#ನಮ್ಮೊಳಗಿನಗಾಂಧಿ | ದೇವರನ್ನು ನುಂಬುವುದೆಂದರೆ…

October 3, 2021
8:00 AM

‘ನನ್ನ ಸತ್ಯಾನ್ವೇಷಣೆ’ ಕೃತಿಯಲ್ಲಿ ಗಾಂಧೀಜಿ ‘ಕಸ್ತೂರ್ಬಾ ಸ್ಥೈರ್ಯ’ ಎಂಬ ಅಧ್ಯಾಯದಲ್ಲಿ ಹೇಳಿರುವ ಘಟನೆ ಇದು: ಗಾಂಧಿ ಜೊಹಾನ್ಸ್ ಬರ್ಗ್‍ನಲ್ಲಿರುತ್ತಾರೆ.
ಕಸ್ತೂರ್ಬಾ ತೀವ್ರ ರಕ್ತಸ್ರಾವವಾಗಿ ಡರ್ಬಾನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಕಸ್ತೂರ್ಬಾ ಸ್ಥಿತಿ ಚಿಂತಾಜನಕವಿದ್ದಾಗ ಡಾಕ್ಟರ್ ಗಾಂಧೀಜಿಯವರಿಗೆ ತಕ್ಷಣವೇ
ಬರುವಂತೆ ಡಾಕ್ಟರ್ ಟೆಲಿಫೆÇೀನ್ ಮಾಡಿದರು. ಗಾಂಧೀಜಿ ಬಂದರು. “ಕಸ್ತೂರ್ಬಾ ಬದುಕುಳಿಯಬೇಕಾದರೆ ದನದ ಮಾಂಸದ ಟೀ ಕೊಡಬೇಕು ಎಂದು ಡಾಕ್ಟರ್ ಹೇಳಿದರು.

ಗಾಂಧಿಗೆ ಇದು ಇಷ್ಟವಿಲ್ಲ. ಆದರೂ ಮಾತನಾಡಿಸಬಾರದ ಸ್ಥಿತಿಯಲ್ಲಿದ್ದ ಕಸ್ತೂರ್ಬಾ ಬಳಿ ಎಚ್ಚರಿಸಿ ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವರು ದನದ
ಮಾಂಸದ ಟೀ ಕುಡಿದಿದ್ದಾರೆ. ನೀನೂ ಕುಡಿಯಬಹುದು ಎಂದೇ ಹೇಳುತ್ತಾರೆ. ಕಸ್ತೂರ್ಬಾ ತಾನು ದನದ ಮಾಂಸದ್ದೆಂದಲ್ಲ; ಯಾವ ಮಾಂಸದ ಟೀಯನ್ನೂ
ಕುಡಿಯುವುದಿಲ್ಲ. ನನ್ನನ್ನಿಲ್ಲಿಂದ ಕರೆದುಕೊಂಡು ಹೋಗಿ” ಎನ್ನುತ್ತಾರೆ. ಡಾಕ್ಟರ್, “ನಿಮ್ಮದೆ ಹಠವಾದರೆ ನೀವು ಹೋಗಬಹುದು. ನನ್ನ ರೋಗಿ ಸಾಯುವುದನ್ನು
ನಾನು ಸಹಿಸಲಾರೆ” ಎನ್ನುತ್ತಾರೆ. ರೈಲು ನಿಲ್ದಾಣದ ವರೆಗೆ ಗಾಂಧಿ ಕಸ್ತೂರ್ಬಾ ಅವರನ್ನು ಎತ್ತಿಕೊಂಡೇ ಬರುತ್ತಾರೆ. ನಂತರ ಫೀನಿಕ್ಸ್ ಆಶ್ರಮಕ್ಕೆ ಹೋಗಿ ಜಲ
ಚಿಕಿತ್ಸೆ ಕೊಡಿಸುತ್ತಾರೆ. ಅಲ್ಲಿಗೊಬ್ಬರು ಸ್ವಾಮೀಜಿ ಬರುತ್ತಾರೆ. ಮನುವಿನ ಶಾಸ್ತ್ರದಂತೆ ಮಾಂಸದ ಟೀ ತೆಗೆದುಕೊಳ್ಳಬಹುದು” ಎನ್ನುತ್ತಾರೆ.

ಗಾಂಧಿಗೆ ಸ್ವಾಮೀಜಿಯ ಮಾತಿನಲ್ಲಿ ಆಸಕ್ತಿ ಇಲ್ಲ. ಆದರೂ ಸಹಿಸಿಕೊಳ್ಳುತ್ತಾರೆ. ಆಗ ಕಸ್ತೂರ್ಬಾ, “ಸ್ವಾಮೀಜಿ ಯಾವ ಕಾರಣಕ್ಕೂ ನಾನು ದನದ ಮಾಂಸದ ಟೀ ಕುಡಿಯುವುದಿಲ್ಲ. ನನ್ನ ನಿರ್ಣಯ ದೃಢವಾಗಿದೆ. ಬೇಕಾದರೆ ನೀವು ನನ್ನ ಮಕ್ಕಳೊಂದಿಗೂ, ಅವರ ತಂದೆಯೊಂದಿಗೂ ಮಾತನಾಡಬಹುದು” ಎನ್ನುತ್ತಾರೆ. ಗಾಂಧೀಜಿ, “ನಾನು ದೇವರನ್ನು ನಂಬಿದ್ದೇನೆ” ಎನ್ನುತ್ತಾರೆ. ಇದನ್ನು ನಿಜವಾದ ಅರ್ಥದಲ್ಲಿ ನಂಬಿಕೆ ಎಂದು ಕರೆಯುವುದು. ಯಾಕೆಂದರೆ ಇಲ್ಲಿ ದನದ ಮಾಂಸದ ಟೀ ಮತ್ತು ಸಾವು-ಎರಡರ ನಡುವೆ ಆಯ್ಕೆ ಇತ್ತು. ಆ ಆಯ್ಕೆಗಳಲ್ಲಿ ‘ಸಾವು’ ಆಗಬಹುದು; ಆದರೆ ದನದ ಮಾಂಸದ ಟೀ ಬೇಡ ಎಂಬ ನಿರ್ಧಾರಕ್ಕೆ ಬರುವುದು ಅಷ್ಟು ಸುಲಭವಲ್ಲ. ಸಾಮಾನ್ಯ ಸಂದರ್ಭದಲ್ಲಿ ಏನಾಗುತ್ತದೆ? ರೋಗಿಯನ್ನು ಐ.ಸಿ.ಯೂ.ಗೆ ಸೇರಿಸಿದಾಗಲೂ ದೇವರ ಪೂಜೆಗಳು ನಡೆಯುತ್ತವೆ.

ಹಾಗೆಂದು ದೇವರ ಪೂಜೆ ಮಾಡಿದೆವೆಂದು ಆಸ್ಪತ್ರೆಯಿಂದ ಮನೆಗೆ ಕರೆತರುತ್ತಾರೆಯೆ? ಇಲ್ಲ. ಅಂದರೆ ವೈದ್ಯರು ಮಾಡುವ ಶುಶ್ರೂಶೆಯೊಂದಿಗೆ
ಸಹಾಯಕವಾಗುವಂತೆ ಪೂಜೆಯೂ ಇರಲಿ ಎಂಬುದಷ್ಟೆ. ಪೂಜೆಯ ಮೇಲೆ ಪ್ರಶ್ನಾತೀತವಾದ ನಂಬಿಕೆ ಇಲ್ಲ. ನಮ್ಮ ಸಾಮಾಜಿಕ ಜೀವನದ ನಂಬಿಕೆಗಳೆಲ್ಲ
ದೇವರನ್ನು ಕೆಲಸದವನೆಂದು ಕೆಲಸ ತೆಗೆದುಕೊಳ್ಳಲು ಮಾಡುವ ಆಚರಣೆಗಳು. ಒಂದು ಪೂಜೆ ಮಾಡಿದಾಗ ನಿರೀಕ್ಷಿತ ಫಲ ಸಿಗಲಿಲ್ಲ. ಆಗ ಜ್ಯೋತಿಷಿಯ ಬಳಿಗೆ
ಹೋಗುವುದು. ಜ್ಯೋತಿಷಿಗಳು ಅವರಿಗೆ ಜ್ಯೋತಿಷ್ಯದಲ್ಲಿ ಕಾಣಿಸಿದಂತೆ ಹೇಳುತ್ತಾರೆ. ಇನ್ನೂ ದೊಡ್ಡ ಮತ್ತು ಹೆಚ್ಚು ವೆಚ್ಚದಾಯಕ ಪೂಜೆ ಮಾಡಿಸುವುದು. ಹೆಚ್ಚೆಚ್ಚು ಖರ್ಚು ಮಾಡಿದಷ್ಟೂ ನಮ್ಮ ಕೆಲಸವನ್ನು ದೇವರು ಮಾಡಿಕೊಡುತ್ತಾನೆಂದು ಭಾವಿಸುವುದು. ಇಷ್ಟು ಕೊಟ್ಟದ್ದು ಸಾಲದಿದ್ದರೆ ಇನ್ನಷ್ಟು ಹಣ ಕೊಡುತ್ತೇನೆ, ಮತ್ತಷ್ಟು ಕೊಡುತ್ತೇನೆ, ಕಡೆಗೆ ಎಷ್ಟು ಕೊಟ್ಟರೆ ನನ್ನ ಕೆಲಸ ಮಾಡುವೆಯೊ ಅಷ್ಟನ್ನೂ ಕೊಡುತ್ತೇನೆ ಎನ್ನುವ ಶೈಲಿ.

ಅಂದರೆ ದೇವರನ್ನು ಹಣದಿಂದ ಖರೀದಿಸುವ ಮನೋಭಾವ ಇರುವುದೆ ಹೊರತು ದೇವರನ್ನು ನಂಬುವ ಮನೋಭಾವವಲ್ಲ. ಕೆಲವರಲ್ಲಿ ಆ ರೀತಿಯ ನಂಬುವ ಮನೋಭಾವ ಇರುತ್ತದೆ. ಆದರೆ ಅದು ನಂಬಿಕೆ ಆಗಿರುವುದಿಲ್ಲ; ಮೂಢನಂಬಿಕೆ ಆಗಿರುತ್ತದೆ. ಜ್ವರ ಬಂದರೆ ವೈದ್ಯರ ಬಳಿಗೆ ಹೋಗದೆ ಮಂತ್ರಿಸಿದ ಭಸ್ಮ ಧರಿಸಿ ಜ್ವರವನ್ನು ಹೆಚ್ಚಿಸಿಕೊಳ್ಳುವವರು ಇದ್ದಾರೆ. ಇದು ಎಷ್ಟು ಮಾತ್ರಕ್ಕೂ ಸಲ್ಲ.

ಏಕೆಂದರೆ ಇಲ್ಲಿರುವುದು ಮೂಢನಂಬಿಕೆಯೆ ಹೊರತು ನಂಬಿಕೆ ಅಲ್ಲ. ತಾನು ವೈದ್ಯರ ಬಳಿಗೆ ಹೋಗದಿರುವುದರ ಪರಿಣಾಮ ಕಾಯಿಲೆ ತೀವ್ರವಾಗುವುದು ಎಂಬ ಅರಿವು ಇಲ್ಲಿರುವುದಿಲ್ಲ. ಅರಿವಿಲ್ಲದಿರುವಾಗ ಆತ್ಮಬಲ ಇರುವುದಿಲ್ಲ. ಆತ್ಮಬಲವಿಲ್ಲದ ನಂಬಿಕೆ ಕೆಟ್ಟದ್ದನ್ನೆ ಮಾಡುತ್ತದೆ. ಆದರೆ ಕಸ್ತೂರ್ಬಾ ಅವರಿಗೆ ತನ್ನ ನಿರ್ಧಾರದ ಪರಿಣಾಮ ಸಾವು ಎಂಬ ಅರಿವಿತ್ತು. ಆ ಅರಿವು ಇದ್ದಾಗ ಅಸಾಧಾರಣವಾದ ಆತ್ಮವಿಶ್ವಾಸ ಇರುತ್ತದೆ. ಆ ಆತ್ಮವಿಶ್ವಾಸದಿಂದ ನಂಬಿಕೆಗೆ ಮಹತ್ವ ಬರುತ್ತದೆ.

