“ಈ ಚುಕ್ಕೆ ರೋಗ ನಾವು ಚಿಕ್ಕವರಾಗಿದ್ದಾಗಲೇ ಇತ್ತು. ಇದೇನು ಹೊಸದಲ್ಲ. ಏನಾಗಲ್ಲ. ನೀನು ಸುಮ್ನಿರು” ಅಂದ್ರು ಚಂದ್ರಣ್ಣ. ಅವರ ಮಗ ರಮೇಶನಿಗೆ ಗೊಂದಲ. ಎಲ್ಲೆಡೆ ಎಲೆ ಚುಕ್ಕಿ ರೋಗ ಗಂಭೀರವಾಗಿದೆ, ಅಡಿಕೆ ತೋಟ ನಾಶ ಮಾಡುತ್ತಿದೆ ಎಂಬ ಮಾತು ಮತ್ತು ವಿಡಿಯೋಗಳನ್ನು ನೋಡಿ ಕಂಗಾಲಾಗಿದ್ದ ರಮೇಶ, ಅಪ್ಪನ ಮಾತು ಕೇಳಿ ಗೊಂದಲಕ್ಕೀಡಾದ. ನಂತರ, ಸಿಪಿಸಿಆರ್ ಐ ಸಂಸ್ಥೆಯ ತಜ್ಞರನ್ನು ಭೇಟಿ ನೀಡಿ ಉತ್ತರ ಕಂಡು ಕೊಂಡ.
ಒಂದು ದಿನ ಮಾತಿಗೆ ಸಿಕ್ಕರು ಈ ಯುವ ಕೃಷಿಕ. ಚಂದ್ರಣ್ಣ ಹೇಳಿದ್ದು ಸರಿ ಇತ್ತು. ಎಲೆ ಚುಕ್ಕಿ ರೋಗ 1960 ರ ದಶಕದಲ್ಲಿಯೇ ಅಡಿಕೆಯನ್ನು ಬಾಧಿಸುವ ರೋಗವೆಂದು ವರದಿಯಾಗಿತ್ತು. ಆದರೆ, ಅದು ಮಾರಕ ರೋಗವಾಗಿರಲಿಲ್ಲ. ಮಳೆಗಾಲದಲ್ಲಿ ಅಡಿಕೆ ಮರದ ಕೆಳಭಾಗದ ಸೋಗೆಗಳಲ್ಲಿ ಕಾಣುವ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕಿಗಳು, ಕಂದು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕಿಗಳು, ಹೀಗೆ ನಾನಾ ರೀತಿಯ ಚುಕ್ಕೆಗಳು ಅಡಿಕೆಯನ್ನು ಕಾಡುತ್ತವೆ. ಕೊಲೆಟೊಟ್ರೈಕಮ್ ಸೇರಿದಂತೆ ಬೇರೆ ಬೇರೆ ಜಾತಿಯ ಶಿಲೀಂಧ್ರಗಳು ಉಂಟು ಮಾಡುವ ರೋಗ ಲಕ್ಷಣಗಳಿವು.
ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬಯಸಿದ ರಮೇಶ, ಸುಳ್ಯದ ಗುತ್ತಿಗಾರು ಮತ್ತು ನಡುಗಲ್ಲು ಇಲ್ಲಿನ ತೋಟಗಳಿಗೆ ಡಾ. ತವಪ್ರಕಾಶ್, ಮತ್ತವರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಜೊತೆಯಾದ. ಆರೇಳು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಕಳಸ ಭಾಗದಲ್ಲಿ ಅಡಿಕೆ ಮರಗಳ ಕೆಂಪಾಗುತ್ತಿವೆ ಎಂಬ ಮಾಹಿತಿಯನ್ನು ಆಧರಿಸಿ, ಆ ಪ್ರದೇಶಗಳಿಗೆ ಭೇಟಿ ಕೊಟ್ಟಾಗ, ಎಲೆಯ ಮೇಲೆ ಹೊಸ ರೀತಿಯ ಚುಕ್ಕೆಯನ್ನು ಸಿಪಿಸಿಆರ್ ಐ ಸಂಸ್ಥೆಯ ಡಾ. ವಿನಾಯಕ ಹೆಗ್ಗಡೆ ಮತ್ತು ಡಾ. ತವಪ್ರಕಾಶರು ಗಮನಿಸಿದ್ದರು. ಅಷ್ಟೊಂದು ಗಂಭೀರವಾಗಿ ರೋಗ ಬಾಧಿಸಿದ್ದು ಅವರೆಲ್ಲರನ್ನು