#‍Organic | ಗ್ರಾಹಕರೇ ಎಚ್ಚರ..! ಸಾವಯವ ಉತ್ಪನ್ನಗಳ ಹೆಸರು ಹೇಳಿ ನಡೆಯುತ್ತಿದೆ ವಂಚನೆ..!

July 26, 2023
2:12 PM
ಬಹುತೇಕ ಸಾವಯವ ಅಂಗಡಿಗಳಲ್ಲಿ, ಕಂಪನಿ ಅಥವಾ ಸಂತೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಉತ್ಪನ್ನಗಳನ್ನು ತಂದು ಸಾವಯವ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ಬಹಿರಂಗ ಸತ್ಯ. ಈ ಬಗ್ಗೆ ಕೃಷಿಕ ಪ್ರಶಾಂತ್ ಜಯರಾಮ್ ಅವರು ಬರೆದಿರುವ ಅಂಶ ಇಲ್ಲಿದೆ...

ಇತ್ತೀಚೆಗೆ, ಅದರಲ್ಲೂ ಕೊರೋನಾದ  ಬಳಿಕ ಹೆಚ್ಚಿನ ಜನರಿಗೆ ಆರೋಗ್ಯದ ಮೇಲೆ ಕಾಳಜಿ ಬಂದಿದೆ. ಆದಷ್ಟು ವಿಷಮುಕ್ತ ಪದಾರ್ಥಗಳನ್ನೇ ಸೇವಿಸಲು ಬಯಸುತ್ತಾರೆ. ಹಾಗಾಗಿ ಹೆಚ್ಚಿನ ಮಂದಿ ಸಾವಯವ ತರಕಾರಿ, ಉತ್ಪನ್ನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅಂಗಡಿ, ಅನ್ ಲೈನ್, ಸಂತೆ, ಮಳಿಗೆಗಳಲ್ಲಿ ನಿಜಕ್ಕೂ ಸಾವಯವ ಉತ್ಪನ್ನಗಳನ್ನೇ ಮಾರುತ್ತಾರಾ..? ಈ ಬಗ್ಗೆ ಕೃಷಿಕ ಪ್ರಶಾಂತ್ ಜಯರಾಮ್ ಅವರು ಕೆಲವೊಂದು ಅಂಶಗಳನ್ನು ನಮೂದಿಸಿದ್ದಾರೆ.

ಸಾವಯವ ಸಂತೆ, ಸಾವಯವ ಅಂಗಡಿ ಇತ್ಯಾದಿ ಹೆಸರಲ್ಲಿ ನೈಜ ಸಾವಯವ ಉತ್ಪನ್ನ ಮಾರಾಟ ಮಾಡುವುದಕ್ಕೆ ಗ್ರಾಹಕರ ಬೇಡಿಕೆಯಿದೆ.ಇಂತಹ ಕಡೆ ಮಾರಾಟವಾಗುವ ಸಾವಯವ ಉತ್ಪನ್ನಗಳ ಮೂಲ ಬೆಳೆಗಾರರ ಬಗ್ಗೆ ತಿಳಿದು ಖರೀದಿಸುವ ಜಾಣ್ಮೆ ಮತ್ತು ತಾಳ್ಮೆ ಗ್ರಾಹಕರಿಗೆ ಬರಬೇಕು. ಬಹುತೇಕ ಸಾವಯವ ಅಂಗಡಿಗಳಲ್ಲಿ/ಕಂಪನಿ /ಸಂತೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಉತ್ಪನ್ನಗಳನ್ನು ತಂದು ಸಾವಯವ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ಬಹಿರಂಗ ಸತ್ಯ.

ಸಾವಯವ ಉತ್ಪನ್ನಗಳು ಮಾರಾಟವಾಗುತ್ತಿರುವ ಪ್ರಮಾಣಕ್ಕೆ ಹೋಲಿಕೆ ಮಾಡಿದ್ರೆ ಅಷ್ಟು ಸಂಖ್ಯೆಯ ಸಾವಯವ ರೈತರು ಎಲ್ಲಿದ್ದಾರೆ ಎಂದು ಆಶ್ಚರ್ಯವಾಗುತ್ತದೆ! ನಾನು ಕಳೆದ ಎಂಟು ವರ್ಷಗಳಿಂದ ಅರಿಶಿನ,ಬಾಳೆ,ನಿಂಬೆ,ನುಗ್ಗೆ, ತೆಂಗು, ತರಕಾರಿ, ಬಟರ್ ಫ್ರೂಟ್, ಕಬ್ಬು ಬೆಳೆಯುತ್ತಿದ್ದೇನೆ ಮತ್ತು ಈ ಬಗ್ಗೆ ಸಾವಯವ ಅಂಗಡಿಯವರಲ್ಲಿ ಪೂರೈಕೆ ಮಾಡುತ್ತೇನೆ ಎಂದು ಕೋರಿಕೆ ಸಲ್ಲಿಸಿದ್ದೇನೆ, ಅವರಿಂದ ಉತ್ತರವಿಲ್ಲ ಮತ್ತು ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಆದರೆ ಅವರಗಳು ನಾನು ಹೇಳಿದ ಮೇಲಿನ ಉತ್ಪನ್ನಗಳನ್ನು ನಿರಂತರವಾಗಿ ಮಾರಾಟ ಮಾಡುತ್ತ ಬಂದಿದ್ದಾರೆ, ಸಾವಯವ ಉತ್ಪನ್ನಗಳು ಎಲ್ಲಿಂದ ಬರುತ್ತಿವೆ ಎಂಬುವುದೇ ನಿಗೂಡ ವಿಚಾರವಾಗಿದೆ!

ಸಾವಯವ ಕೃಷಿ ಯೋಜನೆಯಲ್ಲಿ ಬರುವ ಅನುದಾನ ಪಡೆದುಕೊಳ್ಳಲು ಕೆಲವು ಬೆರಳೆಣಿಕೆ ಸಾವಯವ ರೈತರುನ್ನು ಹೊರತುಪಡಿಸಿ ಶೇ 95% ಕ್ಕೊ ಹೆಚ್ಚು ರೈತರು, ಸಾವಯವ ರೈತರು ಎಂದು ದಾಖಲೆಯಲ್ಲಿ ಮಾತ್ರ ಸೇರಿಸಿರುತ್ತಾರೆ. ಈ ರೀತಿ ಸೇರಿಕೊಂಡಿರುವ ಬಹುಪಾಲು ರೈತರಲ್ಲಿ ಕೆಲವರು ವ್ಯವಸಾಯ ಮಾಡುತ್ತಿಲ್ಲ ಮತ್ತು ಬಹುಪಾಲು ರೈತರು ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ.

ಸಾವಯವ ಹೆಸರಿನಲ್ಲಿ ಉತ್ಪನ್ನ ಮಾರಾಟ ಮಾಡುತ್ತಿರುವ ಕಂಪನಿಗಳು ಕೆಲವು ರೈತರನ್ನು ಸಾವಯವ ರೈತರು ಎಂದು ಸರ್ಟಿಫಿಕೇಟ್ ಮಾಡಿಸಿಟ್ಟಿಕೊಂಡಿವೆ, ಅಗತ್ಯ ಬಿದ್ದಾಗ ದಾಖಲೆಯ ದೃಷ್ಟಿಯಿಂದ ಮಾತ್ರ, ಆ ರೈತರಿಂದ ಖರೀದಿ ಮಾಡಲಾಗಿದೆ ಎಂದು ದಾಖಲೆಯಲ್ಲಿ ನೆಪ ಮಾತ್ರಕ್ಕೆ ತೋರಿಸಲು ಯಾವುದಕ್ಕೂ ಇರಲಿ ಎಂಬ ಕಾರಣಕ್ಕೆ! ನಾಮಕವಸ್ಥೆಗೆ ಆರ್ಗಾನಿಕ್ ಸರ್ಟಿಫಿಕೇಟ್ ಮಾಡಿಸಿ 2-3 ಬೆಳೆ ಮಾಡಿ ಅಥವಾ ಯಾವುದೇ ಬೆಳೆ ಮಾಡದೇ, ಬೇರೆ ಕಡೆ ಬೆಳೆದ ಬೆಳೆಗಳನ್ನು ಸೇರಿಸಿ ಸರ್ಟಿಫಿಕೇಟ್ ಬೆಂಬಲದಲ್ಲಿ ಸಾವಯವ ಹೆಸರಿನಲ್ಲಿ ಬೆಳೆಗಳನ್ನು ಮಾರಾಟ ಮಾಡಲಾಗುತ್ತಿದೆ.

ಕೆಲವು ಕಂಪನಿಗಳು,ಎಪಿಎಂಸಿ ಮತ್ತು ಇನ್ನಿತರೇ ಕಡೆಗಳಿಂದ ಉತ್ಪನ್ನಗಳನ್ನು ತಂದು ಬ್ರಾಂಡ್ ಮಾಡಿ, ಸಾವಯವ ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ನೈಜವಾಗಿ ಸಾವಯವ ವಿಧಾನದಲ್ಲಿ ಬೆಳೆದ ಬೆಳೆಗಳು ಸಿಗುತ್ತಿರುವುದು ಅತ್ಯಲ್ಪ ಪ್ರಮಾಣದಲ್ಲಿ, ಆದರೆ ನೈಜವಾಗಿ ಬೆಳೆ ಬೆಳೆಯದೆ ಕೇವಲ ಆರ್ಗಾನಿಕ್ ಸರ್ಟಿಫೈಡ್ ಹೆಸರಲ್ಲಿ ಮಾರಾಟವಾಗುತ್ತಿರುವುದು ಬೃಹತ್ ಪ್ರಮಾಣದಲ್ಲಿ. ಗ್ರಾಹಕರು ಸಾವಯವ ರೈತರ ನೇರ ಸಂಪರ್ಕ ಪಡೆದು ಅವರ ಜಮೀನಿಗೆ ಭೇಟಿ ನೀಡಿ ಅವರು ಸಾವಯವ ವಿಧಾನ ಅನುಸರಿಸುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಅವರಿಂದ ಉತ್ಪನ್ನ ಪಡೆಯುವುದು ಸೂಕ್ತ ಮಾರ್ಗವಾಗಿರುತ್ತದೆ.

ಬಹುತೇಕ ಸಾವಯವ ಮಳಿಗೆಯವರು/ಕಂಪನಿಯವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ತಂದು, ಸಾವಯವ ಉತ್ಪನ್ನದ ಹೆಸರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡಿ ಹಣಗಳಿಸುವ ದಂಧೆ ಮಾಡಿಕೊಂಡಿದ್ದಾರೆ. ಇಂಥ ಮಳಿಗೆಯವರು ಯಾವುದೇ ಸಾವಯವ ರೈತರಿಂದ ಖರೀದಿ ಮಾಡುತ್ತಿಲ್ಲ. ಕೆಲವು ಮಳಿಗೆಯವರು ನಾಮಕಾವಸ್ಥೆಗೆ ಕೆಲವು ರೈತರಿಂದ ಸಣ್ಣ ಪ್ರಮಾಣದಲ್ಲಿ ಪಡೆದು ಅದರ ಜೊತೆಗೆ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಕೃಷಿಯಲ್ಲಿ ಬೆಳೆದ ಉತ್ಪನ್ನಗಳನ್ನು ಸೇರಿಸಿ ಸಾವಯವ ರೈತರ ಉತ್ಪನ್ನದ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ನಡೆಯುತ್ತಿದೆ.

-ಪ್ರಶಾಂತ್ ಜಯರಾಮ್, ಕೃಷಿಕ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್
ನೈಸರ್ಗಿಕ ಕೃಷಿಯಿಂದ ರೈತರ ಆದಾಯ ಹೆಚ್ಚಳ
March 4, 2026
10:56 AM
by: ಮಿರರ್‌ ಡೆಸ್ಕ್
ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು
March 3, 2026
9:51 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror