ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?

April 30, 2024
2:28 PM
ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ ಬಗ್ಗೆ ಬರೆದಿದ್ದಾರೆ ಮುರಲೀಕೃಷ್ಣ ಕೆಜಿ.

ಒಬ್ಬರ ಅಡಿಕೆ ಗಿಡಗಳಿಗೆ ಏನೋ ಸಮಸ್ಯೆ ಆಗಿದೆ ತಿರಿ ಸೋಗೆ ಬೆಂಕಿಯಿಂದ ಒಣಗಿದ ಹಾಗಾಗ್ತಿದೆ ಅಂತ ನೋಡಲು ಹೇಳಿದ್ರು. ಹೋಗಿ ನೋಡಿ ಬಹಳ ಕೂಲಂಕುಶವಾಗಿ ಪರಿಶೀಲಿಸಿದಾಗ ಅವರು ಕೋಳಿಗೊಬ್ಬರ, ಕುರಿಗೊಬ್ಬರ, ಯೂರಿಯಾ, ಹರಳಿಂಡಿ ,ಡಿಎಪಿ, ಸಾವಯವ ಮಿಕ್ಸ್ಚರ್ ಇತ್ಯಾದಿಗಳನ್ನು ಹಲವಾರು ಹಂತಗಳಲ್ಲಿ ಕೊಡುತ್ತಾ ಬಂದು ಗಿಡಗಳು ಅತಿಯಾದ ಸಾರಜನಕಯುಕ್ತ ಗೊಬ್ಬರವನ್ನೇ ಸೆಳೆದುಕೊಂಡು ಆ ಕಾರಣಕ್ಕೆ ಹಲವಾರು ರೋಗಗಳನ್ನೂ ಆಹ್ವಾನಿಸಿಕೊಂಡದ್ದು ಕಂಡುಬಂತು. ಜೊತೆಗೆ ಸಾಕಷ್ಟು ನೀರು ಬುಡಕ್ಕೆ ಬೀಳದಿರುವುದು ಬುಡದಲ್ಲಿ ಗೆದ್ದಲುಗಳು ಸಾವಯವ ವಸ್ತುಗಳನ್ನು ಆವರಿಸಿದ್ದು ಕಂಡುಬಂತು. ಗಿಡಗಳ ತಿರಿಯಲ್ಲಿ ಎಳೆ ಸೋಗೆಯ ರಸಹೀರುವ ಕೀಟಗಳು ಹಾಗೂ ಕೆಲವು ಸೋಗೆಗಳಲ್ಲಿ ಫಂಗಸ್ ಕೂಡ ಕಂಡುಬಂತು.

Advertisement
Advertisement

ಈ ವಿಚಾರವನ್ನು ಯಾಕೆ ವಿವರಿಸ್ತಾ ಇದ್ದೇನೆಂದರೆ ನಾನು ಕೆಲವು ವರ್ಷಗಳಿಂದ ಜೀವಾಮೃತ ವನ್ನು ಅಡಿಕೆಗಿಡಗಳಿಗೆ ಮತ್ತು ಮರಗಳ ಬುಡಕ್ಕೆ ತಲಾ ಒಂದು ಲೀ ನಂತೆ ಹಾಕಿಸುತ್ತಾ ಇದ್ದೇನೆ. ನನ್ನ ಅಡಿಕೆ ತೋಟಕ್ಕೂ ಸಿಕ್ಕಿದಷ್ಟು ಹಟ್ಟಿಗೊಬ್ಬರ, ಬೂದಿ, ಅಗತ್ಯವಿದ್ದರೆ ಪೊಟ್ಯಾಷ್ ಬಳಸುತ್ತಿದ್ದೇನೆ. ಆದರೆ ಒಂದಷ್ಟು ಅಡಿಕೆ ಗಿಡಗಳನ್ನು ಕೇವಲ ಜೀವಾಮೃತ ಮತ್ತು ಸೆಗಣಿ ತೆಂಸಿ ಕಂಪೋಸ್ಟ್ ಹಾಕಿ ಬೆಳೆಸಿದ್ದೇನೆ. ನೆಡುವಾಗ ಸಣಕಲಾಗಿದ್ದ ಇಂಟರ್ ಮಂಗಳ ಅಡಿಕೆ ಗಿಡಗಳು ಈಗ ನಾಲ್ಕು ವರ್ಷದಲ್ಲಿ ದಷ್ಟಪುಷ್ಟವಾಗಿ ಬೆಳೆದು ಹಿಂಗಾರ ಬಿಟ್ಟಿವೆ.