ಆಶ್ಚರ್ಯಗೊಳಿಸಿತು. ನಂತರದ ಕೆಲವೇ ವರ್ಷಗಳಲ್ಲಿ ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳಾದ ಮಲೆನಾಡು ಮತ್ತು ಕರಾವಳಿಗೆ ಹಬ್ಬಿ ಇಂದಿಗೂ ಕೃಷಿಕರನ್ನು ಕಾಡುತ್ತಿದೆ. ಹಳದಿ ಬಣ್ಣದಿಂದ ಆವೃತವಾಗಿರುವ ಕಂದು ಬಣ್ಣದ ಚುಕ್ಕೆಗಳು ಈ ಹೊಸ ರೋಗದ ಲಕ್ಷಣ. ಇದು ಕೊಲೆಟೊಟ್ರೈಕಮ್ ಕಹಾವೇ (ಸಿಗ್ಗಾರೊ) ಎಂಬ ಹೊಸ ಜಾತಿಯ ಶಿಲೀಂದ್ರ ಎನ್ನುವುದು ಸಿಪಿಸಿಆರ್ ಐ ಸಂಸ್ಥೆಯ ಅಧ್ಯಯನದಲ್ಲಿ ಕಂಡು ಬಂದಿರುವ ವಿಚಾರ. ಕೊಲೆಟೊಟ್ರೈಕಮ್ ಒಂದು ಅನೇಕ ಉಪ ಜಾತಿಗಳಿರುವ ಸಂಕೀರ್ಣವಾದ ಪ್ರಬೇಧವಾಗಿದೆ.
“ಗಾಳಿಯಲ್ಲಿ ಈ ರೋಗದ ಸೋಂಕು ಬಹಳ ಬೇಗನೆ ಹರಡುತ್ತದೆ. ಕೃಷಿಕರು ಅಡಿಕೆ ಸಸಿಗಳನ್ನು ಒಂದು ಜಾಗದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಟ ಮಾಡುವಾಗ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಹಳ ಸುಲಭವಾಗಿ ಸಸಿಗಳ ಮೂಲಕ ಬೇರೊಂದು ಜಾಗಕ್ಕೆ ಹರಡುತ್ತದೆ. ಸೂಕ್ತವಾದ ವಾತಾವರಣ ಸಿಕ್ಕಾಗ ತನ್ನ ನಿಜರೂಪವನ್ನು ತೋರಿಸುತ್ತದೆ.” ಎಂದು ಡಾ. ತವಪ್ರಕಾಶರು ರಮೇಶನಿಗೆ ಹೇಳಿದಾಗ ರೋಗದ ಗಾಂಭೀರ್ಯತೆ ಅರಿವಾಯಿತು.
“ಹಾಗಾದ್ರೆ, ಇಲ್ಲಿಯವರೆಗೆ ಸುಮ್ಮನಿದ್ದ ಶಿಲೀಂದ್ರ, ಒಮ್ಮೆಲೇ ಅಡಿಕೆ ಸೋಗೆಯನ್ನು ಸಂಹರಿಸುತ್ತಿರುವುದು ಯಾಕೆ?” ರಮೇಶನ ಪ್ರಶ್ನೆಗೆ ಉತ್ತರಿಸುವುದು ತವಪ್ರಕಾಶರಿಗೆ ಸ್ವಲ್ಪ ಕಷ್ಟವಾಯಿತು. “ಶಿಲೀಂದ್ರಗಳು ಸುಲಭವಾಗಿ ಮಾರ್ಪಾಡು ಹೊಂದುತ್ತವೆ. ಅಡಿಕೆಯನ್ನು ಕಾಡುತ್ತಿರುವ ಈ ಹೊಸ ಜಾತಿ ಶಿಲೀಂದ್ರವು, ಕಾಫಿ ಬೆಳೆಯನ್ನು ಬಾಧಿಸುವ ಕುರಿತು ಉಲ್ಲೇಖಗಳಿವೆ. ಅಲ್ಲದೇ, ಮೊದಲು ಈ ಶಿಲೀಂದ್ರವನ್ನು ನಾವು ಕಂಡದ್ದು ಕಳಸ ಭಾಗದ ಕಾಫಿ ಮತ್ತು ಅಡಿಕೆ ಬೆಳೆಯುವ ಪ್ರದೇಶದಲ್ಲಿ. ಹಾಗಾಗಿ, ಬೇರೆ ಬೆಳೆಯಿಂದ ಅಡಿಕೆಗೆ ಬಂದಿರುವ ಸಾಧ್ಯತೆ ತಳ್ಳಿ ಹಾಕಲಾಗದು. ಹಾನಿಯುಂಟು ಮಾಡುವ ಶಕ್ತಿಯು ಈ ಶಿಲೀಂಧ್ರಗಳ ಉಪಜಾತಿ (strain/race)ಗಳಲ್ಲಿ ವ್ಯತ್ಯಾಸವಿರುತ್ತದೆ. ಅದರ ಹಾನಿ ಮಾಡುವ ಶಕ್ತಿ, ಬೆಳೆ, ಪೂರಕ ವಾತಾವರಣ, ಇವುಗಳನ್ನು ಆಧರಿಸಿದೆ. ಈ ಹೊಸ ಜಾತಿಯ ರೋಗಾಣು ಪೂರಕ ವಾತಾವರಣ ಇದ್ದಾಗ ಬಹಳ ವೇಗವಾಗಿ ಅಡಿಕೆ ಮರದ ಎಲೆ, ಹಾಳೆ ಮತ್ತು ಕಾಯಿಯ ಮೇಲೆ ಬೆಳೆದು, ಹಾನಿ ಮಾಡುವ ಶಕ್ತಿ ಹೊಂದಿದೆ. ಇದು ಈಗ ಕಂಡು ಬಂದಿರುವ ಶಿಲೀಂಧ್ರದ ಶಕ್ತಿ. ಹವಾಮಾನ ಬದಲಾವಣೆಯಿಂದ ಅದರ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವೂ ಕಾರಣ” ಎಂದು ಉತ್ತರಿಸಿದರು.
ಚಿಂತಾಕ್ರಾಂತನಾದ ರಮೇಶ, “ಇದಕ್ಕೆ ಮುಕ್ತಿ ಇಲ್ಲವೇ? ಸಿಂಪಡಣೆ ಮಾಡುತ್ತಿರುವ ಕ್ರಮ ನೋಡಿದರೆ ಭಯವಾಗುತ್ತದೆ. ನಾವೇನು ಮಾಡಬಹುದು?” ಎಂದು ಪ್ರಶ್ನಿಸಿದ್ದು, ತರಕಾರಿ, ದವಸ- ಧಾನ್ಯಗಳಲ್ಲಿ ಸುಲಭವಾಗಿ ಉತ್ತರಿಸಬಹುದಾದ, ಅಡಿಕೆ ತೋಟದಲ್ಲಿ ಜಟಿಲವಾದ ಪ್ರಶ್ನೆ.…… ಮುಂದೆ ಓದಿ……
ಕಾರಣವಿಷ್ಟೇ, ಈ ಎಲೆ ಚುಕ್ಕಿಯ ಸೋಂಕು ಗಾಳಿಯಲ್ಲಿ ವೇಗವಾಗಿ ಹರಡಿ, ಸೂಕ್ತ ವಾತಾವರಣದಲ್ಲಿ ರೋಗವನ್ನು ಉಂಟು ಮಾಡುವ, ರೋಗಭಾದಿತ ಸಸ್ಯ ಭಾಗದಲ್ಲಿ ಏಳೆಂಟು ತಿಂಗಳು ಉಳಿದುಕೊಳ್ಳುವ ಈ ಶಿಲೀಂದ್ರವನ್ನು ಸುಲಭವಾಗಿ ನಿಯಂತ್ರಿಸಲಾಗದು. ಇದರ ನಿರ್ವಹಣೆಗೆ ನಾವು ಬಳಸುವ ಅಂತರ್ವ್ಯಾಪಿ ಶಿಲೀಂದ್ರನಾಶಕಗಳ ಉಳಿಕೆ ಸಸ್ಯ ಭಾಗದಲ್ಲಿ ಕೆಲದಿನಗಳವರೆಗೆ ಮಾತ್ರ. ಶಿಲೀಂದ್ರವನ್ನು ಪರಿಣಾಮಕಾರಿಯಾಗಿ ನಾಶ ಮಾಡಿದರೂ, ಶಿಲೀಂದ್ರನಾಶಕವು ವಿಘಟನೆಯಾಗಿ ಹೆಚ್ಚು ದಿನ ಸಸ್ಯ ಭಾಗದಲ್ಲಿ ಉಳಿಯದ ಕಾರಣ, ಹೆಚ್ಚು ದಿನಗಳವರೆಗೆ ರೋಗ ಬಾರದಂತೆ ತಡೆಯಲಾಗದು. ಹಾಗಾಗಿ, ಒಮ್ಮೆ ಸಿಂಪಡಣೆ ಮಾಡಿ ರೋಗವನ್ನು ನಿಯಂತ್ರಿಸಿದರೂ, ಕೆಲವು ದಿನಗಳ ನಂತರ ಬರುವ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಶಿಲೀಂದ್ರನಾಶಕಗಳಿಗೆ ಆಗದು. ಹಾಗಾಗಿ, ಮೂರು ಕೃಷಿ ಕ್ರಮಗಳು ಬಹಳ ಮುಖ್ಯ. ಸಾಮೂಹಿಕವಾಗಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು, ತೀವ್ರವಾದ ಎಲೆಗಳನ್ನು ತೆಗೆದು ನಾಶ ಮಾಡುವುದು, ಹಾಗೂ ಬಹು ಮುಖ್ಯವಾಗಿ ಅಡಿಕೆ ಮರದ ಆರೋಗ್ಯವನ್ನು ಉತ್ತಮಗೊಳಿಸುವುದು.
