ದೀಪಾವಳಿಯ ಸಂಭ್ರಮ ಸವಿಯಾಗಿರಲಿ

November 16, 2020
10:23 AM

ಹಬ್ಬವೆಂದರೆ ದೀಪಾವಳಿ. ಈ ಹಬ್ಬ ಇಷ್ಟದ ಹಬ್ಬ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ಜೀವಗಳಿಗೂ ನೆಚ್ಚಿನ ಹಬ್ಬ. ನಾಲ್ಕು ‌ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೆಲವೆಡೆ ಹದಿನೈದು ದಿನಗಳ ಕಾಲವೂ ಆಚರಣೆಗಳಿವೆ.
ಈ ಹಬ್ಬದಲ್ಲಿ ಏನುಂಟು ಏನಿಲ್ಲ. ಲಕ್ಷ್ಮೀ ಪೂಜೆ, ತುಳಸಿ ಪೂಜೆ, ಬಲಿಯೇಂದ್ರ ಪೂಜೆ ಹಸುಗಳ ಪೂಜೆ. ಪೂಜೆಗಳು ಮಾತ್ರವಲ್ಲ ತಿಂಡಿಗಳ ಸಮಾಗಮನವೂ ಕೂಡ.

ದೀಪಾವಳಿ ಹಬ್ಬದ ಆರಂಭ‌ವಾಗುವುದು ಅಭ್ಯಂಗದೊಂದಿಗೆ. ಮುಂಜಾನೆಯೇ ದೇವರ ಕೋಣೆಯಲ್ಲಿ ರಂಗೋಲಿ ಬರೆದು ಮಣೆ ಇಡಬೇಕು. ಆಮೇಲೆ ದೇವರಿಗೆ ನಮಸ್ಕರಿಸಿ ಎಣ್ಣೆಯನ್ನು ತಲೆಯಿಂದ ಕಾಲಿನವರೆಗೆ ಹಚ್ಚಿ ಬಿಸಿ ಬಿಸಿ ನೀರಿನಲ್ಲಿ ಮೈ ತಿಕ್ಕಿ‌ತಿಕ್ಕಿ ಸ್ನಾನ ಮಾಡುವುದು ಖುಷಿಯ ಅನುಭವ. ಆಮೇಲೆ ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಪದ್ಧತಿ. ಆ ದಿನ ಬೆಳಗಿನ ತಿಂಡಿಗೆ ಕುಂಬಳಕಾಯಿ ದೋಸೆ ವಿಶೇಷ.

ಇನ್ನೂ ದೀಪಾವಳಿ ಬೆಳಕಿನ ಹಬ್ಬ ತಾನೇ. ದೀಪಗಳದ್ದೇ ಕಾರುಬಾರು. ಮುಸ್ಸಂಜೆ ‌ ಹೊತ್ತಾಯಿತೆಂದರೆ ಮನೆಯ ಸುತ್ತಮುತ್ತಲೆಲ್ಲಾ ಹಚ್ಚಿಡುವ ದೀಪಗಳು. ಬಲಿ ಚಕ್ರವರ್ತಿ ಹಬ್ಬದ ಮೂರು ದಿನಗಳು ತನ್ನ ರಾಜ್ಯದಲ್ಲಿ ಸಂಚರಿಸಿ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಂಬಿಕೆ . ಹಾಗಾಗಿ ಪ್ರತಿ ಮನೆಮನೆಗಳಲ್ಲೂ ದೀಪ ರಂಗೋಲಿ ಗಳನಿಟ್ಟು ಜನರಿಗೆ ಬಲಿಚಕ್ರವರ್ತಿ ಯನ್ನು ಸ್ವಾಗತಿಸುವ ಸಂತೋಷ.

ಮಣ್ಣಿನ ಹಣತೆಗಳು ಹೊಮ್ಮಿಸುವ ಪ್ರಶಾಂತವಾದ ಬೆಳಕುಗಳು ಮನಸಿಗೆ ನೆಮ್ಮದಿಯನ್ನು ಕೊಡುತ್ತವೆ. ದೀಪದಿಂದ ದೀಪ ಹಚ್ಚುತ್ತಾ ಸಂತಸವು ಎಲ್ಲೆಡೆ ಬೆಳಕಿನಂತೆ ಪಸರಿಸಲಿ ಎಂಬ ಘನ ಧ್ಯೇಯವನ್ನು ಸೂಚಿಸುತ್ತದೆ. ಈ ನಿರ್ಮಲ ಬೆಳಕಿನ ಮುಂದೆ ಗಿಜಿಗಿಜಿ ಎಂದು ಜಗಮಗಿಸುವ ವಿದ್ಯುತ್ ದೀಪಗಳು ತೀರಾ ಕೃತಕವೆನಿಸುತ್ತವೆ.

ಸ್ಥಳೀಯವಾಗಿ ಬೆಳೆಯುವ ಚೆಂಡುಹೂಗಳನ್ನು ಅಲಂಕಾರಕ್ಕಾಗಿ ಬಳಸುವುದು ಹಿಂದಿನಿಂದ ಬಂದ ಪದ್ಧತಿ. ಸೆಗಣಿಯ ಉಂಡೆ ಮಾಡಿ ಅದರ ಮಧ್ಯ ದಲ್ಲಿ ಚೆಂಡು ಹೂಗಳನ್ನು ಇಟ್ಟು ತುಳಸಿ ಕಟ್ಟೆಯ ಸುತ್ತಲೂ ಇಡುತ್ತಿದ್ದುದು ಬಾಲ್ಯದ ನೆನಪುಗಳು. ಬಣ್ಣ ಬಣ್ಣದ ಎಲೆಗಳು, ಇನ್ನಿತರ ಹೂಗಳನ್ನು ಬಳಸಿ ಮಾಡುವ ರಂಗೋಲಿ ಮನಸಿಗಷ್ಟೇ ಅಲ್ಲ ಕಣ್ಣಿಗೂ ಅಂದ. ಅವುಗಳ ಮಧ್ಯೆ ಇಡುವ ದೀಪಗಳು.

ಹಬ್ಬ ಹರಿದಿನಗಳಲ್ಲಿ ಮನೆ‌ಮನೆಗಳಲ್ಲಿ ಸಂಭ್ರಮದ ವಾತಾವರಣ. ಅಲ್ಲಲ್ಲಿ ದೀಪ ಹಚ್ಚಿ ನಕ್ಷತ್ರ ಕಡ್ಡಿ ಉರಿಸಿ ಪಡುತ್ತಿದ್ದ ಸಂತೋಷ ಇಂದು ಊರಿಡೀ ಪಸರಿಸಿದೆ. ದೀಪಾವಳಿಯ ಸಮಯದಲ್ಲಿ ‌ಆಗುವ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಗಳ ಅಗಾಧತೆಯನ್ನು ಕಂಡರೆ ಮನಸು ಭಾರವಾಗುತ್ತದೆ. ಪಟಾಕಿ, ರಾಕೆಟ್ ಗಳ ಹಾವಳಿಯಿಂದ ಕೈಕಾಲು ,ಮುಖ ಸುಟ್ಟು ಕೊಂಡು ಕಣ್ಣುಗಳನ್ನು ಕಳೆದು ಕೊಳ್ಳುವ ಮಕ್ಕಳೆಷ್ಟೋ.!!!?

ದೀಪಾವಳಿ ಇಂದು ನಮ್ಮ ದೇಶದ ಆಚರಣೆಯಾಗಿ ಉಳಿದಿಲ್ಲ. ವಿಶ್ವದೆಲ್ಲೆಡೆ ಸಂಭ್ರಮ ದಿಂದ ಇದಿರು ನೋಡುವ ಹಬ್ಬ. ಅಮೆರಿಕಾ , ಬ್ರಿಟನ್, ರಷ್ಯಾ, ಜಪಾನ್ ಅರಬ್ ದೇಶಗಳಲ್ಲೂ ಆಚರಿಸುತ್ತಾರೆ. ಅಮೇರಿಕಾದ ಶ್ವೇತ ಭವನದಲ್ಲೂ ದೀಪಾವಳಿಯ ಬೆಳಕಿನ ರಂಗು ಮಿನುಗುತ್ತಿದೆ. ದೇಶ, ಗಡಿ, ಭಾಷೆಗಳನ್ನು ಮೀರಿ ನಿಲ್ಲುವ ಹಬ್ಬ ದೀಪಾವಳಿ. ಜಾತಿ ಮತಗಳ ಹಂಗಿಲ್ಲದೆ ದೀಪ ಹಚ್ಚಿ ಸಿಹಿ ಉಣ್ಣುವ ಹಬ್ಬ.‌ ದೀಪಾವಳಿ ಖುಷಿ ಖುಷಿಯಾಗಿರಲಿ….ಕೊರೊನಾದಿಂದ ಆತಂಕ ಗೊಂಡಿರುವ ಮನಸುಗಳು ತಿಳಿಯಾಗಲಿ, ಕೊರೊನಾ ಸೋಂಕು ನಿವಾರಣೆಯಾಗಲಿ.
ನಗುವೇ ತುಂಬಿರಲಿ….
 

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್
ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror