ಕಳೆದೊಂದು ತಿಂಗಳಿನಿಂದ ತೆಂಗಿನ ಬಗ್ಗೆ ಚರ್ಚೆ.ತೆಂಗಿನ ಕಾಯಿಗೆ ರೇಟು,ತೆಂಗಿನೆಣ್ಣೆಗೆ ರೇಟು, ತೆಂಗಿನ ಸಿಪ್ಪೆಗೆ ರೇಟು.. ಅದರ ಜೊತೆಗೇ ಸುದ್ದಿಯಾಯ್ತು ತೆಂಗಿನ ಗೆರಟೆಗೂ ರೇಟಿದೆ..!. ಅದುವರೆಗೂ ಎಸೆಯುತ್ತಿದ್ದ ಅಥವಾ ಉರುವಲಾಗಿ ಬಳಕೆಯಾಗುತ್ತಿದ್ದ ತೆಂಗಿನ ಚಿಪ್ಪಿಯೂ ಸುದ್ದಿಯಾಯಿತು. ಅದೇ ವೇಳೆ ತೆಂಗಿನ ಗೆರಟೆ ಮೌಲ್ಯವರ್ಧನೆಯಾಗಿ , ಪರಿಸರ ಸ್ನೇಹಿಯಾಗಿ ದೇಶದ ವಿವಿದೆಡೆಗೆ, ವಿದೇಶಕ್ಕೂ ರವಾನೆಯಾಗುವುದಕ್ಕೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈಗ ಗೆರಟೆಯನ್ನು ಮೌಲ್ಯವರ್ಧನೆ ಮಾಡುತ್ತಿರುವವರು ವಡ್ಯ ಶಂಕರ ಭಟ್.…… ಮುಂದೆ ಓದಿ……
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಕ್ರಂಪಾಡಿ ಕೈಗಾರಿಕಾ ಕ್ಷೇತ್ರದಲ್ಲಿ ‘ಕೋಕೋಕ್ರಾಫ್ಟ್ಸ್ ಇಂಡಿಯಾ’ ಎಂಬ ತೆಂಗಿನ ಗೆರಟೆಯ ಮೌಲ್ಯವರ್ಧನೆಯ ಘಟಕ ಆರಂಭವಾಗಿ ಕೆಲವು ಸಮಯವಾಗಿದೆ. ಕಬಕ ಬಳಿಯ ವಡ್ಯ ಶಂಕರ ಭಟ್ ಅವರು ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ ಪ್ರಮಾಣದಲ್ಲಿ ಘಟಕವನ್ನು ಆರಂಭ ಮಾಡಿರುವ ಶಂಕರ್ ಭಟ್ ಅವರು ದೇಶದ ವಿವಿದೆಡೆಗೆ ತೆಂಗಿನ ಗೆರಟೆಯ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಸುಮಾರು 30 ವರ್ಷದ ಹಿಂದೆ ಶಂಕರ ಭಟ್ ಅವರ ಚಿಕ್ಕಪ್ಪ ಗೆರಟೆಯ ಉತ್ಪನ್ನ ಮಾಡುತ್ತಿದ್ದರು, ಅದರ ಯೋಚನೆ ಇದ್ದಾಗಲೇ, “ದ ರೂರಲ್ ಮಿರರ್.ಕಾಂ” ಕೆಲವು ಸಮಯದ ಹಿಂದೆ ಪುತ್ತೂರಿನ ಕೋಡಿಂಬಾಡಿ ಬಳಿಯಲ್ಲಿ ಮಹಿಳೆಯರು ಸ್ವಉದ್ಯೋಗದ ಮೂಲಕ ಗೆರಟೆಯ ಮೌಲ್ಯವರ್ಧನೆಯ ಬಗ್ಗೆ ಮಾಡಿರುವ ವಿಶೇಷ ವರದಿಯ ಮಾಹಿತಿ ಪಡೆದು ವೀಕ್ಷಣೆ ಮಾಡಿದ್ದರು. ಆರಂಭದಲ್ಲಿ ಅವರಿಂದಲೇ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ರಫ್ತು ಮಾಡಲು ಅದಕ್ಕೊಂದು ಹೊಸ ರೂಪ ಬೇಕಾಗಿರುವ ಕಾರಣದಿಂದ ಮತ್ತು ಗೆರಟೆಯ ವಿವಿಧ ಕಲಾತ್ಮಕ ಉತ್ಪನ್ನಗಳನ್ನು ತಯಾರು ಮಾಡಲು ಸಂಸ್ಥೆಯನ್ನು ಹುಟ್ಟುಹಾಕಿದವರು ಶಂಕರ ಭಟ್.
ಸದ್ಯ ಗೆರಟೆಯ ಮೌಲ್ಯವರ್ಧಿತ ವಸ್ತುಗಳಾಗಿ ಕರಕುಶಲ ವಸ್ತುಗಳು ಇದೆ. ಕಾಫಿ-ಟೀ ಕಪ್, ವೈನ್ ಗ್ಲಾಸ್, ಶರ್ಟ್ ಬಟನ್ಗಳು, ಹೂಕುಂಡ, ಪದಾರ್ಥಗಳನ್ನು ಹಾಕುವ ಕರಡಿಗೆ, ಮೊಬೈಲ್ ಸ್ಟ್ಯಾಂಡ್, ಚಮಚಗಳು, ಸೋಪ್ ಬಾಕ್ಸ್, ಕೀ ಚೈನ್ , ಬಲ್ಪ್ ಹೋಲ್ಡರ್… ಹೀಗೇ ಹಲವು ಬಗೆಯ ವಸ್ತುಗಳು ಇಲ್ಲಿ ತಯಾರಾಗುತ್ತದೆ ಎನ್ನುತ್ತಾರೆ ಶಂಕರ್ ಭಟ್. ಸದ್ಯ ಅಹಮದಾಬಾದ್ ನಲ್ಲಿ ಮಾರುಕಟ್ಟೆ ಮಾಡಲಾಗುತ್ತಿದೆ. ಇಂಗ್ಲೆಂಡ್ ನಲ್ಲಿ ಕೂಡಾ ಕೇಳಿದ್ದಾರೆ , ಬೇಡಿಕೆ ಇದೆ. ಮುಂದೆ ಯಾವ ವಸ್ತುಗಳ ಬೇಡಿಕೆ ಬರುತ್ತದೆ ನೋಡಿ ಅದಕ್ಕೆ ಅನುಸಾರವಾಗಿ ಗೆರಟೆಯಿಂದಲೇ ವಸ್ತುಗಳ ತಯಾರಿ ಮಾಡಲಾಗುತ್ತದೆ ಎನ್ನುತ್ತಾರೆ.
ಇಲ್ಲಿ ಸದ್ಯ ತೆಂಗಿನಕಾಯಿಯನ್ನು ಖರೀದಿ ಮಾಡಿ ಅದರಿಂದ ಗೆರಟೆಯನ್ನು ನಮಗೆ ಬೇಕಾದ ಹಾಗೆ ಸಿದ್ಧ ಮಾಡುತ್ತೇವೆ. ಮುಂದೆ ರೈತರಿಂದಲೇ ತೆಂಗಿನ ಕಾಯಿ ಖರೀದಿ ಮಾಡಬೇಕೆನ್ನುವ ಯೋಜನೆ ಇದೆ. ತೆಂಗಿನ ಗೆರಟೆಯನ್ನು ಯಂತ್ರಗಳ ಮೂಲ ಕತ್ತರಿಸಿ, ಪಾಲಿಶ್ ಮಾಡಿ ಬೇಕಾದ ಆಕಾರ ನೀಡಿ ಅದಕ್ಕೆ ಎಣ್ಣೆಯನ್ನು ಬಳಿಯುತ್ತೇವೆ ಎನ್ನುತ್ತಾರೆ ಶಂಕರ್ ಭಟ್. ಸದ್ಯಕ್ಕೆ ಗ್ರಾಮೀಣ ಪ್ರದೇಶದ ನಾಲ್ಕು ಮಂದಿ ಮಹಿಳೆಯರು ಈ ಕರಕುಶಲ ಕೆಲಸದಲ್ಲಿ ನಿರತರಾಗಿದ್ದಾರೆ. ಕಾಫಿ ಕಪ್, ವೈನ್ ಕಪ್ ಇತ್ಯಾದಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗೆರಟೆಯಿಂದ ಮಾಡಿರುವ ಬಲ್ಪ್ ಹೋಲ್ಡರ್ ಕೂಡಾ ಆಕರ್ಷಕವಾಗಿದ್ದು ಬೇಡಿಕೆ ಇದೆ. ಪರಿಸರ ಸ್ನೇಹಿಯೂ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯ ಸಾಧ್ಯತೆ ಇದೆ, ಮಾರುಕಟ್ಟೆ ಅವಕಾಶಗಳೂ ಇವೆ ಎನ್ನುವ ವಿಶ್ವಾಸವನ್ನು ಶಂಕರ ಭಟ್ ವ್ಯಕ್ತಪಡಿಸುತ್ತಾರೆ. ಈ ಉದ್ಯಮದಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗ ಸಾಧ್ಯವಿದೆ, ಬೇಡಿಕೆ ಹೆಚ್ಚಾದರೆ ತೆಂಗಿನ ಕಾಯಿ ರವಾಗಿ ರೈತರಿಂದ ಖರೀದಿ ನಡೆಯಲು ಸಾಧ್ಯವಿದೆ, ರೈತರ ಆದಾಯವೂ ವೃದ್ಧಿಸುವ ಅವಕಾಶಗಳು ಇವೆ. ಈಗ ವಿಶೇಷವಾಗಿ ಉತ್ತರಭಾರತದಿಂದ ಹೆಚ್ಚಿನ ಬೇಡಿಕೆ ಇದೆ, ಪರಿಸರ ಕಾಳಜಿ ಹಿನ್ನೆಲೆಯಲ್ಲಿಯೇ ಬೇಡಿಕೆ ವ್ತಕ್ತವಾಗುತ್ತಿದೆ.
ಈ ಕೆಲಸದಲ್ಲಿ ನಿರಂತರ ಶ್ರಮ ಹಾಗೂ ಮಾರುಕಟ್ಟೆಗೆ ತಕ್ಕಂತೆ ತಕ್ಷಣ ಹೊಂದಿಕೊಳ್ಳುವುದು ಅಗತ್ಯ ಇದೆ ಎನ್ನುವುದು ಅವರ ಅಭಿಪ್ರಾಯ. ನಮ್ಮ ಸಂಸ್ಥೆಗೆ ಕೇಂದ್ರ ಸರ್ಕಾರದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಗುಣಮಟ್ಟ ಹಾಗೂ ಹೊಗೆ ಸೂಸದಿರುವ ಉದ್ಯಮಎಂಬ ಖಾತರಿಯಾಗಿ ಸರ್ಟಿಫಿಕೇಟ್ ಕೂಡಾ ದೊರೆತಿದೆ ಎನ್ನುತ್ತಾರೆ ಶಂಕರ ಭಟ್. ಸಂಪರ್ಕ : 98802 45936
Coconut shells are increasingly being exported to different regions across the country and internationally as a product that is both value-added and environmentally friendly, especially during the coconut harvest season. Vadya Shankar Bhat is involved in enhancing the value of these shells in Puttur, located in the Dakshina Kannada district.