ ಆರಂಭವಾದ ಮಳೆ ಬಿಡುವು ನೀಡಲಿಲ್ಲ. ಸಾಮಾನ್ಯವಾಗಿ ಬಿಸಿಲು ಇದ್ದರೆ ಕೊಳೆರೋಗ ಮುಂಜಾಗ್ರತಾ ಸಿಂಪಡಣೆ ಸರಿಯಾಗಿರುತ್ತದೆ. ಈ ಸಲ ಜೂನ್.3 ರಿಂದ 8 ರವರೆಗೆ ಕೆಲವು ಕಡೆ ಮಳೆಯ ಪ್ರಮಾಣ ಕಡಿಮೆ ಇತ್ತು. ಅದಾದ ಬಳಿಕ ಜುಲೈ ತಿಂಗಳಲ್ಲಿ ಒಂದೆರಡು ದಿನ ಮಳೆಯ ಪ್ರಮಾಣ ಕಡಿಮೆ ಇತ್ತು. ಅದರ ಹೊರತುಪಡಿಸಿ ಉಳಿದೆಲ್ಲಾ ದಿನವೂ ಮಳೆ ಇತ್ತು. ಆ ಮಳೆಯ ನಡುವೆಯೇ ಅಡಿಕೆಗೆ ಔಷಧಿ ಸಿಂಪಡಣೆ ನಡೆಸಲೇಬೇಕಾದ ಅನಿವಾರ್ಯತೆ ಕೃಷಿಕರಿಗೆ ಬಂದಿತ್ತು, ಬಿಸಿಲು ಇದ್ದು ಔಷಧಿ ಸಿಂಪಡಣೆಗೆ ಅವಕಾಶವೇ ಸಿಗಲಿಲ್ಲ.
ಹೀಗಾಗಿ, ಸೀಮಿತ ನುರಿತ ಕಾರ್ಮಿಕರೂ ಇರುವುದರಿಂದ ಎಲ್ಲಾ ಬೆಳೆಗಾರರಿಗೂ ಔಷಧಿ ಸಿಂಪಡಣೆಗೆ ಸಾಧ್ಯವಾಗಲಿಲ್ಲ. ವಿವಿಧ ತಂಡಗಳು ಇದ್ದರೂ ಮಳೆಯ ಕಾರಣದಿಂದ ಸಿಂಪಡಣೆ ಸಾಧ್ಯವಾಗಲಿಲ್ಲ. ಜೂನ್ ಕೊನೆಗೆ ಕೆಲವು ಕಡೆ ಕೊಳೆರೋಗ ಕಾಣಿಸಿಕೊಂಡಿತು. ಈ ಸಂದರ್ಭ “ಮಳೆಯಲ್ಲಾದರೂ ಔಷಧಿ ಹೊಡೆಯಿರಿ” ಎಂದೂ ಕೆಲವು ಬೆಳೆಗಾರರು ಕಾರ್ಮಿಕರಿಗೆ ಹೇಳಿದ್ದೂ ಇದೆ. ಜುಲೈ ವೇಳೆಗೆ ಕೊಳೆರೋಗ ವ್ಯಾಪಕವಾಯಿತು. ಮಳೆ ಇದ್ದರೂ ಔಷಧಿ ಸಿಂಪಡಣೆ ನಡೆಸಲೇಬೇಕಾಯಿತು, ಹೀಗಾಗಿ ಔಷಧಿ ಸಿಂಪಡಣೆಯಾದರೂ ಕೇವಲ 20 ದಿನದಲ್ಲಿ ಮತ್ತೆ ಕೊಳೆರೋಗ ಕಾಣಿಸಿಕೊಂಡಿದೆ. ಈಗಲೂ ಕೊಳೆರೋಗದ ಅಡಿಕೆ ಬೀಳುತ್ತಿದೆ ಎನ್ನುತ್ತಾರೆ ಹಲವು ಕೃಷಿಕರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಜುಲೈ ಅಂತ್ಯದ ವೇಳೆ ಅಂದರೆ ಆಗಸ್ಟ್ ಮೊದಲ ವಾರದವರೆಗೆ ಗಮನಿಸಿದಂತೆ ಕೃಷಿಕರು ಅಡಿಕೆ ಕೊಳೆರೋಗ ತೀವ್ರತೆ ಬಗ್ಗೆ ಕೇಳಿದಾಗ ಶೇ.10 ರಷ್ಟು ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.12.4 , ಶೇ.10-20 ರಷ್ಟು ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.13, ಶೇ.20-30 ರಷ್ಟು ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.16.9 , ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.19.2 , ಶೇ.40-50 ರಷ್ಟು ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.19.8 ಹಾಗೂ ಶೇ.50 ಕ್ಕಿಂದ ಅಧಿಕ ಅಡಿಕೆ ಕೊಳೆರೋಗದಿಂದ ನಷ್ಟವಾಗಿದೆ ಎಂದವರು ಶೇ.18.6 ರಷ್ಟು ಕೃಷಿಕರು ಇದ್ದರು. ಆದರೆ ಆಗಸ್ಟ್ ಅಂತ್ಯ ವೇಳೆಗೆ ಇದೆಲ್ಲಾ ಚಿತ್ರಣ ಬದಲಾಗಿದೆ. ಶೇ.50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ನಷ್ಟವಾಗಿದೆ ಎಂದ ಕೃಷಿಕರ ಸಂಖ್ಯೆ ಶೇ.70 ಕ್ಕಿಂತ ಹೆಚ್ಚಾಗಿದ್ದರು. ಇದು ಕೊಳೆರೋಗದ ತೀವ್ರತೆಗೆ ಸಾಕ್ಷಿಯಾಗಿದೆ.
ಕೊಳೆರೋಗ ನೋಡುತ್ತಾ ಅಡಿಕೆ ಬೆಳೆಗಾರರು ಕುಳಿತರೇ…? ಇಲ್ಲ. ಅಡಿಕೆ ಬೆಳೆಗಾರರು ಕೊಳೆರೋಗ ನಿಯಂತ್ರಣಕ್ಕೆ ವಿವಿಧ ಪ್ರಯತ್ನ ಮಾಡುತ್ತಲೇ ಬಂದವರು. ಮಳೆಯ ನಡುವೆಯೇ ಅನೇಕರು ಬೋರ್ಡೋ ಸಿಂಪಡಣೆ ಮಾಡಿದರು. ಕಾರ್ಮಿಕರು ಲಭ್ಯವಾಗದೇ ಇದ್ದರೂ ದೋಟಿಯ ಮೂಲಕ ತಾವೇ ಸ್ವತ: ಮಳೆಗೆ ಒಂಚೂರು ಬಿಡುವು ಸಿಕ್ಕಾಗ ಔಷಧಿ ಹೊಡೆದರು, ಮಳೆ ಎಂದು ಕಾಯಲೇ ಇಲ್ಲ, ಮಳೆ ಇದ್ದಾಗಲೂ ಸಿಂಪಡಿಸಿದರು. ಇದರಲ್ಲಿ ಶೇ. 67 ರಷ್ಟು ಕೃಷಿಕರು ಬೋರ್ಡೋ ಮಾತ್ರವೇ ಸಿಂಪಡಣೆ ಮಾಡಿದರು.
ಈ ಬಾರಿ ವಿಶೇಷ ಎಂಬಂತೆ ಶೇ.20.3 ರಷ್ಟು ಕೃಷಿಕರು ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ಜೊತೆಗೆ ಮೆಟಲಾಕ್ಸಿಲ್ ಸೇರಿಸಿ ಸಿಂಪಡಣೆ ಮಾಡಿದರು. ಬೋರ್ಡೋ ಜೊತೆಗೆ ಪ್ಲಾಂಟಾಮೈಸಿನ್ ಶೇ.1.3 ಕೃಷಿಕರು, ಬೋರ್ಡೋ ಜೊತೆಗೆ ಮೆಟಲಾಕ್ಸಿಲ್ ಮತ್ತು ಮ್ಯಾಂಕೋಜೆಬ್ ಶೇ.3.6 ರಷ್ಟು ಕೃಷಿಕರು , ಬೋರ್ಡೋ ಜೊತೆಗೆ ಮ್ಯಾಂಡಿಪ್ರೊಪಾಮಿಡ್ ಶೇ.1.1 ಕೃಷಿಕರು ಹಾಗೂ ಬೋರ್ಡೋ ಜೊತೆಗೆ ಇತರ ಔಷಧಿಗಳನ್ನು ಶೇ.6.8 ರಷ್ಟು ಕೃಷಿಕರು ಸಿಂಪಡಣೆ ಮಾಡಿ ಕೊಳೆರೋಗ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ಮಾಡಿದರು. ಹೀಗಾದರೂ ಕೊಳೆರೋಗ ವ್ಯಾಪಿಸಿತು. ಕೆಲವು ಕಡೆ ನಿಯಂತ್ರಣವಾಯಿತು.