ಡಾ. ತವಪ್ರಕಾಶರೊಂದಿಗೆ ರಮೇಶ ಅಂದು ಭೇಟಿ ನೀಡಿದ್ದು ಗುತ್ತಿಗಾರು ಮತ್ತು ನಡುಗಲ್ಲು, ಇಲ್ಲಿನ ಹನ್ನೆರಡು ಎಕರೆ ಅಡಿಕೆ ತೋಟಗಳಿಗೆ. ಪ್ರತಿಯೊಂದು ತೋಟದಲ್ಲೂ ರೋಗದ ತೀವ್ರತೆ ವಿಭಿನ್ನವಾಗಿತ್ತು. ನೀರು ಹರಿದು ಹೋಗಲು ಬಸಿಗಾಲುವೆ ವ್ಯವಸ್ಥೆ ಸಮರ್ಪಕವಾಗಿಲ್ಲದ ತೋಟದಲ್ಲಿ ಎಲೆ ಚುಕ್ಕೆ ರೋಗ ಹೆಚ್ಚಿತ್ತು. ಮರ ಉಳಿದಿತಾ ಎನ್ನುವಷ್ಟು ಕಾಯಿ-ಕೊಳೆ ಮತ್ತು ಎಲೆ ಚುಕ್ಕೆ ರೋಗವಿತ್ತು. “ರೋಗ ನಿರ್ವಹಣೆಗೆ ಸಿಂಪಡಣೆಯೊಂದೇ ಮದ್ದಲ್ಲ. ತೋಟದಲ್ಲಿ ಮಾಡಬೇಕಾದ ಬೇಸಿಕ್ಸ್ ಅನ್ನು ಪಾಲನೆ ಮಾಡಲೇಬೇಕು” ಎನ್ನುವುದು ಡಾ. ತವಪ್ರಕಾಶರ ತಂಡದಲ್ಲಿದ್ದವರ ಅಭಿಪ್ರಾಯವಾಗಿತ್ತು. ನೀರು ನಿಲ್ಲುವ/ ಒಸರು ಇರುವ ಜಾಗದಲ್ಲಿ ಸಾಮಾನ್ಯವಾಗಿ ಮಣ್ಣಿನ ರಸಸಾರ ಕಡಿಮೆ.
ಮಾತ್ರವಲ್ಲ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ, ಬೇರಿನ ಬೆಳವಣಿಗೆ, ಪೋಷಕಾಂಶಗಳ ಲಭ್ಯತೆ ಮತ್ತು ಅವುಗಳ ಹೀರುವಿಕೆ, ಇವೆಲ್ಲವೂ ಕಡಿಮೆ. ಮರದ ಉತ್ತಮ ಆರೋಗ್ಯಕ್ಕೆ ಸದೃಢ ಬೇರುಗಳು ಇರಬೇಕಾದುದು ಮತ್ತು ಅವುಗಳು ಸಮರ್ಪಕವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಮುಖ್ಯ. ಇದಕ್ಕೆ ನಾವು ಅವಕಾಶವನ್ನು ಕಲ್ಪಿಸಬೇಕು. ಬೈಲು ಪ್ರದೇಶದಲ್ಲಿ ತುಂಡು ಗದ್ದೆಗಳನ್ನು ತೋಟವಾಗಿ ಪರಿವರ್ತಿಸಿದ ನಮ್ಮಲ್ಲಿ, ನೀರು ಬಸಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಅವಕಾಶವಿದ್ದರೂ ವ್ಯವಸ್ಥೆ ಮಾಡದ ಕೃಷಿಕರೂ ನಮ್ಮೊಂದಿಗೆ ಇದ್ದಾರೆ.
ಹಾಗಾಗಿ, ಆ ಬೈಲಿನ ಕೊನೆಯ ಕೃಷಿಕನಿಂದ ಮೊದಲಾಗಿ, ಉಳಿದೆಲ್ಲ ಕೃಷಿಕರು ಸ್ವಯಂಪ್ರೇರಿತರಾಗಿ ಬಸಿ ಕಾಲುವೆಯನ್ನು ನೀಡಿ, ನೀರು ಹರಿದು ಹೋಗುವಂತೆ ನೋಡಿಕೊಳ್ಳುವುದು ಅನಿವಾರ್ಯ. ನೀರು ನಿಲ್ಲುವ ತೋಟಗಳಲ್ಲಿ ಅಡಿಕೆ ಮರಗಳು ಒತ್ತಡಕ್ಕೆ ಒಳಗಾಗುವ ಕಾರಣ, ಕಾಯಿ ಕೊಳೆ ರೋಗ, ಕೊಬೆ ಕೊಳೆ ರೋಗ, ಆಂಬ್ರೋಸಿಯ ಕೀಟ ಸೇರಿದಂತೆ ರೋಗ-ಕೀಟ ಬಾದೆಗಳು ಹೆಚ್ಚು ಎನ್ನುವ ಅವರ ತರ್ಕ ಸರಿ ಕಂಡಿತು. ನಡುಗಲ್ಲು ಪ್ರದೇಶದ ಗಿರೀಶ್ ಗೌಡರು ಮತ್ತು ಗುತ್ತಿಗಾರು ಸಮೀಪದ ಯುವ ಕೃಷಿಕ ಸುಬ್ರಹ್ಮಣ್ಯ ಪ್ರಸಾದರು ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಂಡ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ಇಳುವರಿಯಲ್ಲಿ ವ್ಯತ್ಯಾಸವಾಗಿಲ್ಲ.
ಆದರೆ, ಮಾಡಿದ ಪ್ರಯತ್ನಕ್ಕೆ ಸಂಪೂರ್ಣ ಫಲಿತಾಂಶವೂ ಸಿಕ್ಕಿಲ್ಲ. ಕಾರಣ, ಸುತ್ತಲಿನ ತೋಟಗಳಲ್ಲಿ ರೋಗ ಬಾದೆ ಹೆಚ್ಚಿದೆ. ಅಲ್ಲಿ, ಸಿಂಪಡಣೆ ಮಾಡಿಲ್ಲ. ಮಾತ್ರವಲ್ಲ, ಬಸಿಗಾಲುವೆ ಮತ್ತು ಪೋಷಣೆಯೂ ಸರಿಯಾಗಿಲ್ಲ. ಹಾಗಾಗಿ, ಸಾಮೂಹಿಕವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದೆ, ಪರಿಣಾಮಕಾರಿಯಾಗಿ ಎಲೆ ಚುಕ್ಕೆ ರೋಗವನ್ನು ನಿರ್ವಹಣೆ ಮಾಡಲಾಗದು. ಅಲ್ಲಿ ಸುಮಾರು 10 ಜನ ಕೃಷಿಕರನ್ನು ಡಾ. ತವಪ್ರಕಾಶರು ಮತ್ತು ಅವರ ತಂಡ ಭೇಟಿಯಾಗಿ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ರಮೇಶ ಹೇಳಿದ್ದು ಹೀಗೆ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.. …… ಮುಂದೆ ಓದಿ……
ಸೂಚನೆ:
(ಅಡಿಕೆ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಸಿಪಿಸಿಆರ್ಐ ವಿಜ್ಞಾನಿ ಡಾ.ಭವಿಷ್ಯ ಅವರು ವ್ಯಾಟ್ಸಪ್ ಗುಂಪೊಂದರಲ್ಲಿ ಅಡಿಕೆ ಬೆಳೆಗಾರರ ಜಾಗೃತಿಗಾಗಿ ಹಂಚಿಕೊಂಡ ಮಾಹಿತಿ. ಅದರ ಯಥಾವತ್ತಾದ ಬರಹ ಇದು)
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…