ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಭೀತಿ ವಾಹನ ಸವಾರರನ್ನು ಕಾಡಿದೆ. ಬೆಳಗಿನ ಜಾವ ಒಂಟಿ ಸಲಗವೊಂದು ಓಡಾಡುತ್ತಿದ್ದು ಬುಧವಾರ ಪಾದಚಾರಿಯೊಬ್ಬರನ್ನು ಗಾಯಗೊಳಿಸಿದ ಘಟನೆ ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿ ಪ್ರದೇಶದಲ್ಲಿ ಕಾಡಾನೆ ಓಡಾಟ ಕಂಡುಬರುತ್ತಿದೆ. ಕೆಲವೊಮ್ಮೆ ರಸ್ತೆ ಮಧ್ಯೆಯೇ ಇರುವ ಕಾರಣದಿಂದ ವಾಹನ ಸಂಚಾರದಲ್ಲೂ ವ್ಯತ್ಯಯ ಉಂಟಾಗುತ್ತದೆ. ಬೆಳಗಿನ ಜಾವ ಹೆಚ್ಚಾಗಿ ಕಾಡಾನೆ ರಸ್ತೆ ಬದಿಯಲ್ಲಿ ಕಂಡುಬರುತ್ತಿದ್ದು ಕೃಷಿ ತೋಟಗಳಲ್ಲಿ ಹಗಲು ವೇಳೆಯೂ ಕಾಡಾನೆ ಕಂಡುಬರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ. ಕೃಷಿ ಹಾನಿ ಮಾಡುವ ವೇಳೆ ಸ್ಥಳೀಯರು ಕಾಡಾನೆ ಓಡಿಸುವ ಪ್ರಯತ್ನ ಮಾಡುತ್ತಾರೆ, ಆದರೆ ಹೆದ್ದಾರಿಯಲ್ಲಿ ಆನೆಗಳ ಹಿಂಡು ಅಥವಾ ಒಂಟಿ ಆನೆ ಇದ್ದರೆ ಕೆಲ ಕಾಲ ವಾಹನ ಸಂಚಾರಕ್ಕೂ ತೊಡಕಾಗುತ್ತದೆ, ಈ ವೇಳೆ ಸಾಹಸ ಪಡುವ ಕೆಲ ಸವಾರರೂ ಇರುತ್ತಾರೆ, ಇದರಿಂದಾಗಿ ಅಪಾಯ ಹೆಚ್ಚಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಈಚೆಗೆ ಕಾಡಾನೆ ಹಾವಳಿ ಹೆಚ್ಚುತ್ತಲೇ ಇದೆ, ಮನುಷ್ಯರ ಮೇಲೂ ದಾಳಿ ನಡೆಯುತ್ತಿದೆ. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಫೋಟೊ ಕಂಡುಬರುತ್ತದೆ. ಹೀಗಾಗಿ ಕಾಡಾನೆ ಓಡಾಟ ಹೆದ್ದಾರಿಯಲ್ಲಿ ಇರುವುದರಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಸುರಕ್ಷಾ ವಿಧಾನಗಳು ಅಗತ್ಯವಾಗಿ ಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.