ಅಡಿಕೆ ದಾಸ್ತಾನು | ವಿಷರಹಿತ ದಾಸ್ತಾನು ಕೊಠಡಿ ಬಗ್ಗೆ ಕೃಷಿಕ ಎ ಪಿ ಸದಾಶಿವ ಹೇಳುತ್ತಾರೆ….|

March 8, 2023
2:13 PM
ಅಡಿಕೆ ದಾಸ್ತಾನು ಸಂದರ್ಭ ಯಾವುದೇ ಮಾತ್ರೆಗಳನ್ನು ಹಾಕದೆ ನೈಟ್ರೋಜನ್‌ ಗ್ಯಾಸ್‌ ಮೂಲಕ ಅಡಿಕೆ ಸಂರಕ್ಷಣೆ ಮಾಡುವ ವಿಧಾನದ ವಿಶೇಷ ವರದಿಯನ್ನು ರೂರಲ್‌ ಮಿರರ್‌ ಪ್ರಕಟ ಮಾಡಿತ್ತು. ಈ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಯಥಾವತ್ತಾದ ರೂಪ ಇಲ್ಲಿದೆ…
ರೂರಲ್ ಮಿರರ್ ಪತ್ರಿಕೆಯಲ್ಲಿ ಒಂದು ಎಕ್ಸ್ ಕ್ಲೂಸಿವ್ ಸುದ್ದಿ….  ಪ್ರಕೃತಿಯ ಬಗ್ಗೆ,ಸಾವಯವದ ಬಗ್ಗೆ, ಆರೋಗ್ಯದ ಬಗ್ಗೆ, ವಿಷರಹಿತ ಆಹಾರದ ಬಗ್ಗೆ, ಆ ಮೂಲಕ ನಮ್ಮ ಅಳಿವು ಉಳಿವಿನ ಬಗ್ಗೆ ಚಿಂತಿಸುವವನಿಗೆ ಬಲು ಸಂತೋಷ ಕೊಡುವ ಸುದ್ದಿ.
ಪಿಂಗಾರ ಸಂಸ್ಥೆಯು ಕಳೆದ ಎರಡು ವರ್ಷಗಳ ಅಧ್ಯಯನದ ಫಲವನ್ನು ಇಂದು ಬಿಡುಗಡೆ ಮಾಡಿದೆ. ಅಲ್ಯುಮಿನಿಯಂ ಪಾಸ್ಪೈಡು ವಿಷವಿಲ್ಲದೆ, ಕೃತಕ ಸಂರಕ್ಷಕಗಳಿಲ್ಲದೆ  ಸಾರಜನಕ(ನೈಟ್ರೋಜನ್ )ಗಾಳಿಯ ಮೂಲಕ ವರ್ಷಗಳ ಕಾಲ ಯಾವುದೇ ಹುಳು ಹುಪ್ಪಟೆಗಳಿಂದ ಕೆಡದಂತೆ ಸಂರಕ್ಷಿಸಿ ಇಡಬಹುದೆಂಬ ಬಲು ದೊಡ್ಡ ಸಂಶೋಧನೆ. ತಂಪು ವಾತಾಯನದ ವ್ಯವಸ್ಥೆಯೊಂದಿಗೆ ಇಡಬಹುದೆಂದು ಕಂಡುಕೊಂಡಿದ್ದರೂ ಅದಕ್ಕಾಗುವ ದುಬಾರಿ ವೆಚ್ಚ, ಬಳಸಬೇಕಾದ ವಿದ್ಯುತ್ತು ಎಲ್ಲವೂ ಗಗನ ಕುಸುಮವೇ ಆದಕಾರಣ ಅದರ ಬಳಿ ಸಾರಲು ಯಾರೂ ಹೋಗಿಲ್ಲ.! ಚಿಕ್ಕ ಚಿಕ್ಕ ಆಹಾರ ಪೊಟ್ಟಣಗಳಲ್ಲಿ ಬಳಸುವ ಸಾರಜನಕದ ವಿಧಾನವನ್ನು  ಅಡಿಕೆಯಲ್ಲಿ ಯಾಕೆ ಮಾಡಬಾರದೆಂದು ಪ್ರಯೋಗಿಸಿ ಸಾಫಲ್ಯತೆಯನ್ನು  ಕಂಡವರು ಪಿಂಗಾರ ಸಂಸ್ಥೆಯವರು.
 ಹೌದು, ಪಿಂಗಾರದ ಅಧ್ಯಕ್ಷ ರಾಮ ಕಿಶೋರ್ ಮಂಚಿಯವರು ಹುಟ್ಟು ಕೃಷಿಕರು. ಸಾವಯವದಲ್ಲಿ ಅತಿಯಾದ ಆಸಕ್ತಿ. ಯಾವ ಕಾರಣಕ್ಕೂ ಉಣ್ಣುವ ಆಹಾರದಲ್ಲಿ ವಿಷವನ್ನು ಬಳಸಲಾರರು. ಮಾತ್ರೆ ಇದೆ ಎಂದು ಅಡಿಕೆಯನ್ನು ಸುಲಿದು ಇಡಲಾರರು. ಸುಲಭದ ಗೊಬ್ಬರದ ದಾರಿ ಇದೆ ಎಂದು ಗೊತ್ತಿದ್ದರೂ, ಕಷ್ಟದ ದಾರಿಯಾದ ಗೋ ಸಾಕಣೆ, ಸುರಕ್ಷಿತ ಮತ್ತು ಸುಸ್ಥಿರ ಎಂಬ ಮನೋಭಾವದವರು ಮತ್ತು ಅದನ್ನು ಸಾಧಿಸಿ ತೋರಿದವರು.
ಓರ್ವ ಅಪ್ಪಟ ಸಾವಯವ ಕೃಷಿಕ ಪಿಂಗಾರದಂತಹ ಸಂಸ್ಥೆಯ ಅಧ್ಯಕ್ಷರಾದ ಮೇಲೆ ಕೇಳಬೇಕೆ? ಅನೇಕ ರೈತ ಸ್ನೇಹಿ ಕಾರ್ಯಕ್ರಮಗಳನ್ನು ಪಿಂಗಾರದ ಮೂಲಕ ಹಮ್ಮಿಕೊಂಡು ಸಾಧಿಸಿದವರು, ಸುಲಿದ ಅಡಿಕೆಯನ್ನೇ ಸಂಸ್ಥೆ ಖರೀದಿಸಿದಾಗ ಮಾತ್ರೆ ಇಲ್ಲದೆ ಕಾಪಿಡುವ ಬಗೆಯ ಬಗ್ಗೆ ಚಿಂತಿಸಿದರು. ಅದರ ಫಲಶ್ರುತಿಯೇ ಜಲಜನಕದ ವಾಯು.
 ಅಷ್ಟೊಂದು ಜನ ಮಹಾಮಹಾವಿಜ್ಞಾನಿಗಳಿದ್ದಾರೆ, ದಾಸ್ತಾನು ಕೊಠಡಿಯ ತಂತ್ರಜ್ಞರಿದ್ದಾರೆ, ಅವರೆಲ್ಲರೂ ಕಂಡುಕೊಂಡದ್ದು ವಿಷವಾದರೇನು? ಉತ್ಪನ್ನ ಹಾಳಾಗದಿದ್ದರಾಯಿತು ಎಂಬುದನ್ನು ಮಾತ್ರ ! ಕಾಣುವ ಹುಳಗಳಿಗಿಂತ ಕಾಣದ ವಿಷ ಹೆಚ್ಚು ಅಪಾಯಕಾರಿ ಎಂಬುದರ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲವೇ? ಹುಳುಗಳ ನಾಶಕ್ಕಾಗಿ ಬಳಸುವ ಸಂರಕ್ಷಗಳು ನಮ್ಮ ಅರಿವಿಗೆ ಬಾರದೇ ಮನುಕುಲದ ಅಸ್ತಿತ್ವವನ್ನೇ ನಾಶ ಮಾಡಬಲ್ಲದು ಎಂಬುದರ ಬಗ್ಗೆ ಯೋಚಿಸಲಿಲ್ಲವೇ?
 ಇದೋ !ಓರ್ವ ಅಪ್ಪಟ ಸಾವಯವ ಕೃಷಿಕ ಸಂಸ್ಥೆಯೊಂದರ ಅಧ್ಯಕ್ಷರಾಗಿ ಯಾರಿಗೂ, ಯಾವುದಕ್ಕೂ ಅಪಾಯಕಾರಿಯಾಗದಂತಹ ಮಿತವ್ಯಯ ಕಾರಿಯಾದ ಹೊಸ ಸಂರಕ್ಷಣಾ ವ್ಯವಸ್ಥೆ ಒಂದನ್ನು  ಹುಟ್ಟುಹಾಕಿದ್ದಾರೆ . ಅಡಿಕೆ ಮಾತ್ರವಲ್ಲ ನಾವುಣ್ಣುವ ಅಕ್ಕಿ ಬೇಳೆ ಕಾಳುಗಳಿಂದ ಹಿಡಿದು ಸಮಸ್ತ ಆಹಾರದ ವಸ್ತುಗಳಿಗೂ ತಿನ್ನುವ ಕೊನೆಯ ಹಂತದಲ್ಲಾದರೂ ವಿಷವಿಲ್ಲದೆ ಕಾಪಿಡುವ ವ್ಯವಸ್ಥೆ ಒಂದಕ್ಕೆ ಶ್ರೀಕಾರ ಬರೆದಿದ್ದಾರೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಪಟ್ಟದಿಂದ ಹೊರಬರಲಿ. ಸುದ್ದಿ  ಎಲ್ಲಾ ಕಡೆಗೂ ಪ್ರಚಾರವಾಗಲಿ, ಪ್ರಸಾರವಾಗಲಿ. ವಿಷರಹಿತ ಗೋಧಾಮುಗಳು ಎಲ್ಲಾ ಕಡೆ ನಿರ್ಮಾಣವಾಗಲಿ   ಆ ಮೂಲಕ ವಿಷ ರಹಿತ ಆಹಾರ ನಮ್ಮೆಲ್ಲರದಾಗಲಿ ಎಂಬ ಆಶಯ.
ಬರಹ :
 ಎ.ಪಿ. ಸದಾಶಿವ ಮರಿಕೆ.

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಮಿಜೋರಾಂನಲ್ಲಿ ಅಡಿಕೆ ಬೆಳೆಗೆ ಉತ್ತೇಜನ | ಅಡಿಕೆ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ | ರೈತರಿಂದ ಪೊರಕೆ ಕಡ್ಡಿ ಖರೀದಿಸುವ ಸರ್ಕಾರ |
June 21, 2025
4:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-06-2025 | ಹೇಗೆ ಸಾಗುತ್ತಿದೆ ಮಳೆಯ ದಾರಿ..? | ಜೂ.28 ರವರೆಗೆ ಮಳೆಯೋ..? ಬಿಸಿಲೋ..?
June 21, 2025
3:02 PM
by: ಸಾಯಿಶೇಖರ್ ಕರಿಕಳ
ಬಂಡೆ ತೆರವು | ಶಿರಾಡಿಯಲ್ಲಿ ರೈಲು ಸಂಚಾರ ಆರಂಭ |
June 21, 2025
10:18 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?
June 21, 2025
8:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group