ಅಡಿಕೆ “ಹಳದಿ ಎಲೆರೋಗ”ದ ಬಣ್ಣಗಳು…!

January 31, 2025
7:30 AM
ಅಡಿಕೆ ಹಳದಿ ಎಲೆರೋಗದಿಂದ ಕೃಷಿಕರು ಸಂಕಷ್ಟ ಪಡುತ್ತಿದ್ದಾರೆ. ಅನೇಕ ಸಮಯಗಳಿಂದ ಇದಕ್ಕೊಂದು ಪರಿಹಾರ ಸಿಕ್ಕಿಲ್ಲ. ಈಚೆಗೆ ಅಡಿಕೆ ಕ್ಯಾನ್ಸರ್‌ ಎನ್ನುವ ಹಾಗೂ ಸಂಶೋಧನೆಯ ಬಗ್ಗೆಯೂ ಚರ್ಚೆಯಾಗಿದೆ. ಇದೆಲ್ಲಾ ನಾಯಕರುಗಳ ಭರವಸೆಯಿಂದ ಕಡಿಮೆಯಾಗದು, ಅನುದಾನಗಳು ಬಿಡುಗಡೆಯಾದರೆ ಮಾತ್ರವೇ ಅಧ್ಯಯನ, ಸಂಶೋಧನೆಯೂ ನಡೆಯಲು ಸಾಧ್ಯ ಎನ್ನುವುದು ವಾಸ್ತವ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ,ಸಂಪಾಜೆ ಸೇರಿದಂತೆ ಆಸುಪಾಸಿನ ಗ್ರಾಮಗಳಲ್ಲಿ ಅಡಿಕೆಗೆ ಹಳದಿ ಎಲೆರೋಗ ಬಾಧಿಸಿ ಅನೇಕ ವರ್ಷಗಳಾದವು. ಇದಕ್ಕೊಂದು ಪರಿಹಾರ ಅಗತ್ಯ ಇದೆ ಎಂದು ಅನೇಕ ಸಮಯಗಳಿಂದ ಪ್ರಯತ್ನಗಳು ಆಗುತ್ತಿವೆ. ಅಂತಹ ಕೆಲವು ಸಂಗತಿಗಳ ನೆನಪುಗಳು ಹೀಗಿದೆ..…..ಮುಂದೆ ಓದಿ….

ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್‌ ಅವರು ಗುತ್ತಿಗಾರಿನ ಸಹಕಾರ ಸಂಘದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಅಡಿಕೆಯ ಹಳದಿ ಎಲೆ ರೋಗ ನಿವಾರಣೆಯ ಪ್ರಯತ್ನಕ್ಕಾಗಿ ಬ್ಯಾಂಕಿನಿಂದ ಒಂದು ಕೋಟಿ ರುಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದಾಗ ಸಂಚಲನ ಉಂಟಾಗಿತ್ತು.

ಇದರ ಮೊದಲು ಶತಮಾನದಿಂದ ಪರಿಹಾರ ಕಾಣದೇ ಇರುವ ಅಡಿಕೆಯ ಹಳದಿ ಎಲೆ ರೋಗದ ನಿವಾರಣೆಗಾಗಿ YLD ತಡೆ ಗಿಡಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಂಶೋಧನಾ ಕೇಂದ್ರ ಹಾಕಿಕೊಂಡಿತ್ತು.ಈ ಯೋಜನೆಯ ಅನುಷ್ಟಾನಕ್ಕಿದ್ದ ಪ್ರಮುಖ ಅಡ್ಡಿಯೆಂದರೆ ಅಡಿಕೆ ಮೇಲಿನ ಯಾವುದೇ ಸಂಶೋಧನೆಗಾಗಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ಸಿಗದೇ ಇರುವುದು ಆಗಿತ್ತು.ಜೊತೆಗೆ ಯೋಜನೆಯ ಅನುಷ್ಟಾನಕ್ಕಾಗಿ ಬೇಕಿದ್ದ ಟಿಶ್ಯೂ ಕಲ್ಚರ್ ತಂತ್ರಜ್ಞಾನವು ಅಗತ್ಯವಿದ್ದಷ್ಟು ಅಭಿವೃದ್ಧಿಗೊಳ್ಳದೇ ಇರುವುದೂ ಇನ್ನೊಂದು ಕಾರಣವಾಗಿತ್ತು.ಇನ್ನೊಂದು ಸಾಧ್ಯತೆಯಾದ ಕೃತಕ ಪರಾಗ ಸ್ಪರ್ಷದ ಮೂಲಕ ಅಭಿವೃದ್ಧಿ ಸಾಧ್ಯತೆ ಇಲ್ಲಿ ಅನುಷ್ಟಾನ ಸಾಧ್ಯವಿಲ್ಲದ್ದು ಅಂತ ಗೊತ್ತಾಗಿತ್ತು.

ದೊಡ್ಡ ಪ್ರಮಾಣದಲ್ಲಿ ಯೋಜನೆ ಕಾರ್ಯಗತವಾಗ ಬೇಕಾಗಿದ್ದದ್ದರಿಂದ ಸಾಕಷ್ಟು ದೊಡ್ಡ ಮೊತ್ತದ ಅನುದಾನವೇ ಬೇಕಾಗಿದ್ದಿದ್ದರಿಂದ ನಾವು ಒಂದಷ್ಟು ಜನ ಇದಕ್ಕಾಗಿ ಪ್ರಯತ್ನ ಪಡುತ್ತಿದ್ದೆವು, ಓಡಾಡುತ್ತಿದ್ದೆವು.ಆದರೆ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಎಲ್ಲೆಡೆಯಿಂದಲೂ ನಮಗೆ ಸಿಕ್ಕಿದ್ದು ನಿರುತ್ಸಾಹದ ಪ್ರತಿಕ್ರಿಯೆ ,ಒಂದೆರಡು ಕಡೆ ವಿರೋಧ ಕೂಡಾ. ಆ ವೇಳೆಗಾಗಲೇ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಕ್ಯಾಂಪ್ಕೋ ಸೇರಿದಂತೆ ಯಾವುದೇ ಜನಪ್ರತಿನಿಧಿಗಳಿಂದ ಯಾವುದೇ ಬೆಂಬಲ ಸಿಗುವುದಿಲ್ಲ ಎಂಬುದೂ ಸ್ಪಷ್ಟವಾಗಿತ್ತು.

ಆ ಬಳಿಕ ಎಲಿಮಲೆಯಲ್ಲಿ ನಡೆದ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ರಾಜೇಂದ್ರ ಕುಮಾರ್‌ ಅವರು ತಮ್ಮ ಹೇಳಿಕೆಯನ್ನು ಪರಿಷ್ಕರಿಸಿ YLD ನಿರ್ಮೂಲನೆಯ ವೈಜ್ಞಾನಿಕ ಯೋಜನೆಗೆ ಎಷ್ಟು ಬೇಕೋ ಅಷ್ಟೂ ಹಣವನ್ನು ಬ್ಯಾಂಕಿನಿಂದ ಒದಗಿಸುವುದಾಗಿ ಘೋಷಿಸಿದಾಗ ನಮಗೆ ಲಾಟರಿ ಹೊಡೆದ ಭಾವನೆ ಬಂದದ್ದಂತೂ ಸುಳ್ಳಲ್ಲ.ಆ ಬಳಿಕ ಈ ಬಗ್ಗೆ ಸಮಾಲೋಚಿಸಲು ನಮ್ಮನ್ನು ಮಂಗಳೂರಿಗೆ ಬರಹೇಳಿದರು. ಆ ಪ್ರಯುಕ್ತ ನಾವೊಂದಷ್ಟು ಜನ ಮಂಗಳೂರಿಗೆ ಹೋಗಿದ್ದೆವು.ಅಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರ ಕೊಠಡಿಯಲ್ಲಿ ಒಂದಷ್ಟು ಇತರ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಅಧ್ಯಕ್ಷರೊಂದಿಗೆ ನಮ್ಮ ಮಾತುಕತೆ ನಡೆಯಿತು.

ಅಧ್ಯಕ್ಷರು ಹೇಳಿದ್ದು ಇಷ್ಟು… ” ತನಗೆ ಕೃಷಿ ಬಗೆಗೆ ಇನಿತೂ ಗೊತ್ತಿಲ್ಲ.ಆದ್ದರಿಂದ ಈ ಯೋಜನೆ ಬಗ್ಗೆ ಏನು ನಿರ್ಧಾರ ತಗೊಳ್ಳ ಬೇಕೆಂದು ಕೃಷಿಕರೂ ಆಗಿರುವ  ರಾಜಾರಾಮ ಭಟ್ಟರು ಹೇಳಲಿ”

ಅವರ ಅಭಿಪ್ರಾಯ ಹೀಗಿತ್ತು, “ಹೊಸ ಗಿಡ ಮಾಡುವ ಯೋಜನೆ ಬೇಡ.ಇದ್ದ ರೋಗ ಗುಣ ಪಡಿಸುವ ಯೋಜನೆ ಮುಂದಿಡಿ” , ಗೊತ್ತಿರುವ ಪ್ರಕಾರ, ಈ ರೋಗ ಫೈಟೋಪ್ಲಾಸ್ಮಾದಿಂದ ಬಂದದ್ದು. ಇಲ್ಲಿ ಮಾತ್ರ ಅಲ್ಲ .ಇಡೀ ಪ್ರಪಂಚದಲ್ಲಿ ಫೈಟೋಪ್ಲಾಸ್ಮಾ ರೋಗ ಗುಣಪಡಿಸುವ ತಂತ್ರಜ್ಞಾನ ಇಲ್ಲ ಅಂತ ನಾವು ಹೇಳಿದರೆ, ಅದನ್ನು ಕೇಳಿಸಿಕೊಳ್ಳಲೂ ಅವರು ಸಿದ್ಧರಿಲ್ಲ. ರಾಜಾರಾಮ ಭಟ್ಟರು ಅಡಿಕೆಯ ಹಳದಿ ಎಲೆ ರೋಗ ನಿವಾರಣೆಯ ಯೋಜನೆಗೆ ಸಹಕಾರ ಕೊಡಬೇಕಾಗಿಲ್ಲ ಅಂತ ನಿರ್ಧರಿಸಿದರು.

ಹಿಂದೊಮ್ಮೆ ಬರೆದಿದ್ದೆ, ಹೇಳಿದ್ದೆ , ವೈಜ್ಞಾನಿಕ ವಿಷಯಗಳ ಬಗೆಗೆ ಇನಿತೂ ಜ್ಞಾನ ಇಲ್ಲದವರು ನಿರ್ಣಾಯಕ ಅಧಿಕಾರ ಸ್ಥಾನದಲ್ಲಿ ಇರುವುದು ಕೃಷಿಕರ ದೌರ್ಭಾಗ್ಯ ಅಂತ.

ಈ ನಾಯಕರುಗಳು ಹೀಗೆ. ಮೊದಲು ಘೋಷಣೆ ಮಾಡುವುದು. ನಂತರ ಘೋಷಣೆಯನ್ನು ಕಾರ್ಯಗತ ಗೊಳಿಸಲು ಸಾಧ್ಯವೋ ಅಂತ ಆಲೋಚಿಸುವುದು. ನಡುವೆ ಸಿಗುವ ಚಪ್ಪಾಳೆ,ಪುರಸ್ಕಾರಗಳನ್ನೆಲ್ಲಾ ಅನುಭವಿಸುವುದು. ಹಾಗಿದ್ದರೆ ಕೃಷಿಕ, ಕೃಷಿ ಕ್ಷೇತ್ರದ ಬೆಳವಣಿಗೆ ಹೇಗೆ ಸಾಧ್ಯ ಎನ್ನುವುದು ಅಂತರಂಗದ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇತ್ತೀಚೆಗೆ, ಅಡಿಕೆ ಕ್ಯಾನ್ಸರ್ ಕಾರಕ ವಿಷಯದಲ್ಲೂ ಘೋಷಣೆಯೊಂದು ಬಂತು. ಹತ್ತೋ ಹನ್ನೆರಡೋ ಸಂಸ್ಥೆಗಳು ಜೊತೆ ಸೇರಿ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸುವುದು ಅಂತ.ಕೇಂದ್ರ ಮಂತ್ರಿಗಳೂ ಘಂಟಾಘೋಷವಾಗಿ ಇದನ್ನು ಘೋಷಿಸಿದರು.ಈ ಘೋಷಣೆ ಅನುಷ್ಟಾನಕ್ಕೆ ಬರುವುದು ಇದಕ್ಕಾಗಿ ಸರಕಾರ ಹತ್ತು ಕೋಟಿ ರುಪಾಯಿಗಳನ್ನು ಬಿಡುಗಡೆ ಗೊಳಿಸಿದ ಮೇಲಷ್ಟೇ ಎಂಬುದು ಯಾರ ಗಮನಕ್ಕೂ ಬಂದಿಲ್ಲ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!
March 11, 2025
7:51 AM
by: ರಮೇಶ್‌ ದೇಲಂಪಾಡಿ
ಕುಂಭಮೇಳದ ಪಯಣ ದೇಶದ ಇಣುಕುನೋಟ | ಭೌತಿಕ ಅಭಿವೃದ್ಧಿಯೊಂದಿಗೆ ಬೌದ್ಧಿಕ ಅಭಿವೃದ್ಧಿ ಕೂಡಾ ವೇಗ ಪಡೆಯಬೇಕಿದೆ |
March 11, 2025
7:00 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಸಮಯ ಬಾರದೆ ಒಂದಿನಿತೂ ಮುಂದೆ ಸಾಗದು…
March 10, 2025
7:24 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕುಂಭಮೇಳ | ಕುಂಭಸ್ನಾನ ಮುಗಿಸಿ ಹೊರಟಾಗ….
March 9, 2025
8:31 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror