ಮಲೆನಾಡಿನಲ್ಲಿ ಹವಾಗುಣ ಬದಲಾವಣೆ ಮತ್ತು ಭವಿಷ್ಯದಲ್ಲಿ ಬಡವರ ಉಳಿವಿನ ಸಾಧ್ಯತೆಗಳು | ಭಾಗ – 2

February 24, 2024
12:34 PM
ವರ್ಷದಿಂದ ವರ್ಷಕ್ಕೆ ಭೂ ತಾಪಮಾನ ಏರಿಕೆಯಾಗುತ್ತಿದೆ, ಇದರ ಮೊದಲ ದುಷ್ಪರಿಣಾಮಗಳನ್ನು ಎದುರಿಸುವವರು ಇಲ್ಲಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ಸಣ್ಣ ಹಿಡುವಳಿದಾರರು. ಈ ಬಗ್ಗೆ ನಾಗರಾಜ ಕೂವೆ ಅವರು ಬರೆದಿರುವ ಬರಹ ಇಲ್ಲಿದೆ...

ಬೇರೆ ಯಾವುದೇ ಬೆಳೆಗಳು ಸರಿಯಾಗಿ ಫಸಲು ಬರದಿರುವ ಕಾರಣದಿಂದ ಕಾಫಿ(Coffee), ಅಡಿಕೆ(Arecanut), ಕಾಳುಮೆಣಸುಗಳನ್ನು(Pepper) ಮಲೆನಾಡಿನಲ್ಲಿ(Malenadu) ಬೆಳೆಯಲಾಗುತ್ತಿದೆ. ಈ ಎಲ್ಲಾ ಬೆಳೆಗಳು ನೀರನ್ನು ಅವಲಂಬಿಸಿದೆ. ಅತೀ ಹೆಚ್ಚು ಮಳೆ(Rain) ಬಂದರೆ ಈ ಬೆಳೆಗಳು ಕೊಳೆತು ಹೋಗುತ್ತವೆ, ಮಳೆ ಕಡಿಮೆಯಾದರೆ ಬಾಡಿ ಹೋಗುತ್ತವೆ. ಪಶ್ಚಿಮ ಘಟ್ಟದಲ್ಲಿ(Western Ghats) ಮಾನ್ಸೂನ್(Mansoon) ಆಧಾರಿತವಾದ ಮಳೆ ಬರುತ್ತದೆ. ಮೂರ್ನಾಲ್ಕು ವರ್ಷಗಳಿಂದ ವಿಪರೀತ ಸುರಿದಿದ್ದ ಮಳೆ ಕಳೆದ ವರ್ಷ ಕಾಣದಾಗಿದೆ. ಇವತ್ತು ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕಾ ಮಳೆ, ಬದಲಾಗುತ್ತಿರುವ ಹವಾಮಾನಕ್ಕೆ ಮಲೆನಾಡು ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನ ಹೆಚ್ಚಳ(Global Warming)ಮತ್ತು ಅದರಿಂದ ಆಗುತ್ತಿರುವ ಹವಾಗುಣ ಬದಲಾವಣೆ(Climate Change). ಇದೇ ಅಡಿಕೆಯ ಎಲೆ ಚುಕ್ಕಿ ರೋಗವನ್ನು ತೀವ್ರಗೊಳಿಸಿರುವುದು, ಕಾಫಿ ಕೊಳೆಯಲು ಮತ್ತು ಕಾಳುಮೆಣಸಿನ ನಷ್ಟಕ್ಕೆ ಕಾರಣವಾಗುತ್ತಿರುವುದು.

Advertisement

ವರ್ಷದಿಂದ ವರ್ಷಕ್ಕೆ ಭೂ ತಾಪಮಾನ ಏರಿಕೆಯಾಗುತ್ತಿದೆ. ಹವಾಗುಣ ಬದಲಾವಣೆಯನ್ನು ದಾಟಿ ಹವಾಗುಣ ಬಿಕ್ಕಟ್ಟನ್ನು(Climate Crisis) ನಾವು ಎದುರಿಸುತ್ತಿದ್ದೇವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದರ ಅತೀ ಹೆಚ್ಚು ಮತ್ತು ತತ್ತಕ್ಷಣದ ಪರಿಣಾಮಗಳನ್ನು ಎದುರಿಸುವ ಪ್ರದೇಶಗಳಲ್ಲಿ ಮಲೆನಾಡು ಕೂಡಾ ಒಂದು. ಅದರ ಮೊದಲ ದುಷ್ಪರಿಣಾಮಗಳನ್ನು ಎದುರಿಸುವವರು ಇಲ್ಲಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ಸಣ್ಣ ಹಿಡುವಳಿದಾರರು.

ಮುಂದೆ ಕಾಲಕಾಲಕ್ಕೆ ಬಿಸಿಲು, ಮಳೆ, ಚಳಿಗಳು ಬೀಳದಿರುವುದರಿಂದ ಇಲ್ಲಿನ ಕಾಫಿ, ಅಡಿಕೆ ಮತ್ತು ಕಾಳುಮೆಣಸಿನ ಫಸಲಿಗೆ ತೊಂದರೆಯಾಗುತ್ತದೆ. ಹೆಚ್ಚುತ್ತಿರುವ ಸೈಕ್ಲೋನ್ ಗಳ ಮಧ್ಯೆ, ಶಿಲೀಂಧ್ರಗಳಿಂದ ಈ ಬೆಳೆಗಳಿಗೆಲ್ಲಾ ಉಂಟಾಗುತ್ತಿರುವ ರೋಗಗಳಿಗೆಲ್ಲಾ ಶಾಶ್ವತವಾದ ಪರಿಹಾರ ಸಾಧ್ಯವಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ ಕಾಫಿ, ಅಡಿಕೆಗಳು ಸ್ಥಳೀಯವಲ್ಲದ ಸಸ್ಯಗಳಾಗಿರುವುದರಿಂದ, ಅವುಗಳು ಈ ಬದಲಾಗುತ್ತಿರುವ ಹವಾಗುಣವನ್ನು ಮೀರಿ ಬದುಕುಳಿಯಲಾರವು, ಫಸಲು ಕೊಡಲಾರವು.

ಇದರಿಂದ ಭವಿಷ್ಯದಲ್ಲಿ ಇಲ್ಲಿ ಕೃಷಿ ಮಾಡುವುದೇ ಕಷ್ಟವಾಗುತ್ತಾ ಹೋಗುತ್ತದೆ. ಆಗ ಪ್ಲಾಂಟರ್ಗಳು ಕಾರ್ಮಿಕರನ್ನು ಕೆಲಸಕ್ಕೆ ಕರೆಯುವುದನ್ನು ಕಡಿಮೆ ಮಾಡುತ್ತಾ ಹೋಗುತ್ತಾರೆ. ಉದ್ಯೋಗವಿಲ್ಲದೇ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗುತ್ತಾ ಹೋಗುತ್ತದೆ. ಅವರೆಲ್ಲಾ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಸಣ್ಣ ಹಿಡುವಳಿದಾರರು ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ತಲುಪುತ್ತಾರೆ. ಯಾರಲ್ಲೂ ಹಣವಿಲ್ಲ ಎಂದಾಗುತ್ತದೆ. ಇದಕ್ಕೆ ಇರುವ ಪರಿಹಾರವೆಂದರೆ ನಾವು ಪ್ರಕೃತಿ ನೀಡುತ್ತಿರುವ ಸೂಚನೆಗಳನ್ನು ಗಮನಿಸುತ್ತಾ ಕೃಷಿ ಪದ್ಧತಿ ಮತ್ತು ಕೃಷಿ ಬೆಳೆಗಳನ್ನು ಬದಲಾಯಿಸುವುದು ಮತ್ತು ಕಾಡು ಉಳಿಸುವುದು!

ಇವತ್ತು ಮಲೆನಾಡಿನಾದ್ಯಂತ ಕಾಡು ಉಳಿಸಬೇಕೆಂಬ ಮಾತೇ ಜನರಿಗೆ ಸಿಟ್ಟು ತರಿಸುತ್ತದೆ. ಸ್ಥಳೀಯರಿಗೆ ಪರಿಸರ ಸಂರಕ್ಷಣೆಯ ಬಗೆಗೆ ತೀವ್ರ ಅಸಹನೆಯಿದೆ. ಇದಕ್ಕೆ ಇಲ್ಲಿಯವರೆಗಿನ ಸಂರಕ್ಷಣೆಯ ಮಾದರಿಗಳು, ಅರಣ್ಯ ಇಲಾಖೆಯ ನಡವಳಿಕೆಗಳೇ ಕಾರಣ. ರಾಷ್ಟ್ರೀಯ ಉದ್ಯಾನವನದ, ವನ್ಯಜೀವಿಧಾಮ, ಸಂರಕ್ಷಿತ ಪ್ರದೇಶ ಮೊದಲಾದವುಗಳ ಹೆಸರಿನಲ್ಲಿ ಜನರನ್ನು ಕಾಡುಗಳಿಂದ ಹೊರಹಾಕಿರುವುದು, ಮಾನವ ಮತ್ತು ವನ್ಯಜೀವಿಗಳ ನಡುವೆ ಇದ್ದ ಅಂತರ್ ಸಂಬಂಧಗಳನ್ನು ಕಡಿದು ಹಾಕಿದೆ. ಅಲ್ಲದೇ ಜನರನ್ನು ಕಾಡುಗಳಿಂದ ಹೊರಗಟ್ಟಿದ ಸಂರಕ್ಷಣೆ ಅವರ ಬದುಕುವ ಹಕ್ಕನ್ನು ಕಸಿದಿದೆ. ತಲೆತಲಾಂತರದಿಂದ ನಿಸರ್ಗದ ಮಧ್ಯೆ ಬದುಕುತ್ತಿರುವ ಮಲೆನಾಡಿನ ಜನರನ್ನು ಪರಿಸರ ಸಂರಕ್ಷಣೆಯಲ್ಲಿ ಒಳಗೊಂಡರೆ ಸಂರಕ್ಷಣೆಯ ಮಹತ್ವ ಅವರಿಗೂ ಅರ್ಥವಾಗುತ್ತದೆ. ಆಗ ಕಾಡು ಉಳಿಸುವ ಕೆಲಸಕ್ಕೆ ಅವರ ಸಹಮತವೂ ಸಿಗಲಿದೆ.

ಕೋಸ್ಟಾರಿಕ ದೇಶದ ರೈತರಿಗೆ ಕಾಡು ಉಳಿಸಿದ್ದಕ್ಕೇ, ಬೆಳೆಸಿದ್ದಕ್ಕೆ ಹಣ ಕೊಡಲಾಗುತ್ತದೆ. ಇದನ್ನು Payment for Ecological services ಎನ್ನುತ್ತಾರೆ. ಇದು ಮಲೆನಾಡಿನಲ್ಲೂ ಜಾರಿಯಾಗಬೇಕಿದೆ. ಕಾಡು ಉಳಿಸಿ, ಬೆಳೆಸಿದ್ದಕ್ಕೆ ಹಣ ಕೊಡೋದೆಲ್ಲಾ ಆಗಿ ಹೋಗುವ ಮಾತಲ್ಲ ಎನ್ನಬೇಡಿ. ಏಕೆಂದರೆ, ನಾವಿರುವ ಪಶ್ಚಿಮ ಘಟ್ಟ ಇಡೀ ದಕ್ಷಿಣ ಭಾರತದ ಹವಾಮಾನವನ್ನು ನಿರ್ಧರಿಸುತ್ತದೆ. ಬಹುಪಾಲು ನದಿಗಳು ಇಲ್ಲೇ ಹುಟ್ಟುತ್ತವೆ. ನೀರು, ಮಣ್ಣು, ಗಾಳಿ ಮೊದಲಾದವುಗಳ ಮೂಲಕ ಇದು ಒದಗಿಸುವ ಪರಿಸರ ಸೇವೆ ಬೆಲೆ ಕಟ್ಟಲಾಗದ್ದು. ಈ ಸಹ್ಯಾದ್ರಿ ನಾಶವಾದರೆ ಜನಜೀವನ ಕೂಡಾ ನಾಶವಾಗಲಿದೆ. ಅಲ್ಲದೇ ಜಗತ್ತಿನ ಹಲವು ಪ್ರದೇಶಗಳ ಹವಾಮಾನ ನಿರ್ಧರಿಸುವಲ್ಲೂ ಘಟ್ಟಗಳ ಪಾತ್ರ ಮಹತ್ವವಾದುದು. ಹೀಗಾಗಿ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಜಾಗತಿಕ ಮಹತ್ವವಿದೆ. ಎಲ್ಲರ ಉಳಿವು ಈ ಹಸಿರಿನ ಉಳಿವಿನಲ್ಲಿದೆ. ಹಾಗಾಗಿ Payment for Ecological Services ಅಗತ್ಯ.

ಮಲೆನಾಡಿನಲ್ಲಿ ಜನರು ಕಾಡು ಬೆಳೆಸಿದ್ದಕ್ಕೆ ಹಣ ಕೊಡಬೇಕು ಎಂದರೆ, ಮೊದಲಿಗೆ ಅವರಿಗೆ ಜಮೀನಿರಬೇಕಲ್ವಾ? ಅದಕ್ಕೆ ಹಕ್ಕುಪತ್ರ ಬೇಕಲ್ವಾ? ಹಾಗಾಗಿ ಇಲ್ಲಿನ ದೊಡ್ಡ ದೊಡ್ಡ ಒತ್ತುವರಿಗಳನ್ನು ತೆರವುಗೊಳಿಸಿ ಭೂರಹಿತರಿಗೆ ಹಂಚಿ ಅವರನ್ನು ಕಾರ್ಮಿಕರಿಂದ ರೈತರಾಗಿ ಬದಲಾಯಿಸಬೇಕು ಹಾಗೂ ಜೀವನೋಪಾಯದ ಒತ್ತುವರಿಗೆ ಹಕ್ಕುಪತ್ರ ಸಿಗಬೇಕು.

ಹವಾಗುಣ ಬಿಕ್ಕಟ್ಟಿನ ಮುಂದಿನ ದಿನಗಳಲ್ಲಿ, ‘ನಮಗೆ ಭೂಮಿಯಿದೆ, ಅದಕ್ಕೆ ಹಕ್ಕುಪತ್ರವಿದೆ, ಅಲ್ಲಿ ಕಾಡು ಬೆಳೆಸಿದ್ದಕ್ಕೆ ಹಣ ಕೊಡುತ್ತಾರೆ’ ಎಂದರೆ ಮಾತ್ರ ಇಲ್ಲಿ ಬದುಕಬಹುದು.ಪರಿಸರ ಸಂರಕ್ಷಣೆಯೊಂದೇ ನಮ್ಮನ್ನು ಮತ್ತು ಜೀವವೈವಿಧ್ಯವನ್ನು ಉಳಿಸಬಹುದಾದ ದಾರಿ. ಇಂತಹ ನೀತಿಗಳು ಬರಲಿ ಎಂದು ಸರ್ಕಾರಗಳನ್ನು ಒತ್ತಾಯಿಸಬೇಕಿದೆ. ಜೊತೆಗೆ ಸ್ಥಳೀಯ ಕಾಡುತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವಂತಾಗಬೇಕು. ಇದಕ್ಕೆ ಬೇಕಾದ ಸಂಶೋಧನಾ ಚಟುವಟಿಕೆಗಳು ನಡೆಯಬೇಕು.

ಬರಹ
ನಾಗರಾಜ ಕೂವೆ

Earth temperature is increasing year by year. Scientists are saying that we are facing climate crisis beyond climate change. The hill country is one of the regions that will face its greatest and most immediate effects. It is the poor, wage laborers and smallholders here who face its first ill effects.

(ಮುಂದುವರೆಯುವುದು)

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group