Advertisement
MIRROR FOCUS

ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ

Share

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದ ಕೃಷಿ ಆರ್ಥಿಕತೆಯ ಬೆನ್ನೆಲುಬಾದ ಅಡಿಕೆಯ ಮಾರುಕಟ್ಟೆ ಧಾರಣೆಯಲ್ಲಿ ಗಮನಾರ್ಹ ಏರಿಳಿತಗಳು ಕಾಣಿಸುತ್ತಿದೆ. ರೈತರಲ್ಲಿ ಆತಂಕ ಹುಟ್ಟಿಸಿರುವ ಈ ಬೆಲೆ ಕುಸಿತವನ್ನು ಕೇವಲ ಸ್ಥಳೀಯ ಉತ್ಪಾದನೆ ಅಥವಾ ಪೂರೈಕೆಯ ಪರಿಣಾಮವೆಂದು ಮಾತ್ರ ನೋಡುವುದು ಸರಿಯಾದ ವಿಶ್ಲೇಷಣೆಯಾಗುವುದಿಲ್ಲ. ವಾಸ್ತವವಾಗಿ, ಜಾಗತಿಕ ರಾಜಕೀಯ ಉದ್ವಿಗ್ನತೆ, ಹಣಕಾಸಿನ ಅನಿಶ್ಚಿತತೆ ಹಾಗೂ ಮಾರುಕಟ್ಟೆಯ ಮನೋವೈಜ್ಞಾನಿಕ ಅಂಶಗಳು ಒಟ್ಟಾಗಿ ಈ ಸ್ಥಿತಿಗೆ ಕಾರಣವಾಗಿವೆ. ಇತ್ತೀಚಿನ ಅಂತರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು—ವಿಶೇಷವಾಗಿ ಮಧ್ಯಪ್ರಾಚ್ಯದ ಉದ್ವಿಗ್ನತೆ—ಜಾಗತಿಕ ಮಾರುಕಟ್ಟೆಯ ಮೇಲೆ ಅನಿಶ್ಚಿತತೆಯ ನೆರಳನ್ನು ಬೀರುತ್ತಿದ್ದು, ಅದರ ಪ್ರತಿಫಲನ ಸ್ಥಳೀಯ ಕೃಷಿ ಮಾರುಕಟ್ಟೆಯಲ್ಲಿಯೂ ಕಾಣುತ್ತಿದೆ.

ಅನಿಶ್ಚಿತತೆಯ ಆರ್ಥಿಕ ತತ್ವ- ಫ್ರಾಂಕ್ ನೈಟ್‌ನ ದೃಷ್ಟಿಕೋನ:  ಅರ್ಥಶಾಸ್ತ್ರಜ್ಞ ಫ್ರಾಂಕ್ ನೈಟ್ ತಮ್ಮ ‘ಅಪಾಯ ಮತ್ತು ಅನಿಶ್ಚಿತತೆಯ ಸಿದ್ಧಾಂತ’ದಲ್ಲಿ ಮಾರುಕಟ್ಟೆಯ ಮನೋಭಾವವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ಲೆಕ್ಕ ಹಾಕಬಹುದಾದ ಅಪಾಯಕ್ಕಿಂತಲೂ ಊಹಿಸಲಾಗದ ಅನಿಶ್ಚಿತತೆ ಮಾರುಕಟ್ಟೆಯನ್ನು ಹೆಚ್ಚು ಕದಲಿಸುತ್ತದೆ. ಜಾಗತಿಕ ಮಟ್ಟದಲ್ಲಿ ಯುದ್ಧ ಅಥವಾ ರಾಜಕೀಯ ಉದ್ವಿಗ್ನತೆ ಹೆಚ್ಚಾದಾಗ ಹೂಡಿಕೆದಾರರು ಸಾಮಾನ್ಯವಾಗಿ ಸುರಕ್ಷಿತ ಆಸ್ತಿ ವರ್ಗಗಳತ್ತ ತಿರುಗುತ್ತಾರೆ. ಇದರಿಂದ ಕೃಷಿ ವಾಣಿಜ್ಯ ವಸ್ತುಗಳಲ್ಲಿ ಹಣದ ಹರಿವು ತಾತ್ಕಾಲಿಕವಾಗಿ ಕುಗ್ಗುತ್ತದೆ. ಅಡಿಕೆ ಮಾರುಕಟ್ಟೆಯಲ್ಲಿಯೂ ಇದೇ ಪ್ರವೃತ್ತಿ ಗೋಚರಿಸುತ್ತಿದೆ. ಉತ್ತರ ಭಾರತದ ಸಗಟು ವ್ಯಾಪಾರಿಗಳು ದೊಡ್ಡ ಪ್ರಮಾಣದ ದಾಸ್ತಾನು ಮಾಡಲು ಹಿಂದೆ ಸರಿಯುತ್ತಿರುವುದು ಇದರ ಪ್ರಮುಖ ಲಕ್ಷಣವಾಗಿದೆ.

ಸಟ್ಟಾ ವ್ಯಾಪಾರ ಮತ್ತು ಭವಿಷ್ಯದ ಬೆಲೆ ಅಂದಾಜು:  ಮಾರುಕಟ್ಟೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸಟ್ಟಾ ವ್ಯಾಪಾರ (Speculation). ಸಾಮಾನ್ಯವಾಗಿ ಸಟ್ಟಾ ವ್ಯಾಪಾರವನ್ನು ಜೂಜಾಟದೊಂದಿಗೆ ಹೋಲಿಸಲಾಗುತ್ತದೆ, ಆದರೆ ಆರ್ಥಿಕ ದೃಷ್ಟಿಯಲ್ಲಿ ಇದು ಭವಿಷ್ಯದ ಬೆಲೆ ಬದಲಾವಣೆಗಳನ್ನು ಅಂದಾಜಿಸಿ ಇಂದೇ ವ್ಯವಹಾರಿಕ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಾಗಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಬಹುದು ಎಂಬ ಭೀತಿ ಮಾರುಕಟ್ಟೆಯಲ್ಲಿ ವ್ಯಕ್ತವಾಗಿದೆ. ತೈಲ ಬೆಲೆ ಏರಿದರೆ ಸಾರಿಗೆ ವೆಚ್ಚವೂ ಹೆಚ್ಚುತ್ತದೆ. ದಕ್ಷಿಣ ಭಾರತದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆಯನ್ನು ಸಾಗಿಸಲು ರಸ್ತೆ ಸಾರಿಗೆ ಮುಖ್ಯವಾಗಿರುವುದರಿಂದ, ಸಾಗಾಣಿಕೆ ವೆಚ್ಚದ ಭವಿಷ್ಯ ಭೀತಿ ಈಗಿನ ಖರೀದಿ ದರಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವಾಗಿ ವ್ಯಾಪಾರಿಗಳು ಖರೀದಿ ದರವನ್ನು ಕಡಿಮೆ ಮಾಡುವ ಮೂಲಕ ಭವಿಷ್ಯದ ವೆಚ್ಚದ ಅಪಾಯವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಹಣದ ಹರಿವು ಮತ್ತು ದ್ರವ್ಯತೆಯ ಸಮಸ್ಯೆ: ಮಾರುಕಟ್ಟೆಯ ಮತ್ತೊಂದು ಪ್ರಮುಖ ಅಂಶವೆಂದರೆ ಹಣದ ಚಲಾವಣೆಯ ವೇಗ (Velocity of circulation of Money) ಮತ್ತು ದ್ರವ್ಯತೆ (Liquidity). ಆರ್ಥಿಕ ವರ್ಷದ ಕೊನೆಯ ತಿಂಗಳಾದ ಮಾರ್ಚ್‌ನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಲೆಕ್ಕಪತ್ರಗಳ ಸಮಾಪ್ತಿಗೆ ಸಂಬಂಧಿಸಿದ ಒತ್ತಡ ಹೆಚ್ಚಿರುತ್ತದೆ. ಇದರಿಂದ ವ್ಯಾಪಾರಿಗಳಲ್ಲಿ ನಗದು ಲಭ್ಯತೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಕೆಲವು ರೈತರು ಸಾಲ ಮರುಪಾವತಿ ಅಥವಾ ವೈಯಕ್ತಿಕ ಆರ್ಥಿಕ ಅವಶ್ಯಕತೆಗಳಿಗಾಗಿ ತಮ್ಮ ದಾಸ್ತಾನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಇದರಿಂದ ಪೂರೈಕೆ ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ. ಬೇಡಿಕೆ ಕುಗ್ಗಿರುವ ಸಂದರ್ಭದಲ್ಲಿ ಪೂರೈಕೆ ಹೆಚ್ಚಾದರೆ ಮಾರುಕಟ್ಟೆ ದರಗಳು ಸಹಜವಾಗಿ ಕುಸಿಯುತ್ತವೆ. ಇದು ಆರ್ಥಿಕ ಭಾಷೆಯಲ್ಲಿ ತಾತ್ಕಾಲಿಕ ಮಾರುಕಟ್ಟೆ ತಿದ್ದುಪಡಿ (Temporary Market Correction) ಎಂದು ಕರೆಯಲ್ಪಡುತ್ತದೆ.