ಅಂದ್ರೆ ಕೇವಲ ಜೀವಾಮೃತದಿಂದ ಮತ್ತು ಹಟ್ಟಿಗೊಬ್ಬರದಿಂದ ಸಾಧ್ಯವಿಲ್ಲ ಅನ್ನುವ ಮಾತನ್ನು ನನ್ನ ಅಡಿಕೆಗಿಡಗಳು ಸುಳ್ಳಾಗಿಸಿವೆ. ಇನ್ನು ಗಿಡ್ಡಸಿಂಗಾರ,ಸುಳಿಮುರುಟುವ,ಕೊಳೆಯುವ,ಬೇರು ಕೊಳೆಯುವ ರೋಗಗಳೂ ಆ ಗಿಡಗಳಿಗೆ ಬಂದಿಲ್ಲ. ರಸ ಹೀರುವ ಕೀಟಗಳ ಬಾಧೆಯೂ ಕಂಡಿಲ್ಲ. ಇಲ್ಲವೆಂಬುದಕ್ಕೆ ಒಟ್ಟು ಎಂಬತ್ತು ಗಿಡಗಳ ಪೈಕಿ ಮೂರು ಗಿಡಗಳು ಸತ್ತು ಹೋಗಿವೆ. ಫಸಲು ರಸಗೊಬ್ಬರ ಹಾಕಿದ ಗಿಡಗಳಲ್ಲಿ ಬಂದಂತೆ ಬರಲಾರದು ಎಂಬ ಸತ್ಯದ ಅರಿವಿದೆ. ಆದರೆ ರೋಗಗಳೂ ಕೂಡ ಬರಲಾರದು ಒಂದು ವೇಳೆ ಬಂದರೂ ತಾಳಿಕೊಳ್ತವೆ,ತಾವೇ ಹೋಗಲಾಡಿಸಿಕೊಳ್ತವೆ ಅಂತ ಅನಿಸ್ತಿದೆ.

ಮೊದಲು ವಿವರಿಸಿದ ಗಿಡಗಳ ಆರೈಕೆಯಷ್ಟು ಆರೈಕೆಯನ್ನು ನಾನು ಮಾಡೇ ಇಲ್ಲ. ಅಂದ್ರೆ ಬಂಡವಾಳ ಬಹಳ ಕಡಿಮೆ. ಅದಕ್ಕೆ ತಕ್ಕಂತೆ ಒಂದು ಗಿಡ ನಾಲ್ಕೈದು ಗೊನೆ ಕೊಟ್ಟರೂ ಉತ್ತಮ ಫಸಲೇ. ಆದ್ದರಿಂದ ದೇಶೀ ಮಲೆನಾಡ ಗಿಡ್ಡ ಹಸುಗಳ ಸೆಗಣಿ’, ಗೋಮೂತ್ರದ ಬಳಕೆ ಸುಸ್ಥಿರ ಕೃಷಿಗೆ ಆಧಾರ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಮಾಡಿ ನೋಡಿದರೆ ಮನವರಿಕೆಯಾದೀತು.
ಇನ್ನೊಂದು ವಿಚಾರ- ಬೆಂಡೆ,ಬದನೆ,ಹರಿವೆ,ಸೌತೆ, ಬಸಳೆ,ತೊಂಡೆ,ಹಣ್ಣು ಹಂಪಲಿನ ಗಿಡಗಳು, ವಿಳ್ಯದೆಲೆ, ಕಾಳುಮೆಣಸು, ಇತ್ಯಾದಿ ಯಾವುದೇ ಬೆಳೆಗೆ ಜೀವಾಮೃತದ ಬಳಕೆ ಉತ್ತಮ ಫಲಿತಾಂಶ ಕೊಡಬಲ್ಲದು. ತೆಂಗಿನ ಸಿಪ್ಪೆಯ ಹುಡಿಯನ್ನು ಹರಡಿ ಅದರ ಮೇಲೆ ಸುಡುಮಣ್ಣು ಹರಡಿ ಏರುಮಡಿಯ ತರ ಮಾಡಿ ಚೆನ್ನಾಗಿ ಜೀವಾಮೃತದಿಂದ ನೆನೆಸಿ ಯಾವುದೇ ತರಕಾರಿ ಬೀಜಗಳನ್ನು ಮಿಶ್ರವಾಗಿ ಹಾಕಿದರೂ ಕೂಡ ಸೊಂಪಾಗಿ ಬೆಳೆದು ಮನೆಯ ಉಪಯೋಗಕ್ಕೆ ವಿಷರಹಿತ ತರಕಾರಿ ಪಡೆಯವಹುದು. ಸಾಲು ಮಾಡಬೇಕಾಗಿಲ್ಲ ಮಣ್ಣುಕೊಡಬೇಕಿಲ್ಲ. ವಾರಕ್ಕೊಮ್ಮೆ ಜೀವಾಮೃತ ಮತ್ತುನೀರು ಕೊಟ್ಟರೆ ಸಾಕು. ದೇಶೀ ಗೋವಿನ ಸೆಗಣಿಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಅಂತ ಹೇಳಿದ್ರೆ ಇದೇ. ಆ ಸೆಗಣಿಯನ್ನು ಲಕ್ಷ್ಮಿಯಾಗಿ ಪರಿವರ್ತಿಸುವ ಮನಸ್ಸು ನಮಗಿರಬೇಕು.

ಜೀವಾಮೃತದ ತಯಾರಿ ಮತ್ತು ಕೃಷಿಯಲ್ಲಿ ಉಪಯೋಗ ವಿಧಾನ: ಜೀವಾಮೃತ ಎಂಬ ಮಣ್ಣಿನ ತರಗತಿಯನ್ನು ಅತ್ಯುತ್ತಮ ಮಾಡಬಲ್ಲ ದ್ರಾವಣವನ್ನು ತಯಾರಿಸುವ ಮತ್ತು ಬಳಸುವ ವಿಧಾನವನ್ನು ಮೊದಲು ಕಂಡು ಹಿಡಿದವರು ಸುಭಾಷ್ ಪಾಳೆಕರ್. ನಂತರದ ದಿನಗಳಲ್ಲಿ ಅನೇಕರು ಅನೇಕ ಬದಲಾವಣೆಗಳ ಮೂಲಕ ಮಾಡಿದರೂ ಜೀವಾಮೃತ ಅಂತಲೇ ಕರೆಯುತ್ತಾರೆ. ಆದರೆ ಜೀವಾಮೃತದ ಆವಿಷ್ಕಾರ ಆದಾಗಿನಿಂದ ಅದಕ್ಕೆ ಬೇಕಾದ ಮೂಲವಸ್ತುಗಳು
200 ಲೀ ಪ್ರಮಾಣಕ್ಕೆ
1)ತಾಜಾ ಹಸಿಯಾದ ದೇಶೀ ಗೋಮಯ 10 ರಿಂದ 20 ಕೆಜಿ
2 ದೇಶೀ ಗೋಮೂತ್ರ 5 ರಿಂದ 10 ಲೀ.
3) ಕಪ್ಪುಬೆಲ್ಲ 2ಕೆಜಿ ಅಥವಾ ಕಬ್ಬಿನ ರಸ 5 ಲೀ.
4) ಯಾವುದೇ ದ್ವಿದಳ ಧಾನ್ಯದ ಹುಡಿ 2ಕೆಜಿ
5) ಅದನ್ನು ಉಪಯೋಗಿಸುವ ಕೃಷಿಭೂಮಿಯ ಮಣ್ಣು ಒಂದು ಬೊಗಸೆ.
6) ಅಗತ್ಯವಿರುವಷ್ಟು ನೀರು.

Advertisement

ಈ ಮೇಲಿನ ಅಂಶಗಳ ಸಂಗ್ರಹದಲ್ಲಿ ದೇಶೀದನಗಳ ಗೋಮಯ ಗೋಮೂತ್ರದ ಬಗ್ಗೆ ಯಾವುದೇ ರಾಜಿ ಮಾಡಬಾರದು. ಅಂದ್ರೆ ಜೆರ್ಸಿ ಎಚ್ಚೆಫ್ ಗಳ ಸೆಗಣಿ ನಿಷಿದ್ಧ. ದೇಶೀ ದನದ ಸೆಗಣಿಯ ಪದರುಗಳೆಡೆಯ ಲೋಳೆಯನ್ನು ಒಣಗಿ ಹೋಗುವಷ್ಟು ತಡ ಮಾಡಬಾರದು ಎಂಬ ಕಾರಣಕ್ಕೆ ತಾಜಾ ಮತ್ತು ಹಸಿ ಸೆಗಣಿ ಆಗಬೇಕು ಎಂಬುದು ಮುಖ್ಯ.ಗೋಮೂತ್ರವನ್ನು ಸಂಗ್ರಹಿಸಿಟ್ಟದ್ದನ್ನೂ ಬಳಸಬಹುದು.ಬೆಲ್ಲ ಸಾವಯವ ಆಗಿರಬೇಕು. ಯಾಕೆಂದರೆ ಗೋಮಯದಲ್ಲಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಸೂಕ್ಷ್ಮಾಣು ಜೀವಿಗಳನ್ನು ವರ್ಧಿಸುವುದೇ ಜೀವಾಮೃತ ಎಂಬ ಮಾಧ್ಯಮ ಆದಕಾರಣ ಸೂಕ್ಷ್ಮಾಣು ಜೀವಿಗಳು ಸಾಯುವ ಸಾಧ್ಯತೆಯ ಯಾವುದೇ ರಾಸಾಯನಿಕ ಸೇರಬಾರದು ಎಂಬುದು ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕು. ದ್ವಿದಳಧಾನ್ಯದ ಪಿಷ್ಟ ಮತ್ತು ಬೆಲ್ಲ ಮತ್ತು ಗೋಮೂತ್ರದಲ್ಲಿರುವ ಅಂಶಗಳು ಸೇರಿ ಸೂಕ್ಷ್ಮಾಣು ಜೀವಿಗಳ ವರ್ಧನೆಗೆ ಆಹಾರ ತಯಾರಾಗ್ತದೆ. ಜೊತೆಯಲ್ಲಿ ಕೃಷಿಭೂಮಿಯ ಮಣ್ಣಿನಲ್ಲಿ ಮೊದಲೆ ಇರಬಹುದಾದ ಸೂಕ್ಷ್ಮ ಜೀವಿಗಳು ಮತ್ತು ಸೆಗಣಿಯಲ್ಲಿರುವವುಗಳು ಹೊಂದಿಕೆಯಾಗಲು ಮಣ್ಣು ಕೂಡ ಅಗತ್ಯ.

ಮೇಲಿನ ವಸ್ತುಗಳನ್ನು ಡ್ರಮ್ ನಲ್ಲಿ ಹಾಕಿ ನೆರಳಿನಲ್ಲಿ ಅಥವಾ ಒದ್ದೆ ಗೋಣಿ ಮುಚ್ಚಿ ಎರಡ್ಮೂರು ದಿನಗಳಿಂದ ಒಂದು ವಾರದ ತನಕ ಇಟ್ಟು ನಿತ್ಯ ಎರಡುಸಲ ಕದಡುತ್ತಿರುವುದೂ ಅಗತ್ಯ. ಪ್ರತಿನಿತ್ಯ ಮೇಲ್ಬಾಗದಲ್ಲಿ ನಸುಗಪ್ಪಿನ ಅಥವಾ ಬೂಸ್ಟಿನಂತಹ ಕೆನೆಗಟ್ಟಿದ ಪದರುಗಳೇ ಜೀವಾಮೃತ ಸೂಕ್ಷ್ಮಜೀವಿಗಳಿಂದ ಸಮೃದ್ಧವಾಗ್ತಿದೆ ಎಂಬುದಕ್ಕೆ ಸಾಕ್ಷಿ.

ಇದನ್ನು ನೆಲಕ್ಕೆ ಸಿಂಪಡಿಸುವುದು ಬುಡಕ್ಕೆ ಹನಿಸುವುದು ಅಥವಾ ನೀರಿನ ಜೊತೆ ಕೊಡುವ ಮೂಲಕ ಉಪಯೋಗಿಸಬಹುದು. ನೆಲ ಬುಡ ಗಳಲ್ಲಿ ಹಸಿರು ಯಾ ಒಣ ಹೊದಿಕೆ ದಪ್ಪವಾಗಿದ್ದಷ್ಟೂ ಪ್ರಯೋಜನ ಹೆಚ್ಚು. ಯಾವುದೇ ಸಾವಯವ ಪದಾರ್ಥಗಳು ಮತ್ತು ಮಣ್ಣಿನ ಮೂಲ ಪೋಷಕಾಂಶಗಳನ್ನು ಪರಿವರ್ತಿಸಿ ಮರಗಿಡಗಳು ಹೀರಿಕೊಳ್ಳುವಂತೆ ಮಾಡುವುದೇ ಈ ಸೂಕ್ಷ್ಮಾಣು ಜೀವಿಗಳ ಕೆಲಸ.…….ಮುಂದೆ ಓದಿ…..

ಬರಹ :
ಮುರಲೀಕೃಷ್ಣ.ಕೆ.ಜಿ.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ
June 16, 2025
11:03 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ
June 16, 2025
8:00 AM
by: ದಿವ್ಯ ಮಹೇಶ್
ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!
June 16, 2025
7:01 AM
by: ದ ರೂರಲ್ ಮಿರರ್.ಕಾಂ
ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |
June 15, 2025
10:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group