ಸಿಪಿಸಿಆರ್ಐ ಕೊಳೆರೋಗದ ತಕ್ಷಣ ನಿಯಂತ್ರಣಕ್ಕೆ ಮೆಟಾಕ್ಸಿಲ್ ಸಿಂಪಡಣೆ ಮಾಡಿ ಅದಾಗಿ 15 ದಿನಗಳ ಬಳಿಕ ಬೋರ್ಡೋ ಸಿಂಪಡಣೆ ಮಾಡಲು ಶಿಫಾರಸು ಮಾಡಿತು. ಬೋರ್ಡೋ ಬದಲಿಗೆ ಮ್ಯಾಂಡಿಪ್ರೊಪಾಮಿಡ್ ಬಳಕೆ ಮಾಡಬಹುದು ಎಂದು ಕೂಡಾ ಸಲಹೆ ನೀಡಿತ್ತು. ಬೋರ್ಡೋ ಜೊತೆಗೆ ಮೆಟಲಾಕ್ಸಿಲ್ ಸೇರಿಸುವುದು ಸರಿಯಲ್ಲ, ಅದರಲ್ಲಿ ಕೆಲವೊಂದು ರಾಸಾಯನಿಕ ಬದಲಾವಣೆ ಸಾಧ್ಯ ಇದೆ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಸಿಪಿಸಿಆರ್ಐ ಎರಡನ್ನೂ ಜೊತೆಗೆ ಸೇರಿಸಬೇಡಿ ಎಂದಷ್ಟೇ ಸಲಹೆ ನೀಡಿತ್ತು. ಹಾಗಿದ್ದರೆ ಜೊತೆಗೆ ಸೇರಿಸಿ ಸಿಂಪಡಿಸಿದ ಕಡೆ ಏನಾಗಿದೆ..? ಕೊಳೆರೋಗ ನಿಯಂತ್ರಣಕ್ಕೆ ಬಂದಿದ್ದರೆ, ಈ ಬಗ್ಗೆ ಕ್ಲಿನಿಕಲ್ ಆಗಿರುವ ಅಧ್ಯಯನ ಅಗತ್ಯ ಇದೆ. ಪ್ರಯೋಗಾಲಯದ ಒಳಗೆ ಮೆಟಲಾಕ್ಸಿಲ್ ಹಾಗೂ ಬೋರ್ಡೋ ದ್ರಾವಣ ಜೊತೆಯಾದರೆ ಪರಿಣಾಮಗಳು ಏನೇನು..? ಎರಡೂ ಕೂಡಾ ಶಿಲೀಂದ್ರನಾಶಕ. ಒಂದು ಅಂತರ್ ವ್ಯಾಪಿಯಾಗಿ ಕೆಲಸ ಮಾಡುತ್ತದೆ, ಇನ್ನೊಂದು ಹೊರಗಿಂದ ಕೆಲಸ ಮಾಡುತ್ತದೆ. ಈಗಾಗಲೇ ಏರಡನ್ನೂ ಜೊತೆಗೇ ಸಿಂಪಡಣೆ ಮಾಡಿರುವ ಅಡಿಕೆ ಬೆಳೆಗಾರರಲ್ಲಿ ಬದಲಾವಣೆ ಏನಾಗಿದೆ..? ಈ ಬಗ್ಗೆ ಅಧ್ಯಯನ ಬೇಕಿದೆ ಎನ್ನುವುದು ಇಲ್ಲಿ ಕಂಡುಬರುವ ಅಂಶ. (ನಾಳೆ ಮುಂದುವರಿಯುತ್ತದೆ…. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ದ ರೂರಲ್ ಮಿರರ್.ಕಾಂ ಸಮೀಕ್ಷಾ ವರದಿ) ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…