ಜಾಗತಿಕ ಬಿಕ್ಕಟ್ಟಿನಲ್ಲೂ ಅವಕಾಶ: ಆದರೆ ಈ ಅನಿಶ್ಚಿತತೆಯ ನಡುವೆ ಒಂದು ಧನಾತ್ಮಕ ಅಂಶವೂ ಅಡಗಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾದಾಗ ಅಂತರಾಷ್ಟ್ರೀಯ ಸಾಗಣೆ ವ್ಯವಸ್ಥೆಯಲ್ಲಿ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಿದೇಶಿ ಅಡಿಕೆಯ ಆಮದು ಪ್ರಮಾಣ ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ದೇಶೀಯ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಸಿಗಬಹುದು. ದೀರ್ಘಾವಧಿಯಲ್ಲಿ ಇದು ಸ್ಥಳೀಯ ರೈತರಿಗೆ ಲಾಭದಾಯಕವಾಗುವ ಸಾಧ್ಯತೆ ಇದೆ.

ರೈತರಿಗೆ ತಾಳ್ಮೆಯೇ ಮುಖ್ಯ ತಂತ್ರ:  ಒಟ್ಟಾರೆಯಾಗಿ ನೋಡಿದರೆ, ಇಂದಿನ ಅಡಿಕೆ ಮಾರುಕಟ್ಟೆಯ ಏರಿಳಿತವು ಕೇವಲ ಕೃಷಿ ಉತ್ಪಾದನೆಯ ಸಮಸ್ಯೆಯಲ್ಲ. ಇದು ಜಾಗತಿಕ ರಾಜಕೀಯ, ಹಣಕಾಸು ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಮನೋವೈಜ್ಞಾನಿಕ ಅಂಶಗಳ ಸಂಯುಕ್ತ ಪರಿಣಾಮವಾಗಿದೆ. ಆರ್ಥಿಕ ಸಿದ್ಧಾಂತಗಳ ಪ್ರಕಾರ ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ‘ಒತ್ತಡ ಪ್ರೇರಿತ ಮಾರಾಟ’ ಮಾಡುವುದಕ್ಕಿಂತ ತಾಳ್ಮೆ ವಹಿಸುವುದು ಉತ್ತಮ ತಂತ್ರವಾಗಿದೆ. ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ ನಂತರ ಮಾರುಕಟ್ಟೆ ನಿಧಾನವಾಗಿ ಸ್ಥಿರಗೊಳ್ಳುವ ಸಾಧ್ಯತೆ ಇರುವುದರಿಂದ, ರೈತರು ಮಾರಾಟದ ಸಮಯವನ್ನು ಸಮಂಜಸವಾಗಿ ಆಯ್ಕೆಮಾಡುವುದು ಆರ್ಥಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Recent fluctuations in arecanut prices are not solely due to local production factors but are influenced by global political tensions, financial liquidity constraints, and market psychology. Experts suggest that the current decline may be a temporary market correction, and farmers could benefit by avoiding distress sales and timing their market participation carefully as liquidity is expected to improve after the new financial year.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅರುಣ್‌ ಕುಮಾರ್ ಕಾಂಚೋಡು

ಅರುಣ್‌ ಕುಮಾರ್‌ ಕಾಂಚೋಡು ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪದವೀಧರರು. ಸದ್ಯ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳಿಗೆ ಆದ್ಯತೆ ನೀಡುವ ಯುವ ಕೃಷಿಕ. Arun Kumar Kanchodu is an MSc graduate in Botany. He is currently engaged in farming. He is a young farmer who prefers scientific methods in farming.

Published by
ಅರುಣ್‌ ಕುಮಾರ್ ಕಾಂಚೋಡು

Recent Posts

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ

ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…

13 hours ago

ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…

14 hours ago

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…

21 hours ago

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…

22 hours ago

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ | ಮಾರ್ಚ್‌ ತಿಂಗಳ ಇಳಿಕೆಗೆ ಹಲವು ಕಾರಣ…

ಇತ್ತೀಚೆಗೆ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬರುತ್ತಿದೆ. ವ್ಯಾಪಾರಿಗಳ ನಿಧಾನ ಖರೀದಿ,…

1 day ago

ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ

ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…

2 days ago