ಅಂತಹ ನಂಬಿಕೆ ಮಾತ್ರ ಮನುಷ್ಯನನ್ನು ಯಶಸ್ಸಿನತ್ತ ಒಯ್ಯುವುದು. ಅಂದರೆ ಮೂಢನಂಬಿಕೆಯು ಮನುಷ್ಯರನ್ನು ವಿನಾಶದತ್ತ ಒಯ್ಯುತ್ತದೆ. ಅಪನಂಬಿಕೆಯು ದೇವರನ್ನು ಜಾಸ್ತಿ ಬೆಲೆಗೆ ಖರೀದಿಯಾಗುವ ವಸ್ತುವಿನ ಮಟ್ಟಕ್ಕೆ ತಂದು ಡಾಂಭಿಕತೆಯನ್ನು ನಿರ್ಮಿಸುತ್ತದೆ. ಜ್ಞಾನದಿಂದ ಬಂದ ನಂಬಿಕೆ ಮಾತ್ರ ಆತ್ಮಬಲವನ್ನು ಬೆಳಗಿಸಿ ಯಶಸ್ಸನ್ನು ತರುತ್ತದೆ. ಕಸ್ತೂರ್ಬಾ ಮೃತರಾಗಲಿಲ್ಲ. ಆಮೇಲೆ ಗುಣ ಮುಖರಾಗಿದ್ದರು. ಇಲ್ಲಿ ಇನ್ನೂ ಒಂದು ಅಂಶವಿದೆ. ಮನುಸ್ಮೃತಿಯ ಆಧಾರದಲ್ಲಿ ಸ್ವಾಮೀಜಿಯೇ ಹೇಳಿದರೂ ಕಸ್ತೂರ್ಬಾ ಆಗಲಿ, ಗಾಂಧಿಯಾಗಲಿ ನಿರ್ಧಾರವನ್ನು ಬದಲಿಸಲಿಲ್ಲ. ಇಲ್ಲಿಯೂ ಮನುಷ್ಯನ ಸಾಮಾನ್ಯ ಲಕ್ಷಣವಿದೆ. ಯಾವುದಾದರೂ ನಿಲುವಿರುವವರಿಗೆ ಆ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾದಾಗ ಸಾರ್ವಜನಿಕವಾಗಿ ತಾನು ನಿಲುವಿಗೆ ತಪ್ಪಿಲ್ಲವೆಂದು ತೋರಿಸಿಕೊಳ್ಳುವ ಬಯಕೆ ಇರುತ್ತದೆ. ಆಗ ತನ್ನ ನಿಲುವಿನಿಂದ ಬೇರೆಯಾಗಿ ವರ್ತಿಸಲು ಒಂದು ಕಾರಣ ಬೇಕಾಗಿರುತ್ತದೆ.

ಕಸ್ತೂರ್ಬಾ ಮತ್ತು ಗಾಂಧೀಜಿಯವರಿಗೆ ಸ್ವಾಮೀಜಿಯೇ ಬಂದು ಮನುಸ್ಮೃತಿಯ ಆಧಾರದಲ್ಲಿ ಮಾಂಸದ ಟೀ ಕುಡಿಯಬಹುದು ಎಂದು ಹೇಳಿದ್ದು ಅವರ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳಲು ಧಾರಾಳವಾಗಿ ಪ್ರಬಲ ಕಾಣವಾಗಿತ್ತು. ಆದರೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ಇಲ್ಲಿ ದನದ ಮಾಂಸದ ಟೀ ಎನ್ನುವುದು ಮುಖ್ಯವಲ್ಲ. ಅದು ಅವರ ನಿಲುವಾಗಿತ್ತು. ಮತ್ತೊಬ್ಬನದು ಬೇರೆ ವಿಷಯ ಇರಬಹುದು. ತನ್ನ ನಿಲುವಿನ ಬಗ್ಗೆ ಇರುವ ನಂಬಿಕೆಯೇ ಮುಖ್ಯವಾದ ವಿಚಾರ.ಅಂತಹ ನಂಬಿಕೆಯೇ ದೇವರು. ದೇವರ ಸ್ಥಾನ, ದೇವರ ಮೂರ್ತಿ, ಆಚರಣೆಗಳು, ಸಂಪ್ರದಾಯಗಳು ಇದ್ದಲ್ಲಿ ನಂಬಿಕೆಯೂ ಇರಬೇಕಾಗಿಲ್ಲ. ದೇವರು ಇರುತ್ತಾನೊ ಇಲ್ಲವೊ ಗೊತ್ತಿಲ್ಲ. ಆದರೆ ನಂಬಿಕೆಯಲ್ಲಿ ದೇವರು ಇರುತ್ತಾನೆ. ಏಕೆಂದರೆ ಮನುಷ್ಯನೊಳಗಣ ನಂಬಿಕೆಯೇ ದೇವರ ನಿಜವಾದ ರೂಪವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ 65 – ಕರಕರಾ, ರುಚಿಕರ ಸ್ನ್ಯಾಕ್ ರೆಸಿಪಿ
February 22, 2026
9:09 AM
by: ದಿವ್ಯ ಮಹೇಶ್
ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror