ಗೋವುಗಳು ವಿಸರ್ಜಿಸುವ ಸೆಗಣಿ ಕೃಷಿಗೆ ಮೇಲುಗೊಬ್ಬರವಾದಂತೆ, ಗೊಬ್ಬರ ಕಳಿಯುವ ಸಂದರ್ಭದಲ್ಲಿ ಅದರಿಂದ ಹೊರಡುವ ಅನಿಲಗಳನ್ನು ಸಂಗ್ರಹಿಸಿದರೆ ಬೆಂಕಿಯ ಮೂಲವಾಗಬಹುದು ಎಂಬುದನ್ನು ಕಂಡುಹಿಡಿದ. ಅದರ ಫಲವೇ ಗೊಬ್ಬರದ ಅನಿಲ ಸ್ಥಾವರಗಳು.
ಪಂಚಭೂತಗಳಲ್ಲಿ ಒಂದಾದ ಬೆಂಕಿ ಇಲ್ಲದೆ ಮಾನವ ಜೀವಿಸಲು ಸಾಧ್ಯವಿಲ್ಲ. ಮೂರು ಹೊತ್ತಿನ ಉಣ್ಣುವಿಕಿಗೆ ಆಹಾರ ಎಷ್ಟು ಮುಖ್ಯವೋ ಬೆಂಕಿಯು ಅಷ್ಟೇ ಮುಖ್ಯ. ಬೆಂಕಿಯನ್ನು ಸೃಷ್ಟಿ ಮಾಡಿದ ಪ್ರಕೃತಿ ಉರಿಯಲು ಬೇಕಾದ ಮೂಲವಸ್ತು ಮರಗಳನ್ನು ಸೃಷ್ಟಿ ಮಾಡಿದೆ. ನಾಗರಿಕತೆ ಮುಂದುವರಿದಂತೆ ಮರಗಳ ಲಭ್ಯತೆ ಕಡಿಮೆಯಾದಾಗ,ಬೆಂಕಿ ಉರಿಸಲು ಸುಲಭ ಮೂಲಗಳು ಯಾವುದು ಇದೆ ಎಂದು ಹುಡುಕಾಟದಲ್ಲಿ ಮನುಷ್ಯ ತೊಡಗಿದ. ಪಂಚಭೂತಗಳನ್ನು ಸೃಷ್ಟಿಸಿದ ಪ್ರಕೃತಿ ಮಾನವನ ಬದುಕಿಗೋಸ್ಕರ ಗೋವುಗಳನ್ನು ಸೃಷ್ಟಿಸಿದ್ದ. ಗೋವುಗಳು ವಿಸರ್ಜಿಸುವ ಸೆಗಣಿ ಕೃಷಿಗೆ ಮೇಲುಗೊಬ್ಬರವಾದಂತೆ, ಗೊಬ್ಬರ ಕಳಿಯುವ ಸಂದರ್ಭದಲ್ಲಿ ಅದರಿಂದ ಹೊರಡುವ ಅನಿಲಗಳನ್ನು ಸಂಗ್ರಹಿಸಿದರೆ ಬೆಂಕಿಯ ಮೂಲವಾಗಬಹುದು ಎಂಬುದನ್ನು ಕಂಡುಹಿಡಿದ. ಅದರ ಫಲವೇ ಗೊಬ್ಬರದ ಅನಿಲ ಸ್ಥಾವರಗಳು.
1976 ನೇ ಇಸವಿಯಲ್ಲಿ ಈ ವಿಷಯವನ್ನು ನನ್ನ ಅಪ್ಪನಿಗೆ ಯಾರೋ ತಿಳಿಸಿದರು. ಹೊಸ ವಿಷಯಗಳನ್ನು ತಿಳಿಯುವುದರಲ್ಲಿ, ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಮುಂದುವರಿಯುವುದು ನನ್ನಪ್ಪನ ಅಭ್ಯಾಸ. ಅಂತೆಯೇ ವಿಷಯಗಳನ್ನು ಸಂಗ್ರಹಿಸಿ ಆಗಿನ ಕಾಲದಲ್ಲಿ ಬಲು ಅಪರೂಪವಾದ ಗೊಬ್ಬರದ ಅನಿಲ ಸ್ಥಾವರ ನಿರ್ಮಾಣಕ್ಕೆ ಧುಮುಕಿಯೇ ಬಿಟ್ಟರು. 16 ಅಡಿಯ ಬಾವಿ (ಸಂಪೂರ್ಣ ಮುರಕಲ್ಲು ಕಟ್ಟಿ ಸಿಮೆಂಟು ಲೇಪಿತ ), ಸೆಗಣಿಯ ಬಗ್ಗಡ ಒಳ ಹೋಗುವಂತೆ ಒಂದು ಕೊಳವೆ, ಹೊರಬರುವಂತೆ1 ಕೊಳವೆ, ಅನಿಲ ಸಂಗ್ರಹಕ್ಕೆ ಕಬ್ಬಿಣದ ಧಾರಕ( ಡ್ರಮ್). ಆ ಕಾಲದಲ್ಲಿ ಧಾರಕಗಳು ಸೆಗಣಿಯಲ್ಲಿ ಮುಳುಗಿ ಏಳುವಂತದ್ದು ಮತ್ತು ಎಣ್ಣೆಯಲ್ಲಿ ಮುಳುಗಿ ಏಳುವಂತಹ ಎರಡು ಮಾದರಿಯಲ್ಲಿ ರಚನೆ ಮಾಡುತ್ತಿದ್ದರು. ಕಬ್ಬಿಣದ ಧಾರಕಗಳ ದೀರ್ಘಾಯುಷ್ಯದ ದೃಷ್ಟಿಯಿಂದ ನಮ್ಮಲ್ಲಿ ಎರಡನೇ ಮಾದರಿಯನ್ನು ಆಯ್ಕೆ ಮಾಡಿಕೊಂಡು ಅನಿಲ ಸ್ಥಾವರ ಸ್ಥಾಪನೆಯಾಯಿತು. ನಿರಂತರ 45 ವರ್ಷಗಳಿಂದ ನಮ್ಮ ಮನೆಯ ಅಡುಗೆ,ಬಿಸಿನೀರು, ಸಣ್ಣಸಣ್ಣ ಕಾರ್ಯಕ್ರಮಗಳು ಎಲ್ಲವನ್ನೂ ಬಹು ಅಚ್ಚುಕಟ್ಟಾಗಿ ಪೂರೈಸುತ್ತಾ ಬಂದಿದೆ. ಚಳಿಗಾಲದ ಕೆಲ ಸಂದರ್ಭಗಳಲ್ಲಿ ಅನಿಲ ಉತ್ಪಾದನೆ ಕಡಿಮೆ ಆಗುವುದರಿಂದ ಸಮಸ್ಯೆ ಆಗಬಾರದೆಂದು ಈಗಿನ ಹದಿನೈದು ವರ್ಷಗಳ ಹಿಂದೆ ದೀನಬಂಧು ಮಾದರಿಯನ್ನು ಹೊಸದಾಗಿ ಸೇರಿಸಿದೆ. ಗೊಬ್ಬರದ ಅನಿಲ ಸ್ಥಾವರದ ಉಪಯೋಗದಿಂದ ನಮಗಾಗುವ ಲಾಭಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.
1. ನಾವು ಚಿಕ್ಕವರಿದ್ದಾಗ ನಮ್ಮ ಅಮ್ಮನಿಗೆ ಕೆಮ್ಮು ದಮ್ಮಿನ ಸಮಸ್ಯೆ ಇತ್ತು. ಯಾವಾಗ ಅಡುಗೆಮನೆ ಹೊಗೆ ಮುಕ್ತವಾಯಿತೋ ಅಮ್ಮನ ಸಮಸ್ಯೆಗಳು ಪರಿಹಾರವಾಯಿತು.
2. ಪಾತ್ರೆಗಳನ್ನು ತೊಳೆಯುವ ಕೆಲಸ ಅರ್ಧಕ್ಕೆ ಅರ್ಧ ಕಡಿಮೆಯಾಯಿತು.
3. ಆಧುನಿಕ ಅನಿಲ ಜಾಡಿಗಳನ್ನು ಬಳಕೆ ಮಾಡುತ್ತಿದ್ದಲ್ಲಿ ತಿಂಗಳಿಗೆ ಎರಡು ಜಾಡಿಗಳು ನಮ್ಮ ಮನೆಗೆ ಅನಿವಾರ್ಯ. ಇಂದು ಅನಿಲ ಜಾಡಿಗಳಿಗೆ ರೂ ಒಂಬೈನೂರ ರಂತೆ 24 ಜಾಡಿಗಳ ದರ ಎಷ್ಟಾಗಬಹುದು ಎಂದು ಲೆಕ್ಕ ಹಾಕಿಕೊಳ್ಳಿ.
4.ಮಾರುಕಟ್ಟೆಯಲ್ಲಿ ಅನಿಲ ಜಾಡಿಗಳ ಸಹಾಯ ಸಹಾಯಧನ ಹೋಯಿತು ಕ್ರಯ ಏರಿತು ಎಂಬ ಯಾವ ಚಿಂತೆಯೂ ನನಗಿಲ್ಲ.
5. 45 ವರ್ಷಗಳಿಂದ ನಾನು ಸರಕಾರಕ್ಕೆ ಉಳಿಸಿಕೊಟ್ಟ ಸಹಾಯಧನದ ಮೊತ್ತ ಎಷ್ಟಾಗಬಹುದು. ನಾವು ದಾನಿಗಳು ಆಗಬೇಕೇ ವಿನಃ ದೇಹಿಗಳು ಆಗಬಾರದು.
6. ನಾವು ಕೃಷಿಕರಾಗಿದ್ದು, ದನ ಸಾಕುವ ಎಲ್ಲಾ ಸಾಮರ್ಥ್ಯಗಳು ಇದ್ದೂ ಸ್ವಾವಲಂಬನೆಯನ್ನು ಸಾಧಿಸದೆ ಪರಾವಲಂಬನೆಯ ಕಡೆಗಿನ ನಡುಗೆ ಆಶ್ಚರ್ಯವಾಗುತ್ತದೆ.( ಸಮಾಜದಲ್ಲಿ ಹಿಂದುಳಿವರಾಗಲು ಇರುವ ತುಡಿತ ಮುಂದುವರಿದವರಾಗಲು ಇರುವುದಿಲ್ಲ!)
7. ಅನಿಲ ಜಾಡಿ ಗಳಂತೆ ಬೆಂಕಿಯ ಯಾವುದೇ ಅಪಘಾತದ ಭಯವಿಲ್ಲ. ಕಷ್ಟಪಟ್ಟರೆ ಎಲ್ಲವನ್ನೂ ಕೊಡುವ,ಪಂಚ ಭೂತಗಳನ್ನು ಸುಸ್ಥಿತಿಯಲ್ಲಿಡುವ ಗೋವುಗಳನ್ನು ಸ್ಮರಿಸುತ್ತಾ ನೆಮ್ಮದಿಯಲ್ಲಿರೋಣ.
# ಎ.ಪಿ.ಸದಾಶಿವ ಮರಿಕೆ , ಕೃಷಿಕ
ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…