ಡಿಜಿಟಲ್ ಇಂಡಿಯಾ #Digital India… ನಮ್ಮ ದೇಶ ಮುಂದುವರೆದಿದೆ…. ಬಹಳ ಸಂತೋಷ…. ಹಣ ಹಿಡಿದುಕೊಂಡು ಹೋಗುವ ಅವಶ್ಯಕತೆಯಿಲ್ಲ, ಚಿಲ್ಲರೆ ಸಮಸ್ಯೆ ಇಲ್ಲ… ಕಳ್ಳಕಾಕರ ಭಯ ಇಲ್ಲ.. . ಕೈಯಲ್ಲಿ ಒಂದು ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಕು…. ಎಲ್ಲವೂ ಹೌದು…!. ಆದರೆ ಕಳ್ಳಕಾಕರ ಭಯ ಇಲ್ಲ ಅನ್ನೋದು ಈ ವಿಷಯದಲ್ಲಿ ಸುಳ್ಳು. ಅದು ಜಾಸ್ತಿಯಾಗಿದೆ. ಅದು ಬುದ್ದಿವಂತ ಕಳ್ಳರು ಹೆಚ್ಚಾಗಿದ್ದಾರೆ..!. ತಂತ್ರಜ್ಞಾನ ಬೆಳೆದಂತೆ ಅಪರಾಧಗಳು ಜಾಸ್ತಿಯಾಗುತ್ತಿದೆ. ಬಹುತೇಕ ಚಟುವಟಕೆ ಆನ್ಲೈನ್ ಮೂಲಕ ನಡೆಯೋದ್ರಿಂದ ಸೈಬರ್ ಅಪರಾಧಗಳ ಪ್ರಮಾಣ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿ ಸೇರಿದಂತೆ ಬಹುತೇಕ ಕಡೆ ಹೊಸ ಹೊಸ ರೀತಿಯ ಸೈಬರ್ ಕ್ರೈಮ್ಗಳು ಜರುಗುತ್ತಿರುವುದು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯೂಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚು ನಡೆದಿರುವುದು ಪೊಲೀಸರಿಗೆ ತಲೆನೋವು ತರಿಸಿದೆ.
ಪೊಲೀಸರೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2017ರಿಂದ ಈಚೆಗೆ 50,000 ಸೈಬರ್ ಅಪರಾಧ ಘಟನೆಗಳು ದಾಖಲಾಗಿವೆ. ಈ ಪೈಕಿ 20,662 ಪ್ರಕರಣಗಳು ಕ್ಯೂಆರ್ ಕೋಡ್ ಸ್ಕ್ಯಾಮ್ಗಳು, ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ ಇತ್ಯಾದಿ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಅಂದರೆ ಸೈಬರ್ ಕೇಸ್ಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಇಂಥ ಪ್ರಕರಣಗಳೇ ಇವೆ. ಬೆಂಗಳೂರು ಪೊಲೀಸರ ವಾರದ ಸಭೆಗಳಲ್ಲಿ ಕ್ಯೂಆರ್ ಕೋಡ್ ಹಗರಣಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದಂತೆ. ಅಂತೆಯೇ ನಗರದ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಆಗಾಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 22ರಂದು ಬೆಂಗಳೂರು ನಗರ ಪೊಲೀಸರು ಒಟಿಪಿ ಇತ್ಯಾದಿಯನ್ನು ಮೊಬೈಲ್ಗಳಲ್ಲಿ ಶೇರ್ ಮಾಡದಿರಿ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ದುಷ್ಕರ್ಮಿಗಳು ನಿಮ್ಮೊಂದಿಗೆ ಹಣದ ವಹಿವಾಟು ನಡೆಸುವ ನೆವದಲ್ಲಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಅದನ್ನು ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಿಂದ ಹಣವನ್ನು ಎಗರಿಸುತ್ತಾರೆ ಈ ಅಪರಾಧಿಗಳು. ಐಐಎಸ್ಸಿ ಪ್ರೊಫೆಸರ್ ಕ್ಯೂಆರ್ ಕೋಡ್ ಸ್ಕ್ಯಾಮ್ಗೆ ಬಲಿಯಾಗಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ 30 ವರ್ಷದ ವ್ಯಕ್ತಿಯೊಬ್ಬರು ಇಂಥ ಕ್ಯೂಆರ್ ಕೋಡ್ ಸ್ಕ್ಯಾಮ್ಗೆ 63,000 ರೂ ಕಳೆದುಕೊಂಡಿದ್ದಾರೆ. ಆಗಸ್ಟ್ 11ರಂದು ಅವರು ಆನ್ಲೈನ್ ಪ್ಲಾಟ್ಫಾರ್ಮ್ವೊಂದರಲ್ಲಿ ತಮ್ಮ ಹಳೆಯ ವಾಷಿಂಗ್ ಮೆಷಿನ್ ಅನ್ನು ಮಾರಲು ಯತ್ನಿಸಿದ್ದರು. ವ್ಯಕ್ತಿಯೊಬ್ಬ ಇದನ್ನು ಖರೀದಿಸಲು ಮುಂದೆ ಬಂದಿದ್ದ. ತತ್ಕ್ಷಣವೇ ಹಣ ಪಾವತಿಸುವುದಾಗಿ ಹೇಳಿ ಕ್ಯುಆರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದ. ವಂಚನೆಯ ಅರಿವಿಲ್ಲದೇ ಪ್ರೊಫೆಸರ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಾರೆ. ದುಷ್ಕರ್ಮಿಗಳು ಬಹಳ ಬೇಗನೇ ಹಣವನ್ನು ಎಗರಿಸುತ್ತಾರೆ.
ಹಾಗೆಯೇ, 30 ವರ್ಷದ ಗೃಹಿಣಿಯೊಬ್ಬರೂ ಕೂಡ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ತಮ್ಮ ವೀಣೆಯನ್ನು ಮಾರಲು ಇಟ್ಟಿರುತ್ತಾರೆ. ವೀಣೆ ಖರೀದಿಸುವ ಆಸಕ್ತಿ ತೋರಿದ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ನಂಬರ್ಗೆ ಒಂದು ಲಿಂಕ್ ಕಳುಹಿಸುತ್ತಾನೆ. ಹಣ ಪಾವತಿಯಾಗುತ್ತದೆ ಎಂದು ನಂಬಿ ಆಕೆ ಆ ಲಿಂಕ್ ಕ್ಲಿಕ್ ಮಾಡುತ್ತಾರೆ. ನೋಡನೋಡುತ್ತಿದ್ದಂತೆಯೇ ಆಕೆಯ ಖಾತೆಯಿಂದ 20,000 ರೂ ಮಾಯವಾಗಿಹೋಗಿರುತ್ತದೆ. ಇದು ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು-ನಾಳೆ ನಾವು ಕೂಡ ಈ ಮೋಸಕ್ಕೆ ಬಲಿಯಾಗಬಹುದು. ದಯವಿಟ್ಟು ಅಪರಿಚಿತರು ಯಾರೇ ಕಾಲ್ ಮಾಡಿ ನಿಮ್ಮ ಹಣದ ವಿವಿರ ಕೇಳಿದ್ರೆ ಕೊಡಬೇಡಿ. ಯೋಚಿಸಿ ಮುಂದುವರೆಯಿರಿ.
Source: Digital Media
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…
ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ…
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…