Advertisement
ಅನುಕ್ರಮ

ಪರಿಸರ ಉಳಿಸುವ ಅನುಭವ ಹೇಳುತ್ತಾರೆ ಕೃಷಿಕ ಎ ಪಿ ಸದಾಶಿವ

Share

ಮಧ್ಯಾಹ್ನದ ಹೊತ್ತು ನೆತ್ತಿಯ ಮೇಲೆ ಸೂರ್ಯ ರಾರಾಜಿಸುತ್ತಿದ್ದ. ತೋಟಕ್ಕೆ ಕೋತಿಗಳ ಸೈನ್ಯ ಭೇಟಿಯಾದ ಸದ್ದು ಕೇಳಿತು. ಕೋವಿಯೊಂದು ಕೈಯಲ್ಲಿದ್ದರೆ ಮಾತ್ರ ಮಂಗಗಳು ಓಡುತ್ತವೆ ಎಂಬ ಕಾರಣದಿಂದ ಕೋವಿಯೊಂದಿಗೆ ಹೊರಬಿದ್ದೆ. ನೇಸರನ ಕಿರಣಗಳು ಚರ್ಮವನ್ನು ಸುಡುವಂತೆ ಭಾಸವಾಗುತ್ತಿತ್ತು. ಓಡಿಸುತ್ತಾ ಓಡಿಸುತ್ತಾ ಕಾಡು ಹೊಕ್ಕೆ. ಆ ಕ್ಷಣಕ್ಕೆ ಹರಿಶ್ಚಂದ್ರ ಕಾವ್ಯದ ಷಟ್ಪದಿಯ ತುಣುಕೊಂದು ನೆನಪಾಯಿತು.

ಸುಡುಸುಡುನೇ ಸುಡುವ ಬಿರು ಬಿಸಿಲು ಸೆಕೆಯುಸಿರು,
ಉರಿ ಹತ್ತಿ ಬಾಯಿ ಬತ್ತಿ ಡಗೆ ಸುತ್ತಿ,
ಸಾವಡಿಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜ ಎಂದರು.

ಕಾಡು ಹೊಕ್ಕಂತೆ ಅದೇನು ಹವಾಮಾನದ ಬದಲಾವಣೆ, ಸತ್ತಿಗೆಯನ್ನು ಬಯಸಿ ನಿಂತಿರುತ್ತಾಳೆ ಭೂರಮೆ ಎಂದು ಯಾರಿಗಾದರೂ ಅನಿಸದೆ ಇರದು. ರಾಜನಿಗೆ ಮುತ್ತಿನ ಕೊಡೆಯಾದರೆ, ಭೂತಾಯಿಗೆ ಮರಗಳೇ ಕೊಡೆ. ಹಾಗೆಯೇ ನನ್ನ ಮನಸ್ಸು 30ವರ್ಷದ ಹಿಂದಕ್ಕೋಡಿತು.

ತೋಟದ ಒಂದು ಬದಿಯ ಇಳಿಜಾರು ಗುಡ್ಡದಲ್ಲಿ ದೂರದೂರಕ್ಕೆ ಬೆರಳೆಣಿಕೆಯ ಮರಗಳನ್ನು ಬಿಟ್ಟರೆ ಹೆಚ್ಚು ಕಮ್ಮಿ ಬೋಳು ಬೋಳೇ ಆಗಿತ್ತು. ಆಗಿನ್ನು ಜೆಸಿಬಿಗಳ ಹಾವಳಿ ಇರಲಿಲ್ಲ. ಇಳಿಜಾರು ಗುಡ್ಡದಲ್ಲಿ ಗೇರುಬೀಜದ ಗಿಡವನ್ನು ನೆಟ್ಟೆ. ಮಣ್ಣು ಮಳೆಗಾಲದಲ್ಲಿ ಸತತವಾಗಿ ಕರಗಿ ಹೋಗುವುದರಿಂದ ಗಿಡಗಳು ಉದ್ಧಾರವಾಗಲಿಲ್ಲ. ಕೆಲವು ಗಿಡಗಳು ಸೂಕರನ ಧಾಳಿಗೆ ಒಳಗಾದವು. ಗೇರುಬೀಜ ಕದ್ದರೆ ಕಳ್ಳತನವಲ್ಲ ಎಂಬ ಕಾಲವಾಗಿತ್ತು ಅದು. ಅಳಿದುಳಿದ ಫಲ ಮಾತ್ರ ನನಗೆ ಸಿಗುತ್ತಿತ್ತು. ಏಪ್ರಿಲ್ ತಿಂಗಳು ಬಂತೆಂದರೆ ತೋಟಕ್ಕೆ ನೀರಿನ ಒತ್ತಡ ಜೋರಾಗಿ ಇರುತ್ತಿತ್ತು. ತೂತು ಬಾವಿಗಳ ಕೊರೆತವಾದರೂ ನಿರೀಕ್ಷಿತ ಫಲ ದೊರೆಯಲಿಲ್ಲ.

ಆ ಹೊತ್ತಿಗೆ ಅಡಿಕೆ ಪತ್ರಿಕೆಯಲ್ಲಿ ಲೇಖನ ಮಾಲೆಗಳು ಆರಂಭವಾಗಿತ್ತು ನೀರು ಉಳಿಸಿ ನೂರು ವಿಧ.ಮನಕೊಂದು ಹೊಸ ಹೊಳವು ಸಿಕ್ಕಿತು.ನನ್ನ ತೋಟದ ಕೆರೆಗಳಲ್ಲಿ ಜಲ ವೃದ್ಧಿಗೆ ಇಂಗು ಗುಂಡಿಗಳು ಪರಿಣಾಮ ಆಗಬಹುದು ಎಂಬ ಆಸೆ ಮನ ಹೊಕ್ಕಿತು.

ಆ ವರುಷವೇ ಮಳೆಗಾಲದಲ್ಲಿ ಎತ್ತರದಿಂದ ಆರಂಭವಾಯಿತು ಇಂಗುಗುಂಡಿಗಳ ರಚನೆ. ಎಲ್ಲೆಲ್ಲಿ ನೀರ ಹರಿವು ಇರುವುದೋ ಅಲ್ಲೆಲ್ಲ, ಜಾಗಕ್ಕೆ ಹೊಂದಿಕೊಂಡಂತೆ ಎರಡು ಅಡಿಯಿಂದ ಹತ್ತು ಅಡಿ ಉದ್ದದ, ಎರಡು ಅಡಿ ಅಗಲದ, ಎರಡು ಅಡಿ ಆಳದ ಇಂಗುಗುಂಡಿಗಳ ರಚನೆಯಾಯಿತು. ಅತಿಯಾದ ಮಳೆಗೆ ಒಂದೆರಡು ಗುಂಡಿಗಳು ಕಟ್ಟೆ ಒಡೆದು ಹೋಗಿದ್ದು ಇದೆ. ಸಖೇದಾಶ್ಚರ್ಯ! ಮಳೆಗಾಲ ಮುಗಿಯುತ್ತಿದ್ದಂತೆ ಮಣ್ಣಿನ ಮೇಲೆ ತೆಳು ಹಸಿರು ಬಣ್ಣದ ಪಾಚಿ ರಚನೆ ಕಂಡಿತು. ಬೇಸಿಗೆಯಲ್ಲಿ ಒಣಗಿದರೂ ಮುಂದಿನ ಮಳೆಗಾಲಕ್ಕೆ ಮತ್ತೆ ಹಸುರಾಯಿತು, ಹಸುರಿನ ಮೇಲೆ ಹುಲ್ಲಿನ ಪದರವೊಂದು ಚಿಗಿತುಕೊಂಡಿತು. ಆ ಮೊದಲೇ ಕೆಲವು ಕಾಡು ಸಸ್ಯಗಳನ್ನು ನೆಟ್ಟು ಸತ್ತ ಅನುಭವವಿದ್ದ ನನಗೆ, ಈಗ ಮನದಟ್ಟಾಗಿದ್ದು ಸಸ್ಯಗಳನ್ನು ನೆಡಲು ಇದು ಸಕಾಲ. ಮಣ್ಣಿನ ಕೊರೆತವಿರುವಾಗ, ಬೇಸಿಗೆಗೆ ತೇವಾಂಶದ ರಕ್ಷಣೆ ಇಲ್ಲದಾಗ ಯಾವ ಸಸ್ಯವೂ ಬದುಕುಳಿಯಲು ಸಾಧ್ಯವಿಲ್ಲ ಎಂಬ ಅರಿವಾಯಿತು. ಜಾಲ್ಸೂರಿನ ಅರಣ್ಯ ಇಲಾಖೆಯ ನರ್ಸರಿಯಿಂದ ವರುಷ ವರುಷವೂ ನೂರಾರು ವೈವಿಧ್ಯಮಯ ಸಸ್ಯಗಳನ್ನು ತಂದು ನೆಟ್ಟೆ. ನಮ್ಮ ಸುತ್ತಮುತ್ತಲೂ ಇದ್ದ ಅನೇಕ ಮರಗಳ ಬೀಜಗಳನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಎರಚಿದೆ. ಪ್ರಯತ್ನ ಫಲ ಕೊಟ್ಟಿತು. ಹಂತಗಳಲ್ಲಿ ನಿಧಾನವಾಗಿ ಕಾಡು ಎದ್ದು ಬಂದಿತು.

ಕಾಡು ಬಂದಂತೆ ಹಕ್ಕಿಪಕ್ಕಿಗಳ ನಲಿದಾಟ, ಕೂಗಾಟ ಜಾಸ್ತಿಯಾದವು. ಕಾಡನ್ನು ವೃದ್ಧಿಸುವ ಕೆಲಸವನ್ನು ಈಗ ಪಕ್ಷಿಗಳೇ ಮಾಡುತ್ತಿವೆ. ನಮ್ಮ ಗುಡ್ಡದ ನೀರು ಮಳೆಗಾಲದಲ್ಲಿ ಮಣ್ಣನ್ನು ಕೊಚ್ಚಿಕೊಂಡು ಸಮತಟ್ಟಾದ ಜಾಗವಾದ ನನ್ನ ಚಿಕ್ಕಪ್ಪನ ತೋಟದ ಬದಿಗೆ ಪೇರಿಸುವುದು ಆಗ ನಿಂತಿತು.ಕಾಡು ಪ್ರೀತಿಯ ನನ್ನ ಚಿಕ್ಕಪ್ಪ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದರು.

ಕಾಡು ವೃದ್ಧಿಯ ಪ್ರಕೃತಿಯ ನಡೆಯನ್ನು ಗಮನಿಸಿ. ಮಳೆಗಾಲ ಮುಗಿದು ಚಳಿಗಾಲ ಬಂದಂತೆ ಹೆಚ್ಚಿನ ಮರ-ಗಿಡಗಳು ತರಗೆಲೆಯನ್ನು ಉದುರಿಸಿ ಹಾಸಿಗೆಯನ್ನು ನಿರ್ಮಾಣ ಮಾಡುತ್ತದೆ. ಆಮೇಲೆ ಚಿಗುರಿದಾಗ ಮೆತ್ತನೆಯ ಒಂದಷ್ಟು ಎಲೆಗಳು ಬಿದ್ದು ಮೆತ್ತನೆಯ ಹಾಸಿಗೆಯನ್ನು ಹಾಸುತ್ತದೆ. ಚಿಗುರಿದ ನಂತರ ಹೂವು ಬಿಟ್ಟು ಪರಾಗ ಸ್ಪರ್ಶಗೊಂಡು ಬೀಜ ಕಾಯಿಗಳ ಸೃಷ್ಟಿಯಾಗುತ್ತದೆ. ಬಿಟ್ಟ ಹೂಗಳ ದಳಗಳು, ಕುಸುಮಗಳು ಬಿದ್ದು ಮೆತ್ತನೆಯ ಹಾಸಿಗೆಯ ಮೇಲೆ ಇನ್ನೊಂದು ಪದರದ ನಿರ್ಮಾಣವಾಗುತ್ತದೆ.ಮುಂಗಾರು ಪೂರ್ವ ಮಳೆಗೆ ಗಾಳಿಯಲ್ಲಿ ಬೀಜಗಳು ಹಾರಾಡುತ್ತ ತೂರಾಡುತ್ತಾ ಹಾಸಿಗೆಯ ಮೇಲೆ ಬಿದ್ದು ಮೊಳಕೆಯೊಡೆಯಲು ಆರಂಭಿಸುತ್ತದೆ. ಮುಂಗಾರಿಗೆ ಮೊದಲೇ ಮೆತ್ತನೆಯ ಹಾಸಿಗೆಯಲ್ಲಿ ಬೇರನ್ನು ಇಳಿಸಿ ಕೊಚ್ಚಿಹೋಗುವ ನೀರಿಗೆ ದೃಢವಾಗಿ ನಿಲ್ಲುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ.

ಒಂದಷ್ಟು ರಕ್ಷಣೆಯನ್ನು ಕೊಟ್ಟಲ್ಲಿ ಭೂ ತಾಯಿ ತನ್ನ ರಕ್ಷಣೆಗೆ ಸತ್ತಿಗೆಯನ್ನು ಸೃಷ್ಟಿಸಿಕೊಳ್ಳುವ ಪರಿಯನ್ನು ಒಮ್ಮೆ ನೋಡಿ. ಆ ಮೂಲಕ ಜೀವ ಕೋಟಿಗಳ ಆಧಾರವಾದ ಮರಗಳನ್ನು ಹೆಚ್ಚು ಮಾಡುವತ್ತ ಗಮನ ಹರಿಸೋಣ.

ಎ. ಪಿ. ಸದಾಶಿವ.ಮರಿಕೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

15 hours ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

22 hours ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

23 hours ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago