ಪರೀಕ್ಷಾ ಅಕ್ರಮಗಳು.. | ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ…

June 26, 2024
2:15 PM

ಭಾರತ(India) ಈ ಕ್ಷಣದಲ್ಲಿ, ಅಂತರಾಷ್ಟ್ರೀಯ(International) ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ(Developing) ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು ಏನೇ ಹೇಳಿದರು ಸಹ ಆಂತರಿಕವಾಗಿ ಶೈಕ್ಷಣಿಕವಾಗಿಯೇ(Educational) ಆಗಿರಲಿ, ಉದ್ಯೋಗಕ್ಕಾಗಿಯೇ(Employment) ಆಗಿರಲಿ ಪರೀಕ್ಷೆಗಳನ್ನು(Exam) ನಡೆಸಿ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಂಪೂರ್ಣ ವಿಫಲವಾಗಿದೆ ಅಥವಾ ನಿರಾಶದಾಯಕವಾಗಿದೆ ಅಥವಾ ಜನರ ನಂಬಿಕೆ ಕಳೆದುಕೊಂಡು ಅನುಮಾನ ಹುಟ್ಟಿಸುತ್ತಿದೆ ಅಥವಾ ಭ್ರಮನಿರಸನವಾಗಿದೆ…….

Advertisement

ಉದ್ಯೋಗಕ್ಕಾಗಿಯೋ, ಕಾಲೇಜು ಪ್ರವೇಶಕ್ಕಾಗಿಯೋ, ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿಯೋ ನಡೆಯುವ ಪ್ರತಿ ಪರೀಕ್ಷೆಯಲ್ಲೂ, ಭಿನ್ನ – ಭಿನ್ನವಾಗಿ, ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ, ಕಲ್ಪಿಸಲು ಅಸಾಧ್ಯವಾದ ರೂಪದಲ್ಲಿ, ದೊಡ್ಡ ಮಟ್ಟದ ಅಧಿಕಾರಿಗಳು, ರಾಜಕಾರಣಿಗಳು, ಅದರ ಫಲಾನುಭವಿಗಳು ಎಲ್ಲರೂ ಸೇರಿ ಬೇರೆ ಬೇರೆ ರೀತಿ ವಂಚಿಸುತ್ತಿದ್ದಾರೆ..

ಅಧಿಕೃತ ಮಾಹಿತಿಯ ಪ್ರಕಾರ ಕಳೆದು ಎಂಟು ವರ್ಷಗಳಲ್ಲಿ ಇಡೀ ದೇಶದಲ್ಲಿ 50 ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ ಮತ್ತು ಪುನಃ ಪರೀಕ್ಷೆ ನಡೆಸಲಾಗಿದೆ. ಅಂದರೆ ಬಹಳ ಹಿಂದೆ ಅಪರೂಪವಾಗುತ್ತಿದ್ದ ಪರೀಕ್ಷಾ ಆಕ್ರಮಗಳು ಇದೀಗ ಸಹಜವಾಗುತ್ತಿದೆ. ಇದು ಕೇವಲ ಅಧಿಕೃತ ಅಂಕಿ ಅಂಶಗಳು ಮಾತ್ರ. ನಮ್ಮ ಅನುಭವದ ಪ್ರಕಾರ ಹೇಳುವುದಾದರೆ ಅನಧಿಕೃತವಾಗಿ ಇದಕ್ಕಿಂತ ಹತ್ತುಪಟ್ಟು ಅವ್ಯವಹಾರಗಳು ಕಣ್ಣಿಗೆ ಕಾಣದಂತೆ ವ್ಯಾಪಕವಾಗಿ ನಡೆಯುತ್ತಿದೆ.

ಅಂದರೆ ನಮ್ಮ ವ್ಯವಸ್ಥೆಯ ನಿಜವಾದ ಆಧಾರ ಸ್ಥಂಭಗಳ ಆಯ್ಕೆಯೇ ಈ ರೀತಿ ಮೂಲದಲ್ಲಿಯೇ ಭ್ರಷ್ಟ ಗೊಂಡಿರುವಾಗ ಇನ್ನು ಆಡಳಿತಾತ್ಮಕ, ರಾಜಕೀಯ ಸುಧಾರಣೆಯ ಮಾತುಗಳಿಗೆ ಯಾವ ಅರ್ಥವಿದೆ. ಶ್ರಮಪಟ್ಟು ಕೆಲಸ ಮಾಡುವ ವ್ಯಕ್ತಿಗಳಿಗೆ ಒಂದು ವ್ಯವಸ್ಥೆಯಲ್ಲಿ ಸರಿಯಾದ ಸ್ಥಾನ ಮಾನ, ಸಾಮಾಜಿಕ ನ್ಯಾಯ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿದ್ದರೆ ಆ ಇಡೀ ವ್ಯವಸ್ಥೆ ನಿಧಾನವಾಗಿ ಕುಸಿಯ ತೊಡಗುತ್ತದೆ. ಈಗ ಆಗಿರುವುದು ಅದೇ..

ದೊಡ್ಡ ಮಟ್ಟದ ಅಧಿಕಾರಿಗಳೇ ಆಗಿರಲಿ, ಡಾಕ್ಟರ್, ಇಂಜಿನಿಯರ್, ವಿಜ್ಞಾನಿಗಳಂತ ದೊಡ್ಡ ವೃತ್ತಿಪರರೇ ಆಗಿರಲಿ ಎಲ್ಲರೂ ಸಹ ಈ ರೀತಿಯ ಭ್ರಷ್ಟ ವ್ಯವಸ್ತೆಯಲ್ಲಿ ರೂಪಗೊಂಡಿದ್ದೇಯಾದರೆ ಮಕ್ಕಳ ಮುಂದಿನ ಭವಿಷ್ಯವೇನು. ಇದಕ್ಕೆ ಮತ್ತೊಂದು ಕಂಠಕಪ್ರಾಯವಾಗಿ ಸೃಷ್ಟಿಯಾಗಿರುವುದು ಕೋಚಿಂಗ್ ಸೆಂಟರ್ ಗಳೆಂಬ ಅಕಾಡೆಮಿಗಳು. ಇವು ಒಂದು ತರಬೇತಿಯ ಕೇಂದ್ರವಾಗಿ ಮಾತ್ರ ಉಳಿದಿಲ್ಲ. ಮಕ್ಕಳನ್ನು ಅಂಕಗಳಿಗೆ ಸಿದ್ಧತೆಗೊಳಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ..

ರಾಜಸ್ಥಾನದ ಕೋಟಾದ ಈ ರೀತಿಯ ತರಬೇತಿ ಕೇಂದ್ರಗಳಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳು ಇದಕ್ಕೆ ಒಂದು ಜೀವಂತ ನಿದರ್ಶನ. ಏನನ್ನೂ ಸಾಧಿಸದೆ ಎಲ್ಲವನ್ನು ಸಾಧಿಸಿದಂತೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ಇಡೀ ದೇಶ ಮೌಲ್ಯಗಳ ಕುರಿತು ಚಿಂತಿಸಬೇಕಾಗುತ್ತದೆ. ಮೌಲ್ಯಗಳನ್ನು ಹೊರತುಪಡಿಸಿದ ಯಾವುದೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಎಷ್ಟೇ ಸಮಿತಿಗಳನ್ನು ರಚಿಸಿ, ಯಾರು ಎಷ್ಟೇ ವರದಿಗಳನ್ನು ಕೊಟ್ಟರು ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳು ಮತ್ತು ಹೆಚ್ಚಾಗುತ್ತಿರುವ ಹಣ, ಅಧಿಕಾರ ಕೇಂದ್ರೀಕೃತ ಮಾನವನ ವಿಕೃತ ಸ್ವಭಾವಗಳು, ಅನಿವಾರ್ಯತೆಗಳು ಅಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದೆ..

ಕಾನೂನುಗಳು ಚಾಪೆಯಂತೆ ಇದ್ದರೆ ಈ ಭ್ರಷ್ಟ ಅಪರಾಧಿಗಳು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ದೇಶದಾದ್ಯಂತ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡಮಟ್ಟದ ಪ್ರತಿಭಟನೆ ನಡೆಸುವಾಗ ನಿಜಕ್ಕೂ ಮನಸ್ಸು ವಿಹ್ಲವ ಗೊಂಡಿದೆ. ಇನ್ನೂ ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಎಳೆ ವಯಸ್ಸಿನ ವಿದ್ಯಾರ್ಥಿಗಳು, ನ್ಯಾಯಕ್ಕಾಗಿ ಪ್ರತಿಭಟಿಸುವ ದುಸ್ಥಿತಿ ಮತ್ತು ತಾವೇ ಅದರ ಒಂದು ಭಾಗವಾಗುವ ವಿಚಿತ್ರ ಪರಿಸ್ಥಿತಿ ನಮ್ಮಲ್ಲಿದೆ..

ಮೊದಲೇ ಹೇಳಿದಂತೆ ಇದಕ್ಕೆ ದಿಢೀರನೆ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಮಸ್ಯೆ ಅಷ್ಟು ಸುಲಭವಾಗಿ ಪರಿಹಾರವಾಗುವುದಿಲ್ಲ‌. ಅಕ್ರಮಗಳ ರೂಪ ಬೇರೆಯಾಗಬಹುದು, ಆದರೆ ಬೇರೆ ಒಳದಾರಿಗಳ ಮುಖಾಂತರ ಅವರು ನುಸುಳುತ್ತಲೇ ಇರುತ್ತಾರೆ. ಆದ್ದರಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳ ಪುನರ್ ಸ್ಥಾಪನೆ ಒಂದೇ ಇದಕ್ಕಿರುವ ಏಕೈಕ ಪರ್ಯಾಯ ಮಾರ್ಗ‌. ಕೆಟ್ಟ ಹಣ, ಕೆಟ್ಟ ಅಧಿಕಾರ, ಕೆಟ್ಟ ಮಾರ್ಗಗಳನ್ನು ಕನಿಷ್ಠ ಯುವ ಜನತೆಯಾದರೂ ತಿರಸ್ಕರಿಸುವಂತಹ ಮನೋಭಾವವನ್ನು ಸೃಷ್ಠಿಸಬೇಕಿದೆ‌..

ಇದು ಕಷ್ಟವಾದರೂ ಅಸಾಧ್ಯವಲ್ಲ. ಮಕ್ಕಳು ಬಿಳಿಯ ಹಾಳೆ ಇದ್ದಂತೆ. ಅದರ ಮೇಲೆ ಅತ್ಯುತ್ತಮ ಆದರ್ಶಗಳನ್ನು ಮೂಡಿಸುವ ಕೆಲಸ ಹಿರಿಯರದು. ಆ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ, ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅಡಿಪಾಯ ಈಗಿನಿಂದಲೇ ಪ್ರಾರಂಭವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ….. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಬರಹ :
ವಿವೇಕಾನಂದ. ಎಚ್‌. ಕೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group