ತಾಪಮಾನ, ನೀರಿನ ಕೊರತೆ | ಇನ್ನಷ್ಟು ಗಂಭೀರ ಸ್ಥಿತಿಗೆ ತೆರಳಲಿದೆ ನಾಡು | ಪರಿಸರ ಕಾಳಜಿ ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ | ಪರಿಸರವಾದಿ ದಿನೇಶ್‌ ಹೊಳ್ಳ ಹೇಳಿದ್ದೇನು..?

April 10, 2024
11:09 PM
ಪರಿಸರ, ನೀರು, ಪಶ್ಚಿಮ ಘಟ್ಟದ ಬಗ್ಗೆ ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ಭವಿಷ್ಯ ಇನ್ನಷ್ಟು ಅಪಾಯ. ಮಕ್ಕಳಿಗೆ ಎಲ್ಲವೂ ಮಾಡಿಟ್ಟು ನೀರು ಇಲ್ಲದೇ  ನೀರಿಗಾಗಿ ಕಣ್ಣೀರು ಹಾಕಬೇಕಾದ ದಿನ ಬರುತ್ತದೆ ಎಂದು ಎಚ್ಚರಿಸಿದ್ದಾರೆ ಪರಿಸರವಾದಿ ದಿನೇಶ್‌ ಹೊಳ್ಳ.

ಈಗಿನ ಪರಿಸರದ ದುರಂತವು ಒಮ್ಮೆಲೇ ಆಗಿಲ್ಲ, ಕಳೆದ 10 ವರ್ಷಗಳ ಫಲ ಈಗ ಸಿಗುತ್ತಿದೆ. ಹಂತ ಹಂತವಾಗಿ ದುರಂತ ಬರುತ್ತಲೇ ಇದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಇನ್ನಷ್ಟು ಗಂಭೀರ ಸ್ಥಿತಿಗೆ ನಾಡು ಹೋಗಲಿದೆ.ಈಗಲೇ ಎಚ್ಚೆತ್ತುಕೊಂಡರೆ ಮುಂದಿನ ಅಪಾಯಗಳನ್ನು ತಡೆಯಲು ಸಾಧ್ಯವಿದೆ ಎಂದು ಪರಿಸರವಾದಿ ದಿನೇಶ್‌ ಹೊಳ್ಳ ಹೇಳುತ್ತಾರೆ.

Advertisement

ಪುತ್ತೂರಿನ ಪರ್ಪುಂಜದಲ್ಲಿ ದ ರೂರಲ್‌ ಮಿರರ್‌.ಕಾಂ  ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ದಿನೇಶ್‌ ಹೊಳ್ಳ, ಪರಿಸರದ ಇಂದಿನ ಬದಲಾವಣೆಗಳು, ಗ್ರಾಮೀಣ ಭಾಗ, ಪಶ್ಚಿಮ ಘಟ್ಟದ ತಪ್ಪಲಲ್ಲೂ ನಡೆಯುತ್ತಿರುವ ಹವಾಮಾನ ಬದಲಾವಣೆ , ನೀರಿನ ಕೊರತೆ, ತಾಪಮಾನ ಇತ್ಯಾದಿಗಳ ಬಗ್ಗೆ ಮಾತನಾಡಿದರು. (ದಿನೇಶ್‌ ಹೊಳ್ಳ ಅವರ ಜೊತೆ ಮಾತನಾಡಿರುವ ಆಡಿಯೋ ಇಲ್ಲಿದೆ..)

ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ನೀರಿನ ಕೊರತೆ ಈಗ ಉಂಟಾಗುತ್ತಿದೆ. ನೀರಿನ ಕೊರತೆ ಉಂಟಾದಾಗ ಮಾತ್ರಾ ಎಲ್ಲವೂ ನೆನಪಾಗುತ್ತದೆ. ಈಗ ಅನಿರೀಕ್ಷಿತವಾಗಿ ನಡೆದ ಘಟನೆ ಇದಲ್ಲ, ಹಾಗಂತ ಈಗಿನ ಪರಿಸ್ಥಿತಿಗೆ ತಕ್ಷಣವೇ ಏನೂ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳು ಬೇಕಿದೆ. ಅಭಿವೃದ್ಧಿಯನ್ನು ಎಲ್ಲರೂ ಬಯಸುತ್ತಾರೆ. ಹಾಗೆಂದು ನಗರ ಬೆಳೆಯುತ್ತಿರುವ ಹಾಗೆಯೇ  ಪರಿಸರ, ನದಿ, ಪಶ್ಚಿಮಘಟ್ಟ, ಪಶ್ಚಿಮ ಘಟ್ಟದ ಭೂಕುಸಿತ ಇತ್ಯಾದಿಗಳ ಬಗ್ಗೆಯೂ ಯೋಚಿಸಬೇಕಿದೆ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಈಗ ನಡೆಯುತ್ತಿರುವ ಎಲ್ಲಾ ದುರಂತಗಳೂ 10 ವರ್ಷಗಳಿಂದ ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ಒಮ್ಮೆಲೇ ಯಾವುದೂ ನಡೆದಿಲ್ಲ. ಎಲ್ಲರೂ ಮೌನವಾಗಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ಮಾತನಾಡಲಾರರು, ಅವರಿಗೆ ಓಟು ಬೇಕು ಅಷ್ಟೇ. ಜನರು ಮಾತನಾಡಬೇಕು. ಪಶ್ಚಿಮ ಘಟ್ಟಗಳಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಿರಂತರ ಭೂಕುಸಿತವಾಯಿತು. ಜಲಪ್ರಳಯವಾಯಿತು ಹಾನಿಯಾಯಿತು. ಪಶ್ಚಿಮ ಘಟ್ಟದಲ್ಲಿ ಆದ ಹಾನಿ ಎಷ್ಟು..? ಯಾರು ನೋಡಿದ್ದಾರೆ..? ಏನಾಗಿದೆ ಎಂದು ಯಾರು ನೋಡಿದ್ದಾರೆ.?. ಅಲ್ಲಿ ಎರಡು-ಮೂರು ವರ್ಷಗಳಿಂದ ಆಗಿರುವ ಹಾನಿ ಅಪಾರ. ವಾತಾವರಣ, ಪರಿಸರದ ವಿಚಾರದಲ್ಲಿ ಎಲ್ಲೋ ದೂರದಲ್ಲಿ ಆಗಿರುವ ಘಟನೆಗಳು ಇಲ್ಲೂ ಪರಿಣಾಮ ಬೀರುವಾಗ, ಪಶ್ಚಿಮ ಘಟ್ಟದಲ್ಲಿ ಆಗಿರುವ ಹಾನಿಯು ಅದೇ ಆಸುಪಾಸಿನಲ್ಲಿ ಆಗದೇ ಇರುತ್ತದೆಯೇ ?. ಪಶ್ಚಿಮ ಘಟ್ಟದಲ್ಲಿ ಆಗಿರುವ ಹಾನಿಯ ಪರಿಣಾಮವೇ ಈಗ ಮೊದಲ ಹಂತದಲ್ಲಿ ಕಾಣುತ್ತಿದೆ. ಪ್ರತೀ ವರ್ಷ ಜಲ ಸ್ಫೋಟ, ಭೂಕುಸಿತದ ಕಾರಣದಿಂದ ನೀರಿನ ಶೇಖರಣಾ ಪ್ರಮಾಣ ಕಡಿಮೆಯಾಗಿದೆ. ಇಂದು ಆಗಿರುವ ಬಹುದೊಡ್ಡ ಸಮಸ್ಯೆಯೇ ಇದು.

ಭೂಕುಸಿತದ ಕಾರಣದಿಂದ ಭೂಮಿ ಛಿದ್ರವಾಗಿದೆ, ಕಾಡುಗಳು ಅಷ್ಟೂ ಜಾಗದಲ್ಲಿ ಇಲ್ಲವಾಗಿದೆ. ಸೂರ್ಯನ ಕಿರಣಗಳು ಕಾಡಿನ ಒಳಗೆ ಬೀಳುತ್ತಿವೆ. ತಾಪ ಕಾಡಿನಲ್ಲೂ ಹೆಚ್ಚಾಗುತ್ತಿದೆ, ನೀರು ಶೇಖರಣೆ ಕಡಿಮೆಯಾಗಿದೆ ಎನ್ನುತ್ತಾರೆ ದಿನೇಶ್‌ ಹೊಳ್ಳ. ಭೂಕುಸಿತದ ಕಾರಣದಿಂದ ವನ್ಯ ಜೀವಿಗಳು ಅದರಲ್ಲೂ ಇರುವೆಯಿಂದ ತೊಡಗಿ ಆನೆಯವರೆಗೆ ಎಲ್ಲವೂ ಕಾಡಿನಲ್ಲಿ ಓಡಾಡವುದು ತಪ್ಪಿದೆ. ಇದರ ಕಾರಣದಿಂದ ಕಾಡಿನ ಒಳಗೆ ಇರುವ ಪ್ರಯೋಜನವೂ ಕಡಿಮೆಯಾಗಿದೆ.ಇದು ಕೂಡಾ ಹಲವು ಸಮಸ್ಯೆಗೆ ಕಾರಣವಾಗಿದೆ.

ಎಲ್ಲವೂ ಅಗೋಚರವಾಗಿ  ನಡೆಯುತ್ತಿದೆ. ಈಗಾಗಲೇ ಕಾವೇರಿಗೆ ಹೊಡೆತ ಸಿಕ್ಕಾಗಿದೆ. ಅಭಿವೃದ್ಧಿಯ ಪರಿಣಾಮಗಳನ್ನು ಗಮನಿಸಿ ಕೊಡಗು ಬೆಳೆಯುತ್ತಿದೆ ಎಂದರೆ ಕಾವೇರಿಗೆ ಒತ್ತಡ, ಮಂಗಳೂರು ಬೆಳೆಯುತ್ತಿದೆ ಎಂದರೆ ನೇತ್ರಾವತಿಗೆ ಒತ್ತಡ, ಹಾಸನ ಬೆಳೆಯುತ್ತಿದೆ ಎಂದರೆ ಹೇಮಾವತಿಗೆ ನೀರಿಗಾಗಿ ಒತ್ತಡ ಇದ್ದೇ ಇದೆ.ನೀರಿನ ಬಳಕೆ ಸಹಜವಾಗಿಯೇ ಹೆಚ್ಚಾಗುತ್ತದೆ. ಆದರೆ ನೀರಿನ ಮೂಲ, ಜಲಮೂಲಕ್ಕೆ ಆಗುತ್ತಿರುವ ಡ್ಯಾಮೇಜ್‌ ಬಗ್ಗೆ ಯಾರೊಬ್ಬರೂ ಮಾತನಾಡದೇ ಇರುವುದರಿಂದ ಸಹಜವಾಗಿಯೇ ನೀರಿನ ಲಭ್ಯತೆ ಕಡಿಮೆಯಾಗಲೇಬೇಕು ಎನ್ನುತ್ತಾರೆ ದಿನೇಶ್‌ ಹೊಳ್ಳ.

ಇಷ್ಟೇ ಅಲ್ಲ, ತಾಪಮಾನ ಹೆಚ್ಚಾದಂತೆಯೇ ಪಶ್ಚಿಮ ಘಟ್ಟಕ್ಕೆ ಬೆಂಕಿ ಬೀಳುತ್ತಿದೆ. ಇದು ಕೂಡಾ ಬಹುದೊಡ್ಡ ಹಾನಿಯಾಗುತ್ತದೆ. ಈ ಕಡೆ ಎತ್ತಿನ ಹೊಳೆಯೂ ನೀರಿನ ಮೂಲಕ್ಕೆ ಹೊಡೆತ ಬಿದ್ದಿದೆ. ಇಡೀ ಛಿದ್ರ ಛಿದ್ರವಾಗಿದೆ.. ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಹಿಂದೆಲ್ಲಾ ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ ಮಟ್ಟ ಕುಸಿತದ ಬಗ್ಗೆ ಮಾತನಾಡುತ್ತಿದ್ದರು. 600 ಅಡಿಯಲ್ಲಿ ಸಿಗುತ್ತಿದ್ದ ನೀರು ಈಗ  1000 ಅಡಿಯಲ್ಲೂ ಬರಿದಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಮಲೆನಾಡು, ಪಶ್ಚಿಮ ಘಟ್ಟದ ತಪ್ಪಲಲ್ಲೂ ಇದೇ ಪರಿಸ್ಥಿತಿ ಬರಲು ಹೆಚ್ಚಿನ ದಿನವಿಲ್ಲ. ಈಗಲೇ 600 ಅಡಿಗೆ ಅಂತರ್ಜಲ ತಲಪಿದೆ. ಮುಂದೆ ಇನ್ನೂ ಗಂಭೀರ ಪರಿಸ್ಥಿತಿ ಇದೆ. ಏಕೆಂದರೆ, ಈಗ ಮಳೆಯನ್ನು ನಂಬುವ ಹಾಗಿಲ್ಲ, ಮಳೆ ಬಂದರೂ ಖುಷಿ ಇಲ್ಲ. ಈಗಿನ ಮಳೆ ಧಾರಾಕಾರವಾಗಿ ಬರುತ್ತದೆ, ತಕ್ಷಣವೇ ನಿಲುಗಡೆಯಾಗುತ್ತದೆ. ಪಶ್ಚಿಮಘಟ್ಟಕ್ಕೆ ಇದು ಉಪಯೋಗವೇ ಇಲ್ಲ, ಮಳೆ ಬಂದರೂ ಖುಷಿ ಇಲ್ಲ. ಧಾರಾಕಾರವಾಗಿ ಬರುವ ಮಳೆ ಕೊಚ್ಚಿ ಹೋಗುವುದೇ ಹೊರತು ಇಂಗುವುದಿಲ್ಲ ಎನ್ನುತ್ತಾರೆ ದಿನೇಶ್‌ ಹೊಳ್ಳ.

ದಿನೇಶ್‌ ಹೊಳ್ಳ ಅವರ ಜೊತೆ ಮಾತುಕತೆ

ಭವಿಷ್ಯಕ್ಕಾಗಿ ಎಚ್ಚರಗೊಳ್ಳದೇ ಇದ್ದರೆ ಅಪಾಯ ಇದೆ, ಇದಕ್ಕಾಗಿ ಅಂತರ್ಜಲಕ್ಕೆ ಪ್ರತೀ ವ್ಯಕ್ತಿಯ ಕೊಡುಗೆ ಕೊಡಲೇಬೇಕು. ಮನೆ ಮನೆಯಿಂದ ಮನಸ್ಸು ಬದಲಾಗಬೇಕು. ಪರಿಸರ ಆಸಕ್ತರಿಗೆ ಮಾತ್ರಾ ಈ ಕೆಲಸ ಇಲ್ಲ, ಪ್ರತೀ ವ್ಯಕ್ತಿಗಳೂ ಇಂದೇ ಈ ಬಗ್ಗೆ  ಮಾತನಾಡಬೇಕು, ಕೆಲಸ ಮಾಡಬೇಕು. ಹೀಗಾದರೆ ಮುಂದಿನ 10 ವರ್ಷಗಳಲ್ಲಿ ಪಶ್ಚಿಮ ಘಟ್ಟವೂ ಉಳಿದೀತು, ನೀರು, ಗಾಳಿ, ತಾಪಮಾನವೂ ಸುಸ್ಥಿತಿಗೆ ಬಂದೀತು ಎನ್ನುವ ಆಶಾವಾದವಷ್ಟೇ ಇದೆ ಎನ್ನುತ್ತಾರೆ ದಿನೇಶ್‌ ಹೊಳ್ಳ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group