ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಗೇರು ಹಣ್ಣಿನ ಜ್ಯೂಸ್ ತಯಾರಿಕಾ ಘಟಕ ಆರಂಭಗೊಂಡಿದ್ದು, ಗ್ರಾಮೀಣ ಉದ್ಯಮ ಮತ್ತು ಮೌಲ್ಯವರ್ಧನೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗುತ್ತಿಗಾರಿನ ಲತಾ ಕುಮಾರಿ ಅವರ ನೇತೃತ್ವದ ಮಹಿಳಾ ತಂಡ ಈ ಘಟಕವನ್ನು ಆರಂಭಿಸಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಘಟಕದ ಆರಂಭದ ವೇಳೆ ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹಾಗೂ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಭೇಟಿ ನೀಡಿ ಗೇರು ಹಣ್ಣಿನ ಜ್ಯೂಸ್ ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್. ಸತೀಶ್ಚಂದ್ರ ಅವರು, ಕೃಷಿಯಲ್ಲಿ ಲಾಭವು ಬೆಳೆದಲ್ಲಷ್ಟೇ ಸೀಮಿತವಾಗಬಾರದು, ಅದನ್ನು ಉತ್ಪನ್ನವನ್ನಾಗಿ ಮಾಡುವ ಚಿಂತನೆಯೂ ಅಗತ್ಯ ಎಂದು ಹೇಳಿದರು. ಗೇರು ಹಣ್ಣಿನ ಜ್ಯೂಸ್ ಉತ್ತಮ ಸ್ವಾದ ಹೊಂದಿದ್ದು, ಮೌಲ್ಯವರ್ಧನೆಯ ಉತ್ತಮ ಉದಾಹರಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಉದ್ಯಮಗಳು ಬೆಳೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಕೃಷಿಕರ ಆದಾಯ ದ್ವಿಗುಣವಾಗಲು ಮತ್ತು ಗ್ರಾಮೀಣ ಉದ್ಯಮ ಬೆಳೆವುದಕ್ಕೆ ಇದು ಒಳ್ಳೆಯ ಅವಕಾಶ ಎಂದು ಅಭಿಪ್ರಾಯಪಟ್ಟರು.
ಕೃಷಿಯಲ್ಲಿ ಮೌಲ್ಯವರ್ಧನೆಯ ದಾರಿ ಹೊಸದೇನಲ್ಲ. ಹಲಸು ಮೌಲ್ಯವರ್ಧನೆ ಹಾಗೂ ಬಾಳೆಕಾಯಿ ಹುಡಿ (ಬಾಕಾಹು) ಈಗಾಗಲೇ ಯಶಸ್ವಿ ಮಾದರಿಗಳಾಗಿವೆ. ಕೇರಳದಲ್ಲಿ ಇದು ಭರ್ಜರಿ ಆದಾಯದ ಮೂಲವಾಗಿದ್ದು, ಕರ್ನಾಟಕದಲ್ಲಿ ಈ ವಿಚಾರವನ್ನು ಪರಿಚಯಿಸಿದವರು ಶ್ರೀಪಡ್ರೆ. ಈ ಪ್ರಯೋಗಗಳು ಒಂದೇ ಸಂದೇಶ ನೀಡುತ್ತವೆ. ಬೆಳೆ ಬೆಳೆದಷ್ಟೇ ಸಾಲದು, ಅದನ್ನು ಮೌಲ್ಯವರ್ಧನೆ ಮಾಡಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈ ಹಾದಿಯಲ್ಲೇ ಗೇರು ಹಣ್ಣು ದೊಡ್ಡ ಅವಕಾಶವಾಗಿ ಹೊರಹೊಮ್ಮುತ್ತಿದೆ. ಸಾಮಾನ್ಯವಾಗಿ ಗೇರು ಬೀಜ ತೆಗೆದ ನಂತರ ಹಣ್ಣು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಅಂದಾಜು ಪ್ರಕಾರ 70%ರಿಂದ 90%ರವರೆಗೆ ಗೇರು ಹಣ್ಣು ವ್ಯರ್ಥವಾಗುತ್ತಿದೆ. ಆದರೆ ಇದೇ ಹಣ್ಣು ಜ್ಯೂಸ್, ಸ್ಕ್ವಾಶ್ ಸೇರಿದಂತೆ ವಿವಿಧ ಉತ್ಪನ್ನಗಳಾಗಿ ಪರಿವರ್ತನೆಗೊಂಡರೆ ರೈತನಿಗೆ ಹೆಚ್ಚುವರಿ ಆದಾಯದ ದಾರಿಯಾಗಬಹುದು.
ಇತ್ತೀಚೆಗೆ ನೈಸರ್ಗಿಕ ಪಾನೀಯಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ, ಗೇರು ಹಣ್ಣಿನ ಜ್ಯೂಸ್ಗೆ ಮಾರುಕಟ್ಟೆ ಮೌಲ್ಯವೂ ಏರುತ್ತಿದೆ. ಒಂದು ಲೀಟರ್ ಜ್ಯೂಸ್ ₹80ರಿಂದ ₹150ರವರೆಗೆ ಮಾರಾಟವಾಗುತ್ತಿದ್ದು, 100 ಕೆಜಿ ಹಣ್ಣಿನಿಂದ ಸುಮಾರು 60ರಿಂದ 70 ಲೀಟರ್ ಜ್ಯೂಸ್ ತಯಾರಿಸಬಹುದು. ಗೇರು ಬೀಜದ ಆದಾಯ ಸೇರಿಸಿದರೆ ಒಟ್ಟು ಆದಾಯದಲ್ಲಿ 20ರಿಂದ 40 ಶೇಕಡಾವರೆಗೆ ಹೆಚ್ಚಳ ಸಾಧ್ಯತೆ ಇದೆ.
ಆದರೆ ಈ ದಾರಿ ಸುಲಭದಿಲ್ಲ. ಹೆಚ್ಚುವರಿ ಆದಾಯಕ್ಕೆ ಶ್ರಮ, ಸಂಗ್ರಹ ವ್ಯವಸ್ಥೆ, ಪ್ರೊಸೆಸಿಂಗ್ ಮತ್ತು ಮಾರುಕಟ್ಟೆ ಸಂಪರ್ಕ ಅಗತ್ಯ. ಆದರೆ ಈ ಸವಾಲುಗಳನ್ನು ಮೀರಿ ಮುಂದುವರಿದರೆ ಫಲವೂ ದೊಡ್ಡದೇ ಎಂಬುದು ಈ ಘಟಕದ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ.
ಸುಳ್ಯದ ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಆರಂಭಗೊಂಡಿರುವ ಈ ಜ್ಯೂಸ್ ಘಟಕ ಕೇವಲ ಒಂದು ಉದ್ಯಮವಲ್ಲ; ಇದು ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿ ತುಂಬುವ ಪ್ರಯತ್ನವಾಗಿದೆ. ಮಹಿಳೆಯರು ಮುನ್ನಡೆದು ಇಂತಹ ಮೌಲ್ಯವರ್ಧನೆ ಆಧಾರಿತ ಉದ್ಯಮಗಳನ್ನು ಕೈಗೊಳ್ಳುವುದು, ಗ್ರಾಮೀಣ ಅಭಿವೃದ್ಧಿಗೆ ದಿಕ್ಕು ತೋರಿಸುವ ಹೆಜ್ಜೆಯಾಗಿದೆ.
ಕೃಷಿ ಸಂಕಷ್ಟದಲ್ಲಿದೆ ಎಂಬ ಮಾತುಗಳ ನಡುವೆ, ನಿಜವಾದ ಪರಿಹಾರ ನಮ್ಮ ಹೊಲಗಳಲ್ಲೇ ಇದೆ. ನಾವು ಬೆಳೆದದ್ದನ್ನು ಸಂಪೂರ್ಣವಾಗಿ ಬಳಸುವ ಮನೋಭಾವ ಬೆಳೆಸಿಕೊಂಡರೆ, ವ್ಯರ್ಥವಾಗುತ್ತಿರುವ ಪ್ರತಿಯೊಂದು ಉತ್ಪನ್ನವೂ ಆದಾಯದ ಮೂಲವಾಗಬಹುದು.
ಗೇರು ಹಣ್ಣಿನ ಜ್ಯೂಸ್ ಒಂದು ಉದಾಹರಣೆ ಮಾತ್ರ. ಆದರೆ ಅದರ ಹಿಂದೆ ಇರುವ ಸಂದೇಶ ಸ್ಪಷ್ಟ, “ಕೃಷಿಯ ಭವಿಷ್ಯ ಮೌಲ್ಯವರ್ಧನೆಯಲ್ಲಿ ಇದೆ.”
A cashew apple juice processing unit has been launched in Guthigar, Sullia taluk of Dakshina Kannada district under the leadership of women. This initiative highlights value addition as a key pathway to doubling farmers’ income. With rising demand for natural juices and high wastage of cashew apples (70–90%), converting them into juice can significantly enhance farmers’ earnings and boost rural entrepreneurship.
ಗುತ್ತಿಗಾರಿನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಸಮುದಾಯದ…
29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…
ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…
ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…
ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…