ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್‌, ಸವದಿ: ಸೋಲಿಸಿಯೇ ಶತ ಸಿದ್ಧ – ಬಿ ಎಸ್ ಯಡಿಯೂರಪ್ಪ

April 27, 2023
2:02 PM

ಜಗದೀಶ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದವರು. ಅವರು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಲಕ್ಷ್ಮಣ ಸವದಿ ಅವರಿಗೆ ಪಕ್ಷದಲ್ಲಿ ವಿಧಾನ ಪರಿಷತ್‌ ಸ್ಥಾನ ಇದ್ದರೂ ಕೂಡ ಇಂದು ಅವರು ಪಕ್ಷ ದ್ರೋಹ ಮಾಡಿದ್ದಾರೆ. ಅಥಣಿ ಮತಕ್ಷೇತ್ರದ ಮತದಾನ ಬಾಂಧವರು ಮೇ.10ರಂದು ನಡೆಯುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿ ಪರ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತಕ್ಷೇತ್ರದ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಮತ್ತು ಮಹೇಶ್‌ ಕುಮಟಳ್ಳಿ ಶಾಸಕರಾದ ನಂತರ ಅಥಣಿ ಮತ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ತಂದು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಬೇಕು. ಮಹೇಶ್‌ ಕುಮಟಳ್ಳಿ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಥಣಿ ಮತ್ತು ಹುಬ್ಬಳ್ಳಿ ಕ್ಷೇತ್ರಗಳ ಚರ್ಚೆ ಹೆಚ್ಚಾಗಿದೆ. 2018 ರಲ್ಲಿ ಕಾಂಗ್ರೆಸ್‌ ಪಕ್ಷದಿಂದ 17 ಜನ ಶಾಸಕರು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ ಕುಮುಟಳ್ಳಿ ಅವರಿಗೂ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಆದರೆ, ಪಕ್ಷದ ಕೆಲ ಹಿರಿಯರು ನೀಡಿದ ಸಲಹೆ ಮೇರೆಗೆ ಅವರು ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರು. ನನಗೂ ಕೂಡ ಮಂತ್ರಿಯಾಗುವ ಎಲ್ಲ ಅರ್ಹತೆ ಇದ್ದರೂ ಕೂಡ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಮಹೇಶ ಕುಮಟಳ್ಳಿ ಮತ್ತು ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮಹೇಶ್‌ ಕುಮಟಳ್ಳಿ ನನ್ನಂತೆ ಅವರು ಸ್ಟ್ರಾಂಗ್‌ ಮಾತನಾಡುವುದಿಲ್ಲ. ಆದರೆ, ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದ ಮತದಾರರು ಆಸೆ ಆಮಿಷಗಳನ್ನು ತೋರಿಸುವ ಮತ್ತು ಪಕ್ಷದ್ರೋಹಿಗಳಿಗೆ ಮತ ನೀಡದೆ ಸೌಮ್ಯ ಸ್ವಭಾವದ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮಹೇಶ ಕುಮಟಲ್ಲಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಕೋರಿದರು.

ಪಂಚಮಸಾಲಿ ಲಿಂಗಾಯತ ಮತ್ತು ಅನೇಕ ಒಳಪಂಗಡಗಳಿಗೆ 2ಡಿ ಮೀಸಲಾತಿ ಸಿಗಬೇಕಾದರೆ ಪಂಚಮಸಾಲಿ ಸ್ವಾಮೀಜಿಗಳ ಹೋರಾಟದಿಂದ ದೊರಕಿದೆ. ಹಾಲುಮತದ ಕುರುಬರ ಸಮಾಜಕ್ಕೆ ಎಸ್ಟಿಮೀಸಲಾತಿ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆದಿದೆ. ಭಾರತೀಯ ಜನತಾ ಪಕ್ಷದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಕೆಲಸಗಳಾಗುತ್ತವೆ. ಆದ್ದರಿಂದ ಮತ್ತೊಮ್ಮೆ ಪಕ್ಷವನ್ನ ಗೆಲ್ಲಿಸಬೇಕು. ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದರೇ ರಾಜ್ಯ ಸರ್ಕಾರ ಈಗ ಮಾಡಿರುವ ಮೀಸಲಾತಿ ಕಿತ್ತುಕೊಳ್ಳುವುದರ ಜೊತೆಗೆ ಅನೇಕ ಮಸೂದೆಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ. ಅವರ ಗ್ಯಾರಂಟಿ ಕಾರ್ಡ್‌ಗಳನ್ನು ನಂಬಿ ಮೋಸ ಹೋಗಬಾರದು. ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಲಿಂಗಾಯತ ಸಮುದಾಯ ಬಾಂಧವರು ಸ್ವಾಭಿಮಾನದಿಂದ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ನೀಡಿದ್ದರೂ ಕೂಡ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಲಕ್ಷ್ಮಣ ಸವದಿ ಸ್ಥಳೀಯ ಶಾಸಕ ಮಹೇಶ್‌ ಕುಮಟಳ್ಳಿ ಅವರನ್ನು ನಿರ್ಲಕ್ಷ್ಯ ಮಾಡಿ ಅನೇಕ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಭಾರತೀಯ ಜನತಾ ಪಕ್ಷದ ಮಾಡಿದ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ದೂರ ದೃಷ್ಟಿಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ 400 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ 6 ಸ್ಥಾನಗಳನ್ನು ಗೆದ್ದಿದೆ. ರಾಹುಲ… ಗಾಂಧಿ ಪ್ರಧಾನಿ ಮೋದಿ ಅವರ ಸಮಾನ ಸ್ಥಾನ ಹೊಂದಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷ ಅದೊಂದು ಮುಳುಗುತ್ತಿರುವ ಹಡಗು. ರಾಜ್ಯ ವಿಧಾನಸಭಾ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ರಾಜ್ಯದಲ್ಲಿ ಕನಿಷ್ಠ 130ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಕ್ಷ ಗೆಲ್ಲುತ್ತದೆ ಅಂತ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ಬಿಎಸ್‌ವೈ-ಯತ್ನಾಳ

ಒಂದೇ ಪಕ್ಷದವರಾಗಿದ್ದರು ಕೂಡ ಹಾವು ಮೂಗುಸಿಯಂತೆ ಕಚ್ಚಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತದಾರರಲ್ಲಿ ಕುತೂಹಲ ಮೂಡಿಸಿದರು.

ಸುಡುಬಿಸಿಲಿನಲ್ಲಿಯೇ ಕುಳಿತು ಭಾಷಣ ಆಲಿಸಿದ ಜನರು

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಸುಡುಬಿಸಲಿನಲ್ಲಿಯೇ ಕುಳಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಭಾಷಣ ಆಲಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ
ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು
August 10, 2026
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ
August 9, 2026
12:36 PM
by: ಸಾಯಿಶೇಖರ್ ಕರಿಕಳ
ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ
August 9, 2026
6:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror