ಹಸಿರು ಕೃಷಿ ಅಭಿವೃದ್ಧಿ (Agricultural Green Development) ಗ್ರಾಮೀಣ ಪ್ರದೇಶದ ರೈತರ ಆದಾಯ ಮತ್ತು ಸಮಗ್ರ ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು “ನೇಚರ್ ಸೈನ್ಸ್ ರಿಪೋರ್ಟ್” ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿ ಹೇಳಿದೆ.
2013 ರಿಂದ 2022 ರವರೆಗೆ ಚೀನಾದ ವಿವಿಧ ಪ್ರಾಂತ ಮಟ್ಟದ ನಗರಗಳ ಅಂಕಿ-ಅಂಶಗಳನ್ನು ಆಧರಿಸಿ ನಡೆಸಿದ ಈ ಅಧ್ಯಯನದಲ್ಲಿ, ಪರಿಸರ ಸ್ನೇಹಿ ಕೃಷಿ ಪದ್ಧತಿಗಳು ರೈತರ ಜೀವನಮಟ್ಟವನ್ನು ಸುಧಾರಿಸುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಯ ಸಮತೋಲನಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದೆ.
ಹಸಿರು ಕೃಷಿ ಅಭಿವೃದ್ಧಿ (Agricultural Green Development) ಎಂದರೆ ಪರಿಸರ ಸ್ನೇಹಿ ತಂತ್ರಜ್ಞಾನಗಳು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ದೀರ್ಘಕಾಲಿಕ ಉತ್ಪಾದನೆಗೆ ಆದ್ಯತೆ ನೀಡುವ ಕೃಷಿ ವಿಧಾನ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಜೈವಿಕ ಕೃಷಿ, ಮಣ್ಣು ಆರೋಗ್ಯ ಕಾಪಾಡುವ ಪದ್ಧತಿ, ನೀರಿನ ಸಮರ್ಥ ಬಳಕೆ, ಕಾರ್ಬನ್ ವಿಸರ್ಜನೆ ಕಡಿತ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ ಕ್ರಮಗಳ ಮೂಲಕ ರೈತರ ಆದಾಯ ಹೆಚ್ಚಿಸುವುದು ಇದರ ಪ್ರಮುಖ ಗುರಿ. ಆಹಾರ ಭದ್ರತೆ ಕಾಪಾಡುತ್ತಲೇ ಪರಿಸರ ಸಮತೋಲನ ಉಳಿಸುವ ಈ ಕೃಷಿ ಮಾದರಿ ಭವಿಷ್ಯದ ಕೃಷಿಗೆ ದಾರಿ ತೋರಿಸುವ ಸ್ಥಿರ ಅಭಿವೃದ್ಧಿಯ ಸಂಕಲ್ಪವಾಗಿದ್ದು, ರೈತ, ಪರಿಸರ ಮತ್ತು ಸಮಾಜದ ಹಿತಾಸಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಇದು ಸೇರಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖವಾಗಿ ಕಂಡುಬಂದ ಅಂಶಗಳು : ಹಸಿರು ಕೃಷಿ ಅಭಿವೃದ್ಧಿಯಿಂದ ರೈತರ ಆದಾಯದಲ್ಲಿ ಸ್ಪಷ್ಟವಾದ ಏರಿಕೆ ಕಂಡುಬಂದಿದೆ, ಕೃಷಿ ಉದ್ಯಮ ಸರಪಳಿ ವಿಸ್ತರಣೆ ಮತ್ತು ಕೃಷಿಯ ಬಹು-ಕಾರ್ಯತೆಯ (multi-functionality) ಉತ್ತೇಜನವು ಸಮೃದ್ಧಿಗೆ ಪ್ರಮುಖ ಕಾರಣಗಳಾಗಿವೆ. ಹಸಿರು ಕೃಷಿಯ ಪರಿಣಾಮ ಪ್ರಾದೇಶಿಕವಾಗಿ ವಿಭಿನ್ನವಾಗಿದೆ – ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಪರಿಣಾಮ ಹೆಚ್ಚು ಕಂಡುಬಂದರೆ, ಹಿಂದುಳಿದ ಪ್ರದೇಶಗಳಲ್ಲಿ ಪರಿಣಾಮ ತೀರ ಕಡಿಮೆಯಾಗಿದೆ. ಕೃಷಿ ಉದ್ಯಮ ಸಂಗ್ರಹಣೆಯ ಮಟ್ಟ ನಿರ್ದಿಷ್ಟ ಹಂತ ತಲುಪಿದಾಗ ಮಾತ್ರ ಸಮೃದ್ಧಿಗೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಅಧ್ಯಯನ ವರದಿಯಲ್ಲಿ ಕಂಡುಬಂದಿದೆ.
ಗ್ರಾಮೀಣ ಅಭಿವೃದ್ಧಿಗೆ ಸಂದೇಶ : ಈ ಸಂಶೋಧನೆ, ಪರಿಸರ ಸಂರಕ್ಷಣೆಯೊಂದಿಗೆ ಕೃಷಿ ಅಭಿವೃದ್ಧಿಯನ್ನು ಜೋಡಿಸಿದರೆ ಮಾತ್ರ ರೈತರ ಸಮೃದ್ಧಿ ಸಾಧ್ಯ ಎಂಬುದನ್ನು ತೋರಿಸುತ್ತದೆ. ಜೊತೆಗೆ, ಎಲ್ಲ ಪ್ರದೇಶಗಳಲ್ಲೂ ಒಂದೇ ರೀತಿಯ ನೀತಿ ಪರಿಣಾಮ ಬೀರುವುದಿಲ್ಲ; ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸುವುದು ಅನಿವಾರ್ಯ ಎಂದು ವರದಿ ಸೂಚಿಸುತ್ತದೆ.
ಭಾರತಕ್ಕೆ ಪಾಠ: ಭಾರತದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನೀತಿಗಳಿಗೆ ಈ ಅಧ್ಯಯನ ಮಹತ್ವದ ಸಂದೇಶ ನೀಡುತ್ತದೆ. ಹಸಿರು ಕೃಷಿ, ಮೌಲ್ಯ ಸರಪಳಿ ವಿಸ್ತರಣೆ ಮತ್ತು ರೈತ-ಕೇಂದ್ರೀಕೃತ ನೀತಿಗಳ ಮೂಲಕವೇ ಗ್ರಾಮೀಣ ಸಮೃದ್ಧಿ ಸಾಧಿಸಬಹುದು ಎಂಬುದು ಈ ಸಂಶೋಧನೆಯ ಸಾರಾಂಶವಾಗಿದೆ.



