ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

May 18, 2026
8:11 PM
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ ಉಂಟಾಗಿದೆ. ಚಾಮರಾಜನಗರ, ದಾವಣಗೆರೆ ಹಾಗೂ ಹಾವೇರಿಯಲ್ಲಿ ಭಾರೀ ಬೆಳೆ ಹಾನಿಯಾಗಿ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ವಿಧಾನಸೌಧ, ನಾಗರಭಾವಿ, ಬಸವೇಶ್ವರ ನಗರ, ಬಸವನಗುಡಿ, ಗಿರಿ ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಕೆಲ ಅಂಡರ್‌ಪಾಸ್‌ಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು. ಪರಿಣಾಮ ವಾಹನ ಸವಾರರು ಸಂಚಾರ ದಟ್ಟಣೆ ಹಾಗೂ ನೀರು ನಿಂತ ಸಮಸ್ಯೆಯಿಂದ ಪರದಾಡುವಂತಾಯಿತು.

ಹವಾಮಾನ ಇಲಾಖೆ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವೆಡೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Advertisement

ಇದೇ ವೇಳೆ, ಬಿಸಿಲಿನಿಂದ ತತ್ತರಿಸಿದ್ದ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಜೋರಾಗಿ ಮಳೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ತಪ್ಪಲು, ಭೀಮನಬೀಡು, ದೇವರಹಳ್ಳಿ, ಗೋಪಾಲಪುರ, ಬೊಮ್ಮಲಾಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಆದರೆ ಬಂಡೀಪುರ ಕಾಡಂಚಿನ ಗ್ರಾಮಗಳಾದ ಹೊನ್ನೇಗೌಡನಹಳ್ಳಿ, ಗೋಪಾಲಪುರ, ದೇವರಹಳ್ಳಿ, ಹೊಂಗಹಳ್ಳಿ ಹಾಗೂ ಬರಗಿ ಭಾಗಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಟೊಮೋಟೊ, ಬೀನ್ಸ್‌, ಸೂರ್ಯಕಾಂತಿ ಹಾಗೂ ಅಲಸಂದೆ ಬೆಳೆದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ 622 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 1 ಕೋಟಿ 41 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ. ಚನ್ನಗಿರಿ ಮತ್ತು ಜಗಳೂರು ತಾಲೂಕುಗಳಲ್ಲಿ ಒಟ್ಟು 8 ಮನೆಗಳು ಭಾಗಶಃ ಕುಸಿದಿವೆ. ಚನ್ನಗಿರಿ ತಾಲೂಕೊಂದರಲ್ಲೇ 540 ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಹರಿಹರ ತಾಲೂಕಿನಲ್ಲಿ 30 ಎಕರೆಯಲ್ಲಿದ್ದ ಅಡಿಕೆ ಹಾಗೂ ತೇಗದ ಮರಗಳು ಧರೆಗುರುಳಿ 4 ಕೋಟಿ 30 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ದಾವಣಗೆರೆ ತಾಲೂಕಿನಲ್ಲಿ 30 ಎಕರೆ ಬೆಳೆ ಹಾನಿಯಿಂದ 3 ಕೋಟಿ 40 ಲಕ್ಷ ರೂಪಾಯಿ ಹಾಗೂ ಜಗಳೂರು ತಾಲೂಕಿನಲ್ಲಿ 15 ಎಕರೆ ಪ್ರದೇಶದ ಬೆಳೆ ನಾಶವಾಗಿ 2 ಕೋಟಿ 85 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಲಾಗಿದೆ.

Advertisement

ಹಾವೇರಿ ಜಿಲ್ಲೆಯಾದ್ಯಂತ ನಿನ್ನೆ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆ ಶಾಲೆ ಹಾಗೂ ರೇಷ್ಮೆ ಮನೆಗಳ ಮೇಲ್ಛಾವಣಿಗೆ ಹಾಕಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿವೆ. ಹಂಸಭಾವಿಯಲ್ಲಿ ಸಿಡಿಲು ಬಡಿದು ಬೆಲೆಬಾಳುವ ಎತ್ತು ಸಾವನ್ನಪ್ಪಿದೆ. ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ ಪರಿಣಾಮ ರಾತ್ರಿ ಪೂರ್ತಿ ವಿದ್ಯುತ್ ವ್ಯತ್ಯಯ ಉಂಟಾಯಿತು.

೨೦೨೬-೨೭ರ ಪೂರ್ವ ಮುಂಗಾರು ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ 112 ಮನೆಗಳಿಗೆ ಹಾನಿಯಾಗಿದ್ದು, 1 ಸಾವಿರ 721 ರೈತರ 1 ಸಾವಿರ 235 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ವಿಪತ್ತು ನಿರ್ವಹಣೆಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಪಿಡಿ ಖಾತೆಯಲ್ಲಿ ಒಟ್ಟು 1 ಸಾವಿರ 872 ಲಕ್ಷ ರೂಪಾಯಿ ಅನುದಾನ ಲಭ್ಯವಿದೆ ಎಂದು ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಭಾರೀ ಮಳೆ, ಗಾಳಿ, ಗುಡುಗು ಹಾಗೂ ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

Advertisement

Pre-monsoon rains lashed several parts of Karnataka, including Bengaluru, causing waterlogging and traffic disruption. Heavy rains also damaged crops in Chamarajanagar, Davanagere, and Haveri districts, resulting in losses worth crores of rupees and affecting thousands of farmers.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಮಲೆನಾಡು ಸೇರಿದಂತೆ ಹಲವೆಡೆ ಮುಂಗಾರು ಮಳೆ ಚುರುಕು-ಕೃಷಿಗೆ ಹೊಸ ಚೈತನ್ಯ, ರೈತರಲ್ಲಿ ಖುಷಿ
June 30, 2026
2:40 PM
by: ದ ರೂರಲ್ ಮಿರರ್.ಕಾಂ
ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ
June 28, 2026
10:21 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ
June 28, 2026
7:21 AM
by: ಪ್ರಬಂಧ ಅಂಬುತೀರ್ಥ
ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ
June 28, 2026
6:57 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror