ಮನುಷ್ಯನಿಗೆ ಪ್ರಶ್ನೆಗಳು ಹುಟ್ಟಬೇಕು, ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಬೇಕು. ಆದರೆ, ಉತ್ತರ ಕೊಡಬೇಕಾದವರು ಕೊಡದೇ ಇದ್ದರೆ ಏನು ಮಾಡುವುದು..? ಇಂತಹದೊಂದು ಜಿಜ್ಞಾಸೆ ಮುಂದಿಟ್ಟವರು ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ…..ಮುಂದೆ ಓದಿ….
ವಿಧಾನಪರಿಷತ್ ಮಾಜಿ ಸದಸ್ಯ ವಿನಯಚಂದ್ರ ಕಿಲಂಗೋಡಿ ಅವರ ಬಗ್ಗೆ ರಚಿತವಾದ “ಕೊಳಲ ಕೈ ಹಿಡಿದು” ಕೃತಿ ಬಿಡುಗಡೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮವನ್ನು ಸುಳ್ಯದ ತರುಣ ಸಮಾಜವು ಸುಳ್ಯದ ಕೇರ್ಪಡ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಸರ್ವಾಧಿಕಾರವನ್ನು ವಿರೋಧಿಸಿ ನಾವು ಅಂದು ಜೈಲಿಗೆ ಹೋದವರು. ಹಾಗಾಗಿ ಈಗಲೂ ಆ ನೈತಿಕತೆಯಿಂದಲೇ ಸರ್ವಾಧಿಕಾರವನ್ನು ಪ್ರಶ್ನಿಸುತ್ತಲೇ ಇದ್ದೇವೆ ಕೂಡಾ. ಒಮ್ಮೊಮ್ಮೆ ಅನಿಸುತ್ತದೆ, ಸರ್ವಾಧಿಕಾರ ವಿರೋಧಿಸುವುದೇ ತಪ್ಪಾ..? ಅಂತಲೂ ಆಗುತ್ತದೆ. ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ. ಸರಿಯಾದ ರಸ್ತೆ ಇದ್ದರೆ ಸಾಕಾ, ಗುರಿಯೂ ಬೇಡವೇ..? ಎನ್ನುವುದನ್ನು ನಾವು ಯೋಚಿಸಿಕೊಳ್ಳಬೇಕು.ಉಪದೇಶಗಳು ಬೇಕಾದ್ದಲ್ಲ, ಆಚರಣೆಗಳು ಇವತ್ತು ಬೇಕಾದ್ದು.
ವಿನಯಚಂದ್ರರು ನನಗೆ ಯಾಕೆ ಇಷ್ಟ ಎಂದರೆ, ಅವರು ಇಮೇಜ್ ಬಗ್ಗೆ ಗೊಡವೆ ಇಟ್ಟುಕೊಂಡವರಲ್ಲ. ಧ್ಯೇಯ ಪ್ರಕಟವಾಗುವುದೇ ಇಂತಹ ಸಂದರ್ಭ. ನಮ್ಮ ಇಮೇಜ್ ಕಾಪಾಡಲು ಹೊರಟರೆ ಧ್ಯೇಯ ಉಳಿಯಲು ಸಾಧ್ಯವಿಲ್ಲ. ವಿನಯರು ಇಮೇಜ್ ಬಗ್ಗೆ ಕಾಳಜಿ ವಹಿಸಲಿಲ್ಲ, ಹಾಗಾಗಿ ಸ್ವರ ಜೀವಂತವಾಯಿತು.ಇನ್ನೊಬ್ಬರನ್ನು ಮೆಚ್ಚಿಸಲು ವಿನಯರು ಮಾತನಾಡಲಿಲ್ಲ. ಅನಿಸಿದ್ದನ್ನು ಹೇಳಬೇಕು, ಅಲ್ಲದಿದ್ದರೆ ಸ್ವಂತಿಕೆ ಕೆಲಸ ಮಾಡುವುದಿಲ್ಲ. ಸ್ವಂತಿಕೆ ಕೆಲಸ ಮಾಡದಿದ್ದರೆ ಏನು ಪ್ರಯೋಜನ..?
ತುಂಬಾ ಸಲ ಅನಿಸುತ್ತದೆ, ದಾಖಲೆಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಿದರೆ, ಉತ್ತರ ಹೇಳಬೇಕಾದವರು ಹೇಳದೇ ಇದ್ದಾಗ ಏನು ಮಾಡುವುದು?ಉತ್ತರ ಕೊಡಬೇಕಾದವರು ಮೌನವಾಗಿದ್ದರೆ ಏನು ಮಾಡುವುದು..? ಅವರು ಉತ್ತರ ಕೊಡುವ ಹಾಗೆ ಏನು ಮಾಡುವುದು..? , ಇಂತಹ ಸಮಯದಲ್ಲಿ ನಾನು ಅಂದುಕೊಳ್ಳುವುದು ಪ್ರಶ್ನೆ ಕೇಳಿದ್ದೇ ತಪ್ಪು ಎನ್ನುವ ಸಂದೇಶ ಇದೆ ಅಂತಲೇ. ಇದೂ ಒಂದು ನಮೂನೆಯ ಸರ್ವಾಧಿಕಾರವೇ ಆಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿನಯಣ್ಣ ಅಂದಿನಿಂದಲೂ ನಂಬಿಕೆ, ವಿಶ್ವಾಸವೇ ಆಗಿದ್ದರು. ಒಂದು ಕಾಲದ ರಾಜಕೀಯ ವ್ಯವಸ್ಥೆ, ಪತ್ರಿಕಾ ರಂಗ, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆಯೂ ಇಂದಿನ ಎಲ್ಲಾ ವ್ಯವಸ್ಥೆಯೂ ತುಲನೆ ಮಾಡುವುದು ಸಾಧ್ಯವೇ..? ಎನ್ನುವ ಜಿಜ್ಞಾಸೆಯನ್ನು ಮುಂದಿಟ್ಟರು.
ಕೃತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ವಿನಯಚಂದ್ರ,ಶಾಸಕಿ ಭಾಗೀರಥಿ ಮುರುಳ್ಯ, ಡಾ ವೀಣಾ, ದೀಪಾ ಫಡ್ಕೆ, ಅರವಿಂದ ಚೊಕ್ಕಾಡಿ, ಎಂ ಬಿ ಸದಾಶಿವ, ಚಂದ್ರಶೇಖರ ಪೇರಾಲು, ರಾಮಕೃಷ್ಣ ಭಟ್ ಚೂಂತಾರು, ಹರೀಶ್ ಬಂಟ್ವಾಳ, ಹೇಮಂತ್ ಕುಮಾರ್ ಕಂದಡ್ಕ ಮೊದಲಾದವರು ಇದ್ದರು.
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…