ಮಕ್ಕಳಲ್ಲಿ ಮೌನವನ್ನು ಮುರಿದು ಮಾತನಾಡುವ ಹಂಬಲ ಪ್ರಾರಂಭವಾಗುವುದೇ ಮೂರು ತಿಂಗಳಿನ ನಂತರ. ಅಲ್ಲಿಯ ವರೆಗೆ ನಗುವಿನ ಮೂಲಕ ಹಾಗೂ ಕೈ ಕಾಲುಗಳನ್ನು ಕುಣಿಸುವುದರೊಂದಿಗೆ ಸ್ಪಂದಿಸುತ್ತಾರೆ.
ಹಾಗೆಂದ ಮಾತ್ರಕ್ಕೆ ಪದಗಳನ್ನೇ ಉಚ್ಛಾರ ಮಾಡಬೇಕೆಂಬುವುದಲ್ಲ. ಕೆಲವು ನಿರ್ದಿಷ್ಟ ಸೌಂಡ್ ಅಥವಾ ಶಬ್ಧಗಳನ್ನು ಅನುಕರಣೆ ಮಾಡಬೇಕು. ಇದರಿಂದ ಮಗುವಿಗೆ ಮಾತನಾಡುವ ಪರಿಕಲ್ಪನೆ ಸಿಗುವುದು. ಸರಳ ಅಕ್ಷರಗಳ ಉಚ್ಛಾರಣೆಗೆ ಪಾಲಕರು ಪ್ರೋತ್ಸಾಹ ನೀಡಬೇಕು. ಈ ಸಂದರ್ಭದಲ್ಲಿ ಮಕ್ಕಳ ಮಾತು ತೊದಲು ನುಡಿಯಾಗಿರುತ್ತದೆ. ಆಗ ತಾಯಿಯು ತೊದಲು ನುಡಿಯನ್ನು ಅನುಕರಣೆ ಮಾಡಬಾರದು. ಇದು ಮಗುವಿಗೆ ಅಕ್ಷರ ಉಚ್ಚಾರಣೆಯ ತೊಡಕಿಗೆ ಕಾರಣವಾಗಬಹುದು. ಈ ಕಾರಣದಿಂದಲೇ ಹಲವು ಮಕ್ಕಳಿಗೆ ‘ಳ’ ಕಾರ,‘ಲ’ ಕಾರ,‘ಹ’ ಕಾರ,‘ರ’ ಕಾರಗಳ ಸ್ಪಷ್ಟ ಉಚ್ಚಾರಣೆ ಸಾಧ್ಯವಾಗುತ್ತಿಲ್ಲ. ಮಾತೃ ಭಾಷೆಯಲ್ಲಿ ಕೆಲವೊಂದು ಅಕ್ಷರಗಳ ಉಚ್ಚಾರಣೆ ಇಲ್ಲದಿರುವುದು ಕಾರಣವಾಗಬಹುದು. ಉದಾ:- ತುಳು ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿಗಳಲ್ಲಿ ‘ಳ’ ಕಾರ ಉಚ್ಚಾರಣೆಯ ದೋಷ ಕಾಣಿಸಿಕೊಂಡಿರುತ್ತದೆ. ಕೊನೆಗೆ ಶಾಲಾ ಹಂತದಲ್ಲಿ ಮಕ್ಕಳು ಅವಮಾನಕ್ಕೆ ಈಡಾಗಿ ಮಾನಸಿಕ ಖಿನ್ನತೆಗೆ ಹಾಗೂ ಇತರರಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…
ಪಾಲಕರು ಮಾತನಾಡುತ್ತಿರುವ ಎಲ್ಲಾ ಶಬ್ದಗಳು ಮಕ್ಕಳ ಕಿವಿಮೇಲೆ ಬೀಳುತ್ತಲೇ ಇರುವುದು. ಅವುಗಳಲ್ಲಿ ಸರಳ ಪದಗಳ ಅನುಕರಣೆಗೆ ಮಗು ಮುಂದಾಗುವುದು. ಆಗ ಅವುಗಳನ್ನು ಹೆತ್ತವರು ಗಮನಿಸಿ ಹೆಚ್ಚು ಹೆಚ್ಚು ಮಾತನಾಡುವ ಅವಕಾಶವನ್ನು ಕಲ್ಪಿಸಬೇಕು. ಒಂದುವರೆ ವರ್ಷಗಳ ಕಾಲ ಯಾವುದೇ ಮಾತನಾಡುವ ಲಕ್ಷಣಗಳಿಲ್ಲ ಎಂಬುವುದು ಗಮನಕ್ಕೆ ಬಂದರೆ ತಕ್ಷಣ ಮಕ್ಕಳ ತಜ್ಞರನ್ನು ಹಾಗೂ ಮಕ್ಕಳ ಕೌನ್ಸೆಲಿಂಗ್ ಸಹಾಯ ಪಡೆದುಕೊಳ್ಳಿ. ಇದರಿಂದ ಮಾರ್ಗದರ್ಶನ ಪಡೆದು ಮಗುವಿನ ವ್ಯತಿರಿಕ್ತ ಬೆಳವಣಿಗೆಯನ್ನು ಸರಿಪಡಿಸಿಕೊಳ್ಳಬಹುದು.
ಕೌನ್ಸೆಲಿಂಗ್ ಒಳಪಡಿಸುವುದರಿಂದ ಸರ್ವತೋಮುಖ ಬೆಳವಣಿಗೆಯ ವಾತಾವರಣ ನಿರ್ಮಾಣ ಮಾಡಬಹುದು. ಇದರಿಂದ ಮಗುವಿಗೆ ಕೇವಲ ಮಾತನಾಡುವ ಸಮಸ್ಯೆ ಮಾತ್ರವೇ ಇರುವುದೇ? ಅಥವಾ ಮಗುವಿನ ಚಟುವಟಿಕೆ, ಮಗುವಿಗೆ ತಂದೆ- ತಾಯಿಯ ಲಭ್ಯತೆಯ ನಿರೀಕ್ಷೆ, ಅಜ್ಜ-ಅಜ್ಜಿಯ ಕುರಿತಾದ ನಿರೀಕ್ಷೆ, ಹೊರಗಿನ ಸಾಮಾಜಿಕ ಬೆಳವಣಿಗೆ, ಮಿದುಳಿನ ಚುರುಕುತನದ ಕೊರತೆ ಹೀಗೆ ನಾನಾ ಸಮಸ್ಯೆಗಳಿದ್ದಲ್ಲಿ ಸೂಕ್ತ ಮಾರ್ಗದರ್ಶನದೊಂದಿಗೆ ಸರಿಪಡಿಸಿಕೊಳ್ಳಬಹುದು. ಮಗು ಬೆಳೆಯುತ್ತಾ ಹೋದಂತೆ ಕೌನ್ಸೆಲಿಂಗ್ ಆಧಾರದಲ್ಲಿ ಮಗುವಿನ ಪ್ರತಿಭಾಶಕ್ತಿಯ ಕ್ಷೇತ್ರ ಮತ್ತು ಅದರ ಬೆಳವಣಿಗೆ ಕಾಣಬಹುದು.
ತಂದೆ ತಾಯಿಯ ಕುಟುಂಬದ ನೆಲೆಯಲ್ಲಿ ತಲೆಮಾರಿನ ಸ್ವಭಾವದ ಬಗ್ಗೆ ತಿಳಿದಿರಬೇಕು. ತಲೆಮಾರಿನ ವ್ಯಕ್ತಿಗಳಲ್ಲಿ ತಡಮಾಡಿ ಮಾತನಾಡುವುದು ಅಥವಾ ಮೌನಕ್ಕೆ ಜಾರಿರುವುದು ಇತ್ಯಾದಿ ದೋಷಗಳು ಕಾಣಿಸಿಕೊಂಡಿದ್ದಲ್ಲಿ ಮಗುವಿಗೂ ಅನುವಂಶೀಯವಾಗಿ ಬರುವ ಸಾಧ್ಯತೆಗಳು ಇರುತ್ತದೆ. ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯಂತೆ ಮಗುವು ಆಸಕ್ತಿ ತೋರುವಂತ ಕ್ಷೇತ್ರ ಹಾಗೂ ಅದರ ಭಾವನೆಗಳನ್ನು ನಾವು ಗಮನವಿಟ್ಟು ನೋಡಬೇಕಿರುತ್ತದೆ. ಇದೆಲ್ಲದರ ನಡುವೆಯೂ ಮಗುವು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ‘ಸ್ಪೀಚ್ ಥೆರಪಿ’ ಗೆ ಒಳಪಡಿಸುವುದು ಒಳ್ಳೆಯದು. ಮಕ್ಕಳ ವೈದ್ಯರ ಸಲಹೆಯೊಂದಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬೇಕು.
ಹಾಗೆಯೇ ಅನುವಂಶೀಯ ಹೊರತಾಗಿ ಆಧುನಿಕ ಜಗತ್ತಿನಲ್ಲಿ ಪಾಲಕರೇ ಸಮಸ್ಯೆಗಳನ್ನು ಆಹ್ವಾನಿಕೊಳ್ಳುವುದು ಇದೆ. ಮಕ್ಕಳ ತಾತ್ಕಾಲಿಕ ಸಮಾಧಾನಕ್ಕೆಂದು ಮೊಬೈಲ್ ನೀಡುವುದು. ಮೊಬೈಲ್ ನೋಡುತ್ತಲೇ ಮಕ್ಕಳು ಮೌನಕ್ಕೆ ಜಾರುವ ಸಾಧ್ಯತೆಗಳು ಇರುತ್ತದೆ. ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮಾತನಾಡುವ ಗುಣ ಹಾಗೂ ಸಾಮಾಜಿಕವಾಗಿ ಬೆರೆಯುವ ಗುಣ ಕಡಿಮೆಯಾಗುತ್ತದೆ. ಮಕ್ಕಳು ಮಾತನಾಡಬೇಕೆಂದರೆ ಪಾಲಕರು ಅತಿ ಹೆಚ್ಚು ಸಮಯ ಕೊಟ್ಟು ಮಾತನಾಡಿಸುವುದು ಒಳ್ಳೆಯದು. ಅಷ್ಟು ಮಾತ್ರವಲ್ಲದೆ ಪಾಲಕರ ಹೆಚ್ಚಿನ ಸ್ನೇಹಿತರ ಒಡನಾಟ ಇರಬೇಕು. ಇದು ಕೇವಲ ಮಗು ಇರುವ ಪ್ರದೇಶದಲ್ಲಿ ಮಾತ್ರವಲ್ಲದೆ ಮಗುವನ್ನು ಅದರ ಮನೆಯ ವಾತಾವರಣದಿಂದ ಹೊರಗಡೆ ಕರೆದುಕೊಂಡು ಹೋಗಿ ಸಮಾಜದಲ್ಲಿ ಅತಿ ಹೆಚ್ಚು ಬೆರೆಯುವಂತ ವಾತಾವರಣವನ್ನು ಕಲ್ಪಿಸಿ. ಜಾತ್ರೆ, ದೇವಸ್ಥಾನ , ಜನ ಜಂಗುಳಿ ಸೇರುವ, ಸೇರಿ ನಮ್ಮ ಮಗುವನ್ನು ಮಾತನಾಡಿಸಬಲ್ಲ ವಾತಾವರಣಕ್ಕೆ ಕರೆದುಕೊಂಡು ಹೋಗಿ. ನೀವು ಗಮನಿಸಿರಬಹುದು. ವಿವಿಧ ಸಂಘಟನೆಯಲ್ಲಿರುವ ವ್ಯಕ್ತಿಗಳ ಮಕ್ಕಳ ಭಾಗವಹಿಸುವಿಕೆಯಿಂದ ಮಕ್ಕಳು ಚುರುಕಾಗಿ ಮಾತನಾಡಲು ಕಲಿತಿರುತ್ತಾರೆ. ನಮ್ಮ ಭಾಗವಹಿಸುವಿಕೆಯೇ ಮಕ್ಕಳ ಪ್ರಗತಿ ಎಂಬುವುದನ್ನು ಮನಗಾಣೋಣ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…
ಲಕ್ಷ್ಯ ಕೌನ್ಸಲಿಂಗ್ ಸೆಂಟರ್, ಪುತ್ತೂರು, ಸಂಪರ್ಕ :97406 45095 / 9663826972


